Saturday 27 April, 2013

ಮೊಳಕೆ..

ತಣಿಸುವ ನೆಪದಲಿ
ಮೋಡವನಗಲಿದ
ಮಳೆಹನಿ ಮೆಲ್ಲ
ಮೆಲ್ಲನೆ ವಸುಧೆಯ
ತನುವ ಸವರಲು
ಆಯಿತಂತೆ ಇಳೆಗೆ
ರೋಮಾಂಚನ ;
ಬುವಿಯ ಮೈಯಲ್ಲಿ
ಪುಟ್ಟ ಪುಟ್ಟ
ಹಸಿರು ಮೊಳಕೆಗಳು
ತಲೆಯೆತ್ತಿ ನಿಲ್ಲುತಿರುವುದು
ರೋಮಾಂಚನದ ಪ್ರತೀಕ
ಎನುತಿದೆ ನನ್ನ ಈ
ಕಲ್ಪನೆಯ ಕವಿಮನ.

ಮೆರವಣಿಗೆ

ಗುಡುಗಿನ ವಾದ್ಯದೊಂದಿಗೆ
ಮುಗಿಲ ತವರಿಂದ
ಸಂತಸದಿ ಬುವಿಯೆಡೆಗೆ;
ಕಡಲೆನುವ ಪತಿಯ
ಮನೆಯ ಸೇರಲು
ತವಕದೆ ಸಾಗಿದೆ
ಮಳೆಹನಿಯ ಮೆರವಣಿಗೆ .

ದೋಷ...

ಬ್ರಾಹ್ಮೀ ಮುಹೂರ್ತದಲಿ
ಸುರಿದ ವರ್ಷಧಾರೆಯಿಂದಾಗಿ,
ಏರಿದ ತಾಪಮಾನದ
ಬೇಗೆಯಲಿ ಬೆಂದ
ಜನರ ಮನದಲ್ಲಿ
ಮೂಡಿತು ಸಂತೋಷ ;
ಆದರೆ ವಾಸ್ತವದಲಿ ಈ ಮಳೆ
ತೊಳೆಯಲೆಂದು ಬಂದಿತಂತೆ,
ನಟ್ಟ ನಡುರಾತ್ರಿಯ
ಚಂದ್ರ ಗ್ರಹಣದಿಂದಾಗಿ
ಬುವಿಯ ಮೈಗಂಟಿದ
ಗ್ರಹಣ ದೋಷ

ಪೋಕರಿ...

ತುಂಟತನದ
ಈ ಚೋಕರಿ
ತುಂಬಾನೇ
ಪೋಕರಿ...
ಸುಮ್-ಸುಮ್ಮನೆ
ಮಾಡುತ್ತಾಳೆ
ನನಗೆ
ಪದೇ ಪದೇ
POKE-ರೀ

ಭಯ...

ಆಡುತಿರು ಬಣ್ಣದೋಕುಳಿಯಲ್ಲಿ
ಮುಳುಗು ಹಾಕುವ
ಮನವ ಮಾಡದಿರು
ನೇಸರನೆ, ನೂಕಿ
ಕತ್ತಲೆಡೆಗೆ ಈ ಭುವಿಯ;
ಆ ಕರಾಳ ಕತ್ತಲ
ಅಂಜಿಕೆಯು ನನಗಿಲ್ಲ,
ಆದರೆನ್ನ ಕಣ್ಣಿಂದ
ಕಣ್ಣೀರ ಹೊರಗೆಳೆವ
ಅವಳ ನೆನಪುಗಳು
ನೀನಿರದ ಹೊತ್ತಲ್ಲೇ
ಬರುವುದಲ್ಲ,
ಅದರದೊಂದೇ ಭಯ.

ಕ್ರಿಯೆ-ಪ್ರತಿಕ್ರಿಯೆ

ಕಂಡ ಕಂಡಲ್ಲಿ
ಮೈಕು ನೆಟ್ಟು
ಜನಪ್ರತಿನಿಧಿಗಳು
ಜೋರಾಗಿ ಅರಚುತ್ತಿದ್ದಾರೆ
ಅವರ ಆಶ್ವಾಸನೆಯ
ಹಳೆಯ ರಾಗವನ್ನು
ಕೇಳಿ ಕೇಳಿ ಜನ
ತಮ್ಮ ಮೈ ಪರಚುತ್ತಿದ್ದಾರೆ.

Monday 22 April, 2013

ಟಿಕೆಟ್...

ನನ್ನ ಹೃದಯ
ಎನುವ ಕ್ಷೇತ್ರದಲ್ಲಿ
ಜಗಳವಿಲ್ಲದೆ ಆಗಿದೆ
ಟಿಕೆಟ್ ಹಂಚಿಕೆ;
ಅದಕೆ ಕಾರಣ
ನನ್ನವಳೊಬ್ಬಳದೇ
ಇರೋದು ಅಲ್ಲಿ
ಉಮೇದ್ವಾರಿಕೆ.

ಹೋಲಿಕೆ...???

ಹೇಗೆ ಹೋಲಿಸಲಿ
ನನ್ನವಳ ಚಂದಿರಗೆ,
ಅವಳ ಸುಂದರ ಮೊಗ
ಕಲೆಗಳಿರದಂತಾದ್ದು;
ತನ್ನೆಡೆಗೆ ಸೆಳೆವ
ಅದರ ಹೊಳಪು ಕೂಡ
ಎರವಲು ಪಡೆದದ್ದಲ್ಲ,
ಅದು ಅವಳ ಸ್ವಂತದ್ದು.

ನಾಚಿಕೆ.

ಕರ್ನಾಟಕದ
ಮಾಜಿ ಮುಖ್ಯಮಂತ್ರಿ
ಎಂದು ಸಾರ್ವಜನಿಕವಾಗಿ
ಹೇಳಿಕೊಳ್ಳಲು ನಾಚಿಕೆಯಂತೆ
ವೀರಪ್ಪ ಮೊಯಿಲಿಗೆ ;
ಅದಕೆ ಕನ್ನಡಿಗರಂದರಂತೆ
ನಾಚಿಕೆ ನಿಮಗೀಗ ತಾನೆ,
ಆದರೆ ನಮಗೆ ನೀವು
ಮುಖ್ಯಮಂತ್ರಿಯಾಗಿದ್ದಾಗಲೇ
ಆಗುತ್ತಿತ್ತು ಹೇಸಿಗೆ..

ಅತಿಥಿ ಸತ್ಕಾರ

ನಸುಕಿನ ಮುಂಜಾನೆಯಲಿ
ಮೂಡಣದ ಬಾಗಿಲ ಮುಂದೆ
ಬೆಳಕೆನುವ ಉಡುಗೊರೆಗಳ
ಹೊತ್ತು ಹಾಜರಾದ
ಆಗಸದ ಅತಿಥಿಗೆ
ಪ್ರಕೃತಿಯು ಮಾಡತೊಡಗಿದೆ
ನಲ್ಮೆಯ ಅತಿಥಿ ಸತ್ಕಾರ...
ತರು ಲತೆಗಳೆಲ್ಲವೂ
ತಮ್ಮ ಪ್ರತಿ ಎಲೆಗಳ
ಬೊಗಸೆಯ ತುಂಬಾ
ಇಬ್ಬನಿಯ ಪಾನಕವ ಕೊಡುತಿರೆ,
ಹಕ್ಕಿಗಳು ಇಂಚರದ
ಮಾತಿನಲಿ ಕೇಳುತಿದೆ
ಕುಶಲ-ಕ್ಷೇಮದ ಸಮಾಚಾರ

ಕಾರಣ...

ಯಾರೋ ಕೇಳಿದರಂತೆ
ಚಿತ್ರನಟಿ ರಕ್ಷಿತಾರನ್ನು
ನೀವು ಬಿ.ಎಸ್.ಆರ್
ಪಕ್ಷವನ್ನು ಬಿಟ್ಟು
ಹೊರಬರಲು ಕಾರಣವೇನು..?
ಅದಕವಳಂದಳಂತೆ...
ಸದಾ AC ತಂಪಲೇ
ಇರ ಬಯಸುವ ನನ್ನ
ತಂಪುಗೊಳಿಸುತಿಲ್ಲ
ಈ ಬಳ್ಳಾರಿಯ "ಫ್ಯಾನು"

ಹೋಲಿಕೆ

ನನ್ನ ನಡೆಗೂ
ನೇಸರನ ನಡೆಗೂ
ಅದೆಂಥಾ ಹೋಲಿಕೆ..
ಮುಸ್ಸಂಜೆಯ ಹೊತ್ತಲ್ಲಿ
ಕಡಲೊಳಗೆ ಅವನು
ಮುಳುಗಿ ಹೋದೊಡನೆ
ನನ್ನನು ನಾ
ಕಂಡು ಕೊಂಡದ್ದು
ನನ್ನವಳ ನೆನಪಿನ
ಕಡಲಾಳದಲ್ಲಿ

ವಿಪರ್ಯಾಸ...

ಬಸ್ ಪ್ರಯಾಣದಲಿ
ಇಂಪಾದ ಹಾಡು
ಕೇಳುವ ಸಲುವಾಗಿ
ಪ್ಯಾಂಟಿನ ಕಿಸೆಯೊಳಗೆ
ತುರುಕಿಸಿದ್ದ ಇಯರ್ ಫೋನು
ಹೊರತೆಗೆದು ನೋಡಿದರೆ
ಅದು ಚಿಕ್ಕು ಹಿಡಿದಿತ್ತು;
ಮೆಲ್ಲ ಮೆಲ್ಲನೆ
ಅದರ ಚಿಕ್ಕು ಬಿಡಿಸಿ
ಕಿವಿಯೊಳಗೆ ತುರುಕಿಸಿ
ಇನ್ನೇನು ಹಾಡು
ಕೇಳಬೇಕೆನ್ನುವಷ್ಟರಲ್ಲಿ...
ನಾನು ಇಳಿಯಬೇಕಾಗಿದ್ದ
ಊರು ಬಂದೇ ಬಿಟ್ಟಿತ್ತು.

ಕಾರಣ...?

ಹೇಳದೆ ಕೇಳದೆ
ಮುನಿಸಿನಲಿ
ಕೆಂಪು ಕೆಂಪಾಗಿ
ಅದೆಲ್ಲಿ ಮರೆಯಾದೆ
ಓ ಭಾಸ್ಕರನೆ..
ನೀ ಕಡಲ ನೀರೊಳಗೆ;
ಬಾನ ಪೂರ್ತಿ
ಹರಡಿದ ಕತ್ತಲಿನ
ಅಸಹಕಾರದ ಅಡ್ಡಗಾಲು
ಕಾರಣವ ಹುಡುಕ
ಹೊರಟ ನನ್ನ ಹಾದಿಗೆ.

Monday 8 April, 2013

ಪವರ್ ಕಟ್



ಒಳಗೋಡಿ
ನೋಡಿ
ಅಮ್ಮನಿಗೆ
ಹಾ ಉಂಟು ,
ಎಂದು
ಹೇಳುವಷ್ಟರಲ್ಲಿ
ಮತ್ತೆ ಹೋಗಿತ್ತು
ಕರೆಂಟು.

ವೋಟು-ನೋಟು



ಸಾವಿರದ ನೋಟನು
ಕೈಯೊಳಗಿರಿಸಿದ
ಪುಡಾರಿಯೊಬ್ಬ
ಆಧುನಿಕ ಮತದಾರನ
ಕಿವಿಯಲ್ಲಿ ಮೆಲ್ಲಗೆ ಉಸುರಿದ
" ಈ ಬಾರಿ ನನಗಿರಲಿ
ನಿಮ್ಮ ಅಮೂಲ್ಯ ವೋಟು "
ಸಣ್ಣ ನಗುವ ಬೀರಿ
ಆ ಮತದಾರ ಅಂದ..
" ಖಂಡಿತವಾಗ್ಲೂ ನಿಮಗೆ
ಬೀಳುತ್ತೆ ನನ್ನ ಓಟು.."
ನನಗೂ ಬೇಕಾಗಿದೆ ನೋಟು;
ಆದರೆ ಸಾವಿರದ್ದಲ್ಲ,
ನಾ ಬಯಸುವುದು..
ಹೊಸ " ಗ್ಯಾಲಕ್ಸಿ ನೋಟ್ ಟು..."

ನೇತಾರ...



ಮತ್ತೆ ಬೆಳಗಲು
ಬರುವೆ ಎಂದು
ನಿನ್ನೆ ಮುಸ್ಸಂಜೆ
ಕೊಟ್ಟ ಭರವಸೆಯ
ಈಡೇರಿಸುವುದಕಾಗಿ
ನಸುಕಿನ
ಮುಂಜಾವಿನಲಿ
ಜಗವೇಳುವ ಮುನ್ನವೇ
ಬೆಳಕ ಹಂಚುವ
ಕಾರ್ಯದಲಿ ನಿರತನಾದ
ಆ ಬಾನ ನೇಸರ..
ನಿಜಕೂ ಇವನೇ ತಾನೆ
ಜಗಕೆ ಮಾದರಿ ನೇತಾರ

ಒಂದೇ ಜಪ..



ಹತ್ತನೆಯ ಮಕ್ಕಳ
ಬಾಯಲ್ಲೀಗ
ಒಂದೇ ಮಾತು
ಪರೀಕ್ಷೆ..ಪರೀಕ್ಷೆ;
ಮಾಧ್ಯಮಗಳ
ಬಾಯಲ್ಲೂ..
ಒಂದೇ ಮಾತು
ಚುನಾವಣಾ ಸಮೀಕ್ಷೆ;

ಪಿಸುಮಾತು



ಪಿಸುಗುಡದಿರು ಚೆಲುವೆ
ಜಗಕೆ ಹೆದರದೆ
ಜೋರಾಗೇ ಹೇಳಿಬಿಡು
ನನಗೂ ಸವಿಯುವಾಸೆ,
"ನಾ ನಿನ್ನ ಪ್ರೀತಿಸುವೆ"
ಎನುವ ನಿನ್ನ ಮಾತಿನ ಸವಿ;
(ಸ್ವಗತ....)
ಪಿಸುಗುಟ್ಟಿದರೆ ಕೇಳದಿರುವುದೂ
ನಾ ಹೀಗನ್ನಲು ಒಂದು ಕಾರಣ;
ಹಾಳಾದ ಶಬ್ದಮಾಲಿನ್ಯದಿಂದ
ಕಾರ್ಯದಕ್ಷತೆಯ ಸ್ವಲ್ಪ
ಕಳಕೊಂಡಿದೆ ನನ್ನ ಕಿವಿ.

Wednesday 3 April, 2013

ವಿಜಯ



ಭುವಿಯ ಚೆಲುವ
ವಿಶ್ವಕೆ ತೋರಿಸಲಾಗದೆ
ಇರುಳಲಿ ಸೋತಿತು
ಕೋಟಿ ತಾರೆಗಳ
ಚಂದಿರನ ಪಡೆ;
ಬರಿಯ ತನ್ನೆರಡು
ಹೆಜ್ಜೆಗಳಲೇ ಈ
ಕಾರ್ಯ ಪೂರೈಸಿದ
ರವಿಯ ವಿಜಯದ ನಡೆ
ಈಗ ಆಗಸದೆಡೆ...

ಚುಕ್ಕಿ...



ನೆನಪಿನ ಕಂತೆಗಳು
ಮತ್ತು ಮನದ ಭಾವ
ಪದವಾಗುತಿದ್ದಾಗ
ಸಾಲು ಸಾಲು
ಕಣ್ಣೀರ ಹನಿಗಳು
ಉಕ್ಕಿ ಬರುತಿತ್ತು;
ನಾ ಬರೆಯುತಿದ್ದ
ಅವಳ ದ್ರೋಹದ
ಈ ಕಾದಂಬರಿಯ
ಪ್ರತಿ ಸಾಲಿಗೆ
ಜಿನುಗಿದ ಕಣ್ಣೀರೇ..
ಪೂರ್ಣವಿರಾಮದ
ಚುಕ್ಕಿಯಾಗ ತೊಡಗಿತ್ತು.

ನಿಷ್ಕರುಣಿ...



ಕಣ್ಣಲ್ಲಿ ನೆತ್ತರಿರದವನಂತೆ
ಒಂದಿನಿತು ವಿರಾಮ
ನೀಡದೆಯೆ ಸತತ
ದುಡಿಸಿಕೊಳ್ಳುತ್ತಾನೆ,
ಅಬ್ಬಾ..ಈತ
ಅದೆಂಥಾ ನಿಷ್ಕರುಣಿ;
"ಅವಳ" ಬಗೆಗಿನ
ಪುಟ್ಟ ಕವಿತೆ
ಬರೆಯುವಾಗಲೆಲ್ಲಾ
ಇದೇ ರೀತಿ ನನ್ನ
ಮನಸಾರೆ ಶಪಿಸುತ್ತದೆ;
ಬೆರಳ ಬಂಧನದಲಿಹ
ನನ್ನಯಾ ಲೇಖನಿ.

ನಾಟ್ಯ-ಸಂಗೀತ



ಗೆಳತಿ...
ಮೃದುವಾಗಿಹ
ನಿನ್ನ ಪಾದಗಳಿಟ್ಟ
ಪ್ರತಿ ಹೆಜ್ಜೆಯು
ನವಿಲ ನರ್ತನ;
ಆ ನರ್ತನಕೆ
ಗೆಜ್ಜೆಯೆನುವ
ಕೋಗಿಲೆಯು
ನೀಡುತಿದೆ
ಹಿನ್ನಲೆ ಗಾಯನ.

ಹಿಡಿಶಾಪ




ತನ್ನ ಕುಡಿನೋಟದಿಂದ
ನನ್ನ ಸದಾ
ಕಾಡುತ್ತಿದ್ದವಳ
ಆ ಕಂಗಳಿಗೆ
ನನ್ನ ಹಿಡಿ ಶಾಪ,
ಕಣ್ಣೀರ ಕೂಸನು
ಹೆರಲಾಗದ
ಬಂಜೆಯಾಗಿ ಹೋಗು...