Wednesday 31 December, 2014

ವಿಪರ್ಯಾಸ


ಇತ್ತೀಚೆಗಷ್ಟೇ ಬಾಂಬ್ ಸ್ಫೋಟವಾಗಿದೆ...
ಒಬ್ಬಾಕೆಯ ಸಾವಿನ ಸೂತಕ ನಗರಕ್ಕಂಟಿದೆ....
ಆದರೂ ನಮ್ಮದಲ್ಲ ಅದ್ಯಾವುದೋ ದೇಶಗಳ
ಹೊಸ ವರುಷದ ಆಚರಣೆಗೆ
ನಗರ ತನ್ನ ತಾ ಶೃಂಗರಿಸಿಕೊಳುತಿದೆ.
ಮದ್ಯದಾ ಹೊಳೆಯಲಿ
ಮುಳುಗೆದ್ದು ತಮ್ಮನು ತಾವೇ ಮರೆಯಲು
ಹಲವು ಜನರ ಮನ ತವಕಿಸುತಿದೆ...

ಹುಡುಕಾಟ


ನನ್ನೆಡೆಗಿನ
ನಿನ್ನ ಆ
ಒಲವಿನ ನೋಟ,
ಗೆಳತೀ...
ನಿಜಕೂ
ನನಗದರದೇ
ಹುಡುಕಾಟ.

ಇರುಳ ಬಣ್ಣ


ಅವಳ
ಬಣ್ಣ ಬಣ್ಣದ
ಕನಸುಗಳೂ
ನನ್ನ
ತೊರೆದಾಗಲೇ
ನನಗೆ
ಗೊತ್ತಾಗಿದ್ದು
ಇರುಳ ಬಣ್ಣ
ಕಡು ಕಪ್ಪೆಂದು

ದೂರ...


ಗೆಳತೀ...
ನಿನ್ನ ಕೈಯ
ಗಟ್ಟಿಯಾಗಿ
ಹಿಡಿದು
ದೂರ...
ಬಲು ದೂರ
ಹೋಗುವಾಸೆ...
.
.
.
.
.
.
.
.
.
.
.
.
ಶಾಪಿಂಗ್ ಮಾಲುಗಳೇ
ಇಲ್ಲದ ಕಡೆಗೆ.

ಕವಿತೆ


ಬರಿಯ ನೋವನ್ನಲ್ಲದೆ
ಅವಳು ಮತ್ತಿನ್ನೇನನ್ನೂ
ನನಗೆ ಕೊಟ್ಟಿಲ್ಲ
ಅಂದಾಗ
ಮುನಿಸಿಕೊಂಡಿತ್ತು
ನಾ ಬರೆದಿದ್ದ
ನೂರೊಂದು
ವಿರಹದಾ ಕವಿತೆಗಳು

ಚಂದಿರ...


ನನ್ನ ಕೈಗಳ
ಅವಳು ಹಿಡಿದವಳೇ
ರಾಗದ ಮಾತಿನಲಿ
"ಈ ನಿನ್ನ ಕೈಗಳಲಿ
ದುಂಡು ಚಂದಿರನ
ಬಿಡಿಸಬಲ್ಲೆಯಾ...?"
ಎಂದು ಮುದ್ದಿಸಿ
ಕೇಳಿದಾಗ...
ನನಗೆ ಕಲ್ಪನೆಯೇ
ಇದ್ದಿರಲಿಲ್ಲ.
.
.
.
.
.
.
.
ಅವಳೆನ್ನ ಕೈಯಲ್ಲಿ
ದೋಸೆಯನು
ಮಾಡಿಸಲಿರುವಳೆಂದು.

ಹಣೆ-ಬರಹ


ಹಣೆಬರಹವನು
ಬರೆವವನು
ಹಣೆಯಲ್ಲಿ
"ಬರಹಗಾರ"
ಎಂದು
ಬರೆಯದೇ
ಹೋದರೆ
ಹೇಗೆ
ತಾನೇ
ಬರಹಗಳು
ಹುಟ್ಟೀತು...?
ಪದಗಳ
ಬೀಜವನು
ಉದಾರವಾಗಿ
ಕೊಟ್ಟು
ನಿನ್ನ ಪರಿಶ್ರಮದ
ಬೆವರ ಸುರಿಸಿ
ಬಿತ್ತಿಕೋ ಎಂದು
ಕಾಲಕಾಲಕ್ಕೆ
ಯೋಚನೆಗಳ
ಮಳೆ ಸುರಿಸಲಷ್ಟೇ
ತಾನೇ ಸಿಗುವುದು
ಉತ್ತಮ ಫಸಲು.
ಆದರೂ ನಮ್ಮಗೆಲ್ಲಾ
ಅದು ನನ್ನ
ಸ್ವಂತದ್ದೆನುವ ಅಮಲು

ಕೈರುಚಿ...


ನನ್ನವಳ
ಕೈರುಚಿ
ಅದ್ಭುತವಾಗಿದೆ.
ಎಂದು
ಹೊಗಳುವ
ಹೊತ್ತಿನಲ್ಲಿ,
ಹೊಟ್ಟೆ
ಸವರಬೇಕಾಗಿದ್ದ
ನನ್ನ ಕೈ,
ಕೆನ್ನೆಯ
ಸವರಿ
ಇನ್ನೊಮ್ಮೆ
ಅದೇ ರುಚಿಯ
ತೋರಿಸಿ
ಕೊಟ್ಟಿದೆ.

Friday 19 December, 2014

ಕಾಡುತಾವೆ...


ನಗುವೆನುವ
ಭಾವಕ್ಕಷ್ಟೇ
ಮುಖದ
ಹೊಸ್ತಿಲಲಿ
ನಿಲ್ಲಲವಕಾಶ,
ನೋವೆಲ್ಲವೂ
ಮನದ
ಕತ್ತಲ
ಕೋಣೆಯ
ಬಂಧಿ.
ಅವುಗಳಲ್ಲೇ
ಉಸಿರುಕಟ್ಟಿ
ಸಾಯಲಿ
ಎಂದೇ ಆಸೆ,
ಆದರೂ ಪಾಪಿ
ಚಿರಾಯು
ಎಂಬಂತೆ
ಸಾಯದೆ
ಕಾಡುತಾವೆ
ನನ್ನನೇ...
ಎದೆಯ
ಉರಿಯಾಗಿ.

ಭಾವೋದ್ವೇಗ


ಭಾವೋದ್ವೇಗದ
ತುತ್ತತುದಿಯಲ್ಲಿರುವಾಗ
ಪದಗಳೆಲ್ಲಿ ಕೈಗೆ
ಸಿಗುತಾವೆ..
ಬರಿಯ
ಕಣ್ಣೀರ ಹನಿಗಳು
ಜೊತೆಜೊತೆಯಾಗಿ
ಹರಿಯುತಾವೆ...

ಕೃಷ್ಣಾ...


ಹಸಿರ ವೈಭವದ ಮಧ್ಯೆ
ಗೋವುಗಳ ಹಿಂಡಿನ ನಡುವೆ
ನಿಂತು ಮೈಮರೆತು
ಕೊಳಲನೂದುವ ಕೃಷ್ಣನಿಂದ
ಜಗವ ಸಮ್ಮೋಹನಗೊಳಿಸೋ
ಕೊಳಲ ಗಾಯನವ
ಕಲಿಯುವಾಸೆ...
ಸಂಕಟಗಳ ಗೋವರ್ಧನವನೇ
ನನ್ನ ಕಿರು ಬೆರಳಲಿ
ಎತ್ತಿ ಹಿಡಿಯಬಲ್ಲ
ಮನೋಸ್ಥೈರ್ಯವ ಅವನಿಂದ
ತಿಳಿದುಕೊಳುವ ಆಸೆ.
ಜಗದ ಹಿತಕಾಗಿ
ಧರ್ಮದುಳಿವಿಗಾಗಿ
ಕುಟಿಲತೆಯ ಹೆಣೆಯಬಲ್ಲ
ಯೋಚನೆಗಳ, ಯೋಜನೆಗಳ
ಅವನಿಂದಲೇ ಕೇಳಿ ತಿಳಿಯುವಾಸೆ.
ಸಂಸಾರದ ರಣಾಂಗಣದ
ನಡುವೆ ಹತಾಶ ಭಾವದಲಿ
ಅವನ ಪಾದದಡಿಯಲಿ
ಮಂಡಿಯೂರಿ ಕುಳಿತು
ನನ್ನೆಲ್ಲಾ ಗೊಂದಲಗಳ
ಪರಿಹರಿಸೋ ಗೀತಾಸಾರವನು
ಅವನ ಬಾಯಾರೆ ಕೇಳುವಾಸೆ...

ಶಾಪ


ಹಸಿರೆಲೆಗಳ
ಇರುಳ
ಅಪ್ಪುಗೆಯ
ತಪ್ಪಿಸಿದ,
ಮುಂಜಾವಿನ
ನೇಸರನ
ಬಗೆಗೆ,
ಜಾರುತಿಹ
ಇಬ್ಬನಿಯ
ಮನದಲ್ಲಿದ್ದದ್ದು
ಹಿಡಿಶಾಪ
ಮಾತ್ರ.

Thursday 11 December, 2014

ನಲ್ಲ


ನಲ್ಲ ಎಂದೇ
ಅವಳ ಬಾಯಲ್ಲಿ
ಕೇಳಿದ ನೆನಪು.
.
.
.
ಆದರೆ ಅವಳಲ್ಲಿ
ಕೇಳಿದಾಗಲೇ
ಗೊತ್ತಾಗಿದ್ದು...
ಆ "ನಲ್ಲ"ನೆದುರಿಗೆ
"ನೀ" ಅಂಟಿಕೊಂಡಿತ್ತೆಂದು.

ಮುಂಗುರುಳು


ಮೊಗದಲ್ಲಿ
ಮುಂಗುರುಳ
ನಿಲ್ಲಗೊಡದಿರು
ಗೆಳತೀ..
ನಿನ್ನ ಮೊಗದ
ಇಂಚಿಂಚಿನಲೂ
ನನ್ನೊಲವ
ದೃಷ್ಟಿಯದೇ
ಹಕ್ಕಿರಲಿ.

ಆಧ್ಯಾತ್ಮದ ಬೆಳಗು


ಬೆಳಗು ಬರಿಯ ಬೆಳಗಲ್ಲ
ಇದೆ ಅಲ್ಲೊಂದು ಆಧ್ಯಾತ್ಮಿಕತೆ,
ನೇಸರನೆ ಇಲ್ಲಿ
ದಿವ್ಯಜ್ಯೋತಿ ಸ್ವರೂಪದ ಪರಬ್ರಹ್ಮ,
ಜಗಕೆ ಸುಖದ
ಬೆಳಕನು ಚೆಲ್ಲಲಿವನೆ ಕಾರಣ,
ಇವನಿಲ್ಲದಿರೆ ಕತ್ತಲ ದುಃಖ,
ಅಲ್ಲೂ ಕೆಲವೊಮ್ಮೆ ಚಂದಿರಗೆ
ತನ್ನ ಬೆಳಕ ಕೊಟ್ಟು
ನಮ್ಮ ಬಾಳಿಗೆ ತಂಬೆಳಕ ಕೊಟ್ಟಾನು,
ಅವನಿಲ್ಲ ಎನುವುದೂ ಒಂದು ಭ್ರಮೆ,
ಅವನಿರುವಿಕೆ ನಮಗೆ ಕಾಣುವುದಿಲ್ಲವಷ್ಟೇ,
ಅವನದೆಲ್ಲೋ ಇನ್ನಾರ ಬದುಕನೋ
ಬೆಳಗಿಸುತ್ತಿದ್ದಿರಬಹುದು.
ನಮ್ಮದೇ ಪಾಪ ಕರ್ಮಗಳಿಗೆ
ಶಿಕ್ಷೆಯಾಗಿ ತಾನತ್ತ ಸರಿದಿರಬಹುದು
ಆದರೂ ಮತ್ತೆ ಬರದಿರುವವನವನಲ್ಲ
ಮತ್ತೆ ಮೂಡಿ ಬರಲು
ಸಜ್ಜಾಗುತ್ತಿದ್ದಿರಬಹುದು.
ಕಾಲದ ಜೊತೆ ಕಾಯುವುದಷ್ಟೇ
ನಮ್ಮ ಧರ್ಮ,
ಭರವಸೆಯ ಹೊಸ ಕಿರಣದಿಂದಲಿ
ಮತ್ತೆ ನಮ್ಮ ಬಾಳನು
ಬೆಳಗುವನವನೆನುವುದು ಖಚಿತ.
ಅದಕೆ ನನ್ನ ಪಾಲಿಗೆ
ಬರಿಯ ಬೆಳಗಲ್ಲ ಪ್ರತಿ ಬೆಳಗು
ನನಗದು ಆಧ್ಯಾತ್ಮಿಕತೆಯ ಬೆರಗು

ನಿರೀಕ್ಷೆ..


ಟಕ್ಕು ಟಕ್ಕು
ಹೈ ಹೀಲ್ಡಿನ
ಸದ್ದುಗಳೇ
ತುಂಬಿರುವ
ಈ ಕಾಲದಲೂ
ಘಲ್ ಘಲ್
ಗೆಜ್ಜೆಯ
ಹೆಜ್ಜೆಯವಳ
ನಿರೀಕ್ಷೆ..

Friday 5 December, 2014

ಸ್ಮೈಲು


ಕೆಮರಾ ಒಂದು
ಅಡ್ಡ ಇದ್ದಾಗಲಷ್ಟೇ
ಅವಳು...
ನನ್ನ ಒಂಟಿ
ಕಣ್ಣಿನ ನೋಟಕೆ
ಸ್ಮೈಲು ಕೊಡೋದು

ಇಬ್ಬನಿ


ಗೆಳತೀ..
ಮನದ ಮೂಡಣದಲ್ಲಿ
ನಿನ್ನ ನೆನಪು
ಮೂಡುತಿದೆ ಎನುವುದಕೆ,
ಕಣ್ಣಿನೆಲೆಯ ತುದಿಯಲ್ಲಿ
ಧುಮುಕಿ ಬಿಡಲು
ಹಾತೊರೆಯುತಿಹ
ಇಬ್ಬನಿಯೇ ಸಾಕ್ಷಿ

ಬೆರಗು


ಮೊಣಕಾಲಮೇಲೆ
ಬೆಸೆದ ಕೈಗಳ
ಹಾಸನು ಹಾಸಿ
ನಿನ ಮೊಗವ
ಅದರಮೇಲಿಟ್ಟು,
ಮನದೊಳಗೆ
ನನ್ನ ನೆನಪುಗಳಿಗೆ
ಕರೆಯಕೊಟ್ಟು
ಕುಳಿತು ಬಿಡು ಗೆಳತೀ,
ಆ ನೆನಪುಗಳು
ನಿನ್ನ ಮೊಗದಿ
ಚಿತ್ರಿಸುವ
ಮಂದಹಾಸವ
ನೋಡಿ
ನಾನು ಬೆರಗಾಗಬೇಕಿದೆ.

ಭಾವನೆ


ಮನದೊಳಗೆದ್ದ
ನೂರೆಂಟು
ಭಾವನೆಗಳ
ಅವಳಲಿ
ಹೇಳಿದ್ದೆನಷ್ಟೇ
.
.
.
.
.
.
.
.
ಅಷ್ಟಕ್ಕೇ..
" 108 "ರಲಿ ಹಾಕಿ
ಕಳುಹಿಸಿ ಕೊಟ್ಟಳಾ
ದುಷ್ಟೆ

ತಾಕತ್ತು


ಗೆಳತೀ..
ನಾ ಹೊದ್ದುಕೊಳ್ಳುವ
ದಪ್ಪ ಕಂಬಳಿ
ಚಳಿಯನು
ತಡೆದೀತಷ್ಟೇ...
ನಿನ್ನ ನೆನಪನು
ತಡೆವಷ್ಟು
ತಾಕತ್ತು
ಅದಕ್ಕೆಲ್ಲಿದೆ...?