Thursday 27 November, 2014

ಸ್ವಚ್ಛಭಾರತ...


ಸ್ವಚ್ಛಭಾರತದ
ಕಿಚ್ಚು ಹೆಚ್ಚಾಗಿ
ಅದು ನನ್ನನ್ನೇ
ಕೊಚ್ಚಿ ಹಾಕೀತು
ಅಂತ ಕನಸಿನಲ್ಲೂ
ಯೋಚಿಸಿರಲಿಲ್ಲ.
.
.
.
.
.
.
ಇದೇ ಸ್ವಚ್ಛತೆಯ
ನೆಪದಲ್ಲಿ...
ನನ್ನವಳು
ತನ್ನ ಮನಸಿಂದ
ನನ್ನನ್ನ ಗುಡಿಸಿ
ಹೊರ ಹಾಕಿದ್ದಾಳಂತೆ.

ಪ್ರತಿಬಿಂಬ


ಕಹಿ ನೆನಪುಗಳು
ಹೊರದೂಡಿದ
ನನ್ನ ಪ್ರತಿ ಹನಿ
ಕಣ್ಣೀರನು,
ಕೈಬೊಗಸೆಯಲಿ
ತುಂಬಿಸಿ
ಕಾದು, ಕಣ್ತೆರೆದು
ಕುಳಿತಿದ್ದೇನೆ
ಗೆಳತೀ,
ನಿನ್ನದೇ
ಸಿಹಿ ನೆನಪಿನಾ
ತುಂಬು
ಚಂದಿರನ
ನಾನಲ್ಲಿ
ಕಾಣುವುದಕಾಗಿ

ಮೆಸೇಜು


ಅವಳು
ಅವಳಾಗೇ
ನನಗೆ
ಮೆಸೇಜು
ಮಾಡಿದ್ದಳೆನುವ
ಸುಖದಲ್ಲಿ ನಾ
ತೇಲಾಡುವಂತಿರಲಿಲ್ಲ
ಕಾರಣ
ಅವಳ
ಮೆಸೇಜು
.
.
.
.
.
.
.
.
.
ಇನ್ನೊಮ್ಮೆ
ನನಗೆ ಮೆಸೇಜು
ಮಾಡಿದರೆ
ಕಂಪ್ಲೇಂಟು
ಕೊಡುತ್ತೇನೆ
ಜೋಕೆ.

Monday 10 November, 2014

ಸ್ಥಾನ...


ಪಾಂಡಿತ್ಯದ ದೊಡ್ದ ಅಂತರವಿದೆ
ನನ್ನ ನಿನ್ನ ನಡುವೆ ಗೆಳತೀ
ಮೇಲೆ ನಿಂತಿರುವ ನಿನಗೆ
ಅಂತರವದೇನಿಲ್ಲ ಅಂತನಿಸೀತು ,
ಅದು ನೀನನಗಿತ್ತ ಸಮ್ಮಾನ
ಹತ್ತಿ ಬರಬಲ್ಲೆಯೆನುವ ಸ್ಪೂರ್ತಿ
ಮಾತು ಕೇಳಲಷ್ಟೇ ಸಿಹಿಯು
ಆದರೆ ನಾನಿನ್ನೂ ಹೆಜ್ಜೆಯೊಂದನು
ಮುಂದಿಡಲಾಗದೆ ಒದ್ದಾಡುತ್ತಿದ್ದೇನೆ...
ಕಾರಣ ಯೋಗ್ಯತೆಯ ಮಿತಿಯಿದೆ.
ಅದಕಾಗೇ ನಿನ್ನ ಸ್ಥಾನವದು
ನನ್ನೆದೆಯ ಗೌರವದ ಗರ್ಭಗುಡಿಯಲಿದೆ
ಸಲುಗೆಯಿಂದ ಹೇಗಿರಲಿ ನಿನ್ನ ಪೂಜಿಸದೆ

ಹೊಗಳಿಕೆ...



ಹೊಗಳಿಕೆಯ
ತುತ್ತತುದಿಯಲ್ಲಿಡಬೇಡ
ಗೆಳತೀ...
ಅಲ್ಲಿರುವುದು
ಅಹಂಕಾರವೆನುವ
ವಿಷದ ಗಾಳಿ
ಉಸಿರಾಡಿದಂತೆಲ್ಲಾ
ನನ್ನುಸಿರ ಚೀಲವನದು
ನೀಲಿಯಾಗಿಸೀತು.
ಅಲ್ಲಿ ಮತ್ತೊಂದಿಷ್ಟು
ಒಂಟಿತನ ಕಾಡೀತು
ಯಾಕೆಂದರಲ್ಲಿ ಯಾರಿಲ್ಲ.
ಹಾಗೆಯೇ ಸುಮ್ಮನೆ
ಯೋಚಿಸಿ ನೋಡು
ಕಾಡದಿದ್ದೀತೆ ನನ್ನನಲ್ಲಿ
ಆ ಸಣ್ಣ ಭಯ..?
ಕಹಿ ಸತ್ಯದ ಬಿರುಗಾಳಿ
ಬೀಸಿದರೆ...?
ವಾಸ್ತವದ
ಪ್ರಪಾತಕ್ಕುರುಳುವಾಗಿನ
ನೋವ ನನ್ನಿಂದ
ಸಹಿಸಲಾದೀತೇ...?
ನೀನೇ ಯೋಚಿಸಿ ನೋಡು.
ನಿಂತಿರುವ ನೆಲ
ಕೊಳಕಾಗಿದ್ದರೂ
ಪರವಾಗಿಲ್ಲ
ಇಲ್ಲೊಂದು
ಭದ್ರತೆಯ ಹಿತವಾದ
ಅನುಭೂತಿ ಇದೆ.
ನನ್ನನೀ ನೆಲದಲ್ಲೇ
ಇರಲು ಬಿಡು.
ಮುಗಿಲೆತ್ತರದಲಿ
ನನ್ನನಿರಿಸಿ ಚೆಲುವ
ನೋಡುವ ನಿನ್ನ
ಕನಸ ಮರೆತು ಬಿಡು...

Thursday 6 November, 2014

ನಾ ಹೇಗೆ ಒಂಟಿ...?




ನನ್ನೊಳಗಿನೆಲ್ಲಾ
ಸುಖ ದುಃಖಗಳ
ಹಂಚಿಕೊಳಲು
ನನ್ನೊಳಗೇ
ಆತ್ಮಸಖ
ಪರಮಾತ್ಮನಿರುವಾಗ.
ನಾ ಹೇಗೆ ಒಂಟಿ...?

Tuesday 4 November, 2014

ಮರೆವು...


ವಾಸ್ತವದ
ಬದುಕಿಗಂಜಿ
ಕಲ್ಪನೆಯ
ಗೆಳತಿಯನು
ದೂರ
ಕಳುಹಿಸಿದಂದಿನಿಂದ
ಯಾಕೋ..?
ಪದಗಳೂ
ಮರೆವಿನ
ಕೋಣೆಗೋಡಿದೆ

ವಾಸ್ತವ....


ಸಾಕು ನಿಲ್ಲಿಸಿ ಬಯಕೆಗಳೇ...
ನನ್ನೆದೆಯ ಅಂಗಣದಲಿನ
ನಿಮ್ಮ ನಲಿದಾಟ,
ಸಾಕು ನಿಲ್ಲಿಸಿ ಕನಸುಗಳೇ
ಇರುಳ ನೀರವತೆಯಲ್ಲಿ
ಮುಚ್ಚಿದ ಕಂಗಳೆದುರಿನ
ನಿಮ್ಮ ಅಲೆದಾಟ.
ನನ್ನ ಬಿಟ್ಟು ದೂರ ಸಾಗಿ
ನನಗೀಗ ನನ್ನ ಗಟ್ಟಿಗೊಳಿಸಬೇಕಾಗಿದೆ.
ತಪ್ಪು ನಿಮ್ಮದೇನಿಲ್ಲ.
ನೀವುಗಳು ಸದಾ
ಖುಷಿಯ ಕಚಗುಳಿಯಿಡುವವರೇ,
ಆದರೆ ನಾನಿರಬೇಕಾಗಿರುವುದು
ಕಲ್ಪನೆಯಲಲ್ಲ, ವಾಸ್ತವದಲಿ
ನಿಮ್ಮಪ್ಪುಗೆಯ ಹಿತಕಿಂತಲೂ
ಹೆಚ್ಚಿಗೆ ವಾಸ್ತವವು ಕಾಡುತ್ತದೆ.
ಅದಕಾಗೇ ನನ್ನ ಅದರ
ಜೊತೆಗೇನೆ ಬಿಟ್ಟು ಬಿಡಿ,
ಸಿಹಿಯ ಅರಿವಿರದಾಗ
ಕಹಿಯೇ ಸಿಹಿಯಾಗುವಂತೆ
ನನಗೀಗ ಜೀವಿಸಬೇಕಾಗಿದೆ,
ನೀವು ಬಣ್ಣ ಬಳಿದು ತೋರಿಸಿದುದಲ್ಲ,
ಜನರು ಹಿಡಿದ ಕೈಗನ್ನಡಿಯಲಿ
ಕಾಣುವುದೇ ನನ್ನ ಯೋಗ್ಯತೆ,
ಎನುವುದನು ನಾ
ನನ್ನ ಮನಕೆ ತಿಳಿಸಬೇಕಾಗಿದೆ...
ತಿಳಿಸಿ ಅದರಲೇ ಬಾಳ
ಸವೆಸುವ ಪಾಠವ
ನಾ ಹೇಳಿ ಕೊಡಬೇಕಾಗಿದೆ...
ಅದಕಾಗಿ ಈ ಕೋರಿಕೆ...
ಹೊರಟು ಹೋಗಿ ಬಯಕೆಗಳೇ...
ತೊರೆದು ಹೋಗಿ ಕನಸುಗಳೇ...
ವಾಸ್ತವಕೆ ನಾ ಶರಣಾಗಬೇಕಾಗಿದೆ.

ನಂಬಿಕೆ...


ಜಗದ ಕಣ್ಣಿಗೆ
ನಾ ನಂಬಿಕೆಯ
ಹೆಮ್ಮರ...
ಆದರೆ
ಪರಮಾಪ್ತರುಗಳ
ಎದೆಯಂಗಳದಲಿ
ಇಂದಿಗೂ ನಂಬಿಕೆಯ
ಬೀಜವದು ಮೊಳಕೆ
ಒಡೆಯಲೇ ಇಲ್ಲ