Saturday 31 December, 2011

ಹೊಸ ವರುಷ...???

ಇಂದೇನು ಹೊಸತನವೋ? ನನಗೇನು ಕಾಣಲಿಲ್ಲ
ಅದೆಂತಾ ಬದಲಾವಣೆಯೋ, ನನಗಾರೂ ತಿಳಿಸಲಿಲ್ಲ.
ಪ್ರಕೃತಿಯು ನಿನ್ನೆ ಇದ್ದಂತೆಯೇ ಇರುವುದಲ್ಲ
ಭೂತಾಯಿ ಹಳೆಯ ಸೀರೆಯನು ತೊರೆಯಲಿಲ್ಲ
ಹೊಚ್ಚಹೊಸತಾದ ಹಸಿರು ಸೀರೆಯನುಡಲೇ ಇಲ್ಲ

ಸಾಕ್ಷಿಗಳಿರದ ಬದಲಾವಣೆಯ ಆಚರಣೆಯೇ ಜೋರು
ಈ ಆಚರಣೆಯ ನಿಜವಾದ ಅರ್ಥವನು ಕೇಳುವವರ್ಯಾರು ?
ಕೇಳುವ, ಟೀಕಿಸುವ "ಬುದ್ಧಿಜೀವಿ"ಗಳದಿಂದು ಇಲ್ಲ ತಕರಾರು
ತಾವೂ ಕುಡಿದು ಕುಣಿದು ಉನ್ಮತ್ತರಾಗಿ ಆಚರಿಸುತಿಹರು
ಅಪರಾತ್ರಿಯಲೇ ಹೊಸ ವರುಷವನು ಸ್ವಾಗತಿಸುತಿಹರು..

ನಮ್ಮದಾಗಿರುವ ಆಚರಣೆಗಳಿಗೆ ಮಾತ್ರ ಇವರದು ಅಡ್ಡಗಾಲು
ವೈಜ್ನಾನಿಕ ಅರ್ಥಗಳೇನೆಂದು ನೂರೆಂಟು ಸವಾಲು
ಹೊಸತೇನು ಇಲ್ಲದಿದ್ದರೂ, ದೈರ್ಯವಿಲ್ಲ ಇಂದು ಜಗವ ಪ್ರಶ್ನಿಸಲು
ನನಗೇಕೋ ಮನಸ್ಸಿಲ್ಲ, ಇಂದು ನಮ್ಮತನವಿಲ್ಲದ ಹೊಸವರಷವನಾಚರಿಸಲು
ಆಚರಿಸದಿದ್ದರೇನಂತೆ, ಅಡ್ಡಿಯೇನಿಲ್ಲ ಗೆಳೆಯರಿಗೆ ಶುಭವ ಹಾರೈಸಲು..

Friday 30 December, 2011

ಅಂದು ಲೋಕ ಕಲ್ಯಾಣಕಾಗಿ

ಸೀತಾ ಪರಿಣಯಕಾಗಿ 

ರಾಮ ಮುರಿದು ಬಿಸಾಕಿದ

ಜನಕರಾಜನ ಸಭೆಯಲ್ಲಿ

ಶಿವನ ಮಹಾಧನುಸ್ಸು;

ಇಂದು ಲೋಕ ಕಂಟಕಕಾಗಿ

"ಲಕ್ಷ್ಮೀ" ಪರಿಣಯಕಾಗಿ


ಭಾರತದ ಸಂಸತ್ತಿನಲ್ಲಿ


ಮುರಿದು ಬಿಸಾಕಿದರು


ಅಣ್ಣಾ ಹಜಾರೆ ನಿರ್ಮಿತ


"ಜನಲೋಕಪಾಲ ಬಿಲ್ಲು"


ಮುರಿದದ್ದು ಕಾಂಗ್ರೆಸ್ಸು..

Friday 23 December, 2011



ಮಾನವನ ಕೈಯಲ್ಲಿ ಇರುವ ತಾನಿರುವ ಮರದ ಬೇರ,


ಕಂಡು ತೊರೆದು ತನ್ನ ತವರ; ಹಾರುತಿದೆ ಹಕ್ಕಿ ದೂರ


,
ಮನುಜನ ಕೈಗಳ ಗುಣವನೇ ಪಡೆಯುವುದಿನ್ನು ಈ ಮರ,



ಒಂದೆರಡು ದಿನದಲೇ ಆಗುವುದು ಮಾನವನಷ್ಟೇ ಕ್ರೂರ


.
ಹಾಗೆಂದು ಹಕ್ಕಿಗಳು ತೊರೆಯುತಿದೆ ತಮ್ಮ ತಮ್ಮ ಬಿಡಾರ.

Wednesday 21 December, 2011

ಅಕೌಂಟು



ಪ್ರಿಯೆ ನಿನ್ನಾಸೆಯಂತೆ
ನಾ ತಾಳಿಯ ದಾರದಲಿ
ಹಾಕಬಲ್ಲೆ ಮುರುಗಂಟು.
ಅದಕೂ ಮುನ್ನ
ದಾಂಪತ್ಯ ಜೀವನದ
ಭದ್ರತೆಗಾಗಿ ನೋಡಬೇಕು
ನಿನ್ನಪ್ಪನ ಬ್ಯಾಂಕಿನ ಅಕೌಂಟು;
ನಿನ್ನ ಮೇಲಿನ ನಂಬಿಕೆಗಾಗಿ
ನೋಡಬೇಕು ಬಾಯ್ ಫ್ರೆಂಡ್ ಗಳ
ಲಿಸ್ಟ್ ಗಳುಳ್ಳ ನಿನ್ನ
ಫೇಸ್ ಬುಕ್ ಅಕೌಂಟು.

ಭದ್ರಕಾಳಿ


ಮನವು ತೋರುವ ವಾಸ್ತವವನು
ಹಾಗೆಯೇ ಚಿತ್ರಿಸುವ
ಅಪರೂಪದ ಚಿತ್ರಕಲಾವಿದನಾಗಿದ್ದನವ
ಮನಸೂರೆಗೊಳ್ಳುವ ಚಿತ್ರಗಳ
ತನ್ನ ಕುಂಚದಿಂದರಳಿಸಿ
ನೋಡುಗರ ನಿಬ್ಬೆರಗಾಗಿಸಿದ್ದನವ
ಇತ್ತೀಚೆಗೆ ಮದುವೆಯಾಗಿ
ಒಂದಿಷ್ಟು ಸಮಯ ಕಳೆದ
ಮೇಲೆ ಮಾಡಿದ ಹೊಸ ಚಿತ್ರ
ಶ್ರೀದೇವಿಯ ಉಗ್ರ ಅವತಾರ
ಭದ್ರಕಾಳಿಯದು.
ಅದರೊಳಗಿನ ವಾಸ್ತವದ
ಚಿತ್ರಣ ಹೀಗಿತ್ತು..
ಭದ್ರಕಾಳಿಯ ಮುಖ
ಅವನ ಹೆಂಡತಿಯ ಮುಖದಂತಿತ್ತು.
ಇವನ ಮೊಗವ ಹೋಲುವ
ತುಂಡಾದ ರುಂಡವೊಂದು
ಆ ಭದ್ರಕಾಳಿಯ ಕೈಯಲ್ಲಿತ್ತು.

Tuesday 20 December, 2011


ನನ್ನೊಳಗಿನ ಯಕ್ಷ ಪ್ರಶ್ನೆ 

ಸಾಧಕನಾಗಬೇಕಾದರೆ
ಮೊದಲು ಸಾಧನೆಯ
ಕನಸು ಕಾಣಿ
ಅನ್ನುತ್ತಿದ್ದ ಅಧ್ಯಾಪಕರು;
ಕನಸ ಕಾಣಲೆಂದೆ
ಅವರ ತರಗತಿಯಲ್ಲಿ
ಮಲಗಿದ್ದಾಗ ಬೈದು
ತರಗತಿಯಿಂದ
ಹೊರಹಾಕಿದ್ದಾದರೂ
ಯಾಕೆ?

Sunday 18 December, 2011

ಮಾರ್ಕೆಟಿಂಗ್ ಹುಡುಗಿ


ಅವಳು ಮಾಡುತಿರುವ
ಉದ್ಯೋಗ ಯಾವುದೆಂದು
ನನಗೆ ಗೊತ್ತಿಲ್ಲ...
ಆದರೂ ಅವಳು
ಮಾರ್ಕೆಟಿಂಗ್ ನವಳು
ಎಂಬುದಂತೂ ಖಚಿತ.
ಹೇಗೆಂದು ಕೇಳುವಿರಾ
ಸಿಗುತ್ತಿದೆಯಲ್ಲಾ
ಅವಳ ನೆನಪಿನ
ಜೊತೆ ನನಗೆ
ಕಣ್ಣೀರು ಉಚಿತ

Friday 16 December, 2011

ಉದಯಾಸ್ತ...


ಸೂರ್ಯ ಗಂಡಾದರೆ,ಶರಧಿ ಹೆಣ್ಣು
ಇಬ್ಬರೂ ಸನಿಹಕೆ ಬಂದರೆ
ಮುಖದಲಿ ರಂಗೇರುವುದು
ಇಬ್ಬರನು ಜೊತೆ ಜೊತೆಯಲಿ
ಕಂಡಾಗ ನನಗನಿಸಿದ್ದು ಹೀಗೆ.
ಮುಂಜಾನೆ ನಿಶ್ಚಿತಾರ್ಥದ ದಿನದಂತೆ
ಮುಸ್ಸಂಜೆ ಮದುವೆಯ ವಾರ್ಷಿಕೋತ್ಸವದಂತೆ
ಮೊದಲು ಮುಖ ಕೆಂಪಾಗುವುದು
ಸಹಜ ನಾಚಿಕೆಯಿಂದ..
ನಂತರ ಮುಖ ಕೆಂಪಾಗುವುದು
ಒಬ್ಬರ ಮೇಲೊಬ್ಬರ ಸಿಡುಕಿನಿಂದ..

Thursday 15 December, 2011




ರವಿಯಾಗಮನದ ಸ್ವಾಗತಕಾಗಿ
ಕಡಲಿನಂಗಳದಿ ಬಿಡಿಸಿದವರಾರು ?
ಬಣ್ಣ ಬಣ್ಣದ ರಂಗವಲ್ಲಿ.
ಶಬ್ದಗಳಿರದೆಯೇ ತನ್ಮಯಗೊಳಿಸುವ 
ಮಾಧುರ್ಯವ ಇಟ್ಟವರಾರು ?
ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ.
ಮನವ ಮಂತ್ರಮುಗ್ಧಗೊಳಿಸುವ
ಸೌಂದರ್ಯವನು ಇಟ್ಟವನಾರು ?
ಮುಂಜಾನೆಯ ರವಿಯ ವದನದಲ್ಲಿ.

Wednesday 14 December, 2011


ಈ ಕಡಲ
ಅಲೆಗಳು
ನನ್ನ ವೈರಿ
ಅವಳ ಮಿತ್ರ
ಎಂದು ನಾ
ಜಗಕೆ ಹೇಳಿದರೆ
ನಂಬಿ ನನ್ನ ಮಾತನ್ನ,
ಇದು  ಸುಳ್ಳಲ್ಲ;
ಅವಳ ಹೆಸರಿಗೆ
ಕಳಂಕ ಬಾರದಿರಲೆಂದು
ನನ್ನ ಜೊತೆಗಿದ್ದ
ಅವಳ ಹೆಜ್ಜೆಗಳ
ಗುರುತಗಳೆಲ್ಲವ
ಕುರುಹೇ ಇಲ್ಲದಂತೆ
ಅಳಿಸಿ ಹಾಕಿತಲ್ಲ.

ತಪೋಭಂಗ

ಮುಸ್ಸಂಜೆಯ ಹೊತ್ತಲ್ಲಿ
ಘೋರ ತಪಸ್ಸು 
ಮಾಡಲು ಕುಳಿತೆ;
ಉದ್ದೇಶ ಇಂದ್ರನ
ದೇವಲೋಕದ ಸಿಂಹಾಸನ,
ಮನದೊಳಗೊಳಗೆ
ಇನ್ನೊಂದು ಆಸೆಯಿತ್ತು.
ನನ್ನ ತಪವ ಭಂಗಗೊಳಿಸಲು
ರಂಬೆ,ಮೇನಕೆಯರ
ಇಂದ್ರ ಕಳುಹಿಸುವನಲ್ಲ;
ಅವರ ಸೌಂದರ್ಯವನು 
ನಾ ಆಸ್ವಾದಿಸಬಹುದಲ್ಲ.
ದೂರ್ವಾಸರ ಕೋಪವೀಗ
ಇಂದ್ರನ ಮೇಲೆ
ಬರಿಯ ಸೊಳ್ಳೆಗಳ ಕಳಿಸಿ
ನನ್ನ ತಪವ ಭಂಗಗೊಳಿಸಿದನಲ್ಲ...

Monday 12 December, 2011

ಹುಚ್ಚು

ಹುಚ್ಚು ಹೆಚ್ಚುತಿಹುದೀಗ ಭರತ ಖಂಡದಲಿ
ಸಾಂಕ್ರಾಮಿಕ ರೋಗದಂತೆ ಹರಡುತಿದೆ ಅತ್ಯಂತ ವೇಗದಲಿ
ನಾನಾ ತರಹದ ಹುಚ್ಚು, ಒಂದೇ ಬಗೆಯದ್ದಲ್ಲ
ಇಷ್ಟಪಟ್ಟು ಪಡಕೊಂಡಿರುವ ಹುಚ್ಚಿದು, ಚಿಕಿತ್ಸೆ ಇಲ್ಲವೆಂದೇನಿಲ್ಲ.

ಕೆಲವರಿಗೆ ಮಾತೃ ಭಾಷೆಯನೆ ಧಿಕ್ಕರಿಸೋ ಹುಚ್ಚು,
ಆಂಗ್ಲ ಭಾಷೆಯ ಮಾತನಾಡಿದರೆ ಪ್ರತಿಷ್ಠೆ ಹೆಚ್ಚುವುದೆನುವ ಹುಚ್ಚು
ಕೆಲವರಿಗೆ ವಿದೇಶಿ ಸಂಸ್ಕೃತಿಯನೇ ತಮ್ಮದಾಗಿಸಿಕೊಳ್ಳುವ ಹುಚ್ಚು
ಇಡಿಯ ಜಗವೇ ಮೇಲಿಟ್ಟ ಸಂಸ್ಕೃತಿಯ ತ್ಯಜಿಸೋ ಹುಚ್ಚು.

ಕೆಲವರಿಗೆ ಮಾತೃ ಧರ್ಮವನೆ ಹೀಯಾಳಿಸೋ ಹುಚ್ಚು
ಮುಲ ನಂಬಿಕೆಯನರಿಯದೆ, ಮುಢ ನಂಬಿಕೆಯೆಂದು ತಿರಸ್ಕರಿಸೋ ಹುಚ್ಚು
ಕೆಲವರಿಗೆ ತಾವು " ಜಾತ್ಯಾತೀತ "ರು ಎಂದೆನಿಸಿಕೊಳ್ಳೋ ಹುಚ್ಚು
ಸಮಾನತೆಯ ಬದಿಗಿರಿಸಿ ಸ್ವಧರ್ಮವನೆ ತುಳಿಯೋ ಹುಚ್ಚು.

ಕೆಲವರಿಗೆ ಖರ್ಚು ಮಾಡಲಾಗದ ಲಕ್ಷ ಕೋಟಿ ಹಣವ ಸಂಪಾದಿಸೋ ಹುಚ್ಚು
ಅದಕಾಗಿ ನೈತಿಕ ಮೌಲ್ಯಗಳನೆಲ್ಲಾ ಕೊಂದು ಭ್ರಷ್ಟರಾಗೋ ಹುಚ್ಚು
ಕೆಲವರಿಗೆ " ಬುದ್ಧಿಜೀವಿ " ಎನುವ ಪದವಿಯ ಪಡೆಯೋ ಹುಚ್ಚು
ಅದ ಪಡೆಯುವುದಕಾಗಿ ಅರ್ಥವಿರದ ವಾದಗಳ ಮಂಡಿಸೋ ಹುಚ್ಚು.

ಇವೆಲ್ಲದಕಿಂತಲೂ ಘೋರವಾದುದು; ಸಂಖ್ಯೆಯಲಿ ಹೆಚ್ಚಿರುವ ಸಜ್ಜನರಿಗಿರೋ ಹುಚ್ಚು
ನಡೆಯುತಿಹ ಅನ್ಯಾಯವನು ಪ್ರ್ತತಿಭಟಿಸದೇ, ಕಣ್ಣಿದ್ದೂ ಕುರುಡರಾಗೋ ಹುಚ್ಚು,
ಎಂದು ಬರುವುದೋ ಇವರಲ್ಲಿ ಈ ಹುಚ್ಚಿನಿಂದ ಮುಕ್ತಿ ಸಿಗೋ ಅರಿವಿನೆಡೆಗೆ ಸಾಗುವ ಹುಚ್ಚು
ನಮ್ಮೆಲ್ಲರೊಳಗಿನ ದೇಶಪ್ರೇಮದ, ಸ್ವಾಭಿಮಾನದ ಕಿಚ್ಚು, ಪಡೆದ ಅರಿವಿನಿಂದಾಗಲಿ ಹೆಚ್ಚು ಹೆಚ್ಚು.

Sunday 11 December, 2011


ದೂರದಲಿ ಕೇಳುತಿದ್ದ  ಭಾಸ್ಕರನ
ಏಳು ಕುದುರೆಗಳ ಹೆಜ್ಜೆಗಳ ಸದ್ದಿಗೆ
ಇರುಳು ಮಂಜಿನಂತೆ ಕರಗಿ ನೀರಾಗಿ
ಓಡಿ ಹೋದದ್ದಾದರೂ ಎಲ್ಲಿಗೆ ?

Thursday 8 December, 2011

ಬೇರಾರಿಗಾದರೂ 
ಕೊಡೋಣ 
ಎಂದು ನನ್ನ 
ಹೃದಯವ 
ವಾಪಾಸು ಕೊಡು 
ಎಂದು ಅವಳ 
ಮುಂದಿಟ್ಟೆ 
ನಾ ನನ್ನ ಬೇಡಿಕೆ.
ನಸು ಮುನಿಸಿನಲಿ
ಕೊಡಲಾಗದೆನಲು
ಅವಳು ಮುಂದಿಟ್ಟ ಕಾರಣ;
ಅಗಿದೆಯಂತೆ ಅದೀಗ 
ಅವಳ ಮುದ್ದಿನ ಮಗನ 
ಅಚ್ಚುಮೆಚ್ಚಿನ ಆಟಿಕೆ

Saturday 3 December, 2011



ಹೆದರಿ ಅಡಗಿ ಕುಳಿತಿರುವೆ ಏಕೆ ರವಿಯೆ
ಇರುಳು ಕಳೆಯುವ ಸಮಯವಾಯಿತು ಬೇಗ ಬಾ,
ಹಕ್ಕಿಗಳು ಹೇಳುತಿದೆ ನಿನ್ನಾಗಮನಕೆ ಪರಾಕು
ಕೇಳುವ ಆಸೆ ನಿನ್ನೊಳಗಿದ್ದರೆ ನೀ ಭುವಿಗೆ ಬಾ,
ಬಾನಿನಂಗಳದಿ ಚಂದಿರನ ಕೋಟಿ ತಾರೆಗಳ ಸೈನ್ಯವಿಲ್ಲ
ಆ ಅಂಜಿಕೆಯ ತೊರೆದು, ಶರಧಿಯ ಮುಸುಕ ತೆರೆದು,
ಬೆಟ್ಟ ದಿಬ್ಬಗಳನೇರಿ ಬಾ, ನೀ ಧರೆಗೋಡೋಡಿ ಬಾ
ನನ್ನ ಮೌನದ ತಾಕತ್ತು 


ನನಗೆ ಗೊತ್ತೇ ಇರಲಿಲ್ಲ;

ಅವಳು ತನ್ನೆಲ್ಲಾ ತಪ್ಪುಗಳ


ಮೆಲುಕು ಹಾಕುತಿಹಳಲ್ಲ ..!!

Friday 2 December, 2011




ಬಾನ ಬಿರಿವಂತ ಸಿಡಿಲಿಗೂ ನನ್ನ ಸುಡಲಾಗದು,
ನಾ ನಿನ್ನ ನೆರಳಿನಡಿಯಲಿದ್ದರೆ...
ಯುದ್ಧ ತರುವ ಸಾವಿಗೂ ಕೂಡ ನೋವ ಕೊಡಲಾಗದು , 
ನೀ ನನ್ನೆದೆಯ ಮೇಲಿದ್ದರೆ..