Thursday, 7 February 2013

ಚುಕ್ಕಿ



ಆಗಸದ ತುಂಬೆಲ್ಲಾ
ಹರಡಿಕೊಂಡಿದ್ದ
ಕತ್ತಲ ಅಟ್ಟಹಾಸದ
ಕಹಿ ಅಧ್ಯಾಯಕ್ಕೆ
ಪೂರ್ಣ ವಿರಾಮ,
ಈ ರವಿಯೆನುವ
ಮೂಡಣದ
ಬಿಳಿ ಚುಕ್ಕಿ.

ಸುಳಿವು...



ತಿಳಿಸದೆ ತೊರೆದು
ಹೋದವಳ ಕುರಿತೆಲ್ಲವನು
ಅಳಿಸಿ ಹಾಕಿರುವೆ...
ಎಂಬ ಭ್ರಮೆಯಲಿ
ನಿರಾಳನಾಗಿದ್ದೆ ;
ಏಕಾಂತದ ಬೆಳಕೊಂದು
ಮನದ ಮೂಲೆಗಿಳಿದು
ಅವಳವಿತಿರುವ ಸುಳಿವ
ಕೊಟ್ಟ ಕ್ಷಣದಿಂದಲೇ,
ನಾ ಅಳುವಿನ ಕಡಲೊಳಗೆ
ಮುಳುಗತೊಡಗಿದ್ದೆ.

ಅಧಿಕಾರ



ಆಗಸದ
ರಂಗಿನಲಿ
ಆಗುತಿದೆ
ಮೆಲ್ಲಮೆಲ್ಲಗೆ
ಬದಲಾವಣೆ..
ರವಿ ಕಡಲ
ಸೇರಿದಾಗಿನಿಂದ,
ಬಾನಿನ ಮೇಲೆ
ಕತ್ತಲ ಕಪ್ಪು
ಬಣ್ಣದ್ದೇ
ಅಧಿಕಾರ
ಚಲಾವಣೆ.

ವಾಸ್ತವ..

ನಡಿಗೆ ನಡಿಗೆಯೆಂದು
ದೊಡ್ದ ಭಾಷಣವ ಬಿಗಿದು
ವೇದಿಕೆಯಿಂದಿಳಿದೊಡನೆ
ನಾಯಕರುಗಳೆಲ್ಲಾ ಕಾರಿನೊಳಗೆ...
ಅವರ ಬಿರುಸಿನ
ಮಾತನಾಲಿಸಿದ
ಬಡ ಕಾರ್ಯಕರ್ತರದಷ್ಟೇ
ನಿಜವಾದ ಬಿಸಿಲ ನಡಿಗೆ

ಅಭದ್ರತೆ

ಆ ದೇಶದಲಿರುವ
ಸಮಸ್ತ ಹಿಂದೂ
ಅಲ್ಪಸಂಖ್ಯಾತರಿಗಿಲ್ಲ
ಎಳ್ಳಷ್ಟೂ ಸುರಕ್ಷತೆ;
ಆದರಲ್ಲಿನ ಮಂತ್ರಿಗೆ
ಕಾಡುತಿರುವ ಚಿಂತೆ
ಭಾರತದ ಒಬ್ಬ ನಟನಿಗೆ
ಕಾಡುತ್ತಿರುವ ಅಭದ್ರತೆ.

ಗಮನ

ಕಾಂಗ್ರೆಸ್ ನಡಿಗೆ 
ಸಾಮರಸ್ಯದ ಕಡೆಗೆ
ಆದರೆ ಅವರ

ನಿಜವಾದ ಗಮನ
ಕೋಟಿ ನುಂಗಿ 

ಬೆಳೆದಿರೋ ಬೊಜ್ಜನ್ನು 
ಕರಗಿಸುವ ಕಡೆಗೆ

ಪುಟ್ಟ ನೇಸರ...



ಕಡಲ ಮಾತೆ
ತಾ ಹೆತ್ತ ಕಂದನ
ಮೈತೊಳೆದು,
ಹೊಳೆವ ಬಂಗಾರದ
ಉಡುಗೆಯನು
ತೊಡಿಸಿ, ಸಿಂಗರಿಸಿ
ಹಾಯಾಗಿ ಮಲಗಿರಲಿ
ಎಂದು ಹಾಕಿದಳೇ
ಬಾನಿನಲಿ ತೂಗು ಹಾಕಿದ್ದ
ಮೋಡದಾ ತೊಟ್ಟಿಲಿಗೆ...
ಇಣುಕಿಣುಕಿ ಮುದ್ದು
ಕಂದನ ನೋಡಿ
ಓಡಾಡತೊಡಗಿದ
ಬಾನಾಡಿಗಳು
ಚಿಲಿಪಿಯ ಜೋಗುಳವ
ಹಾಡತೊಡಗಿದವೇ...
ಹಾಯಾದ ನಿದಿರೆ
ಬರಲೆಂದು
ಈ ಪುಟ್ಟ ನೇಸರನಿಗೆ...