Wednesday 31 December, 2014

ವಿಪರ್ಯಾಸ


ಇತ್ತೀಚೆಗಷ್ಟೇ ಬಾಂಬ್ ಸ್ಫೋಟವಾಗಿದೆ...
ಒಬ್ಬಾಕೆಯ ಸಾವಿನ ಸೂತಕ ನಗರಕ್ಕಂಟಿದೆ....
ಆದರೂ ನಮ್ಮದಲ್ಲ ಅದ್ಯಾವುದೋ ದೇಶಗಳ
ಹೊಸ ವರುಷದ ಆಚರಣೆಗೆ
ನಗರ ತನ್ನ ತಾ ಶೃಂಗರಿಸಿಕೊಳುತಿದೆ.
ಮದ್ಯದಾ ಹೊಳೆಯಲಿ
ಮುಳುಗೆದ್ದು ತಮ್ಮನು ತಾವೇ ಮರೆಯಲು
ಹಲವು ಜನರ ಮನ ತವಕಿಸುತಿದೆ...

ಹುಡುಕಾಟ


ನನ್ನೆಡೆಗಿನ
ನಿನ್ನ ಆ
ಒಲವಿನ ನೋಟ,
ಗೆಳತೀ...
ನಿಜಕೂ
ನನಗದರದೇ
ಹುಡುಕಾಟ.

ಇರುಳ ಬಣ್ಣ


ಅವಳ
ಬಣ್ಣ ಬಣ್ಣದ
ಕನಸುಗಳೂ
ನನ್ನ
ತೊರೆದಾಗಲೇ
ನನಗೆ
ಗೊತ್ತಾಗಿದ್ದು
ಇರುಳ ಬಣ್ಣ
ಕಡು ಕಪ್ಪೆಂದು

ದೂರ...


ಗೆಳತೀ...
ನಿನ್ನ ಕೈಯ
ಗಟ್ಟಿಯಾಗಿ
ಹಿಡಿದು
ದೂರ...
ಬಲು ದೂರ
ಹೋಗುವಾಸೆ...
.
.
.
.
.
.
.
.
.
.
.
.
ಶಾಪಿಂಗ್ ಮಾಲುಗಳೇ
ಇಲ್ಲದ ಕಡೆಗೆ.

ಕವಿತೆ


ಬರಿಯ ನೋವನ್ನಲ್ಲದೆ
ಅವಳು ಮತ್ತಿನ್ನೇನನ್ನೂ
ನನಗೆ ಕೊಟ್ಟಿಲ್ಲ
ಅಂದಾಗ
ಮುನಿಸಿಕೊಂಡಿತ್ತು
ನಾ ಬರೆದಿದ್ದ
ನೂರೊಂದು
ವಿರಹದಾ ಕವಿತೆಗಳು

ಚಂದಿರ...


ನನ್ನ ಕೈಗಳ
ಅವಳು ಹಿಡಿದವಳೇ
ರಾಗದ ಮಾತಿನಲಿ
"ಈ ನಿನ್ನ ಕೈಗಳಲಿ
ದುಂಡು ಚಂದಿರನ
ಬಿಡಿಸಬಲ್ಲೆಯಾ...?"
ಎಂದು ಮುದ್ದಿಸಿ
ಕೇಳಿದಾಗ...
ನನಗೆ ಕಲ್ಪನೆಯೇ
ಇದ್ದಿರಲಿಲ್ಲ.
.
.
.
.
.
.
.
ಅವಳೆನ್ನ ಕೈಯಲ್ಲಿ
ದೋಸೆಯನು
ಮಾಡಿಸಲಿರುವಳೆಂದು.

ಹಣೆ-ಬರಹ


ಹಣೆಬರಹವನು
ಬರೆವವನು
ಹಣೆಯಲ್ಲಿ
"ಬರಹಗಾರ"
ಎಂದು
ಬರೆಯದೇ
ಹೋದರೆ
ಹೇಗೆ
ತಾನೇ
ಬರಹಗಳು
ಹುಟ್ಟೀತು...?
ಪದಗಳ
ಬೀಜವನು
ಉದಾರವಾಗಿ
ಕೊಟ್ಟು
ನಿನ್ನ ಪರಿಶ್ರಮದ
ಬೆವರ ಸುರಿಸಿ
ಬಿತ್ತಿಕೋ ಎಂದು
ಕಾಲಕಾಲಕ್ಕೆ
ಯೋಚನೆಗಳ
ಮಳೆ ಸುರಿಸಲಷ್ಟೇ
ತಾನೇ ಸಿಗುವುದು
ಉತ್ತಮ ಫಸಲು.
ಆದರೂ ನಮ್ಮಗೆಲ್ಲಾ
ಅದು ನನ್ನ
ಸ್ವಂತದ್ದೆನುವ ಅಮಲು

ಕೈರುಚಿ...


ನನ್ನವಳ
ಕೈರುಚಿ
ಅದ್ಭುತವಾಗಿದೆ.
ಎಂದು
ಹೊಗಳುವ
ಹೊತ್ತಿನಲ್ಲಿ,
ಹೊಟ್ಟೆ
ಸವರಬೇಕಾಗಿದ್ದ
ನನ್ನ ಕೈ,
ಕೆನ್ನೆಯ
ಸವರಿ
ಇನ್ನೊಮ್ಮೆ
ಅದೇ ರುಚಿಯ
ತೋರಿಸಿ
ಕೊಟ್ಟಿದೆ.

Friday 19 December, 2014

ಕಾಡುತಾವೆ...


ನಗುವೆನುವ
ಭಾವಕ್ಕಷ್ಟೇ
ಮುಖದ
ಹೊಸ್ತಿಲಲಿ
ನಿಲ್ಲಲವಕಾಶ,
ನೋವೆಲ್ಲವೂ
ಮನದ
ಕತ್ತಲ
ಕೋಣೆಯ
ಬಂಧಿ.
ಅವುಗಳಲ್ಲೇ
ಉಸಿರುಕಟ್ಟಿ
ಸಾಯಲಿ
ಎಂದೇ ಆಸೆ,
ಆದರೂ ಪಾಪಿ
ಚಿರಾಯು
ಎಂಬಂತೆ
ಸಾಯದೆ
ಕಾಡುತಾವೆ
ನನ್ನನೇ...
ಎದೆಯ
ಉರಿಯಾಗಿ.

ಭಾವೋದ್ವೇಗ


ಭಾವೋದ್ವೇಗದ
ತುತ್ತತುದಿಯಲ್ಲಿರುವಾಗ
ಪದಗಳೆಲ್ಲಿ ಕೈಗೆ
ಸಿಗುತಾವೆ..
ಬರಿಯ
ಕಣ್ಣೀರ ಹನಿಗಳು
ಜೊತೆಜೊತೆಯಾಗಿ
ಹರಿಯುತಾವೆ...

ಕೃಷ್ಣಾ...


ಹಸಿರ ವೈಭವದ ಮಧ್ಯೆ
ಗೋವುಗಳ ಹಿಂಡಿನ ನಡುವೆ
ನಿಂತು ಮೈಮರೆತು
ಕೊಳಲನೂದುವ ಕೃಷ್ಣನಿಂದ
ಜಗವ ಸಮ್ಮೋಹನಗೊಳಿಸೋ
ಕೊಳಲ ಗಾಯನವ
ಕಲಿಯುವಾಸೆ...
ಸಂಕಟಗಳ ಗೋವರ್ಧನವನೇ
ನನ್ನ ಕಿರು ಬೆರಳಲಿ
ಎತ್ತಿ ಹಿಡಿಯಬಲ್ಲ
ಮನೋಸ್ಥೈರ್ಯವ ಅವನಿಂದ
ತಿಳಿದುಕೊಳುವ ಆಸೆ.
ಜಗದ ಹಿತಕಾಗಿ
ಧರ್ಮದುಳಿವಿಗಾಗಿ
ಕುಟಿಲತೆಯ ಹೆಣೆಯಬಲ್ಲ
ಯೋಚನೆಗಳ, ಯೋಜನೆಗಳ
ಅವನಿಂದಲೇ ಕೇಳಿ ತಿಳಿಯುವಾಸೆ.
ಸಂಸಾರದ ರಣಾಂಗಣದ
ನಡುವೆ ಹತಾಶ ಭಾವದಲಿ
ಅವನ ಪಾದದಡಿಯಲಿ
ಮಂಡಿಯೂರಿ ಕುಳಿತು
ನನ್ನೆಲ್ಲಾ ಗೊಂದಲಗಳ
ಪರಿಹರಿಸೋ ಗೀತಾಸಾರವನು
ಅವನ ಬಾಯಾರೆ ಕೇಳುವಾಸೆ...

ಶಾಪ


ಹಸಿರೆಲೆಗಳ
ಇರುಳ
ಅಪ್ಪುಗೆಯ
ತಪ್ಪಿಸಿದ,
ಮುಂಜಾವಿನ
ನೇಸರನ
ಬಗೆಗೆ,
ಜಾರುತಿಹ
ಇಬ್ಬನಿಯ
ಮನದಲ್ಲಿದ್ದದ್ದು
ಹಿಡಿಶಾಪ
ಮಾತ್ರ.

Thursday 11 December, 2014

ನಲ್ಲ


ನಲ್ಲ ಎಂದೇ
ಅವಳ ಬಾಯಲ್ಲಿ
ಕೇಳಿದ ನೆನಪು.
.
.
.
ಆದರೆ ಅವಳಲ್ಲಿ
ಕೇಳಿದಾಗಲೇ
ಗೊತ್ತಾಗಿದ್ದು...
ಆ "ನಲ್ಲ"ನೆದುರಿಗೆ
"ನೀ" ಅಂಟಿಕೊಂಡಿತ್ತೆಂದು.

ಮುಂಗುರುಳು


ಮೊಗದಲ್ಲಿ
ಮುಂಗುರುಳ
ನಿಲ್ಲಗೊಡದಿರು
ಗೆಳತೀ..
ನಿನ್ನ ಮೊಗದ
ಇಂಚಿಂಚಿನಲೂ
ನನ್ನೊಲವ
ದೃಷ್ಟಿಯದೇ
ಹಕ್ಕಿರಲಿ.

ಆಧ್ಯಾತ್ಮದ ಬೆಳಗು


ಬೆಳಗು ಬರಿಯ ಬೆಳಗಲ್ಲ
ಇದೆ ಅಲ್ಲೊಂದು ಆಧ್ಯಾತ್ಮಿಕತೆ,
ನೇಸರನೆ ಇಲ್ಲಿ
ದಿವ್ಯಜ್ಯೋತಿ ಸ್ವರೂಪದ ಪರಬ್ರಹ್ಮ,
ಜಗಕೆ ಸುಖದ
ಬೆಳಕನು ಚೆಲ್ಲಲಿವನೆ ಕಾರಣ,
ಇವನಿಲ್ಲದಿರೆ ಕತ್ತಲ ದುಃಖ,
ಅಲ್ಲೂ ಕೆಲವೊಮ್ಮೆ ಚಂದಿರಗೆ
ತನ್ನ ಬೆಳಕ ಕೊಟ್ಟು
ನಮ್ಮ ಬಾಳಿಗೆ ತಂಬೆಳಕ ಕೊಟ್ಟಾನು,
ಅವನಿಲ್ಲ ಎನುವುದೂ ಒಂದು ಭ್ರಮೆ,
ಅವನಿರುವಿಕೆ ನಮಗೆ ಕಾಣುವುದಿಲ್ಲವಷ್ಟೇ,
ಅವನದೆಲ್ಲೋ ಇನ್ನಾರ ಬದುಕನೋ
ಬೆಳಗಿಸುತ್ತಿದ್ದಿರಬಹುದು.
ನಮ್ಮದೇ ಪಾಪ ಕರ್ಮಗಳಿಗೆ
ಶಿಕ್ಷೆಯಾಗಿ ತಾನತ್ತ ಸರಿದಿರಬಹುದು
ಆದರೂ ಮತ್ತೆ ಬರದಿರುವವನವನಲ್ಲ
ಮತ್ತೆ ಮೂಡಿ ಬರಲು
ಸಜ್ಜಾಗುತ್ತಿದ್ದಿರಬಹುದು.
ಕಾಲದ ಜೊತೆ ಕಾಯುವುದಷ್ಟೇ
ನಮ್ಮ ಧರ್ಮ,
ಭರವಸೆಯ ಹೊಸ ಕಿರಣದಿಂದಲಿ
ಮತ್ತೆ ನಮ್ಮ ಬಾಳನು
ಬೆಳಗುವನವನೆನುವುದು ಖಚಿತ.
ಅದಕೆ ನನ್ನ ಪಾಲಿಗೆ
ಬರಿಯ ಬೆಳಗಲ್ಲ ಪ್ರತಿ ಬೆಳಗು
ನನಗದು ಆಧ್ಯಾತ್ಮಿಕತೆಯ ಬೆರಗು

ನಿರೀಕ್ಷೆ..


ಟಕ್ಕು ಟಕ್ಕು
ಹೈ ಹೀಲ್ಡಿನ
ಸದ್ದುಗಳೇ
ತುಂಬಿರುವ
ಈ ಕಾಲದಲೂ
ಘಲ್ ಘಲ್
ಗೆಜ್ಜೆಯ
ಹೆಜ್ಜೆಯವಳ
ನಿರೀಕ್ಷೆ..

Friday 5 December, 2014

ಸ್ಮೈಲು


ಕೆಮರಾ ಒಂದು
ಅಡ್ಡ ಇದ್ದಾಗಲಷ್ಟೇ
ಅವಳು...
ನನ್ನ ಒಂಟಿ
ಕಣ್ಣಿನ ನೋಟಕೆ
ಸ್ಮೈಲು ಕೊಡೋದು

ಇಬ್ಬನಿ


ಗೆಳತೀ..
ಮನದ ಮೂಡಣದಲ್ಲಿ
ನಿನ್ನ ನೆನಪು
ಮೂಡುತಿದೆ ಎನುವುದಕೆ,
ಕಣ್ಣಿನೆಲೆಯ ತುದಿಯಲ್ಲಿ
ಧುಮುಕಿ ಬಿಡಲು
ಹಾತೊರೆಯುತಿಹ
ಇಬ್ಬನಿಯೇ ಸಾಕ್ಷಿ

ಬೆರಗು


ಮೊಣಕಾಲಮೇಲೆ
ಬೆಸೆದ ಕೈಗಳ
ಹಾಸನು ಹಾಸಿ
ನಿನ ಮೊಗವ
ಅದರಮೇಲಿಟ್ಟು,
ಮನದೊಳಗೆ
ನನ್ನ ನೆನಪುಗಳಿಗೆ
ಕರೆಯಕೊಟ್ಟು
ಕುಳಿತು ಬಿಡು ಗೆಳತೀ,
ಆ ನೆನಪುಗಳು
ನಿನ್ನ ಮೊಗದಿ
ಚಿತ್ರಿಸುವ
ಮಂದಹಾಸವ
ನೋಡಿ
ನಾನು ಬೆರಗಾಗಬೇಕಿದೆ.

ಭಾವನೆ


ಮನದೊಳಗೆದ್ದ
ನೂರೆಂಟು
ಭಾವನೆಗಳ
ಅವಳಲಿ
ಹೇಳಿದ್ದೆನಷ್ಟೇ
.
.
.
.
.
.
.
.
ಅಷ್ಟಕ್ಕೇ..
" 108 "ರಲಿ ಹಾಕಿ
ಕಳುಹಿಸಿ ಕೊಟ್ಟಳಾ
ದುಷ್ಟೆ

ತಾಕತ್ತು


ಗೆಳತೀ..
ನಾ ಹೊದ್ದುಕೊಳ್ಳುವ
ದಪ್ಪ ಕಂಬಳಿ
ಚಳಿಯನು
ತಡೆದೀತಷ್ಟೇ...
ನಿನ್ನ ನೆನಪನು
ತಡೆವಷ್ಟು
ತಾಕತ್ತು
ಅದಕ್ಕೆಲ್ಲಿದೆ...?

Thursday 27 November, 2014

ಸ್ವಚ್ಛಭಾರತ...


ಸ್ವಚ್ಛಭಾರತದ
ಕಿಚ್ಚು ಹೆಚ್ಚಾಗಿ
ಅದು ನನ್ನನ್ನೇ
ಕೊಚ್ಚಿ ಹಾಕೀತು
ಅಂತ ಕನಸಿನಲ್ಲೂ
ಯೋಚಿಸಿರಲಿಲ್ಲ.
.
.
.
.
.
.
ಇದೇ ಸ್ವಚ್ಛತೆಯ
ನೆಪದಲ್ಲಿ...
ನನ್ನವಳು
ತನ್ನ ಮನಸಿಂದ
ನನ್ನನ್ನ ಗುಡಿಸಿ
ಹೊರ ಹಾಕಿದ್ದಾಳಂತೆ.

ಪ್ರತಿಬಿಂಬ


ಕಹಿ ನೆನಪುಗಳು
ಹೊರದೂಡಿದ
ನನ್ನ ಪ್ರತಿ ಹನಿ
ಕಣ್ಣೀರನು,
ಕೈಬೊಗಸೆಯಲಿ
ತುಂಬಿಸಿ
ಕಾದು, ಕಣ್ತೆರೆದು
ಕುಳಿತಿದ್ದೇನೆ
ಗೆಳತೀ,
ನಿನ್ನದೇ
ಸಿಹಿ ನೆನಪಿನಾ
ತುಂಬು
ಚಂದಿರನ
ನಾನಲ್ಲಿ
ಕಾಣುವುದಕಾಗಿ

ಮೆಸೇಜು


ಅವಳು
ಅವಳಾಗೇ
ನನಗೆ
ಮೆಸೇಜು
ಮಾಡಿದ್ದಳೆನುವ
ಸುಖದಲ್ಲಿ ನಾ
ತೇಲಾಡುವಂತಿರಲಿಲ್ಲ
ಕಾರಣ
ಅವಳ
ಮೆಸೇಜು
.
.
.
.
.
.
.
.
.
ಇನ್ನೊಮ್ಮೆ
ನನಗೆ ಮೆಸೇಜು
ಮಾಡಿದರೆ
ಕಂಪ್ಲೇಂಟು
ಕೊಡುತ್ತೇನೆ
ಜೋಕೆ.

Monday 10 November, 2014

ಸ್ಥಾನ...


ಪಾಂಡಿತ್ಯದ ದೊಡ್ದ ಅಂತರವಿದೆ
ನನ್ನ ನಿನ್ನ ನಡುವೆ ಗೆಳತೀ
ಮೇಲೆ ನಿಂತಿರುವ ನಿನಗೆ
ಅಂತರವದೇನಿಲ್ಲ ಅಂತನಿಸೀತು ,
ಅದು ನೀನನಗಿತ್ತ ಸಮ್ಮಾನ
ಹತ್ತಿ ಬರಬಲ್ಲೆಯೆನುವ ಸ್ಪೂರ್ತಿ
ಮಾತು ಕೇಳಲಷ್ಟೇ ಸಿಹಿಯು
ಆದರೆ ನಾನಿನ್ನೂ ಹೆಜ್ಜೆಯೊಂದನು
ಮುಂದಿಡಲಾಗದೆ ಒದ್ದಾಡುತ್ತಿದ್ದೇನೆ...
ಕಾರಣ ಯೋಗ್ಯತೆಯ ಮಿತಿಯಿದೆ.
ಅದಕಾಗೇ ನಿನ್ನ ಸ್ಥಾನವದು
ನನ್ನೆದೆಯ ಗೌರವದ ಗರ್ಭಗುಡಿಯಲಿದೆ
ಸಲುಗೆಯಿಂದ ಹೇಗಿರಲಿ ನಿನ್ನ ಪೂಜಿಸದೆ

ಹೊಗಳಿಕೆ...



ಹೊಗಳಿಕೆಯ
ತುತ್ತತುದಿಯಲ್ಲಿಡಬೇಡ
ಗೆಳತೀ...
ಅಲ್ಲಿರುವುದು
ಅಹಂಕಾರವೆನುವ
ವಿಷದ ಗಾಳಿ
ಉಸಿರಾಡಿದಂತೆಲ್ಲಾ
ನನ್ನುಸಿರ ಚೀಲವನದು
ನೀಲಿಯಾಗಿಸೀತು.
ಅಲ್ಲಿ ಮತ್ತೊಂದಿಷ್ಟು
ಒಂಟಿತನ ಕಾಡೀತು
ಯಾಕೆಂದರಲ್ಲಿ ಯಾರಿಲ್ಲ.
ಹಾಗೆಯೇ ಸುಮ್ಮನೆ
ಯೋಚಿಸಿ ನೋಡು
ಕಾಡದಿದ್ದೀತೆ ನನ್ನನಲ್ಲಿ
ಆ ಸಣ್ಣ ಭಯ..?
ಕಹಿ ಸತ್ಯದ ಬಿರುಗಾಳಿ
ಬೀಸಿದರೆ...?
ವಾಸ್ತವದ
ಪ್ರಪಾತಕ್ಕುರುಳುವಾಗಿನ
ನೋವ ನನ್ನಿಂದ
ಸಹಿಸಲಾದೀತೇ...?
ನೀನೇ ಯೋಚಿಸಿ ನೋಡು.
ನಿಂತಿರುವ ನೆಲ
ಕೊಳಕಾಗಿದ್ದರೂ
ಪರವಾಗಿಲ್ಲ
ಇಲ್ಲೊಂದು
ಭದ್ರತೆಯ ಹಿತವಾದ
ಅನುಭೂತಿ ಇದೆ.
ನನ್ನನೀ ನೆಲದಲ್ಲೇ
ಇರಲು ಬಿಡು.
ಮುಗಿಲೆತ್ತರದಲಿ
ನನ್ನನಿರಿಸಿ ಚೆಲುವ
ನೋಡುವ ನಿನ್ನ
ಕನಸ ಮರೆತು ಬಿಡು...

Thursday 6 November, 2014

ನಾ ಹೇಗೆ ಒಂಟಿ...?




ನನ್ನೊಳಗಿನೆಲ್ಲಾ
ಸುಖ ದುಃಖಗಳ
ಹಂಚಿಕೊಳಲು
ನನ್ನೊಳಗೇ
ಆತ್ಮಸಖ
ಪರಮಾತ್ಮನಿರುವಾಗ.
ನಾ ಹೇಗೆ ಒಂಟಿ...?

Tuesday 4 November, 2014

ಮರೆವು...


ವಾಸ್ತವದ
ಬದುಕಿಗಂಜಿ
ಕಲ್ಪನೆಯ
ಗೆಳತಿಯನು
ದೂರ
ಕಳುಹಿಸಿದಂದಿನಿಂದ
ಯಾಕೋ..?
ಪದಗಳೂ
ಮರೆವಿನ
ಕೋಣೆಗೋಡಿದೆ

ವಾಸ್ತವ....


ಸಾಕು ನಿಲ್ಲಿಸಿ ಬಯಕೆಗಳೇ...
ನನ್ನೆದೆಯ ಅಂಗಣದಲಿನ
ನಿಮ್ಮ ನಲಿದಾಟ,
ಸಾಕು ನಿಲ್ಲಿಸಿ ಕನಸುಗಳೇ
ಇರುಳ ನೀರವತೆಯಲ್ಲಿ
ಮುಚ್ಚಿದ ಕಂಗಳೆದುರಿನ
ನಿಮ್ಮ ಅಲೆದಾಟ.
ನನ್ನ ಬಿಟ್ಟು ದೂರ ಸಾಗಿ
ನನಗೀಗ ನನ್ನ ಗಟ್ಟಿಗೊಳಿಸಬೇಕಾಗಿದೆ.
ತಪ್ಪು ನಿಮ್ಮದೇನಿಲ್ಲ.
ನೀವುಗಳು ಸದಾ
ಖುಷಿಯ ಕಚಗುಳಿಯಿಡುವವರೇ,
ಆದರೆ ನಾನಿರಬೇಕಾಗಿರುವುದು
ಕಲ್ಪನೆಯಲಲ್ಲ, ವಾಸ್ತವದಲಿ
ನಿಮ್ಮಪ್ಪುಗೆಯ ಹಿತಕಿಂತಲೂ
ಹೆಚ್ಚಿಗೆ ವಾಸ್ತವವು ಕಾಡುತ್ತದೆ.
ಅದಕಾಗೇ ನನ್ನ ಅದರ
ಜೊತೆಗೇನೆ ಬಿಟ್ಟು ಬಿಡಿ,
ಸಿಹಿಯ ಅರಿವಿರದಾಗ
ಕಹಿಯೇ ಸಿಹಿಯಾಗುವಂತೆ
ನನಗೀಗ ಜೀವಿಸಬೇಕಾಗಿದೆ,
ನೀವು ಬಣ್ಣ ಬಳಿದು ತೋರಿಸಿದುದಲ್ಲ,
ಜನರು ಹಿಡಿದ ಕೈಗನ್ನಡಿಯಲಿ
ಕಾಣುವುದೇ ನನ್ನ ಯೋಗ್ಯತೆ,
ಎನುವುದನು ನಾ
ನನ್ನ ಮನಕೆ ತಿಳಿಸಬೇಕಾಗಿದೆ...
ತಿಳಿಸಿ ಅದರಲೇ ಬಾಳ
ಸವೆಸುವ ಪಾಠವ
ನಾ ಹೇಳಿ ಕೊಡಬೇಕಾಗಿದೆ...
ಅದಕಾಗಿ ಈ ಕೋರಿಕೆ...
ಹೊರಟು ಹೋಗಿ ಬಯಕೆಗಳೇ...
ತೊರೆದು ಹೋಗಿ ಕನಸುಗಳೇ...
ವಾಸ್ತವಕೆ ನಾ ಶರಣಾಗಬೇಕಾಗಿದೆ.

ನಂಬಿಕೆ...


ಜಗದ ಕಣ್ಣಿಗೆ
ನಾ ನಂಬಿಕೆಯ
ಹೆಮ್ಮರ...
ಆದರೆ
ಪರಮಾಪ್ತರುಗಳ
ಎದೆಯಂಗಳದಲಿ
ಇಂದಿಗೂ ನಂಬಿಕೆಯ
ಬೀಜವದು ಮೊಳಕೆ
ಒಡೆಯಲೇ ಇಲ್ಲ

Wednesday 29 October, 2014

ಮದರಂಗಿ



ಅದ್ಯಾರದೋ
ಹೆಸರಿನ ಮದರಂಗಿ
ಅವಳ ಕೈಯ ತುಂಬಾ
ನಳನಳಿಸುತಿರಲು,
ಅದ ನೋಡಿದ
ಅವಳ ಮೊಗದಿ
ಹೂನಗೆಯು ಅರಳಿರಲು,
ಅವಳ ಖುಷಿಯೇ
ನನ್ನ ಖುಷಿಯೆನುವ
ಹಾಳು ಬಯಕೆಯೊಂದು
ಈಡೇರಿತ್ತು...
ಮರುಕ್ಷಣವೇ
ನನ್ನೇ ನಾ
ಕೊಂದು ಬಿಟ್ಟೆ,
ನನ್ನೊಳಗಿನ
ನೆತ್ತರ ಬಣ್ಣವನೆಲ್ಲಾ
ಆ ಮದರಂಗಿಗೇ
ಧಾರೆಯಿತ್ತು.

Monday 27 October, 2014

ಕು-ತಂತ್ರಜ್ಞಾನ


ಪ್ರೀತಿಸುವೆಯಾ ನನ್ನ..?
ಎಂದು ಅವಳು
ವಾಟ್ಸ್ ಅಪ್ ನಲಿ
ಕೇಳಿದಾಗ..
ಹತ್ತು ಬಾರಿ
ಹೌದೆಂದು
ಕಳುಹಿಸಿದರೂ..
ಅದನವಳಿಗೆ
ಮುಟ್ಟಿಸದ
ಹಾಳು ನೆಟ್ ವರ್ಕು..
ಕಾದು ಕಾದು ಆಕೆ,
ಯಾಕೆ ಗೆಳತನವೂ
ಬೇಡವೇ..???
ಅಂದಾಗಲೇ
ಒಮ್ಮೆಗೇ
ಹತ್ತು ಹೌದುಗಳನು
ಕಳುಹಿಸಿಬಿಟ್ಟಿತ್ತು.

ಹಬ್ಬ....


ಅದೆಲ್ಲಿಯೋ ಒಬ್ಬ ಕುಂಬಾರ
ಮಣ್ಣ ಹದ ಮಾಡಿ
ಹಣತೆಯನು ತಯಾರಿಸಿದ.
ಇನ್ನೊಬ್ಬ ಗಾಣಿಗ
ಎಳ್ಳಿನಿಂದ ದೀಪದೆಣ್ಣೆಯ ಸೆಳೆದ.
ಮತ್ಯಾರೋ ರೈತ
ಹತ್ತಿಯ ಬೆಳೆದರೆ...
ಅದ್ಯಾವುದೋ ಮನೆಯಾಕೆ
ಆ ಹತ್ತಿಯ ತೀಡಿ
ಬತ್ತಿಗಳ ಮಾಡಿದಳು.
ಎಲ್ಲವನೂ ಕೊಂಡ ನಾ
ನನ್ನ ಮನೆಯ ಬೆಳಗಿದಂತೆ,
ಅವರ ಮನೆಯನೂ
ಅರಿವಿಲ್ಲದಂತೆ ಬೆಳಗಿಸಿದ್ದೆ,
ಈ ದೇಶಗಳ ಹಬ್ಬಗಳೇ ಹಾಗೇ,
ದೀಪದಿಂದ ದೀಪವ
ಬೆಳಗಿದಂತೆ...

ಜೋಗುಳ


ಅವಳ ಸವಿ
ಕನಸುಗಳ
ಜೋಗುಳವಿರಲು,
ಇರುಳೇ ಸಿಹಿಯಾಗಿ
ಕಹಿಯನಿಸುತಿದೆ
ಈ ಹಗಲು.

Saturday 25 October, 2014

ಗೋಪೂಜೆ


ಅಂದೆಲ್ಲಾ
ಗೋವನು
ಸಿಂಗರಿಸಿ
ತಿನಿಸನಿತ್ತು
ಆರತಿ ಬೆಳಗುವುದೇ
ಗೋಪೂಜೆ,
ಇಂದು ಕಟುಕರ
ಕೈಯಿಂದ
ಗೋಮಾತೆಯನು
ರಕ್ಷಿಸಿದರೆ ಸಾಕು.
ಅದಕ್ಕಿಂತ
ಮಿಗಿಲಿನ್ನಾವ
ಪೂಜೆ..?

ಸದ್ದು


ಅವಳ
ಕನಸಿಗೆ
ಬೆಂಕಿ
ಹಚ್ಚಿದೆ,.
.
.
ಒಡೆದ
ಸದ್ದು
ಕೇಳಿಸಿದ್ದು
ಮಾತ್ರ
ನನ್ನೆದೆ
ಗೂಡಲ್ಲಿ

ಕೋಪ


ನನಗೆ
ಕೊಡಲ್ಪಟ್ಟ
ಸಿಹಿ ತಿಂಡಿಯ
ಖಾರದ
ಉರಿ
ಅದೆಷ್ಟಿತ್ತೆಂದರೆ...
.
.
.
.
ಕೂಡಲೇ
ಪೇಟೆಗೆ
ಹೋಗಿ
ನನ್ನವಳಿಗೆ
ಸೀರೆ
ಕೊಂಡು
ಕೊಳ್ಳುವಂತೆ
ಮಾಡಿತ್ತು .

ಧರ್ಮ ಸಂಕಟ


"ಮದ್ಯ(ಶರಾಬು)ದ"
ಅಂಗಡಿಯೊಂದರಲ್ಲಿ
ಅಂಗಡಿ ಪೂಜೆ .
ಅನುಮಾನದ
ಮನಸ್ಸಿಗೆ ,
.
.
.
.
.
ತೀರ್ಥ (ನಿಜವಾದ)
ತೆಗೆದು ಕೊಳ್ಳೋದೇ
ಧರ್ಮ ಸಂಕಟ.

Thursday 23 October, 2014

ಬಾಲ್ಯ ಮತ್ತು ದೀಪಾವಳಿ...



ನಿನ್ನೆ ಕತ್ತಲಿಗೆ
ಬೆಂಕಿ ಹಚ್ಚಿಯೂ
ತನ್ನ ತಾ
ಸ್ಫೋಟಿಸಿಕೊಳ್ಳದೆ
ಹುಲ್ಲಿನೆಡೆಯಲ್ಲಿ
ಅಡಗಿ ಕುಳಿತ
ಪಟಾಕಿಗಳಿಗೆ
.
.
ನಸುಕಿನಲೇ
ಹುಡುಕಾಟ

ಪಟಾಕಿ



ಈ ಬಾರಿ ನಿನಗೆ
ಹಬ್ಬಕ್ಕೆ ನೆಕ್ಲೇಸು
ತಂದುಕೊಡುವೆನೆಂದು,
ನನ್ನವಳಿಗೆ ಹೇಳಿ
ತಂದು ಕೊಡಲೇ ಇಲ್ಲ.
.
.
.
.
.
.
.
.
.
.
ಅಬ್ಬಾ...ಪಟಾಕಿಯ
ಖರ್ಚು ಉಳಿಯಿತು.

ವ್ಯಾಕರಣ




ದಿವಾಳಿ ಅಲ್ಲ ಕಣೇ
ಅದು ದೀಪಾವಳಿ
ಎಂದು ತನ್ನಾಕೆಯ
ವ್ಯಾಕರಣ
ಸರಿ ಮಾಡಿದ
ಪತಿರಾಯ,
ಪತ್ನಿಯ ಶಾಪಿಂಗ್
ಮುಗಿಯುವಷ್ಟರಲ್ಲಿ
" ದಿವಾಳಿ " ಯೇ
ಸರಿ ಎಂದೆನ್ನತೊಡಗಿದ್ದ


Wednesday 22 October, 2014

ಬೆಳಕ ನಗು



ಹಣತೆಯಾ
ತೊಟ್ಟಿಲಲಿ
ತೈಲಧಾರೆಯ
ಹೊದ್ದುಕೊಂಡು
ಜೋಡಿ
ಬತ್ತಿಗಳೆನುವ
ಅವಳಿ
ಕಂದಮ್ಮಗಳು
ಬೆಳಕ
ನಗುವ
ಬೀರಲಿ

ನಿನಗಾಗಿ..



ಬಾಳ ಸಂಗಾತಿಯೇ..
ದೀಪಾವಳಿಯ
ಈ ಶುಭಗಳಿಗೆಯಂದು
ನಿನಗಾಗೇ
ನಾನುಳಿಸಿಕೊಂಡಿದ್ದೇನೆ.
.
.
.
.
.
.
.
.
.
.
.
ತಿಕ್ಕಿ ತೊಳೆಯಲೆನ್ನ
ಬೆನ್ನಿನಲೊಂದಿಷ್ಟು ಕೊಳೆ

Tuesday 21 October, 2014

ದೀಪಾವಳಿ...



ಅಭ್ಯಂಗ
ಸ್ನಾನವನು ಮಾಡಿ
ತನುವ ಕೊಳೆ
ಕಳಕೊಂಡಂತೆ,
ನಾವುರಿಸುವ
ಪ್ರತಿ ಹಣತೆಯ
ಬೆಳಕದು
ಕಣ್ಣ ಮೂಲಕ
ಮನವ ಹೊಕ್ಕು,
ಅಲ್ಲಿನೆಲ್ಲಾ
ಕೊಳೆಯ
ಸುಟ್ಟು ಹಾಕಲಿ...



Monday 20 October, 2014

ನಾಟಕ



ಮುಂಜಾನೆಯಲಿ
ನೇಸರ , ಬಾನ
ರಂಗಮಂಟಪದ
ಕಪ್ಪು ಪರದೆಯ
ಸರಿಸುತ್ತಿದ್ದಂತೆ
ಹಕ್ಕಿಗಳು
ಹಿನ್ನಲೆ ಗಾಯನವ
ಹಾಡತೊಡಗಿದವು.
ತರುಲತೆಗಳೆಲೆಗಳು
ಇಬ್ಬನಿಯ
ಕಣ್ಣೀರ ಸುರಿಸುವ,
ಮೊಗ್ಗುಗಳು ಹಿಗ್ಗಿ
ಅರಳಿ ಖುಷಿಯ
ತೋರಿಸುವ
ಅಭಿನಯವ
ಮಾಡುತಿರಲು
ಆಧುನಿಕ
ಮನುಜ ಮಾತ್ರ
ಮುಸುಕಿನೊಳಗೆ
ತನ್ನ ತಾ
ಬಚ್ಚಿಟ್ಟುಕೊಂಡಿದ್ದ.

ವಿಪರ್ಯಾಸ




ಓದಿ ಪ್ರೀತಿಗೊಪ್ಪಲೇ
ಬೇಕೆಂದು, ನಾ
ಅವಳ ಕುರಿತಾಗಿ
ಬರೆಯ ಬೇಕೆಂದುಕೊಂಡ
ಪ್ರೇಮಗೀತೆಯ
ಕೂಸನು, ಕಲ್ಪನೆಯ
ಬಸಿರಿಂದ ಹೆತ್ತು
ಹೈರಾಣಾಗುವಷ್ಟರಲ್ಲಿ
.
.
.
.
.
.
ಅವಳದ್ಯಾರನ್ನೋ
ಕಟ್ಟಿಕೊಂಡು ಎರಡು
ಮಕ್ಕಳ ಹೆತ್ತು
ಹೈರಾಣಾಗಿದ್ದಳು.

Saturday 18 October, 2014

ಕವಿತೆ...



ಮುತ್ತಿನಂಥಾ
ಪದಗಳು
ಚದುರಿದೆ,
ಭಾವನೆಯ
ದಾರವದು
ಕಾದು ಕುಳಿತಿದೆ,
ಆದರೂ
ಪೋಣಿಸಿ
ಕವಿತೆಯಾ
ಮುತ್ತಿನಹಾರ
ಮಾಡುವ
ಕಲೆಯನರಿಯದ
ನನ್ನೀ ಮನ,
ಒಳಗೊಳಗೇ
ಕೊರಗಿದೆ

---ಕೆ.ಗುರುಪ್ರಸಾದ್
(ಚಿತ್ರಕ್ಕಾಗಿ ಬರೆದಿದ್ದು)

ಭಾವಯಾನ


ಮನದೊಳಗೆದ್ದ
ಭಾವನೆಗೆ
ಅದೇಕೋ ಅಲ್ಲಿ
ಉಸಿರುಕಟ್ಟಿಂದಂತಾಗಿ
ಸ್ವಾತಂತ್ರ್ಯದ
ಉತ್ಕಟ ಆಸೆಯಿಂದ
ಪದಗಳಾಗಿ
ಬಾಯ ಕದದೆಡೆಗೆ
ಓಡಿ ಬಂದರೆ,
ಬುದ್ದಿಯಾಜ್ಞೆಗೆ
ಬದ್ದವಾಗಿದ್ದ
ತುಟಿಗಳು
ತೆರೆದುಕೊಳ್ಳಲೇ ಇಲ್ಲ ;
ಮತ್ತದಕೆ
ಕಾಣಿಸಿದ್ದು
ಕಣ್ಣ ಸಣ್ಣ
ಕಿಟಕಿಗಳು,
ಥಟ್ಟನೆ ಕಣ್ಣೀರ
ಹನಿಯಾಗಿ
ಭದ್ರವಾಗಿರದ
ರೆಪ್ಪೆಗಳ ದೂಡಿ
ಹೊರಗದು
ಬಂದೇ ಬಿಟ್ಟಿತಲ್ಲ.

ಶತ್ರು


" ಏಳು, ಎದ್ದೇಳು..
ಅವಳು ಬರಿಯ
ನಿನ್ನ ಕನಸಿಗಷ್ಟೇ
ಸೀಮಿತ..."
ಎಂದು ನಕ್ಕು
ತನ್ನ ಬೆಳ್ಳಿಕಿರಣದಿಂದ
ನನ್ನ ತಿವಿದೆಬ್ಬಿಸಿ,
ಅಣಕಿಸಿ,
ಮುಗಿಲಿಗೇರುವ
ಸೂರ್ಯನೇ
ನನ್ನ ಮೊದಲ ಶತ್ರು

ಕನಸು


ಗೆಳತೀ...
ನಿನ್ನ ಮನಸಿಂಗಳವ
ತುಳಿಯಲು ಬಿಡದಿದ್ದರೂ
ಪರವಾಗಿಲ್ಲ...
ಕನಸಲ್ಲೊಂದಿಷ್ಟು
ಜಾಗ ಕೊಡು..
ಒಂದೆರಡು ಕ್ಷಣಕೆ
ಎಚ್ಚರವಾದರೂ
ಪರವಾಗಿಲ್ಲ,
ಸಂತೈಸಲು ಬರುವ
ನಿನ್ನಮ್ಮನಿಗೆ
ಕೆಟ್ಟಕನಸೆಂದು
ಹೇಳಿ ಬಿಡು

ಪಯಣ...


ಗುರಿಯನೇನೂ
ಇಟ್ಟುಕೊಂಡಿಲ್ಲ.
ತೀರವ ಸೇರುವೆನೋ..?
ಸಾಗರದೊಳಗೆ
ಮುಳುಗುವೆನೋ...?
ಭಗವಂತನಿಚ್ಛೆಯನೇ
ನನ್ನಿಚ್ಛೆಯನ್ನಾಗಿಸಿದ್ದೇನೆ,
ಪಯಣದ ಸುಖವನ್ನಷ್ಟೇ
ಅನುಭವಿಸ ಹೊರಟ,
ಅವ ಸೃಷ್ಟಿಸಿದ
ಕಾಲವೆಂಬ
ಪ್ರವಾಹದಲಿ
ತೇಲಿ ಸಾಗುವ
ಒಣಗಿದೆಲೆಯಾಗಿದ್ದೇನೆ.

ಅಪ್ಪುಗೆ


ಬಿಗಿದಪ್ಪಿಕೊಳ್ಳಿ
ಕಣ್ ರೆಪ್ಪೆಗಳೇ,
ನಿಮ್ಮಾಲಿಂಗನ
ಸಡಿಲವಾದಂತೆಲ್ಲಾ
ನನ್ನವಳು
ಮರೆಯಾಗುತ್ತಾಳೆ

ನಿರೀಕ್ಷೆ...


ಚೆಲುವಿನಲಿ
ನಾನಿಟ್ಟಿದ್ದ
ನಿರೀಕ್ಷೆಗಳ
ಮಟ್ಟವ
ಮೀರಿದ
ಚೆಲುವೆಗೆ
ನಾನು
ಒಪ್ಪಿಗೆಯಾಗದಿರಲು
ಕಾರಣ...
ನನಗೆ
ತಲುಪಲಾಗದಷ್ಟು
ಎತ್ತರದಲ್ಲಿ
ಅವಳಿಟ್ಟುಕೊಂಡಿದ್ದ
ಚೆಲುವಿನ
ನಿರೀಕ್ಷೆ.

ರಜೆ- ಸಜೆ


ಭರ್ಜರಿ ಬೋಜನವ
ಹೊಟ್ಟೆಗಿಳಿಸಿದ ಜನರು
ಆರಾಮವಾಗಿರಲು ಕಾರಣ
ಹಬ್ಬಕ್ಕೆ ಸಿಕ್ಕಿದ ರಜೆ;
ಆದರವರ ಹೊಟ್ಟೆಗೀಗ
ತಿಂದದ್ದನ್ನು ಕರಗಿಸೋಕಂತ
ಸಿಕ್ಕಿದೆ, ಓವರ್ ಟೈಮ್ ಸಜೆ

ಭಾವಶೂನ್ಯ...


ಮುಂಜಾನೆಯಲಿ
ಕವಿಭಾವದ
ಮನಗಳೊಳಗೆ
ರಮ್ಯ ರಮಣೀಯ
ಭಾವೋತ್ಪತ್ತಿಯ
ಮಾಡುವ ನೇಸರ,
ತಾನು ಮಾತ್ರ
ಭಾವಶೂನ್ಯನಾಗಿ
ಜಗವ ಬೆಳಗುವ
ಕಾಯಕದಲೇ
ತಲ್ಲೀನನಾಗಿದ್ದಾನೆ.

Friday 10 October, 2014

ತಿನಿಸು...



ಕಂಗಳು
ಹೇಳಿತೆನ್ನಲಿ
ಅವಳ
ರೂಪವೇ
ನನ್ನ
ಮೆಚ್ಚಿನ
ತಿನಿಸು,
ನೀನದನೇ
ನನಗೆ
ಮತ್ತೆ ಮತ್ತೆ
ತಿನಿಸು.

Thursday 9 October, 2014

ತಿನಿಸು...


ಕಣ್ಣ ಹೊಟ್ಟೆ
ತುಂಬಿದ್ದರೂ
ನಿದಿರೆಯಾ
ತಿನಿಸನು
ಇನ್ನಷ್ಟು
ಮೆಲ್ಲುವಾಸೆ...

ಇಂಟರ್ನೆಟ್


ನಿದಿರೆಯಾ
ಇಂಟರ್ನೆಟ್
ಆನ್ ಇಡೋ
ತವಕ ,
ಅವಳ
ಕನಸುಗಳನೆಲ್ಲಾ
ಡೌನ್ ಲೋಡ್
ಮಾಡೋ
ತನಕ.

ಆಹುತಿ...



ಅದೇಕೋ ಮುಸ್ಸಂಜೆ ಕಾಡುತ್ತದೆ,
ಕೆಂಪು ಕೆಂಪಾದ ಬಾನು
ಕೈ ಬೀಸಿ ಕರೆಯುತ್ತದೆ,
ಬಾ ನನ್ನಂಗಣದಲಿ
ಉದುರಿಸು ನಿನ್ನ
ರಕ್ತ ಕಣ್ಣೀರನು,
ನಾ ಹೊತ್ತೊಯ್ದು
ಸಾಗರದ ಮಧ್ಯದಲ್ಲಿ
ಯಾರಿಗೂ ಗೊತ್ತಾಗದಂತೆ,
ಅದನು ಹೂತು ಬಿಡುವೆ
ಎಂದು ಸಂತೈಸುತ್ತದೆ,
ನಾನೋ ಆ ಆಗಸದ
ತುಂಬಾ ಹರಡಿಹ
ಮೋಡಗಳೆಡೆಯಲ್ಲಿ ಮರೆಯಾಗಿ
ಒಂದಿಷ್ಟು ಹೊತ್ತು
ನನ್ನಷ್ಟಕ್ಕೇ ಕೊರಗಿ ,
ನನ್ನಂತೆ ಒಂಟಿಯಾಗಿಹ
ನೇಸರನನು ಸಾಗರಕೆ
ತಳ್ಳಿಬಿಡಲು ಪ್ರಯತ್ನಿಸುತ್ತೇನೆ,
ನೀನಾದರೂ ಸುಖದ
ಸಾಗರದಲಿ ಮುಳುಗಿಕೋ ಎಂದು,
ಮತ್ತೆ ಮೆಲ್ಲನೆ ನಾ ಸಜ್ಜಾಗುತ್ತೇನೆ
ಕನಸಾಗಿ ಕಾಡುವ ನೆನಪಿನಾಗ್ನಿಗೆ
ಆಹುತಿಯಾಗುತ್ತೇನೆ...

Wednesday 1 October, 2014

ಶಾಪ




ಹುಟ್ಟುವಾಗಲೇ
ಪಡೆದಿದ್ದ
ಸಾವಿನುಡುಗೊರೆಯ
ಸೂಕ್ತ ಕಾಲಕ್ಕೆ
ಕೈಗಿಡುವ
ಭಗವಂತನಿಗೆ
ಅವರಿವರಿಂದ
ಸಿಗುವುದು
ಬರೀ ಶಾಪ

ಗಾಯ




ಭೋರ್ಗರೆವ
ನೀರ ಸೆಳೆತದಿಂದ
ಕೈಹಿಡಿದು ಮೇಲೆತ್ತಿ
ಬದುಕನುಳಿಸಿ ಕೊಟ್ಟ
ಯೋಧನಿಗೆ.....
ಕೈಯ ಮುಗಿಯುವಾಗ
ಆ ಮತಾಂಧ
ಯುವಕನಿಗೆ
ಕಾಣಿಸಿದ್ದು.......
ಅದೇ ಚಿರಪರಿಚಿತ ಮುಖ,
ಮತ್ತು ಅಂದು
ಅವನ ಅಭಿಮಾನಕ್ಕೆ
ಕಾರಣವಾಗಿದ್ದ
ಹಣೆಯ ಮೇಲೆ
ಒಣಗಿ ಕಲೆಯನುಳಿಸಿದ್ದ
ಕಲ್ಲೆಸೆತದ ಗಾಯ

ಪರಾರಿ





ಪುಟ್ಟ ರವಿ
ಕತ್ತಲ ಕತ್ತು
ಹಿಸುಕಿದ್ದೇ ತಡ
ಕೋಟಿ ತಾರೆಯರು
ಪರಾರಿ ....
ಈ ಪರಾರಿಯಾದವರ
ಹುಡುಕಾಟಕ್ಕೆಂದೇ
ಶುರುವಾಗಿದೆ
ಆಗಸದಲಿ
ನೇಸರನ ಸವಾರಿ

Tuesday 30 September, 2014

ಪರಿಮಳ...



ಉರಿಸಿದ
ಊದುಬತ್ತಿಯ
ಪರಿಮಳ
ಯಾವುದೆಂದು
ತಿಳಿಯಲು
ಮೂಸಿ
ನೋಡತೊಡಗಿದೆ,.
.
.
.
.
.
.
.
ಈಗ ಮೂಗಿನ
ಮೇಲೊಂದು
ಸಣ್ಣ ಸುಟ್ಟ
ಗಾಯವಾಗಿದೆ,
ಪರಿಮಳ ಮಾತ್ರ
ಮಾಯವಾಗಿದೆ.

---ಕೆ.ಗುರುಪ್ರಸಾದ್

Monday 29 September, 2014

ಬೆಳೆ


ಹೊಳೆವ
ಮೈಯುಳ್ಳವನೇ
ಬರಬೇಕು
ಇಳೆಗೆ,
ಬೆಳೆವ
ಮನಸಿರುವ
ಬೆಳೆಗೆ.

ವಿಶ್ವ ಹೃದಯ ದಿನ


ಆಚರಿಸಲಾಗದೇ
ಒದ್ದಾಡುತ್ತಿದ್ದೇನೆ
ಗೆಳತೀ....
ಕಾರಣವ
ನಿನ್ನೆದೆಯೊಳಗೇ
ಹುಡುಕು,
ಎರಡೆರಡು
ಹೃದಯದಾ
ಬಡಿತಗಳು
ಮೆಲ್ಲನೆ
ಉತ್ತರವ
ಪಿಸುಗುಟ್ಟಿಯಾವು..

ನಮನ


ಕೊರಳ ಸುತ್ತಿಕೊಂಡ
ಹುರಿಹಗ್ಗವದು
ಹಿಸುಕಿ ಉಸಿರ
ಮೆಲ್ಲಮೆಲ್ಲನೆ
ನಿಲ್ಲಿಸುತ್ತಿದ್ದರೂ...
ತಾಯಿ ಭಾರತಿಯ
ಭಕ್ತಿ ಗೀತೆಯ
ಸ್ಪೂರ್ತಿಯ ಶ್ರುತಿಯನು
ತಪ್ಪಲು ಬಿಡಲೇ ಇಲ್ಲ....
ತಾ ಹಾಡುವುದ
ನಿಲ್ಲಿಸಿದರೂ,
ದೇಶಭಕ್ತಿಯ ಕ್ರಾಂತಿ
ಸಂಗೀತದ ಪಾಠವನು
ಭರತ ಕುವರರಿಗೆ
ಹೇಳಿಕೊಟ್ಟ ಭಗತನಿಗೆ
ನಮಿಸದಿದ್ದರೆ,
ಈ ಸ್ವಾತಂತ್ರ್ಯದ
ರುಚಿಯನನುಭವಿಸಲು
ನಮಗೆ ಯೋಗ್ಯತೆಯೇ ಇಲ್ಲ..

Monday 22 September, 2014

ಕಲ್ಲು - ಪ್ರವಾಹ




ಅಲ್ಲಿದ್ದ ಕಲ್ಲುಗಳೆಲ್ಲವನೂ
ಕೊಂಡೊಯ್ದು ಹೋಯ್ತು,
ಕಲ್ಲೆಸೆದವರ ಮನೆಯನ್ನೂ
ಕೊಚ್ಚಿಕೊಂಡೊಯ್ದದ್ದು
ಕಲ್ಲೆದೆಯ ಪ್ರವಾಹ...
ಆದರೆ......
ಕಲ್ಲೆಸೆದವರನ್ನುಳಿಸಿದ್ದು ಮಾತ್ರ
ಕಲ್ಲೇಟು ತಿಂದರೂ
ಹೃದಯವನು ಕಲ್ಲಾಗಿಸದ
ಯೋಧರು...