Friday 14 December, 2012

ವಿರಹಗೀತೆ..

ನಾನಂದೆ
ಅವಳ ಬಳಿ,
ನಾ ನಿನ್ನ
ಮೇಲಿಟ್ಟಿರುವ
ಪ್ರೀತಿಗೆ
ನನ್ನ ಪ್ರೇಮ
ಕಾವ್ಯವೇ ಸಾಕ್ಷಿ;
ಅದಕವಳಂದಳು
ವಿರಹಗೀತೆಯ
ಬರೆಯುವುದೊಳ್ಳೆಯದು,
ಯಾಕೆಂದರೆ
ನಾ ನಿಮ್ಮ
ಕೈಗೆಟುಕದ
ಹುಳಿದ್ರಾಕ್ಷಿ.

ಅವಳು...

ಅವಳು.. ಅವಳು...
ಎನುವುದು ನಿಮಗೆ
ಗೀಚಿರುವ ನನ್ನ ಸಾಲುಗಳಲಿ
ಪದೇ ಪದೇ
ಕಾಣಸಿದ್ದಿರಬಹುದು...
ಆದರೆ ನೆರಳಿನಂತೆ
"ಅವಳಿಗೆ" ಅಂಟಿಕೊಂಡಿರುವ
ಪ್ರಶ್ನಾರ್ಥಕ ಚಿಹ್ನೆಯೊಂದು
ನನಗೆ ಮಾತ್ರ ಕಾಣಿಸುವುದು.

ಚಾಲನೆ

ಹಕ್ಕಿಗಳ ಹಾರಾಟಕ್ಕೆ
ಮೋಡಗಳ ಅಲೆದಾಟಕ್ಕೆ
ಸಂಸಾರದ ಜಂಜಾಟದಲಿನ
ಮಾನವನ ಪರದಾಟಕ್ಕೆ;
ಬೆಳಕಿನ ಬಾವುಟವ
ಬೀಸುತಿಹನು ರವಿ
ಇವುಗಳೆಲ್ಲವುಗಳಿಗೆ
ಚಾಲನೆಯ ನೀಡೋದಕ್ಕೆ.

ಕನಸುಗಳು

ನನ್ನ 
ನಿದಿರೆಯಾ 
ಮನೆಯ 
ಮುಂದೆ 
ಬರಿಯ 
ಅವಳ 
ಕನಸುಗಳದೇ 
ನೂಕು ನುಗ್ಗಲು

ತಯಾರಿ

ಕಾಡುವ 
ಕನಸುಗಳ 
ಬೆನ್ನೇರಿ
ಕಂಗಳು  

ಮಾಡುತಿದೆ 
ನಿದಿರೆಯಾ 
ತಯಾರಿ

ಒಳ-ಹೊರ ಹರಿವು..

ಕಾವೇರಿಯ ಒಳಹರಿವಿನ
ಬಗ್ಗೆ ಇಲ್ಲವಂತೆ
ಜಗದೀಶ್ ಶೆಟ್ಟರ್ ಗೆ
ತಲೆನೋವು...
ಅವರನ್ನು ಕಾಡುತ್ತಿರುವುದು
ಹಾವೇರಿಯ ಕಡೆ ಹೊರಟಿರೋ
ತನ್ನ ಸಾಂಸದರ ಹೊರಹರಿವು...

ಸಾಹಸ..

ಪ್ರತಿ ಇರುಳಿನಲೂ
ದುರಾಸೆಗೊಳಗಾಗಿ
ನನ್ನ ಮನಸು
ಮಾಡೋ ಹುಚ್ಚು ಕೆಲಸ,
ನಿದಿರೆಯ ನೆಲವ
ಅಗೆದು ಅಗೆದು
ಅವಳ ಕನಸೆನುವ ನಿಧಿಯ
ಹುಡುಕುವ ವ್ಯರ್ಥ ಸಾಹಸ.

ಪ್ರತಿಧ್ವನಿ...

"ಮರಳಿ ಬಾ"
ಎನುವ ನನ್ನ
ಒಡಲಾಳದ ಕೂಗು,
ತೇಲಿ ತಿರುಗಾಡಿ
ಪ್ರತಿಧ್ವನಿಯಾಗಿ
ಮತ್ತೆ ಬಂದು
ನನ್ನ ಸೇರಿತೇ
ಹೊರತು...
ತಲುಪಬೇಕಾಗಿದ್ದ
ಕಿವಿಗಳನು
ತಲುಪಿರಲೇ ಇಲ್ಲ...

ಚಿಕ್ಕಪ್ಪಾ, ನೀವು ಮಾಡಿದ್ದು ಎಷ್ಟು ಸರಿ....??

ಬರುವ ತಿಂಗಳಿನಲಿ ಊರಿಗೆ ಬರುವೆನೆಂದು ಮೊನ್ನೆ ಹೋದವರು
ಇನ್ನೆಂದಿಗೂ ಹಿಂತಿರುಗಿ ಬರಲಾಗದೂರಿಗೆ ಹೊರಟು ಹೋದದ್ದು,..ಎಷ್ಟು ಸರಿ..?

ಬಲುಬೇಗನೆ ಎದ್ದು ಬೆಳಗಾತ ನಿದ್ದೆ ಬರುವುದಿಲ್ಲ ಎನುತಿದ್ದವರು
ಸೂರ್ಯ ನಡು ನೆತ್ತಿಗೆ ಬಂದರೂ, ಮನೆಯೊಳಗೆ ಹಾಗೇ ಮಲಗಿದ್ದುದು ... ಎಷ್ಟು ಸರಿ..?

ಹೇಳದೆ ಹೋದರೂ, ಮಕ್ಕಳೊಳಗಿನ ನೋವೆನಗೆ ಕಾಣಿಸುವುದೆನುತಿದ್ದವರು
ಅಗಲಿಕೆಯ ನೋವಿನಲಿ ಬೊಬ್ಬಿಡುತ್ತಿದ್ದರೂ ಕಾಣಿಸದವರಂತೆ ಸುಮ್ಮನಿದ್ದುದು... ಎಷ್ಟು ಸರಿ..?


ಮೊದಲು ಸುರಿದ ಭಾಂದವರ ಕಣ್ಣೀರು, ಮತ್ತೆ ಸ್ನಾನಕಾಗಿ ಹೊಯ್ದ ಬಿಸಿ ನೀರು
ಮೈಯ ತಾಕಿದಾಗಲೂ ಎಚ್ಚರಗೊಳ್ಳದೇ ಸುಮ್ಮನೆ ಮಲಗಿದ್ದುದು... ಎಷ್ಟು ಸರಿ...?

ಹೆಗಲ ಮೇಲೆ ಹೊತ್ತೊಯ್ದು, ರಾಶಿ ಕಟ್ಟಿಗೆಯ ಮಂಚದಲಿ ಮಲಗಿಸಿದಾಗ
ಮೆತ್ತಗಿರದ ಕಟ್ಟಿಗೆಯು ಬೆನ್ನ ಚುಚ್ಚುತಿದೆಯೆಂದು ಏಳದಿದ್ದುದು ... ಎಷ್ಟು ಸರಿ...?

ನಿಮ್ಮ ಮಗ ಕಣ್ಣ ಕೆಂಪಗಾಗಿಸಿ, ಒಳಗೆ ಹೊತ್ತಿ ಉರಿಯುತಿದ್ದ ದುಃಖದ ಉರಿಯನ್ನೆ ಕೊಳ್ಳಿಯಾಗಿಸಿದಾಗಲೂ
ತನುವು ಉರಿಯುತಿದೆ ಎಂದು ಮೈಕೊಡವಿ ಎದ್ದು ಕೆಳಗಿಳಿಯದಿದ್ದುದು.. ಎಷ್ಟು ಸರಿ...?

ಭವಬಂಧನದ ಬೇಡಿಗಳನೆಲ್ಲಾ ಕಳಚಿ, ಹಾಯಾಗಿ ದೇವ ಸನ್ನಿಧಿಯ ಸೇರಿ
ಬರಿಯ ನೆನಪುಗಳ ಕತ್ತಲ ಕೋಣೆಯಲ್ಲಿ, ನಮ್ಮನ್ನೆಲ್ಲಾ ಬಂಧಿಸಿದಿರಲ್ಲಾ.. ನೀವು ಮಾಡಿದ್ದು ಎಷ್ಟು ಸರಿ...?

ಕೆಟ್ಟ ಪರಿಣಾಮ

ಪಶ್ಚಿಮದ
ಭಾಷೆ ಮತ್ತು
ಸಂಸ್ಕೃತಿಯ
ಕೆಟ್ಟ ಪರಿಣಾಮದ
ಬಿಸಿಯು ಬಿಟ್ಟಿಲ್ಲ,
ಬೆಳದಿಂಗಳೊಡೆಯ
ಚಂದಿರನನ್ನೂ..
ಮೊದಲೆಲ್ಲಾ
ತಾಯ ಕೈತುತ್ತು
ಉಣುವಾಗ
ಮುದ್ದು ಕಂದಮ್ಮಗಳಿಗೆ
ಮಾಮನಾಗುತ್ತಿದವನು,
ಈಗ ಆ ಮಧುರ
ಸಂಬಂಧವನು
ಕಳಕೊಂಡು
ಆಗಿದ್ದಾನಂತೆ,
ಮಕ್ಕಳ ಪಾಲಿಗೆ
ಬರಿ "ಮೂನು"..

ಸನ್ನದ್ಧ..

ಬರಲಿರೋ
ಪ್ರಳಯವ
ಎದುರಿಸಲು
ಸನ್ನದ್ಧನಾಗಿದ್ದೇನೆ,
ಕುಸ್ತೀ ಪಟುವಿನಂತೆ
ತೊಡೆಯ ತಟ್ಟಿ,
ಮಾಸವೊಂದರ
ಪರಿಶ್ರಮದ ಫಲ
ಈಗ ನನ್ನ
ಕೈಯಲ್ಲಿದೆ,
ಕೇಳಿದೊಡನೆ ಸಾಲ
ಕೊಡಬಹುದಾದವರ
ದೊಡ್ದ ಪಟ್ಟಿ.

ಹಿಂದಿನ ಜನ್ಮ

ಹಿಂದಿನ ಜನ್ಮದಲಿ
ಈ ಚಳಿರಾಯ
ಆಗಿದ್ದನೇನೋ..
ಸಿಡುಕಿನ ಸ್ಟ್ರಿಕ್ಟ್ ಮಾಸ್ಟರು..
ಅದಕಾಗೇ ತಾನೆ,
ಅವನಿರುವವರೆಗೂ
ನಡುಗೋ ಜನರು
ಕೈಯ ಕಟ್ಟಿಕೊಳುವರು.

ದಾಹ

ಗೆಳತೀ...
ನೀನಿರದೆ,
ನಾ ವಿರಹದಾ
ದಾಹದಲಿ
ಬಳಲಿ ಹೋದೆ,
ಇರುಳ ನಿದಿರೆಯ
ಸಣ್ಣ ಪಾತ್ರೆಯಲಿ
ನಿನ್ನ ಕನಸೆನುವ
ನೀರ ಸುರಿಸಿ
ಈ ದಾಹವನು
ತಣಿಸಬಾರದೇ..

ಕಾರಣ...

ಯಡಿಯೂರಪ್ಪನವರು
"ಬಿ.ಜೆ.ಪಿ" ಯಲ್ಲಿ
"ಬಿ" ಫಾರ್
"ಬಂಡಾಯ" ಮಾಡಿ ,
ಹೊಸ "ಕೆ.ಜೆ.ಪಿ" ಯನ್ನು
ಕಟ್ಟಲು ಕಾರಣ...
ಇಲ್ಲಿರುವ " ಕೆ " ಫಾರ್
"ಕುರ್ಚಿ" ಆಗಿರಬಹುದೇ..?

Friday 30 November, 2012

ಕಠಿನ ಕೆಲಸ..

ಅಂದಿನ ಬಲು
ಕಠಿನ ಕೆಲಸ..
ಅವಳ ಮೆಚ್ಚಿಸುವ
ಪ್ರೇಮ ಕಾವ್ಯವನು
ನನ್ನ ಹೃದಯದಿಂದ
ಹೆಕ್ಕಿ ತೆಗೆಯುವುದು.
ಇಂದಿನ ಬಲು
ಕಠಿನ ಕೆಲಸ
ಅವಳುಟ್ಟ ಬಟ್ಟೆಯ
ಕೊಳೆಯನೆಲ್ಲಾ
ತಿಕ್ಕಿ ಒಗೆಯುವುದು.

ಭಾವನೆ..


ಕೆಲವೊಂದು
ಭಾವನೆಗಳೇ
ಹಾಗೆ..,
ಪದಗಳಾಗಿ
ಹೊರಬರುವುದಿಲ್ಲ.
ಕಣ್ಣೀರಿನ
ರೂಪವ ತಾಳಿ
ಮನಸಿನ ಬಿಗು
ಬಂಧನದಿಂದ
ಮುಕ್ತವಾಗುತ್ತದೆ.

ದೌರ್ಭಾಗ್ಯ...

ನನ್ನದೆಂಥಾ
ದೌರ್ಭಾಗ್ಯ..
ಕನಸಿನಲ್ಲಿಯೂ
ನನ್ನ,
ಮತ್ತವಳ
ಮಿಲನ
ಆಗಲೇ ಇಲ್ಲ

Saturday 24 November, 2012

ಹಿಂತಿರುಗದಿರು...

ಕತ್ತಲಿನಲಿ ಬಂದು
ಕಣ್ಣಿನ ಕಿಟಕಿ
ಮುಚ್ಚಿದೆಯೆಂದು
ಮರಳಿ ಹೋಗದಿರು
ನನ್ನವಳ ನೆನಪೇ..
ನಿನ್ನ ಸುಖಾಗಮನಕಾಗಿ
ಮನದ ಬಾಗಿಲನ್ನೇ
ಕಳಚಿ ಕೆಳಗಿಟ್ಟಿದ್ದೇನೆ.

ಅಳಿಸಲಾಗದ ಕಲೆ...


ನನ್ನ ತೊರೆದು
ಇನ್ನೊಬ್ಬನನು
ಕೈಹಿಡಿಯಲು
ಹೊರಟ ಆಕೆಯ
ಕೈಯ ತುಂಬಾ
ಮದರಂಗಿ ಚಿತ್ತಾರ
ನಳನಳಿಸುತಿತ್ತು;
ಆದರದು ನನ್ನ ಕಂಗಳಿಗೆ
ಕಾಣಿಸಿದ ಬಗೆಯೇ ಬೇರೆ.
ಅವಳಿಗಾಗಿ ಮಿಡಿಯುತ್ತಿದ್ದ
ನನ್ನದೇ ಹೃದಯದಿಂದ
ಚಿಮ್ಮಿದ ನೆತ್ತರ ಕಲೆಗಳು
ಅವಳ ಕೈಯಲ್ಲಿ
ಅಳಿಸಿಹಾಕಲಾಗದಂತೆ
ಉಳಿದು ಹೋದಂತಿತ್ತು.

ಸ್ನಾನ..

ಇರುಳಿನಲಿ
ಮೈಗಂಟಿದ
ಚಳಿಯ
ಕೊಳೆಯ
ತೊಳೆಯಲು
ಮಾಡಬೇಕಾಗಿದೆ
ಬಯಲಿನಲಿ
ಸೂರ್ಯನ
ಎಳೆ ಬಿಸಿಲೆನುವ
ನೀರ ಸ್ನಾನ.

ಸವತಿ ಮತ್ಸರ

ಇರುಳ ಏಕಾಂತದಲಿ
ನನ್ನವಳ ನೆನಪು
ಬಳಿಗೋಡಿ ಬಂದು
ನನ್ನ ತಬ್ಬಿಕೊಂಡಾಗಲೆಲ್ಲಾ
ಬಳಿ ಬಾರದೆ ದೂರ ನಿಲುವ
ನಿದಿರಾ ದೇವಿಯ ಮುಖದಲ್ಲಿ
ಸವತಿ ಮತ್ಸರದ ಭಾವ
ಎದ್ದು ಕಾಣಿಸುವುದಲ್ಲಾ...??

ಉಡುಗೊರೆ

ಕತ್ತಲಲಿ ಬಂದ
ಕೊರೆವ ಚಳಿಗೆ
ನಡುಗುತಲಿದ್ದೆ
ಮನೆಯೊಳಗೆ ನಾನು
ಆ ನಡುಕವ ನಿಲ್ಲಿಸಲು
ಬಿಸಿಲ ಕಂಬಳಿಯ
ಉಡುಗೊರೆಯ
ತಂದಿತ್ತನೇ.. ಆ ಭಾನು

ಅತಿಥಿಗಳು...

ಹೊಳೆವ ತಾರೆಗಳೆಲ್ಲವೂ
ಹಣತೆಯ ದೀಪಗಳಾಗಿ
ದುಂಡಗಿನ ಗ್ರಹಗಳೆಲ್ಲವೂ
ಗೂಡುದೀಪಗಳಾಗಿ
ಕಪ್ಪಗಿನ ಆಗಸವ ತೊರೆದು
ಪ್ರತಿ ಮನೆಯಂಗಣವ ಬೆಳಗುತಿದೆ
ಮೂರು ದಿನದ ಅತಿಥಿಗಳಾಗಿ

Wednesday 14 November, 2012

ಪಟಾಕಿ...

ದೀಪಾವಳಿಗೆ
ದೊಡ್ಡ ದೊಡ್ದ
ಸದ್ದು ಮಾಡೋ
ಪಟಾಕಿಗಳಿಗೆ
ಸುಮ್ಮನೆ
ಹಣ ಖರ್ಚು
ಮಾಡುವುದೇ ಇಲ್ಲ.
ಕತ್ತಲಾಗುತ್ತಿದ್ದಂತೆ
ಯಾವುದಾದರೂ
ಪೊಳ್ಳು ನೆಪದಲ್ಲಿ
ನನ್ನವಳ ಜತೆ
ಜಗಳವಾಡುತ್ತೇನೆ ಅಷ್ಟೇ...

ಕನಿಕರ

ಪ್ರತಿ ಮನೆಯಲೂ
ಬೆಳಕಿಗಾಗಿ ಹಚ್ಚಿಟ್ಟ
ಸಾಲು ಸಾಲು
ಹಣತೆಗಳ ಮಿಣುಕು
ಬೆಳಕ ಕಂಡು,
ಕನಿಕರಗೊಂಡು,
ತನ್ನ ಬೆಳಕಿಂದ
ಜಗವ ಬೆಳಗಲು
ಬಂದೇಬಿಟ್ಟನೇ ನೇಸರ..

ಜ್ಯೋತಿ..

ಎಣ್ಣೆಯ ಹಚ್ಚಿ
ಮೈಯಲಿರುವ
ಕೊಳೆಯನೆಲ್ಲಾ
ತೊಳೆದು
ತೆಗೆದು,
ಮನದ
ಹಣತೆಯಲಿ
ಪ್ರೀತಿಯ
ಜ್ಯೋತಿಯನು
ಹಚ್ಚಿ ಬಿಡಿ,
ನಿಮ್ಮೊಳಗಿನ
ದ್ವೇಷದ
ಕತ್ತಲನು
ಕೊಂದು ಬಿಡಿ.

ಚಾಳಿ



ಪ್ರತಿದಿನವೂ
ಮೂಡುವಾಗಲೂ
ಮುಳುಗುವಾಗಲೂ
ಹೊಚ್ಚ ಹೊಸತನವ
ಪ್ರದರ್ಶಿಸುವುದೊಂದೆ
ನೇಸರನ ಏಕೈಕ
ಹಳೆಯ ಚಾಳಿ

ಪ್ರಭಾವ

ಮನದ
ಸಾಗರದೊಳಗೆ
ಮೂಡಿದೆ
ಅವಳ
ನೆನಪೆನುವ
ದೊಡ್ಡ
ಬಿರುಗಾಳಿ,
ಅದರದೇ
ಪ್ರಭಾವವಿರಬೇಕು
ಕಣ್ ರೆಪ್ಪೆಯ
ತೀರದಲ್ಲಿ
ಹುಚ್ಚೆದ್ದು
ಬರುತಿದೆ,
ಕಣ್ಣೀರಿನ
ದೊಡ್ಡ ದೊಡ್ಡ
ಅಲೆಗಳು

ಪ್ರಕ್ಷುಬ್ಧ ಸಾಗರ

ನೋಟದ
ನೌಕೆಯನೇರಿ
ತಂಗಾಳಿಯ
ಅಲೆಯಲ್ಲಿ
ತೇಲಿ ಬಂದಿತ್ತು
ಅವಳ ನಗು,
ನನ್ನೆಡೆಗೆ
ಅದೇನಾಯಿತೋ
ಗೊತ್ತಿಲ್ಲ
ಆ ನಗುವಿನ
ಸ್ಪರ್ಶವಾದಾಗಿನಿಂದ
ಮನದ
ಸಾಗರದಲ್ಲೆಲ್ಲಾ
ಅಲ್ಲೋಲ ಕಲ್ಲೋಲ

ಕಸ..

ನಾ ನಿದಿರೆಯಿಂದ
ಏಳುವ ಮೊದಲೇ
ಆಗಸದ
ಅಂಗಳದಲಿದ್ದ
ಕತ್ತಲೆನುವ
ಕಸವನೆಲ್ಲಾ
ಆ ನೇಸರ
ತನ್ನ ಬೆಳ್ಳಿಕಿರಣದ
ಪೊರಕೆಯಿಂದ
ಗುಡಿಸಿಬಿಟ್ಟಿದ್ದ.

ಪರಮ ಸುಖಿ..

ಅನುಭವಿಸಿದವರು
ಹೇಳಿದ್ದು, ಸಂಗಾತಿಯ
ಪ್ರೀತಿ ಪ್ರೇಮದ
ಆಗಸವೇ
ಬಲು ಸುಂದರ,
ನಾನಂದೆ ಇರಬಹುದೇನೋ
ನನಗದು ಗೊತ್ತಿಲ್ಲ,
ಅದನಾಸ್ವಾದಿಸುವುದಕಾಗಿ
ತಂದೆ ತಾಯಿಯ
ನಂಬಿಕೆ, ವಿಶ್ವಾಸದ
ಹೊಸ್ತಿಲ ದಾಟಿ
ಹೊರಬರುವುದು
ನನಗೆ ಬೇಕಿಲ್ಲ.
ಹೊತ್ತು ಹೆತ್ತವರ
ಆರೈಕೆಯ
ಪಂಜರದಲೇ
ಪರಮಸುಖಿ ನಾನು,
ರೆಕ್ಕೆ ಬಿಚ್ಚಿ ಹಾರುವ
ಮನಸೇ ನನಗಿಲ್ಲ

ಪ್ರಭಾವ

ಮನದ
ಸಾಗರದೊಳಗೆ
ಮೂಡಿದೆ
ಅವಳ
ನೆನಪೆನುವ
ದೊಡ್ಡ
ಬಿರುಗಾಳಿ,
ಅದರದೇ
ಪ್ರಭಾವವಿರಬೇಕು
ಕಣ್ ರೆಪ್ಪೆಯ
ತೀರದಲ್ಲಿ
ಹುಚ್ಚೆದ್ದು
ಬರುತಿದೆ,
ಕಣ್ಣೀರಿನ
ದೊಡ್ಡ ದೊಡ್ಡ
ಅಲೆಗಳು

Saturday 3 November, 2012

ಸ್ವಾಗತ

ನಿದಿರೆಯಾ
ಕುದುರೆಯನೇರಿ
ಬರುವ
ಕನಸುಗಳಿಗೆ,
ಹಾಸಿರುವ
ಚಾಪೆಯೇ
ರತ್ನಗಂಬಳಿ,
ದಣಿದ
ತನುವಿನ
ಆಲಸ್ಯವೇ
ಪೂರ್ಣಕುಂಭ
ಸ್ವಾಗತ.

ಕೊಳದ ತಳ..

ಮಾನಸ ಸರೋವರದಂತೆಯೇ
ನನ್ನ ಮನದ ಸರೋವರವೂ
ತಿಳಿಯಾಗಿದೆ,ಪರಿಶುದ್ಧವಾಗಿದೆ
ಎನ್ನುವ ಕಲ್ಪನೆಯಲ್ಲಿದ್ದೆ.
ಅವಳ ನಗೆಯ ನೋಟ
ಮನದ ಕೊಳದ ನೀರ ಸೀಳಿ
ಮೆಲ್ಲಮೆಲ್ಲನೆ ಆಳಕಿಳಿದು ತಳವ
ತಲುಪಿ ರಾಡಿ ಮಾಡಿದಾಗಲೇ
ಗೊತ್ತಾಗಿದ್ದು.....
ಪ್ರೀತಿಯೆನುವ ಕೆಸರೊಂದು
ಮನದೊಳಗೆ ಹೇಗೋ ಕಾಣದಂತೆ
ಬಚ್ಚಿಟ್ಟುಕೊಂಡಿತ್ತೆಂದು...

ಪುತ್ರ ವ್ಯಾಮೋಹ

ನೇಸರನೆನುವ
ತನ್ನ ಮುದ್ದು
ಕಂದನಿಗೆ,
ಪ್ರತಿದಿನವೂ
ಹೊಸತನದ
ಬಟ್ಟೆಯ ತೊಡಿಸಿ,
ಆಗಸದ ಶಾಲೆಗೆ
ಕಳುಹಿಸಿ ಕೊಡುವ
ಈ ಶರಧಿಯದು
ಅದೆಂಥಾ
ಪುತ್ರ ವ್ಯಾಮೋಹ

ರಾಜೀನಾಮೆ

ಇನ್ನೊಬ್ಬರ ಪ್ರೇಮದಲಿ
ಮುಳುಗಿದ್ದಾರಂತೆ
ಎಸ್.ಎಮ್ ಕೃಷ್ಣರ
ವಿದೇಶಿ ಪ್ರಿಯತಮೆ,
ಅದು ಗೊತ್ತಾದಂದಿನಿಂದ
ಮನಸಿಟ್ಟು ದುಡಿಯೋಕಾಗದೆ
ಈಗ ಕೊಟ್ಟು ಬಿಟ್ಟರಂತೆ
ತಮ್ಮ ಖಾತೆಗೆ ರಾಜೀನಾಮೆ.

ಹಾದಿ..

ಮರೆವು
ಎನುವ
ಮಸಣದಲಿ
ಅವಳ
ನೆನಪೆನುವ
ಕೊಳೆಯದ
ಶವವನು
ಸುಟ್ಟು
ಬಿಡುವಾಸೆ,
ಆದರೇಕೋ
ಮಸಣದೆಡೆ
ಕೊಂಡೊಯ್ಯೋ..
ಹಾದಿಯೇ
ಸಿಗುತಿಲ್ಲ.

ಖ್ಯಾತೆ...

ಸಲ್ಮಾನ್ ಖುರ್ಷಿದ್ ಗೆ
ಖುಷಿಯೋ ಖುಷಿಯಂತೆ
ಭ್ರಷ್ಟರಾದರೂ ಸಿಕ್ಕಿದೆಯಲ್ಲಾ
ವಿದೇಶಾಂಗ ಖಾತೆ;
ಸಿಗಬಹುದೆನುವ ಇನ್ನೊಂದು ಆಸೆಯಂತೆ
ಎಸ್.ಎಮ್.ಕೆ ಗೆ ಸಿಗದ ವಿದೇಶಿ ಪ್ರೀತಿ;
ಹಾಗಂದುಕೊಳಲು ಕಾರಣ.....
ಒಂದೇಯಂತೆ ಇವರಿಬ್ಬರದು ಜಾತಿ.

ಶುಭೋದಯ...

ಹಲವು ಯುವ ಕನ್ನಡಿಗರಿಗೆ
ತನು - ಮನ ಕನ್ನಡ
ನಡೆ - ನುಡಿ ಕನ್ನಡ
ಎನುವುದೆಲ್ಲವೂ ಬರಿಯ
ಒಂದು ದಿನದ ಕಳಕಳಿ
ಸಣ್ಣದೊಂದು ಉದಾಹರಣೆ,
ನಿನ್ನೆಯ ಸೂರ್ಯ ಮುಳುಗಿ
ಇಂದು ಮೇಲೇರುವಷ್ಟರಲ್ಲಿ
ಶುರುವಾಗಿ ಬಿಟ್ಟಿದೆ
"ಶುಭೋದಯ"ಕೆ ಬದಲಾಗಿ
"ಗುಡ್ ಮಾರ್ನಿಂಗ್"ಗಳ ಹಾವಳಿ...

ನೆಲೆ

ಮಂದಿರಗಳ
ಗರ್ಭಗುಡಿಯಲಿ
ಬೇಕಾಗಿಲ್ಲ
ತಾಯಿ ಭುವನೇಶ್ವರಿಗೆ
ಚೆಂದದ ನೆಲೆ;
ಆಕೆ ಇರಬಯಸುವುದು
ಕನ್ನಡಿಗನ ನಾಲಗೆಯಲೇ,
ಆಕೆ ಪ್ರಸನ್ನಳಾಗುವುದು
ಅವಳ ಬೆಲೆಯ
ನಾವು ತಿಳಿದುಕೊಂಡಾಗಲೇ.

ನಾಚಿಕೆ


ಸಾಲು ಸಾಲು
ಮೋಡಗಳು
ತಬ್ಬಿ, ಕೊಟ್ಟ
ಸಿಹಿಮುತ್ತಿಗೆ
ಕೆಂಪಾದ
ಸೂರ್ಯನಿಗೆ
ನಾಚಿಕೆಯ
ಕಡಲಲ್ಲಿ
ಮುಳುಗುವ
ತವಕ

Wednesday 24 October, 2012

ಮತ್ಸರ...

ಏಕಾಂತದ
ಮಸ್ಸಂಜೆಯಲಿ,
ತನ್ನ ನೆನಪುಗಳಿಂದ
ಕಾಡತೊಡಗಿದ
ನನ್ನವಳ
ನಾ ಹುಡುಕಲು
ಹೊರಟಾಗ,
ಆ ಬಾನ ಭಾಸ್ಕರ
ಸಿಡುಕಿ ಕೆಂಪಾಗಿ
ಕಡಲ ಮರೆಗೋಡಿ
ಜಗಕೆ ಕತ್ತಲನಿತ್ತನಲ್ಲ;
ಬಹುಶಃ ಅವನಿಗೆ
ನನಗವಳು ಸಿಗುವುದ
ನೋಡಲು ಇಷ್ಟವಿಲ್ಲ

ದಾಹ


ದಿನವಿಡೀ ಜಗವ ನೋಡಿ
ದಣಿದ ನನ್ನ ಕಂಗಳ
ದಾಹ ತೀರುವುದು ,
ಇರುಳ ನದಿಯಿಂದ
ಬೊಗಸೆಯಲಿ ತಂದ
ನಿದಿರೆಯೆಂಬ ಸಿಹಿ ನೀರ
ಕುಡಿದಾಗಲೇ...

ಬಂಧ-ಮುಕ್ತಿ

ಕಾವ್ಯವಾಗಬೇಕಿದ್ದ
ಪದಪುಂಜಗಳು
ಮರೆವಿನ
ಬಂಧನದೊಳಗಿದ್ದರೂ
ಅವುಗಳಿಗೆ
ಒಂದಿನಿತೂ
ಬೇಸರವಿಲ್ಲ;
ಬಂಧಮುಕ್ತಿಗೊಳಿಸಿ
ಕಾಗದದರಮನೆಗೆ
ಅವುಗಳ
ಕರೆತರದೆ
ನನ್ನೊಳಗಿನ
ಚಡಪಡಿಕೆಗೆ
ಮುಕ್ತಿಯಿಲ್ಲ.

ಪರಿಚಯ

ತೆರೆದ ಕಣ್ಣಿಗೂ
ಕಾಣಿಸದ
ಅಪರಿಚಿತರ
ಮನದೊಳಗಿನ
ಗುಣವನರಿಯಲು
ಪರಿಚಯವೆನುವ
ಬಾಗಿಲನು
ತೆರೆಯಲೇಬೇಕು

ಆಯುಧ ಪೂಜೆ

ಮಗನೋರ್ವ
ತನ್ನವಳ ಕಣ್ಣಿಗೆ
ಪೂಜೆ ಮಾಡಹೊರಟ
ಕಣ್ಣೋಟವೇ
ನಿನ್ನ ಆಯುಧವೆಂದು,
ಅದ ನೋಡಿದ ತಂದೆ
ಆರತಿ ತಟ್ಟೆಯೊಡನೆ
ಅವರಾಕೆಯ ಪೀಡಿಸುತ್ತಿದ್ದಾರಂತೆ
ನೀನೊಮ್ಮೆ ನಾಲಗೆಯ
ಹೊರಹಾಕೆಂದು...

Sunday 14 October, 2012

ಈ ಸಂಜೆಯ ಮಳೆ

ಈ ದಿನದ ಮುಸ್ಸಂಜೆಯಲಿ,
ಹಠಾತ್ತನೆ ಸುರಿದ ವರ್ಷಧಾರೆಯ
ಕಂಡಾಗ ನನಗನಿಸಿದ್ದು;
ನವರಾತ್ರಿಯಲಿ,ನವರೂಪದಲಿ
ಜಗದಾದಿಮಾಯೆ ಭುವಿಗಿಳಿದು
ಬರುವಳೆನ್ನುವ ಮಾಹಿತಿಯ
ಪಡೆದೊಡನೆ,
ದೇವನದಿ ಗಂಗೆಯೇ
ಮೋಡಗಳ ಗರ್ಭದಿಂದ
ಮಳೆಹನಿಯಾಗಿ ಜನ್ಮ ತಳೆದು
ಭುವಿಯ ಶುಚಿಗೊಳಿಸಲು
ಓಡೋಡಿ ಬರುತಿಹಳೇ...?

ದಾರಿದೀಪ

ಎಲ್ಲೆಡೆಯೂ
ಕವಿದ
ಕತ್ತಲು
ಬೆಳಕಿನೆಡೆಗೆ
ಹೋಗುವ
ಹಾದಿಯನೇ
ಮರೆಮಾಚಿದಾಗ
ದಾರಿದೀಪವಾಗಿ
ಬಳಿ ಬಂದಿತ್ತು
ಸಿಹಿ ಕನಸು..

ಲೂಡೋ..


ಹದಿನಾರು ಕಾಯಿಗಳಿರುವುದು ಬಂಧನದಲ್ಲಿ
ನಾಲ್ಕು ಬಗೆಯ ಬಣ್ಣದ ಸೆರೆಮನೆಯಲ್ಲಿ
ಬಂಧನದ ನೋವಿರುವುದು ದಾಳದಲಿ ಆರು ಬೀಳುವ ತನಕ
ಬಿದ್ದೊಡನೆ ಎಲ್ಲದಕೂ ತಮ್ಮ ತಮ್ಮ ಮನೆಯ ಸೇರುವ ತವಕ

ಒಂದು ಸುತ್ತು ಸುತ್ತಬೇಕು ಸಿಗಲು ಮನೆಯ ದಾರಿ
ಅವರಿವರ ಕಡಿತಕ್ಕೊಳಗಾಗದೇ ಸಾಗಬೇಕು ಜಾಗರೂಕರಾಗಿ
ಕಡಿತಕ್ಕೊಳಗಾದರೆ ಮತ್ತೆ ಹೋಗಿ ಬೀಳುವುದು ಸೆರೆಮನೆಯಲ್ಲಿ
ಇನ್ನೊಬ್ಬರ ಕಡಿಯಲೇಬೇಕು ಮನೆಯಂಗಳವ ತುಳಿಯಬೇಕಾದಲ್ಲಿ

ಜೀವನಕೂ, ಈ ಮೋಜಿನಾಟಕೂ ಇದೆಯೆಂದೆನಿಸುತಿದೆ ಹೋಲಿಕೆ
ಸಾವಿನೆಡೆಗೆ ಸಾಗುವ ನಾವೆಲ್ಲ ಕಾಯಿಗಳು, ಭಗವಂತನೆನುವ ದಾಳಕೆ
ಕಷ್ಟಗಳ ಕಡಿತ, ಸುಖದ ಜಿಗಿತ ಇವುಗಳೆಲ್ಲ ಸಿಗುತ ಸಾಗುವುದು ಪಯಣ
ನಾವಿಡುವ ಪ್ರತಿ ಹೆಜ್ಜೆಗೂ ದಾಳ ರೂಪಿ ಭಗವಂತನದೇ ನಿರ್ದೇಶನ.

Friday 12 October, 2012

ಗಾಯ



ಎಲ್ಲರಿಗೂ ಕಾಣಿಸುವಂತೆ
ತನುವಿಗೆ ಗಾಯ ಮಾಡಿದ್ದಿದ್ದರೆ
ಸ್ವಲ್ಪ ಹೊತ್ತು ನೆತ್ತರು ಹರಿದು,
ಮತ್ತೊಂದಿಷ್ಟು ಹೊತ್ತಿನಲಿ ಹೆಪ್ಪುಗಟ್ಟಿ
ಗಾಯ ಒಣಗಿ ಹೋಗುತ್ತಿತ್ತು;
ಆದರೆ ಆಕೆ ಬಲು ಜಾಣೆ
ಮೆಲ್ಲನೆ ಮೆಲ್ಲಗೆ ಗೊತ್ತಾಗದಂತೆ
ಕಿತ್ತು ಹಾಕಿ ಬಿಟ್ಟಳು
ನನ್ನ ಕಣ್ಣ ಮೇಲಿದ್ದ
ಪ್ರೀತಿಯ ಪೊರೆ;
ನೋಡುವವರ್ಯಾರಿಗೂ
ಕಾಣಿಸದ ಈ ಗಾಯ
ವಾಸಿಯಾಗುವ ಲಕ್ಷಣವೇ ಇಲ್ಲ
ಉಕ್ಕಿ ಹರಿವ ನದಿಯಂತೆ
ಬರುತಿದೆಯಲ್ಲಾ....
ಈ ಗಾಯದೊಳಗಿಂದ
ಹೆಪ್ಪುಗಟ್ಟಲರಿಯದ
ಕಣ್ಣೀರ ಧಾರೆ.

Monday 8 October, 2012

ಇದೆಂಥಾ ನ್ಯಾಯ...?

ಸಂತಸದ ನಗುವಿನ
ಸರಮಾಲೆ ಇದ್ದಾಗ
ಬರುವುದಿಲ್ಲ ಪರಮಾತ್ಮ
ನಮ್ಮ ನೆನಪಿನ
ಪರಿಧಿಯೊಳಗೆ;
ದುಃಖದ ಮೋಡ
ಆವರಿಸಿ ಕಣ್ಣಿಂದ
ಒಂದು ಕಣ್ಣೀರ ಹನಿ
ಹೊರ ಬಿದ್ದೊಡನೆ
ಭಗವಂತ ದೂರುಗಳ
ಕಟಕಟೆಯೊಳಗೆ.

ಮುಕ್ತಿ...

ಮುಂಜಾನೆಯಲಿ...
ಬೊಗಸೆಯೊಳಗೆ
ತುಂಬಿಸಿಕೊಂಡು,
ಮುಖಕ್ಕೆ ಚಿಮ್ಮಿಸಿದ
ತಣ್ಣಗಿನ ನೀರಧಾರೆಗೆ,
ಮುಕ್ತಿ ಕೊಡುವ
ಶಕ್ತಿ ಇದೆಯೆಂದು
ಗೊತ್ತಾದದ್ದು ಈಗ,
ನನ್ನಾವರಿಸಿದ
ಜಡಾಸುರನ
ಬಾಹುಬಂಧನದಿಂದ
ನಾ ಹೊರಬಂದಾಗ.

ಮುಗಿದ ಅಧ್ಯಾಯ

ನನ್ನ ಬಾಳಲಿ ಅವಳೊಂದು
ಮುಗಿದ ಅಧ್ಯಾಯವಾಗಿದ್ದರೂ
ಈ ತಂಗಾಳಿಗೇನೋ
ತೀರದ ಕುತೂಹಲ...
ನನ್ನ ಮನದ ಪುಸ್ತಕದಲಿರುವ
ಅವಳ ಬಗೆಗಿನ ಭಾವನೆಯ
ನೋಡೋ ತವಕ...
ನಾ ಏಕಾಂತದಲಿರುವಾಗಲೆಲ್ಲಾ
ಬೀಸಿ ಬಂದು
ಮನದ ಪುಟಗಳನೆಲ್ಲಾ
ತಿರುವಿ ಹುಡುಕಾಡುವುದದು
ಆದರಲ್ಲಿ ತಂಗಾಳಿಗೆ ಕಾಣಸಿಕ್ಕಿದ್ದು
ಬರಿಯ ಖಾಲಿ ಹಾಳೆಗಳು..
ಬರೆದಿದ್ದ ಸಾಲುಗಳೆಲ್ಲಾ
ಕಾಣಿಸುವುದಾದರೂ ಹೇಗೆ..?
ಅಳಿಸಿ ಹಾಕಿತ್ತಲ್ಲಾ ಅದನೆಲ್ಲಾ
ಮುಚ್ಚಿದ ಕಂಗಳಿಂದ ಹೊರಬಂದಿದ್ದ
ನನ್ನ ಕಣ್ಣೀರ ಹನಿಗಳು..

ವಿಚಿತ್ರ ಹುಡುಗಿ

ನಾನವಳ ಬಳಿ
ಹೇಳಿದ್ದು ಇಷ್ಟೇ..
ಹೃದಯದಲಿಟ್ಟಿರುವೆ ನಿನ್ನ,
ಬಗೆದು ತೋರಿಸಲೇ...
ಜಗಕೆ ತಿಳಿಸಲೇ..
ಕಲಿಯುಗದ ಮಾರುತಿ ನಾನು.
ವಿಚಿತ್ರ ಹುಡುಗಿ...
ಕನ್ನಡಿಯ ನನ್ನ ಕೈಗಿತ್ತು
ಸಾಧಿಸಿ ತೋರಿಸಿದ
ನಗೆಯೊಂದ ಬೀರಿ
ಹೊರಟು ಹೋದಳಲ್ಲಾ..
ಅವಳು ಹೇಳಿದ್ದಾದರೂ ಏನು ?

ಕಾವ್ಯೋದಯ

ಸಮಯಕ್ಕೆ ಸರಿಯಾಗಿ
ರವಿಯೇನೋ
ಕಡಲ ತೊರೆದು
ಮೇಲೇರಿ ಬಂದು ಬಿಟ್ಟ,
ಆದರೆ, ಅವನಾಗಮನದ
ಸೊಬಗ ಬಣ್ಣಿಸುವ
ಕವನ ಮಾತ್ರ
ನನ್ನ ಮನದ ಕಡಲೊಳಗೇ
ಉಳಿದುಕೊಂಡಿದೆ,
ಕಾಗದದ ಬಾನ ಬೆಳಗೋ
ಲಕ್ಷಣವೇ ಕಾಣದಾಗಿದೆ.

ಮನದ ಮಾತು..

ಅದೆಷ್ಟೋ ಬಾರಿ
ಅವಳೆದುರು ಸಿಕ್ಕಾಗ
ನನಗನ್ನಿಸಿತ್ತು..;
ನನ್ನ ಮನದ ಮಾತುಗಳು
ಅವಳಿಗೆ ಕೇಳಿಸುವ
ಹಾಗಿದ್ದಿದ್ದರೆ ಎಷ್ಟು
ಚೆನ್ನಾಗಿರುತ್ತಿತ್ತು....
ಮೆಲ್ಲಗೆ ಚಿವುಟಿ
ಭ್ರಮೆಯ ಲೋಕದಿಂದ
ಹೊರ ತಂದ ನನ್ನಾತ್ಮ
ಮುಸಿ ಮುಸಿ ನಗುತ್ತಾ
ಪಿಸುಗುಟ್ಟಿತು...
" ಪ್ರೀತಿಸುವುದಿಲ್ಲ "
ಎನುವ ಅವಳ
ಮನದ ಮಾತುಗಳು
ನಿನಗೆ ಗೊತ್ತಾಗಿರುತ್ತಿತ್ತು...

Sunday 30 September, 2012

ಉಡುಗೊರೆ..

ಕಣ್ರೆಪ್ಪೆಯ ಹೊದಿಕೆಯನು
ಮೆಲ್ಲನೆ ಹೊದಿಸಿ,
ಕೊಟ್ಟೆ ಮುಂಜಾನೆಯವರೆಗೆ
ಆರಾಮವೆನುವ ನಿದಿರೆ;
ಇದು ಜಗದ ಕ್ರೂರತೆಯ
ನೋಡಿ ಬಳಲಿದ
ನನ್ನೀ ಕಂಗಳಿಗೆ
ನನ್ನ ಪ್ರೀತಿಯ ಉಡುಗೊರೆ

Friday 28 September, 2012

ವಿಶಾಲ ಜಗತ್ತು

ನಗುವಿನ ಮೊಗವನು ತೋರಿಸಿ
ಮರೆಯಾಗಿ ಹೋದವಳ
ಹುಡುಕಲು ಹೊರಟಾಗಲೇ
ನನಗೆ ಗೊತ್ತಾಗಿದ್ದು..
ಈ ಜಗತ್ತು ಅದೆಷ್ಟು ವಿಶಾಲ

ಕನಸು-ನನಸು

ರಾತ್ರಿ ನಾ
ಕಂಡ ಕನಸು
ಕನಸಾಗಿಯೇ
ಉಳಿಯದಿರಲೆಂದು,
ಬೆಳಕ ಚೆಲ್ಲುತ
ಓಡೋಡಿ ಬಂದ ರವಿ,
ಕನಸ ನನಸಾಗಿಸುವ
ಹಾದಿಯ ತೋರಲೆಂದು.

ಸರಸ....

ಇರುಳಲಿ ಬಾನಿಗೆ
ಕಾವಲಿರು ಎಂದು
ತನ್ನೊಡಲ ಬೆಳಕನಿತ್ತು,
ಕೋಟಿ ತಾರೆಗಳ
ಸೈನ್ಯವನೂ ಇತ್ತು,
ಕಡಲಿನಾಳದಲ್ಲಿನ
ಮತ್ಸ್ಯಕನ್ಯೆಯರೊಡನೆ
ಸರಸವಾಡಲು
ಹೋದ ಭಾಸ್ಕರನಿಗೆ,
ಚಂದಿರನ ಅಸಮರ್ಥತೆ
ಗೊತ್ತಾದದ್ದು ಬಾನಾಡಿಗಳ
ಇಂಚರವೆನುವ ಆರ್ತನಾದ
ಕೇಳತೊಡಗಿದಾಗ,
ಸಿಡುಕಿನ ಕೆಂಪು ಬಣ್ಣ
ಅವನ ಮೊಗವನಲಂಕರಿಸಿತ್ತು
ಸರಸವನು ನಿಲ್ಲಿಸಿ
ಅವರನೆಲ್ಲಾ ತೊರೆದು
ಮೂಡಣದ ಕದವ ತೆಗೆದು
ಆಗಸಕೆ ಬಂದಾಗ....

ನಂಬಿಕೆ

ಇರುಳ ಕರಾಳತೆಯ
ಸಹಿಸಿಕೊಳ್ಳಲಾಗದೇ,
ಹಾಸಿಗೆಯ ಹಳ್ಳದಲ್ಲಿ
ಮುಳುಗು ಹಾಕಿ,
ನಿದಿರೆಯೆನುವ
ಕೆಲವು ತಾಸಿನ
ಸಾವನರಸುವುದೇ
ನನ್ನ ಮನದ ಹವಣಿಕೆ;
ನಾಳೆ ಮುಂಜಾನೆಯಲಿ
ಮೂಡಣದ ಬೆಟ್ಟದಿಂದ
ಮೇಲೇರಿ ಬರುವ ರವಿ;
ಬೆಳಕ ಸಂಜೀವಿನಿಯ
ತಂದು ನನಗುಣಿಸಲು,
ಮರು ಜನ್ಮ ಪಡೆದೇನು
ಎನುವುದೆನ್ನ ನಂಬಿಕೆ

ಅವ್ಯಕ್ತ ಭಾವನೆ

ಮೊದಲ ನೋಟದಲಿ
ನಿನ್ನತ್ತ ಸೆಳೆದು,
ಎರಡನೆಯ ನೋಟದಲಿ
ನನ್ನ ಮನದಾಳಕಿಳಿದು
ಶಾಂತವಾಗಿದ್ದ ಮನದಲ್ಲಿ
ಅವ್ಯಕ್ತ ಭಾವನೆಯ ತಂದು,
ನಕ್ಕು ಮಾಯವಾದಿಯಲ್ಲೇ
ನನ್ನ ನೆಮ್ಮದಿಯ ಕೊಂದು

Thursday 20 September, 2012

ಪಾತರಗಿತ್ತಿ...( My Mobile click...)



ಮಧುವ ತುಂಬಿಕೊಂಡಿರುವ
ಹೂವುಗಳನರಸುತ್ತಾ
ತೋಟವನೆಲ್ಲಾ ಸುತ್ತಿ ಸುತ್ತಿ;
ಬಸವಳಿದು ಹಸಿರೆಲೆಯ
ಮೇಲೆ ಕುಳಿತುಕೊಂಡಿತೇ
ಈ ಚೆಲುವಿನ ಪಾತರಗಿತ್ತಿ...??

ಬಂದ್..

ಹೇಳದೇ ಕೇಳದೆ
ಧಿಡೀರ್ ಆಗಿ
ನಡೆಯುತ್ತಿದೆ
ಇತ್ತೀಚಿಗೆ
ಭಾರತದಲ್ಲಿ
"ಬಂದ್-ಗಳು"
ಅಪ್ಪಿ ತಪ್ಪಿ
ಆ ದಿನವೇ
ಶುಭ ಸಮಾರಂಭ
ನೀವು ಇಟ್ಟಿದಿದ್ರೆ
ಹೇಗೆ ಬರ್ತಾರೆ
ನಿಮ್ಮ "ಬಂಧುಗಳು"

ಸಿಂಹಾಸನ...

ಯೋಗ್ಯತೆಗೂ ಮೀರಿದ
ಗೌರವದ ಪದಗಳ
ಎತ್ತರದ ಸಿಂಹಾಸನದಲಿ
ಪ್ರೀತಿಯಿಂದ ಕುಳ್ಳಿರಿಸಿದ
ತಂಗಿಯ ಪ್ರೀತಿ ಅಪಾರ;
ನಿಜವ ನಾ ಹೇಗೆ
ಅವಳಿಗೆ ತಿಳಿಹೇಳಲಿ
ಸಿಂಹಾಸನವೆಂದು
ಕುಳ್ಳಿರಿಸಿದರೂ..
ನನ್ನ ಮನಸಿಗದೊಂದು
ಬಂಗಾರದ ಪಂಜರ.

ಸರಿಸಮ

ಸೌಂದರ್ಯದ ಅರ್ಥವನೀವ
ಪದಗಳನೆಲ್ಲಾ ಕಲೆಹಾಕಿ
ಚಂದದ ಕಾವ್ಯವನ್ನಾಗಿಸಿ
ನಿನ್ನ ಚೆಲುವಿಗೆ
ಸರಿಸಮವೆಂದು
ಅವಳಿಗೆ ಅದನರ್ಪಿಸಿದೆ,
ಆದರವಳ ಕಂಡೊಡನೆ
ಕಾವ್ಯದೊಳಗಿನ ಪದಗಳೆಲ್ಲ
ನಾವೀ... ಚೆಲುವಿಗೆ
ಸರಿಸಮರಲ್ಲ ಎನುತ
ಕಾವ್ಯ ಬಂಧನವ
ತೊರೆದು ಮರೆಯಾಗಿ.
ಖಾಲಿ ಹಾಳೆಯನೇ ಉಳಿಸಿದೆ..

Sunday 9 September, 2012

ಕಾಣದ ಭಾಂಧವ್ಯ...














ನಗುತ ಕುಳಿತಿದ್ದೆ ನನ್ನ ಹೆತ್ತ ತಾಯ ಸೊಂಟದ ಮೇಲೆ
ನಮ್ಮಿಬ್ಬರ ದೂರ ಮಾಡಿದೆ ಬೀಸಿ ಬಂದ ಗಾಳಿಯಲೆ
ಜಗಕೇನು ಗೊತ್ತು ನಮ್ಮಿಬ್ಬರ ಭಾಂಧವ್ಯದ ಬೆಲೆ..?
ಕಂಡೀತು, ಸಹಾನುಭೂತಿಯ ದೃಷ್ಟಿಯಿಂದ ನೋಡಿದಾಗಲೇ..
ತರುವಿನೊಡನೆ ಬೆಸೆದಿದ್ದ ನನ್ನ ತನುವಿನ ಭಾಗದಲ್ಲಿ ನೆತ್ತರಿನ ಕಲೆ..

ಭಾವಾರ್ಥ..


ಗಾಢವಾಗಿ ಯೋಚಿಸಿದರೆ
ಅವಳದೇನೂ ತಪ್ಪಿಲ್ಲ,
ನನ್ನ ಕಂಡಾಗಲೇ
ಹೂ ನಗೆಯ ಬೀರುವಳು
ಎನುವುದಾಗಿತ್ತು
ನನ್ನ ಕಲ್ಪನೆ;
ಆ ನಗೆಗೊಂದು
ಭಾವಾರ್ಥ ಹುಡುಕಿ
ಅದು ಪ್ರೀತಿ
ಎಂದು ಸುಳ್ಳು
ಮಾಹಿತಿ ನೀಡಿದ್ದು
ನನ್ನದೇ ಹೃದಯ ತಾನೆ

ಆಶ್ರಯ



ಬಾನಿನಿಂದುದುರಿದ ಮುತ್ತಿನಂಥಾ ನೀರ ಹನಿಗಳಿಗೆ
ಹೂವ ತನುವಿನಾಶ್ರಯ, ಜಾರಿ ಬುವಿಗೆ ಬೀಳುವವರೆಗೆ

ಕಠೋರ ಸತ್ಯ

ಕಲ್ಪನೆಯ ಗಾಳವನು
ತಿಳಿಯಾದ ಮನದ
ಭಾವನೆಯ ಸರೋವರದಲಿ
ಇಳಿಯಬಿಟ್ಟು
ಕಾಯುತ್ತಾ ಕುಳಿತಿದ್ದೇನೆ
ಕಾವ್ಯವೆಂಬ
ಸುಂದರ ಮೀನಿಗೆ.
ಆದರೆ ಈ ಕಾಯುವಿಕೆಗೆ
ಅಂತ್ಯವೇ ಇಲ್ಲ
ಎನುವುದು ಮಾತ್ರ
ಕಠೋರ ಸತ್ಯ.

Sunday 2 September, 2012

ದೇಗುಲ...



ಜಗದ ಇಂಚು ಇಂಚಿನಲೂ ಭಗವಂತನಿದ್ದರೂ
ಅವನಿಗೊಂದು ಆಲಯ, ಅದೇ ದೇವಾಲಯ,
ಪ್ರವೇಶದಾದಿಯಲೇ ಎತ್ತರದ ಗೋಪುರ
ಸೂರ್ಯ ಕಿರಣಗಳು ತಾಕಿದೊಡನೆ ಫಳಫಳನೆ
ಹೊಳೆವ ತುತ್ತತುದಿಯ ಮುಗುಳಿಗಳೆಷ್ಟು ಸುಂದರ,
ಬದಿಯಲೇ ಶುಭ್ರಜಲದಿಂದ ತುಂಬಿರುವ ಕಲ್ಯಾಣಿ,
ಅದರೊಳಗಿನ ನೀರ ತಲೆಗೆ ಚಿಮುಕಿಸಿದೊಡನೆ
ತನು-ಮನವೆರಡೂ ಪರಿಶುದ್ಧವಾದಂತಹ ಅನುಭವ.
ಪ್ರವೇಶದ್ವಾರದೆದುರು ಅಂಕು ಡೊಂಕಿರದ ಉದ್ದನೆಯ ಧ್ವಜಸ್ತಂಭ
ಅದರ ಬುಡದಲ್ಲೆ ಸಹಸ್ರ ಜ್ಯೋತಿಗಳಿಗೆ ಆಶ್ರಯವನಿತ್ತ ಎತ್ತರದ ಕಾಲು ದೀಪ
ತಲೆಬಾಗಿ ಒಳಹೊಕ್ಕೊಡನೆ ದೇವ ಮಂದಿರದ ದಿವ್ಯ ದರ್ಶನ
ದೇವಗಣಗಳಂತೆ ನಿಂತಿರುವ ಸಾಲು ಸಾಲು ಕಲ್ಲಿನ ಕಂಬಗಳು
ಪ್ರತಿ ಕಂಬದಲೂ ಅರಳಿ ನಿಂತಿದ್ದ ಕಣ್ಸೆಳೆವ ಶಿಲ್ಪ ವೈಭವ
ಪುರಾಣಗಳ ಕಥೆಗಳನೆಲ್ಲ ಕೆತ್ತಿರುವ ರೀತಿ ಬಲು ಅದ್ಭುತ,
ಮೌನದಲಿ, ಭಕ್ತಿ ಭಾವದಲಿ ಪ್ರದಕ್ಷಿಣೆ ಬರುತಿರುವ ಭಕ್ತ ವೃಂದ
ಕ್ಷಣಕ್ಷಣಕೂ ಢಣ್ ಢಣ್ ಅನ್ನೋ ಗಂಟೆಯ ಇಂಪು ನಿನಾದ
ಅಲ್ಲಲ್ಲಿ ಹಚ್ಚಿಟ್ಟ ಊದುಬತ್ತಿಯು ಪಸರಿಸುತಿದೆ ಪರಿಮಳವ
ಕಿವಿಗಿಂಪು ನೀಡುವ ಅರ್ಚಕ ವೃಂದದ ಮಂತ್ರ ಘೋಷ
ನಡುವಿನ ಗರ್ಭಗುಡಿಯೊಳಗೆ ಶಿಲ್ಪರೂಪದಿ ನೆಲೆ ನಿಂತ ಭಗವಂತ,
ಹಲವು ಬಗೆಯ ಹೂಗಳ ಅಲಂಕಾರ, ಸ್ವರ್ಣದೊಡವೆಗಳಿಂದ ಸಿಂಗಾರ
ನೇತು ಹಾಕಿದ್ದ ತೂಗು ದೀಪದ ಮಂದ ಬೆಳಕಿನಲಿ
ಅರ್ಚಕರು ಬೆಳಗುತಿಹ ದಿವ್ಯ ಮಂಗಳಾರತಿಯಲಿ
ಹೊಳೆವ ದೇವ ವದನವ ನೋಡಲೆಂತು ಸುಂದರ
ನಿನ್ನ ಪಾದಕೆ ಶರಣು, ಎಂದು ಭಕ್ತಿಯಿಂದಲಿ ನಮಿಸಿದೊಡನೆ
ದೇವಾಭಿಷೇಕದ ತೀರ್ಥವನು ಕಂಗಳಿಗೊತ್ತಿ ಸೇವಿಸಿದೊಡನೆ
ಮನದ ಕ್ಲೇಶ ಕಳೆದು ಹೋಗಿ, ಆಗುವರೆಲ್ಲರು ಹೃದಯದಿಂದ ನಿರ್ಮಲ
ಆಸ್ತಿಕರಿಗೆ ಆಧ್ಯಾತ್ಮಿಕ ಶಕ್ತಿ ಕೇಂದ್ರ, ಅದುವೇ ಬುವಿಯ ಮೇಲಿನ ದೇಗುಲ.

ಭಯ

ನೀರವ ಮೌನದ
ಒಳಗೊಂದಷ್ಟು
ಭಯಾನಕತೆಯ
ಮೆಲ್ಲಗೆ ಬೆರೆಸಿ
ಜಗವನಾವರಿಸಿ
ಜನರ ಹೆದರಿಸುತಿದೆ
ಭೀಕರ ಕತ್ತಲು;
ಕಣ್ ರೆಪ್ಪೆಯ
ಮುಚ್ಚಿಕೊಂಡು,
ಅದರೊಳಗಡೆ
ಸಿಹಿ ಕನಸ
ಇರಿಸಿಕೊಂಡು,
ನಿದಿರಾದೇವಿಯನು
ಅಪ್ಪಿಕೊಳಬೇಕೆಂದಿರುವೆ
ಈ ಭಯದಿಂದ
ನಾ ಪಾರಾಗಲು..

ಸಹನೆ

ಹಗಲಿರುಳೆನ್ನದೆ
ಸಾಗಿದೆ ಕಾರ್ಮುಗಿಲ
ಘನಘೋರ ಯುದ್ಧ,
ಗುಂಪು ಗುಂಪಾಗಿ
ವಸುಧೆಯ ಮೇಲೆ
ಮಾಡುತಿದೆ ದಾಳಿ,
ಆದರೂ ಭುವಿಯ
ಸಹನೆಯಲಿ ಏರುಪೇರಿಲ್ಲ,
ದಾಳಿಗೊಳಗಾದದ್ದು
ವಸುಧೆಯಾದರೂ
ಸೋತು ಹೋದದ್ದು
ಕಾರ್ಮುಗಿಲು,
ಇಳೆಯ ಸಹನೆಯನು
ಸಂಹರಿಸಲಾಗದೇ
ಬೀಸಿದ ತಂಗಾಳಿಯ
ಜೊತೆ ಪರಾರಿಯಾಯಿತಲ್ಲ..

ಉಡುಗೊರೆ


ಇರುಳು ಪೂರ್ತಿ
ತನ್ನ ಮನೆಯೊಳಗೆ
ಮಲಗಿ ನಿದ್ರಿಸಲು
ಅವಕಾಶವನಿತ್ತ
ಕಡಲದೇವಿಗೆ
ನೇಸರನ
ಪ್ರೀತಿಯ ಉಡುಗೊರೆ,
ಹೊಳೆವ ಈ
ಬಂಗಾರದ ಸೀರೆ.

Tuesday 28 August, 2012

ಪಯಣ

ಕನಸೆನುವ
ನಾವೆಯನೇರಿ
ಹೊರಟಿದೆ,
ನಿದಿರೆಯಾ
ನದಿಯಲ್ಲಿ
ನನ್ನದೊಂದು
ಪಯಣ;
ಎಚ್ಚರವೆನುವ
ದಡವ ಸೇರುವಾಸೆ,
ಬರುವ ಮುನ್ನ
ಮೂಡಣದಿ
ಸೂರ್ಯ ಕಿರಣ.

ಬಂಧಮುಕ್ತಿ..


ನೀರ ಹನಿಗಳೆನುವ
ಮುದ್ದಾದ ಮಕ್ಕಳು,
ಬಂಧನದ ಬೇಸರದಿ

ಕುಳಿತುಕೊಂಡಿದ್ದರು
ಕಾರ್ಮೋಡವೆನುವ
ದೊಡ್ದ ಶಾಲೆಯಲಿ;
ಗುಡುಗೆನುವ ಗಂಟೆ
ಬಾರಿಸಿದ ತಕ್ಷಣ
ಸ್ವತಂತ್ರರಾದಂತೆ
ಭುವಿಯೆನುವ
ಮನೆಯೆಡೆಗೆ,
ಓಡೋಡಿ ಬರುತಿಹರು
ಈಗ ಆತುರಾತುರದಲಿ

ಉಪಚಾರ

ಹಗಲಿನಲಿ ಸುಳಿವಿರದೆ
ಸಂಜೆಯಾದಾಗ
ಹಠಾತ್ತನೆ ಬಿದ್ದ
ನಾಲ್ಕು ಹನಿಯ
ಸಣ್ಣ ಮಳೆಯನು
ಕಂಡಾಗ ನನಗನಿಸಿದ್ದು;
ಇದು ಮತ್ತಿನ್ನೇನು ಅಲ್ಲ,
ಇದುವರೆಗಿದ್ದ ಉರಿಬಿಸಿಲ
ಝಳಕೆ ಬಳಲಿ ಬೆಂಡಾಗಿ,
ಮೂರ್ಛೆ ಹೋದಂತಾದ
ವಸುಧೆಯ ವದನಕೆ
ನೀರ ಚಿಮುಕಿಸುತಲಿ
ಮೇಘರಾಜ ಇಳೆಯ
ವಾತ್ಸಲ್ಯದಿಂದ ಉಪಚರಿಸಿದ್ದು

ಬೇಲಿ

ನನ್ನವಳ ನೆನಪುಗಳೆನುವ
ಮುರಿದ ಆಟಿಕೆಗಳ
ಗಂಟು ಮೂಟೆಯನು
ಹೊತ್ತು ಕೊಂಡು,
ನಗು ನಗುತಲೆ
ಬಂದು ಬಿಟ್ಟಿದೆ
ಕಾಡುವ ಕತ್ತಲು;
ಒಂದೊಂದಾಗಿ
ತೋರಿಸಿ
ಅಣಕಿಸುತ್ತಿದ್ದರೂ...
ಹೊರಗೋಡಿ
ಬರುವಂತಿಲ್ಲ,
ಇರುವುದಲ್ಲ
ನಿದಿರೆಯ ಬೇಲಿ
ನನ್ನ ಸುತ್ತಲೂ.

ದ್ರೋಹ

ಅದೊಂದು ದೊಡ್ದ ಆಸ್ಪತ್ರೆ...
ಅಲ್ಲಿ ಒಳಗಿದ್ದವರೆಲ್ಲರದ್ದೂ
ಒಂದೊಂದು ತರಹದ ಆತಂಕ,
ತಮ್ಮದೇ ಆದ ವೇದನೆ,
ಸಹಿಸಿಕೊಳ್ಳಲಾಗದ ನೋವುಗಳು
ಸಾವಿನ ಭಯ,
ಇನ್ನೊಂದಿಷ್ಟು ಜನರ ಕಂಗಳಲ್ಲಿ.
ಮುಖವು ಮೌನವನೇ
ಬಿಂಬಿಸುತ್ತಿದ್ದರೂ..
ಬಿಕ್ಕಿ ಬಿಕ್ಕಿ ಅಳುವ
ಸದ್ದು ಒಳಗೆಲ್ಲಿಂದಲೋ
ಕಿವಿಗಪ್ಪಳಿಸುತ್ತವೆ,
ಇಂತಹಾ ದುಃಖದ
ಮೋಡವಿಲ್ಲಿ ಕವಿದಿದ್ದರೂ,
ಇರುವ ಹೆಚ್ಚಿನವರೆಲ್ಲರ
ಕಣ್ಣಾಲಿಗಳು ತುಂಬಿದ್ದರೂ..
ಬಾಗಿಲ ಬಳಿಯಲ್ಲೊಂದಷ್ಟು
ಜನ ಬೆಡಗಿಯರು
ಮುಖಕೂ , ತುಟಿಗಳಿಗೂ
ಒಂದಷ್ಟು ಬಣ್ಣವ ಮೆತ್ತಿ
ಸಿಂಗರಿಸಿಕೊಂಡು ,
ಸೌಂದರ್ಯ ಪ್ರದರ್ಶಿಸುತಲೇ
ಕಾರ್ಯನಿರತರಾಗಿರುವುದು
ಮಾನವೀಯತೆಗೊಂದು
ದ್ರೋಹವಲ್ಲದೇ ಇನ್ನೇನು...?

ವ್ಯರ್ಥ ನಿರೀಕ್ಷೆ.

ಮೌಢ್ಯದ ಕತ್ತಲು ಸರಿದು
ನನ್ನ ಮನವೆನುವ
ಭುವಿಯ ಮೇಲೆ
ಕಾವ್ಯರವಿಯ ಆಗಮನದ
ನಿರೀಕ್ಷೆಯಲಿದ್ದೆ..
ಸೂರ್ಯೋದಯ ಆಗಲೇ ಇಲ್ಲ
ಈಗ ಮನಸ್ಸಿಗೆ ಬೇಸರ
ಇದಕಾಗಿ ಬಲು ಬೇಗನೆದ್ದು
ಹಾಳು ಮಾಡಿಕೊಂಡೆನಲ್ಲ
ನನ್ನ ಸೊಗಸಿನ ನಿದ್ದೆ.

ಗುರಿ


ಮುಂಜಾನೆಯಲೇ
ಅನಂತ ದೂರದಿಂದ
ಹೊರಟ ರವಿಕಿರಣಕೆ,
ಇಳೆಯ ತನುವ
ಮೃದುವಾಗಿ
ಸ್ಪರ್ಶಿಸುವ ತವಕ,
ರೆಂಬೆ ಕೊಂಬೆಗಳ
ಅಡ್ಡಿಗಳನೆದುರಿಸಿಯೂ
ಈ ಆಸೆಯ ಕೊನೆವರೆಗೂ
ಹಿಡಿದಿಟ್ಟುಕೊಳುವುದದು,
ತನ್ನ ಗುರಿ ಭುವಿಯ
ಮುಟ್ಟುವ ತನಕ

ಹೆಣ್ಣು

ಈ "ಫೇಸ್ ಬುಕ್"
ಎನುವುದೊಂದು ಹೆಣ್ಣು,
ಎಂಬುದರ ಬಗ್ಗೆ
ನನಗೀಗ ಸಂಶಯವಿಲ್ಲ;
ಅದರೊಡನೆ ಹೇಳಿಕೊಂಡ
ನನ್ನೊಳಗಿನ ಭಾವನೆಯ
ಗುಟ್ಟಾಗಿರಿಸದೆ ನೋಡುಗರ
ಜೊತೆಗೆಲ್ಲಾ ಹಂಚಿಕೊಳುವುದಲ್ಲ..

Tuesday 21 August, 2012

ಈಡೇರದ ಬೇಡಿಕೆ..



ದಣಿದ ರವಿಯನು
ಕಡಲಾಳಕ್ಕೆ ದೂಡಿ,
ಜಗವನಾವರಿಸಿ
ಜನರ ದೃಷ್ಟಿಯಿಂದ
ಎಲ್ಲವನೂ
ಮರೆಮಾಚುವಂತೆ
ಮಾಡಿದ ಇರುಳರಾಜನಲಿ
ಭಿನ್ನವಿಸಿದೆ,
ಕಾಡುತಿರುವ
ನನ್ನವಳ ನೆನಪನ್ನು
ಕಾಣಿಸದಂತೆ
ಮಾಡುವೆಯಾ ಎಂದೆ,
ಈಗ ನೋಡಿದರೆ
ನೇಸರನ ಸೋಲಿಸಿದವನ
ಪೌರುಷವೇ ಅಡಗಿಹೋಗಿದೆ,
ಈಡೇರಿಸಲಾಗದ
ನನ್ನ ಬೇಡಿಕೆಯು
ಅವನ ಕತ್ತನ್ನೇ ಬಾಗಿಸಿದೆ.

---ಕೆ.ಗುರುಪ್ರಸಾದ್



ಎಲ್ಲಿಗೆ..?

ಕತ್ತಲಿನ
ಹಾದಿಯಲಿ
ಕುಣಿ ಕುಣಿದು
ಸಾಗುತ್ತಿದ್ದ
ಕನಸುಗಳ
ಮೆರವಣಿಗೆ;
ಸೂರ್ಯನಾಗಮನ
ಆದೊಡನೆ ಚದುರಿ
ಚೆಲ್ಲಾಪಿಲ್ಲಿಯಾಗಿ
ಓಡಿ ಹೋದದ್ದಾದರೂ
ಎಲ್ಲಿಗೆ..?

ಪಾನಕ

ದಿನವಿಡೀ ದುಡಿದು
ದಣಿದ ದೇಹದ
ದಾಹ ತೀರಲು
ಅತೀ ಆವಶ್ಯಕ;
ಈ ಕತ್ತಲೆನುವ
ಪಾತ್ರೆಯಲಿರುವ
ನಿದಿರೆಯೆಂಬ
ಸಿಹಿಯಾದ ಪಾನಕ.

ಪಲಾಯನ

ಚಿನ್ನದ ಮೊಟ್ಟೆಯೆಂದು
ಭಾವಿಸಿ ಆಗಸದಿಂದ
ಕದ್ದು ತನ್ನ ಒಡಲಿನ
ಬಂಧನದಲ್ಲಿಟ್ಟ ಕಡಲರಾಜನಿಗೆ,
ಮುಸುಕಿನ ಮುಂಜಾನೆಯಲಿ
ಚಳ್ಳೆಹಣ್ಣು ತಿನ್ನಿಸಿ;
ಕೆಂಪು ಬಟ್ಟೆಯ
ಹೊದ್ದು ಮೂಡಣದ
ದ್ವಾರದಿಂದಲಿ ಹೊರಗೋಡಿ,
ಮೋಡದ ಮರೆಯಲ್ಲೇ
ತನ್ನೂರು ಸೇರಿ ನಿಟ್ಟುಸಿರ ಬಿಟ್ಟು
ಸಂತಸದಿ ನಗುತ್ತಿದ್ದಾನೆ
ನೇಸರ, ಜಗವನೆಲ್ಲಾ ಬೆಳಗಿಸಿ.

ಸಾಮ್ಯತೆ...

ಬಿಡದೆ
ಧಾರಾಕಾರವಾಗಿ
ಸುರಿಯುತ್ತಿರುವ
ಮಳೆಯನ್ನು
ಕಂಡಾಗ
ಥಟ್ಟನೆ ನನಗೆ
ನೆನಪಾದದ್ದು
ನನ್ನವಳ
ಬೈಗುಳ..

ಹೊಸ ಬೇಡಿಕೆ

ಹಳೆಯ
ಬೇಡಿಕೆ ಇದ್ದದ್ದು
ಮಳೆ ಬರಲಿ ಎಂದು,
ಇಳೆಯ ದಾಹ ತೀರಿ
ಹೊಸ ಕಳೆಯು
ಮೂಡುವವರೆಗೆ ,
ಈಗ ಒಂದು
ಹೊಸ ಬೇಡಿಕೆ,
ಕ್ಷಮಿಸಿ ಬಿಡು
ವರುಣ ದೇವ
ಕೇಳಿಕೊಂಡಿದ್ದು
ಹೆಚ್ಚಾಗಿದ್ದರೆ,
ಮಳೆಯು ಬಾರದಿರಲಿ
ನಾವೆಲ್ಲ ಮುಳುಗುವವರೆಗೆ.

ಧ್ವಜ ವಂದನ



ನೀಲಿ ನೀಲಿ ಬಾನಿನಲ್ಲಿ, ಧ್ವಜವು ಅರಳಲಿ
ಬೀಸೋ ಗಾಳಿಯ ತಾಳದಂತೆ ತನುವ ಕುಣಿಸಲಿ

ನಾಲ್ಕು ಸಿಂಹದ ನಡುವಲಿದ್ದ ಕಂಬದ ತುದಿಯನೇರಿ
ಪಾಶ ಬಂಧನವ ಕಡಿದುಕೊಂಡಿತು ಹೂವ ನಗೆಯ ಬೀರಿ

ಕಾಣಬಹುದು ಮೂರು ಬಣ್ಣದ ಜೊತೆಯಲೊಂದು ನೀಲಿ ಚಕ್ರವ
ಚೆಲುವ ನೋಡಿ ತುಂಬಿಕೊಳುವ ದೇಶಭಕ್ತಿಯ ಭಾವವ

ದೇಶ ಭಕ್ತಿಗೀತೆಯಿಂದ ಅದರ ಅರ್ಚನೆಗೈಯುವ
ವಂದೇ ಮಾತರಂ ಎನುತಾ ಮಂಗಳಾರತಿ ಬೆಳಗುವ

ಬನ್ನಿ ಭಾರತೀಯರೇ ಬಾವುಟಕೆ ನಾವು ವಂದಿಸೋಣ
ದೇಶಪ್ರೇಮದ ಕವಚ ತೊಟ್ಟು, ಅದರ ಘನತೆಯ ಕಾಪಾಡೋಣ..

Tuesday 7 August, 2012

ಛಾನ್ಸು..

ಅದೇನ್ ಕೆಲ್ಸಾ
ಮಾಡಿದ್ರೋ ಗೊತ್ತಿಲ್ಲ
ನಮ್ಮ ಉಪರಾಷ್ಟ್ರಪತಿ
ಹಮೀದ್ ಅನ್ಸಾರಿ;
ಆದ್ರೂ ಕೊಟ್ಟೇ ಬಿಟ್ರು
ನೋಡಿ ನಮ್ಮ ಶಾಸಕರು
ಅವರಿಗೇ ಛಾನ್ಸು
ಇನ್ನೊಂದ್ಸಾರಿ

ಅಪೇಕ್ಷೆ

ಅಭಿನಂದನೆ,
ಪ್ರೋತ್ಸಾಹವೆನುವ
ನೀರ ಸುರಿಸಿ,
ನಾನೆಂಬ ಗಿಡದಿಂದ
ಕಾವ್ಯ ಕುಸುಮವ
ಬಯಸುತಿಹ
ನಿಮಗೆಲ್ಲಾ
ನನ್ನ ಅಸಹಾಯಕ
ಮೌನದುತ್ತರ
"ನಾನೊಂದು
ಹೂವ ಬಿಡಲಾಗದ
ಮುಳ್ಳಿನ ಗಿಡ".

ಗೆಳೆತನ

ಹಗೆತನದ
ಕತ್ತಲು ಕಳೆದು
ನಮ್ಮ ನಿಮ್ಮೆಲ್ಲರ
ಬಾಳಿನ ಶುಭ್ರ
ಆಕಾಶದಲಿ ;
ಮೂಡಿ ಬರಲಿ
ಗೆಳೆತನದ
ಹೊಳೆವ ರವಿ
ಸಂತಸದ ಬೆಳಕ
ಚೆಲ್ಲುತಲಿ.

ಕನಸು

ಕನಸುಗಳೆನುವ
ನಕ್ಷತ್ರಗಳು
ಫಳಫಳನೆ
ಹೊಳೆಯಲು
ಬೇಕಾಗಿರುವುದು
ನಿದಿರೆಯೆನುವ
ಕಪ್ಪು ಆಗಸ.

ಉಪವಾಸ.

ಸಾಕಾಯಿತಂತೆ
ಅಣ್ಣಾ ಮತ್ತು
ಅವರ ತಂಡಕ್ಕೆ
ಮಾಡಿ ಮಾಡಿ
ಉಪವಾಸ;
ಇನ್ನೇನಿದ್ರು
ಇವರದ್ದು
ಭೂರಿ ಭೋಜನ
ಸಿಗೋ ಹೋಟೇಲ್
"ರಾಜಕೀಯ"ದ
ಸಹವಾಸ.

ಪೈಪೋಟಿ

ಬರದ ಬೇಗೆಯಲಿ
ಬೆಂದು ಹೋದ
ಬಡ ಜನರ
ಕಂಗಳಿಂದ
ಹರಿದು ಹೋದ
ಕಣ್ಣೀರ ಹನಿಗಳಿಗೆ
ಪೈಪೋಟಿ
ಕೊಡುವ ನೆಪದಲ್ಲಾದರೂ
ಬರಬಾರದೇ..
ಓ ಮಳೆಹನಿಯೆ..

ಸಂಚು..

ಜೀವನದ ಪ್ರತಿಯೊಂದು
ಹಂತದಲೂ
ನನ್ನ ಸಂತೋಷವ
ಕಂಡು ನನಗಿಂತಲೂ
ಹೆಚ್ಚು ಖುಷಿಪಡುತ್ತಿದ್ದ
ನನ್ನ ಮುದ್ದಿನ ಅಮ್ಮ,
ಇತ್ತೀಚಿಗೆ ಬದಲಾಗುತ್ತಿದ್ದಾಳೆ;
ಬ್ರಹ್ಮಚರ್ಯದಲ್ಲಿನ
ನನ್ನ ಸಂತೋಷವ
ಕಂಡು ಹೊಟ್ಟೆಕಿಚ್ಚು
ಪಡುತ್ತಿದ್ದಾಳೆ,
ನನ್ನ ಈ ಸಂತಸವ
ಪೂರ್ತಿಯಾಗಿ ನಿಲ್ಲಿಸುವ
ಸಲುವಾಗಿ,
ತನ್ನ ಮೃದು ಹೃದಯವ
ಕಲ್ಲಿನಂತೆ ಕಠೋರವಾಗಿಸಿ
ಮದುವೆಯೆನುವ
ಸೆರೆಮನೆಗೆ ದೂಡಿ ಬಿಡುವ
ಸಂಚು ರೂಪಿಸುತ್ತಿದ್ದಾಳೆ.

Sunday 29 July, 2012

ಪಡೀಲ್ ನಲ್ಲಿ ನಡೆದ ರೇವ್ ಪಾರ್ಟಿ ಮತ್ತು ಅದರ ಮೇಲಿನ ದಾಳಿ.. ಒಂದು ವಿಶ್ಲೇಷಣೆ...

ಇವತ್ತು ಕನ್ನಡ ನ್ಯೂಸ್ ಚಾನಲ್ ನೋಡೋ ಹಾಗೇ ಇಲ್ಲ ನಿನ್ನೆಯಿಂದ ರೆಸಾರ್ಟ್ ದಾಳಿ ಅನ್ನೋ ಹೊಸ ಚ್ಯೂಯಿಂಗ್ ಗಮ್ ಸಿಕ್ಕಿದೆ ಅದರ ಸಿಹಿರಸ ಮುಗಿಯೋವರೆಗೆ ಜಗೀತಾನೆ ಇರ್ತಾರೆ...(ಈ ನ್ಯೂಸ್ ಚಾನಲ್ ನವರ ವಿಶೇಷತೆ ಏನು ಅಂದ್ರೆ ತಮ್ಮ ಅನುಭವಕ್ಕೆ ಸಿಹಿ ಹೋಗಿದೆ ಅಂತ ಗೊತ್ತಾದ್ರೂ ನೋಡೋರು ಥೂ ಉಗೀರ್ರೀ ಅದನ್ನ ಅನ್ನೋವರೆಗೆ ಜಗೀತಾನೆ ಇರ್ತಾರೆ)
ಇನ್ನು ಈ ಘಟನೆಯ ಕುರಿತು ...
ಮೊದಲಾಗಿ ಎಲ್ಲಾರೂ ಹೇಳುತ್ತಿರುವುದು... ಹೆಣ್ಣು ಮಕ್ಕಳಿಗೆ ಹೊಡೆಯೋದು ನಮ್ಮ ಸಂಸ್ಕೃತೀ ನಾ... ಹೆಣ್ಣನ್ನು ಪೂಜಿಸೋ ದೇಶ ನಮ್ಮದು ಅಂತ... ಖಂಡಿತಾ ಒಪ್ಪೋಣ ಹೆಣ್ಣನ್ನು ಪೂಜಿಸೋ ದೇಶ ನಮ್ಮದು... ಹಾಗಂತ ಸೀತೆ, ದ್ರೌಪದಿ, ತಾರ ಇಂತಹ ಹೆಣ್ಣನ್ನು ಪೂಜಿಸುತ್ತೇವೆಯೇ ಹೊರತು ಪೂತನಿ, ಶೂರ್ಪನಖಿ ಇಂತವರನ್ನು ಪೂಜಿಸೋಲ್ಲ.. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಕೂಡ ಶೂರ್ಪನಖಿಯನ್ನು ದಂಡಿಸುವುದೇ ಸರಿ ಎಂದ. ಇದರ ಅರ್ಥ ವ್ಯಕ್ತಿಗೆ ಪೂಜೆ ಅಲ್ಲ ಅದು ವ್ಯಕ್ತಿತ್ವಕ್ಕೆ ಪೂಜೆ ಅನ್ನೋದು. ಸಾಮ ದಾನ ಭೇದ ದಂಡ ಇವೆಲ್ಲವನ್ನೂ ಉಪಯೋಗಿಸುವಂತೆ ನಮ್ಮ ಧರ್ಮ ಹೇಳಿಕೊಟ್ಟಿದೆ... ಬಹುಶ ಮಾಧ್ಯಮದವರು ತೋರಿಸದೇ ಇರುವಂತಾ ವಿಷಯ ಆಸುಪಾಸಿನ ಜನರ ಅಭಿಪ್ರಾಯ... ನಾನು ಪೇಪರಿನಲ್ಲಿ ಓದಿದಂತೆ ಹತ್ತಿರದ ಜನ ಪೋಲೀಸರಲ್ಲಿ ಈ ರೇವ್ ಪಾರ್ಟಿಗಳ ಬಗ್ಗೆ ತಿಳಿಸಿದ್ದಾರೆ ಆದರೂ ಸಕಾಲದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ... ಪೋಲೀಸರೇ ಕ್ರಮ ಕೈಗೊಂಡಿದ್ದರೆ ಇಂತಾ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದರೇ...??
ಇಲ್ಲಿ ನಡೆದದ್ದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ... ಆದರೂ ಮಾಧ್ಯಮದವರ ಪ್ರಶ್ನೆ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡರು ಅಂತಾ ನಾನು ಈ ದೃಶ್ಯಗಳನ್ನು ನೋಡಿದಾಗ ನನಗೆ ಅನ್ನಿಸಿದ್ದು... ಅವರನ್ನ ಮಾಧ್ಯಮಕ್ಕೆ ತೋರಿಸುವಾಗ ಆ ಹುಡುಗಿಯರ ಕೊಸರಾಟದಿಂದಾಗಿ ಅಸಭ್ಯವಾಗಿ ಕಂಡಿದೆ ಅದಕ್ಕೆ ಕಾರಣ ಅವರು ಹಾಕಿಕೊಂಡಿದ್ದ ಬಟ್ಟೆ ಬಹುಶ ಇದೇ ಹೆಣ್ಣು ಮಕ್ಕಳು ಚೂಡಿದಾರ್ ಹಾಕಿದ್ದರೆ ಇದೇ ರೀತಿಯ ಎಳೆದಾಟ ಅಸಭ್ಯವಾಗಿ ಕಾಣುತ್ತಿರಲಿಲ್ಲ.... ವಿಚಿತ್ರ ಎಂದರೆ ಯಾವ ಅನೈತಿಕ ಚಟುವಟಿಕೆಯನ್ನು ಇವರು ಮಾಡುತ್ತಿದ್ದರೋ ಅದು ಯಾರಿಗೂ ಅಸಭ್ಯವಾಗಿ ಕಾಣುತ್ತಿಲ್ಲ ಅಂದರೆ ಕ್ರಿಯೆ ಅಸಹ್ಯಕರವಾಗಿದ್ದರೂ ಅದು ಅಸಭ್ಯವಾಗಿ ಕಾಣದೆ ಪ್ರತಿಕ್ರಿಯೆ ಮಾತ್ರ ಅಸಹ್ಯಕರವಾಗಿ ಕಂಡಿದೆ.
ಇನ್ನು ಇಲ್ಲಿನ ಕ್ರಿಯೆಯ ಬಗ್ಗೆ ಅಂದರೆ ನಾವೇನು ರೇವ್ ಪಾರ್ಟಿ ಅನ್ನುತ್ತಿದ್ದೇವೋ ಅದರ ಕುರಿತು ನಮ್ಮ ಸಂಸ್ಕೃತಿಗೆ ಹೇಳಿಸಿದಂತಾದ್ದು ಅಲ್ಲ ಆದರೆ ಅಲ್ಲಿನವರು ಹೇಳುತ್ತಿರುವುದು ಇದು ಬರ್ತ್ ಡೇ ಪಾರ್ಟಿ ಎಂದು... ಬಹುಶ ಬರ್ತ್ ಡೇ ಪಾರ್ಟಿಗೆ ಬೆಡ್ ರೂಮ್ ಗಳ ಅವಶ್ಯಕತೆ ಏನು ಅನ್ನುವುದು ನನಗಂತೂ ತಿಳಿದಿಲ್ಲ...ಇಂತಹಾ ಬರ್ತ್ ಡೇ ಪಾರ್ಟಿ ನಮಗೆ ಬೇಕಾ...?
ಇನ್ನು ಮಾಧ್ಯಮದವರ ಕುರಿತು ಮೊದಲಾಗಿ ತಮಗೆ ಸುದ್ದಿ ಸಿಕ್ಕ ಕೂಡಲೇ ಪೋಲೀಸರಿಗೆ ತಿಳಿಸದೆ ತಮ್ಮ ಟಿ.ಆರ್.ಪಿ ಯ ಕುರಿತು ಯೋಚಿಸಿ ಪದೇ ಪದೇ ಇದನ್ನೇ ತೋರಿಸುತ್ತಿರುವುದು. ಇಂತಹಾ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡುತ್ತಿರುವ ಕಾರಣ ಈ ದಾಳಿ ನಡೆಸಿದವರು ಹಿಂದು ಸಂಘಟನೆಗಳು ಅನ್ನುವುದು, ಇನ್ಯಾವುದೋ ಕೋಮಿನವರು ಮಾಡಿದಿದ್ದಲ್ಲಿ ಒಂದು ಬಾರಿ ಬ್ರೇಕಿಂಗ್ ನ್ಯೂಸ್ ಅಂತ ಹಾಕಿ ಸುಮ್ಮನೆ ಇದ್ದು ಬಿಡುತ್ತಿದ್ದರು.
ಇಷ್ಟಾಗಿಯೂ ಹುಡುಗಿಯರ ಮೇಲೆ ಕೈ ಎತ್ತಿದ್ದು ಸರಿಯಲ್ಲ ಅಂತಾನೆ ಹೇಳಬಹುದು ಯಾಕೆಂದರೆ ಪೆಟ್ಟಿಗೆ ಬಗ್ಗೋ ಹುಡುಗ ಹುಡುಗಿಯರಲ್ಲ ಇವರು. ನನಗನ್ನುತ್ತೆ ಇಂತಾವರಿಗೆ ಪೆಟ್ಟು ಕೊಟ್ಟು ತಮ್ಮ ಸಂಘಟನೆಯ ಹೆಸರು ಹಾಳು ಮಾಡಿಕೊಳ್ಳುವುದಕ್ಕಿಂತ ಮಾರ್ಮಿಕ ಪೆಟ್ಟು ಕೊಡಬೇಕಿತ್ತು... ಇಂತಾಹವರನ್ನೆಲ್ಲ ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರು ಮತ್ತು ಮಾಧ್ಯಮದ ಮುಂದೆ ಕೂರಿಸಿ ಪ್ರಶ್ನೆಗಳ ಸುರಿಮಳೆ ಮಾಡಿ ಆದರ ಮುಲಕ ಅವರ ನಿಜ ಬಣ್ಣವನ್ನು ಬಯಲು ಮಾಡಬೇಕಿತ್ತು.ಅಲ್ಲಿ ನಡೆಯುತ್ತಿದ್ದುದು ಏನು ಅನ್ನುವುದನ್ನು ಜಗತ್ತಿಗೆ ಸಾರಿ ಹೇಳಬೇಕಿತ್ತು.ಆವಾಗ ಸಂಘಟನೆಗೂ ಒಳ್ಳೆ ಹೆಸರು ಬರುತ್ತಿತ್ತು.
ಇಲ್ಲಿ ಮತ್ತೂ ಒಂದು ದೊಡ್ಡ ತಪ್ಪು ಪಾಲಕರದ್ದು , ತಮ್ಮ ಮಕ್ಕಳ ಬಗ್ಗೆ ಒಂದಷ್ಟು ಗಮನ ಕೊಡೋದು ಅವರ ಕರ್ತವ್ಯ ಅಲ್ವಾ... ಮಕ್ಕಳಿಗೆ ದುಡಿಯೋ ಮಾರ್ಗವನ್ನಷ್ಟೇ ತೋರಿಸಿ, ನೀವು ದುಡಿದ ಹಣವನ್ನು ಬೇಕಾಬಿಟ್ಟಿ ಅವರಮೇಲೆ ಸುರಿಯಬೇಡಿ...ದುಡಿದು ತಿನ್ನುವಂತೆ ಮಾಡುವುದೇ ನಿಜವಾದ ಪಾಲಕರ ಲಕ್ಷಣ.ಮಕ್ಕಳ ಖರ್ಚು ಹದ್ದು ಮೀರಿದರೆ ಅವರು ಎಡವುತ್ತಿದ್ದಾರೆ ಎಂದು ತಾನೆ ಅರ್ಥ. ಎಲ್ಲರೂ ನಮ್ಮ ಸಂಸ್ಕೃತಿಯ ರಕ್ಷಣೆಗೆ ತೊಡಗಿದರೇ ಇಂತಹಾ ಘಟನೆಗಳು ಖಂಡಿತಾ ನಡೆಯಲಾರವು. ಮುಂದೆ ಇಂತಹಾ ಪಾರ್ಟಿಗಳು ನಡೆಯದೇ ಇರಲಿ ಇಂತಹಾ ದಾಳಿಗಳು ಕೂಡ ನಡೆಯದೇ ಇರಲಿ...

---ಕೆ.ಗುರುಪ್ರಸಾದ್

ಎಡವಿದವರ್ಯಾರು..?



ಬೆಳೆದು ದೊಡ್ಡವರಾಗಿ ದುಡಿದು
ತಮ್ಮ ಕಾಲ ಮೇಲೆ ತಾವು ನಿಲ್ಲುವ ಮುನ್ನವೇ
ತಂದೆತಾಯಿಯರು ದುಡಿದುದನು
ತಮ್ಮ ಅಸಹ್ಯ ಮೋಜಿಗಾಗಿ
ಪೋಲು ಮಾಡಿದರಲ್ಲ ಈ ಯುವ ಜನತೆ,
ಇವರು ಎಡವಿದವರೇ...?

ಈ ನೆಲದ ಸಂಸ್ಕೃತಿಯ ತಿಳಿಹೇಳದೆ
ಹಣಗಳಿಕೆಯ ಹುಚ್ಚು ಕುದುರೆಯನ್ನೇರಿ
ಗಮನವೀಯದೆ ಹಣದ ಹೊಳೆ ಹರಿಸಿ
ಮಕ್ಕಳ ಅಸಭ್ಯತೆಯ ಕಡೆ
ದೂಡಿ ಬಿಟ್ಟರಲ್ಲ ಈ ಪಾಲಕರು,
ಇವರು ಎಡವಿದವರೇ..?

ನಡೆಯುತ್ತಿದ್ದ ತಪ್ಪುಗಳ ತಿದ್ದಿ
ನಮ್ಮದಾಗಿಹ ಸಂಸ್ಕೃತಿಯ ಹಾದಿಯ
ತೋರಿಸುವ ಸಲುವಾಗಿ
ಕಾನೂನನ್ನು ಕೈಗೆತ್ತಿಕೊಂಡರಲ್ಲ
ಸಂಘಟನೆಯೊಂದರ ಬಿಸಿರಕ್ತದ ಯುವಕರು.
ಇವರು ಎಡವಿದವರೇ...?

ಸಾಮಾಜಿಕ ಕರ್ತವ್ಯವ ಮರೆತು, ತಾವು ಮಾಡಿದ್ದೇ ಸರಿ,
ಜನರ ಮುಂದೆ ಸತ್ಯವ ತೆರೆದಿಡುವುದೇ ನಮ್ಮ ಗುರಿ,
ಎಂದು ತಮ್ಮ ಆದಾಯ ಏರಿಸಿಕೊಳ್ಳುವ ಸಲುವಾಗಿ
ನಡೆದ ಘಟನೆಯನೇ ಮತ್ತೆ ಮತ್ತೆ ತೋರಿಸಿ
ಮನೆಮಂದಿಗೆಲ್ಲ ಮುಜುಗರವ ತಂದಿತ್ತರಲ್ಲ
ಈ ಮಾಧ್ಯಮದವರು...
ಇವರು ಎಡವಿದವರೇ...?

ಉತ್ತರ ಸಿಗದೇ ತತ್ತರಿಸುತಿದೇ ಈ ಮನ
ಇವರುಗಳಲ್ಲಿ ನಿಜಕೂ ಎಡವಿದವರ್ಯಾರು..??

---ಕೆ.ಗುರುಪ್ರಸಾದ್
 

Saturday 28 July, 2012

ವಿಜಯ ದಿನ



ಕಾರ್ಗಿಲ್ಲೆನುವ
ಪರ್ವತ ತುದಿಯ
ಕೊರೆವ ಚಳಿಯಲ್ಲಿ,
ಹೃದಯದೊಳಗಿನ
ದೇಶಪ್ರೇಮದ ಕಿಚ್ಚನ್ನೇ
ದೇಹಕ್ಕೆ ಬೆಚ್ಚಗಿನ
ಬಟ್ಟೆಯನ್ನಾಗಿಸಿ,
ತಾಯಿ ಭಾರತಿಯ
ಮಾನ ರಕ್ಷಣೆಗಾಗಿ
ಕೆಚ್ಚೆದೆಯ ಮುಂದಿರಿಸಿ,
ನೆರೆಯ ಮತಾಂಧ
ದೇಶದ ಸೈನಿಕರ
ಕೊಚ್ಚಿಕೊಂದು ಹಾಕಿ,
ವಿಜಯಮಾಲೆಯ
ಭಾರತಾಂಬೆಯ
ಕೊರಳಿನ ಅಮೂಲ್ಯ
ಹಾರವನ್ನಾಗಿಸಿದ
ಭಾರತದ ಧೀರ ಯೋದರಿಗೆ
ನನ್ನ ನುಡಿ ನಮನ

ಸಮಯ...













ಪ್ರೇಮಧಾರೆಯ
ನಾ ಹರಿಸುತ್ತಿದ್ದಾಗ,
ನಿನಗಾಗಿ ನನ್ನಲ್ಲಿ
ಸಮಯವಿಲ್ಲ,
ಎಂದು ಮೂದಲಿಸಿ
ಹೋದವಳು,
ನಿಂತು ಕಾಯುತ್ತಿದ್ದಾಳೆ
ಮಸಣವೆನುವ
ಯಮನರಮನೆಯ
ಹೆಬ್ಬಾಗಿಲಿನಲ್ಲಿ,
ಸಮಯದ ಮಾಪಕವ
ಹಿಡಿದು ತನ್ನಯ
ಕೈಯಲ್ಲಿ,
ನನ್ನಿಯನ ಜೊತೆಗೊಂದಿಷ್ಟು
ಸಂತಸದ ಕ್ಷಣಗಳ
ಕೊಡು ಎನುವ
ಈಡೇರದ ಬೇಡಿಕೆಯ
ಮುಂದಿಡುತ್ತಿದ್ದಾಳೆ,
ಕಟು ಹೃದಯಿ
ಆ ಯಮನಲ್ಲಿ.

ಕೋಪ

ಬಿಡುತ್ತಿಲ್ಲ ವರುಣ
ಭುವಿಯೆಡೆಗೆ
ತಂಪು ನೀರ
ಹನಿಗಳ ಬಾಣ,
ಇದೇ ಹೊತ್ತಲ್ಲಿ
ರವಿ ವಿರಮಿಸದೆ
ಬಿಡುತ್ತಿದ್ದಾನೆ
ಭುವಿಯೆಡೆಗೆ ತನ್ನ
ಸುಡುವ ಉರಿಕಿರಣ,
ಬಿಡದೆ ನನ್ನ
ಕಾಡುತಿರುವ ಪ್ರಶ್ನೆ.
ಇಳೆಯ ಮೇಲೆ
ಇವರಿಬ್ಬರಿಗಿರುವ
ಈ ತರದ ಕೋಪಕ್ಕೆ
ಏನಿರಬಹುದು ಕಾರಣ...?

ನೆಲೆ

ಅವಳ ಸುಂದರ
ಕನಸುಗಳಿಗೆ
ಅಲೆಮಾರಿಯಾಗುವ
ಭಯವಿತ್ತಂತೆ
ಈ ಗಾಢ ಕತ್ತಲಿನಲ್ಲಿ,
ನಕ್ಕು ನಾನಂದೆ
ಭಯವ ತೊರೆದು
ಶಾಶ್ವತವಾಗಿ ನೆಲೆಸಿಬಿಡು,
ನನ್ನ ನಿದಿರೆಯಾ
ಭವ್ಯ ಬಂಗಲೆಯಲ್ಲಿ.

Saturday 21 July, 2012

ಕಳ್ಳತನ


















ಚೆಲುವಿನ ಮುಖದಲ್ಲಿ
ಬೆಲೆಬಾಳುವ
ಸುಂದರ ನಗುವಿದ್ದರೂ
ಅದನಲ್ಲೇ ಬಿಡಲು
ಬಯಸಿತೆನ್ನ ಮನ,
ಬದಲಾಗಿ ಹೊಂಚು
ಹಾಕುತಿದೆ ಕದಿಯಲು,
ಇಂತಾ ಅಸಂಖ್ಯ
ನಗುವ ಬಚ್ಚಿಟ್ಟುಕೊಂಡಿರುವ
ಅವಳ ಹೃದಯವೆನುವ
ತಿಜೋರಿಯನ್ನ.

Tuesday 17 July, 2012

ಹೀಗೊಂದು ಕೊಲೆ..


















ನೆತ್ತರು ಚಿಮ್ಮಿರಲಿಲ್ಲ..
ಚೀತ್ಕಾರದ ಸದ್ದೂ ಕೇಳಿಸಿರಲಿಲ್ಲ
ಸುತ್ತಮುತ್ತಲಿನ ಜನಕೆ
ಶವವೂ ಕಾಣಿಸುತ್ತಾ ಇಲ್ಲ
ಆದರೂ ಕೊಲೆಯೊಂದು ನಡೆದಿತ್ತು
ಕೊಲೆಯಾದ ರೀತಿಯೂ ವಿಚಿತ್ರ..
ಯಾವುದೇ ಹರಿತವಾದ
ಆಯುಧಗಳ ಬಳಕೆಯಾಗಿಲ್ಲ,
ಘೋರ ವಿಷಪ್ರಯೋಗವೂ ಆಗಿರಲಿಲ್ಲ
ಆದರೂ ಕೊಲೆಯೊಂದು ನಡೆದಿತ್ತು.
ಕೇಳಿದವರಾರು ನಂಬಲಾರರು
ಈ ರೀತಿ ಆಗುವುದುಂಟೇ.. ಎಂದಾರು..
ಯಾಕೆಂದರೆ ಕೊಲೆಯಾಗಿದ್ದು ನನ್ನ ಆತ್ಮ..
ನಾನು ನನ್ನವಳೆಂದುಕೊಂಡಿದ್ದಾಕೆ ಕೊಲೆಗಾರ್ತಿ
ಪ್ರೀತಿಯ ಬಲೆಯಲ್ಲಿ ಬೀಳಿಸಿ
ಮೋಸವೆನುವ ಮಾರಕಾಯುಧದಿಂದ
ಕರುಣೆ ತೋರದೆಯೇ ಕೊಂದು ಬಿಟ್ಟಳು..
ಈಗ ನನ್ನ ಆತ್ಮಕ್ಕೆ ಚೈತನ್ಯವಿಲ್ಲ
ಅದರ ಮನೆಯಂತಿದ್ದ ನನ್ನ ದೇಹವೇ
ಈಗ ಆ ಸತ್ತ ಆತ್ಮದ ಗೋರಿ..
ಹೀಗೊಂದು ಸಾವಿಗೆ ಅಳುವವರೂ ಯಾರಿಲ್ಲ
ಯಾಕೆಂದರೆ ಈ ಸಾವಿನರಿವು ನನ್ನವರಿಗಿಲ್ಲ..
ಹೇಳಹೊರಟೆನಂದರೂ ಕಾಡುವುವು
ಅವರ ಹಲವು ಪ್ರಶ್ನೆಗಳು.
ಕೊಲೆಯಾದುದೆಲ್ಲಿ..ಸತ್ತಿರುವ ದೇಹವೆಲ್ಲಿ..
ಸತ್ತದ್ದು ಹಾಗಿರಲಿ, ಸೋತು ಹೋದೇನು
ಜನರಿಗೀ ಸತ್ಯವ ಬಿಡಿಸಿ ತಿಳಿ ಹೇಳುವಲ್ಲಿ..
ಹಾಗಾಗಿ ಸುಮ್ಮನಿದ್ದೇನೆ..
ಸತ್ತ ಆತ್ಮದ ಸಾವಿಗೆ ನಾನೊಬ್ಬನೇ
ಅಳುತ್ತಾ, ಜಗದ ದೃಷ್ಟಿಯಲ್ಲಿ ಬದುಕಿದ್ದೇನೆ.

Sunday 15 July, 2012

ಪಶ್ಚಿಮದ ಪ್ರವಾಹ..


ಭರತ ಖಂಡದಲೀಗ ಹೊಸತೊಂದು ಹುಚ್ಚು ಪ್ರವಾಹ
ಪಶ್ಚಿಮದ ಸಂಸ್ಕೃತಿಯನೇ ಅನುಸರಿಸುವ ಹುಚ್ಚು ವ್ಯಾಮೋಹ.
ಯುವಜನತೆಗಂತೂ ಈ ಪ್ರವಾಹದಲೇ ಕೊಚ್ಚಿ ಹೋಗುವಾಸೆ,
ಜಗದ ಮೊದಲ ಭವ್ಯ ಸಂಸ್ಕೃತಿಯ ನುಚ್ಚುನೂರುಮಾಡುವಾಸೆ.

ಉಡುಗೆಯೂ ಅವರದೇ... ಅಡುಗೆಯೂ ಅವರದೇ...
ಆಡುವ ನುಡಿಯಂತೂ ಅವರದೇ ಆಗಿ ಹೋಗಿದೆ.
ಕಟ್ಟುಪಾಡಿನ ಆಚರಣೆಗಳೆಲ್ಲವೂ ಮುಢನಂಬಿಕೆಗಳಂತೆ,
ಹುಚ್ಚು ಮಾತನಾಡುತಿಹರು, ಆಚರಣೆಯ ತಿರುಳನರಿಯದೆ.

ಶತಮಾನದ ಬಿರುಗಾಳಿಗುರುಳದೇ ಇದು ನಿಂತಿರುವುದು
ನಮ್ಮತನದ ತಾಯಿಬೇರು ಬೀಡು ಬಿಟ್ಟಿರುವ ಆಳದಿಂದ.
ಅದನೇ ಕಿತ್ತೊಗೆದು ಬಿಡುವ ಹುಚ್ಚು ಕೆಲಸವ ಮಾಡುತಿಹರು
ತಪ್ಪು ಹಾದಿಯ ತುಳಿದಿರುವ ಜನ, ತಮ್ಮ ಅಜ್ಞಾನದ ಪರಮಾವಧಿಯಿಂದ

ಆಗಸದ ಸೂರ್ಯನನು ನೋಡಿ ಎಚ್ಚರಗೊಳ್ಳಿರಿ ಭಾರತೀಯರೇ..
ಪೂರ್ವದ ಹಾದಿಯಲಿರಲು ಮಾತ್ರ ಅವನ ಬೆಳಕು ಪ್ರಖರ.
ಪಶ್ಚಿಮದ ಹಾದಿಯನು ತುಳಿದಂತೆಲ್ಲಾ ಮಂದನಾಗುವನವನು
ಮತ್ತೂ ಮುಂದುವರಿದರೆ ಮುಳುಗಿಸಿ ಬಿಡುವುದವನನು ವಿನಾಶವೆಂಬ ಸಾಗರ.

ಸವಾಲು


----------
ಸದಾನಂದ ಗೌಡರ
ಒಂದೇ ಒಂದು ಸವಾಲು,
ಯಡ್ಡಿಯ ಬಾಯಿ ಮುಚ್ಚಿಸಲು;
ಕಿತ್ತೊಗೆದರೇನಂತೆ ನನ್ನ ಅಧಿಕಾರವ,
ತಾಕತ್ತಿದೆಯೇ..ನಿಮಗೆ
ನನ್ನ ನಗುವನಿಲ್ಲವಾಗಿಸಲು.

ಅಮಲು



ಇರುಳ ಸಂಚಿಗೆ
ಬಲಿಯಾಗಿ ನೇಸರನು
ಅಸ್ತಂಗತನಾಗಿರಲು,
ಜಗದ ಜನರ
ತಲೆಗೇರುತಿದೆ
ನಿದಿರೆಯೆಂಬ ಅಮಲು.

..

ದೇವ ಕಣ



ವಿಜ್ನಾನಿಗಳಿಗೆ
"ದೇವಕಣ"
ಸಿಕ್ಕಿ ಬಿಟ್ಟಿತಂತೆ,
ಅವರನ್ನುವಂತೆ
ಇದೇ ಸೃಷ್ಟಿಗೆ
ಮುಲ ಕಾರಣ.
ಅವರು ಅಜ್ನಾನಿಗಳೋ
ನಾನು ಅಜ್ನಾನಿಯೋ
ನನಗೇ ಗೊತ್ತಿಲ್ಲ
ನನಗನ್ನಿಸಿದಂತೆ
ಈ ಜಗದ ಅಣು ಅಣುವಿನಲ್ಲೂ
ಇದೆ ಈ ದೇವಕಣ

Tuesday 3 July, 2012

ವರ್ಷಧಾರೆ..

ಆಗಸದಿ ಕಣ್ಣಾಡಿಸಿದರೆ
ಸೂರ್ಯನ ಪತ್ತೆ ಇಲ್ಲ.
ಕಂಡದ್ದು ಬರಿಯ ಕಾರ್ಮುಗಿಲು.
ನೋಡುತ್ತಿದ್ದಂತೆಯೇ
ಮುತ್ತಿಕ್ಕತೊಡಗಿತೆನ್ನ ಮೊಗವ
ನೀರ ಸಣ್ಣ ಸಣ್ಣ ಹನಿಗಳು,
ತಂಪಿನನುಭವವ ಕೊಟ್ಟು
ಕಣ್ಣ ಮುಚ್ಚುವಂತೆ ಮಾಡಿತ್ತು.
ಒಂದರೊಳಗೊಂದು
ಬೆಸೆದುಕೊಂಡಿದ್ದ ಕರಗಳನು
ಬಿಚ್ಚುವಂತೆ ಮಾಡಿತ್ತು.
ಮನವು ಆನಂದದಲಿ ಅದೆಲ್ಲಿ
ತೇಲಿ ಹೋಗಿತ್ತೋ ನಾನರಿಯೆ.
ನನ್ನ ತನುವಿನ ಮೇಲೆ
ಸುರಿದ ಅಮೃತದ ವರ್ಷಧಾರೆಯು
ರವಿಯಿರದ ಬಾನನೂ
ಮೆಚ್ಚುವಂತೆ ಮಾಡಿತ್ತು.

Saturday 30 June, 2012

ಶಬರಿ..

ಹೋಗಿ ಬಾ ಗೆಳೆಯಾ
ಎನ್ನುತ್ತಾ ನುಡಿದಳಾಕೆ
ನೀನೆ ನನ್ನ ಶ್ರೀ ರಾಮ
ನಿನಾಗಾಗಿ ಕಾಯುವ
ನಾನೇ ಕಲಿಯುಗದ ಶಬರಿ;
ಕಷ್ಟಪಟ್ಟು ದುಡಿದು
ಅವಳಿಗಾಗಿ ಗುಲಾಬಿಯ
ಕೊಂಡು ತರುವಷ್ಟರಲ್ಲಿ,
ಅಪ್ಪ ಕೊಡಿಸಿದ ಕಾರಲ್ಲಿ
ಬಂದವನಲ್ಲೇ ರಾಮನನ್ನು
ಕಂಡು ಆದಳಾಕೆ ಪರಾರಿ.

ಪ್ರೇಯಸಿ.



ಸಂಜೆಯಾದೊಡನೆಯೇ
ಏಕಾಂತದ ಮತ್ತಿನಲಿ
ನಾನಿದ್ದಾಗ ಅದೇನೋ
ಹೇಳಲಾಗದ ನೋವು,
ಮನದಲ್ಲಿ ಕನಸಾಗಿ ಮುಡಿ
ಬಂದಾಗ ನನ್ನ ಪ್ರೇಯಸಿ;
ಕನಸಲ್ಲಿ ಬಂದರೂ
ನೆತ್ತರ ಹೀರುವಂತಾ
ನೋವ ನನಗೇಕೆ ಕೊಡುವೆ,
ಎಂದು ಹೇಳುವಷ್ಟರಲ್ಲಿ
ಕಣ್ಣಿಗೆ ಕಾಣಿಸಿತು
ನನ್ನ ಕಾಲಲ್ಲಿ ಕುಳಿತು
ನಿಜವಾಗಿಯೇ ರಕ್ತ ಹೀರುತ್ತಿದ್ದ
ಒಂದು ದೊಡ್ಡ ನುಸಿ.

Wednesday 27 June, 2012

ನಿಲ್ದಾಣ.

ನನ್ನೆಡೆಗೆ
ಹೆಜ್ಜೆಗಳನ್ನಿಟ್ಟಿದ್ದರೂ,
ನನ್ನ ಗುರಿಯಾಗಿಸದೆ
ಹೊರಟಿತ್ತು
ಅವಳ ಪಯಣ;
ನಡಿಗೆಯ ದಣಿವ
ನಿವಾರಿಸುವ ಸಲುವಾಗಿ
ಮಾಡಿಬಿಟ್ಟಳೆನ್ನ
ಹಾದಿಯ ನಡುವಿನ
ಸಣ್ಣ ನಿಲ್ದಾಣ.

ನಿದಿರೆ

ಸೂರ್ಯ ಕಡಲಲ್ಲಿ
ಮುಳುಗಿ ಭುವಿಯ
ಸುತ್ತಲೂ ಕತ್ತಲೆ
ಅವ ಬಂದು
ಜಗವ ಬೆಳಗುವವರೆಗೆ
ನಾ ಸ್ವಲ್ಪ ಮಲಗಲೇ...

ಅಡ್ಮಿನ್ನು...



ನೀವು ಅದೇನೇ
ಪೋಸ್ಟ್ ಮಾಡಿದರೂ,
ತಪ್ಪದೇ ಓದಿ
ಲೈಕನ್ನೊತ್ತಿ
ಯಾರು ಮಾಡುತ್ತಾರೋ
ಒಳ್ಳೆಯ ಕಮೆಂಟುಗಳನ್ನು;
ಸರಿಯಾಗಿ
ಗುರುತಿಸಿಕೊಳ್ಳಿ...
ಹೆಚ್ಚಾಗಿ ಅವರೇ
ಆಗಿರುತ್ತಾರೆ
ಆ ಗುಂಪಿನ ಅಡ್ಮಿನ್ನು

Sunday 17 June, 2012

ಅಪ್ಪ..

ದೊಡ್ಡ ದೊಡ್ಡ 
ಪದಗಳ 
ಕಾವ್ಯಧಾರೆಗೂ
ನಿಲುಕದಂತವರು 
ನನ್ನಪ್ಪ..
ಹಾಗಾಗಿ ಅವರ
ಕುರಿತು ನಾ
ಬರೆಯದಿರುವುದು
ನನ್ನ ತಪ್ಪಾ..?

ರವಿಯಾಟ

ನಿಶೆಯ ನಶೆ ಇಳಿದು
ತನುವಿನಾ ಜಡ ತೆಗೆದು
ಹೊಳೆವ ರವಿಯ 
ನೋಡ ಬಯಸಿದೆ
ತವಕದಿಂದಲೇ,
ಅವನೋ ಆಗಸದ
ತುಂಬ ತುಂಬಿದ್ದ
ಮೋಡಗಳ 
ಮರೆಗೋಡುತಲಿ
ಆಡುತ್ತಿದ್ದಾನೆ 
ನನ್ನೊಡನೆ
ಕಣ್ಣಾಮುಚ್ಚಾಲೆ.

ಅಂದು-ಇಂದು

ಅಂದೆಲ್ಲಾ
ತಂದೆ ತಾಯಿಯರಿಗೆ
ತನ್ನ ಮಗ
ಹುಡುಗಿಯರೊಡನೆ
ಅತಿಯಾಗಿ
ಮಾತನಾಡಿದಾಗ
ಉಂಟಾಗುತ್ತಿತ್ತು
ಏನೋ ಅನುಮಾನ,
ಇಂದು ಹಾಗಿಲ್ಲ
ತನ್ನ ಮಗ
ಮಾತನಾಡುತ್ತಿದ್ದುದು
ಹುಡುಗಿಯೊಂದಿಗೇ..
ಎಂದು ಗೊತ್ತಾದಾಗ
ಇಬ್ಬರಿಗೂ ಏನೋ ಒಂದು
ರೀತಿಯ ಸಮಾಧಾನ.

Friday 15 June, 2012

ಬಂಧನ


ಮೋಡ ಬೀಸಿದ
ಮಳೆಹನಿಯ
ಬಲೆಗೆ ನಾನೀಗ
ಸಿಲುಕಿರುವೆ,
ಭುವಿಯಲ್ಲಿ
ಈಜಾಡಲಾಗದೇ
ಒಳಗೊಳಗೇ
ಒದ್ದಾಡುತ್ತಿರುವೆ.

ತಪ್ಪು ಯಾರದ್ದು...?


ಕಡಿದಾದ ತಿರುವಿನ
ಹಾದಿಯಲ್ಲಿ ನನ್ನ
ಪ್ರಯಾಣ ಸಾಗಿತ್ತು,
ಚಾಲಕನಿಗೋ ವೇಗದಲಿ
ವಾಹನ ಓಡಿಸೋ
ದೊಡ್ಡ ಚಟವಿತ್ತು,
ಪ್ರಯಾಣದ ನಡುವಲ್ಲಿ
ನನ್ನ ತನುವು ನಿದಿರೆಗೆ
ಶರಣು ಹೋಗಿತ್ತು.
ಒಮ್ಮೆಲೇ ತಿರುವು ಬಂದಾಗ
ಬಲವಿಲ್ಲದೆ ನನ್ನ ಮೈ
ಬದಿಯಲಿದ್ದ ಹುಡುಗಿಗೆ ತಾಗಿತ್ತು,
ಫಟಾರನೆ ಬಿದ್ದ ಏಟಿಗೆ
ಗಾಡವಾದ ನಿದಿರೆಯು
ಮತ್ತೆ ಬಾರದಂತೆ ಓಡಿ ಹೋಗಿತ್ತು,
ತಪ್ಪು ಹಾಳಾದ ತಿರುವಿನದಾಗಿದ್ದರೂ
ವೇಗದ ಚಾಲನೆಯದಾಗಿದ್ದರೂ
ಪೆಟ್ಟು ಮಾತ್ರ ನನಗೇಕೆ ಬಿತ್ತು..??

Friday 8 June, 2012

ಗೊಂದಲ

ಗುಡುಗು,ಸಿಡಿಲು
ಬಂದದ್ದು ನನ್ನಾಕೆಯ
ನೆನಪಾದಗಲೋ..?
ಅಥವಾ..
ನನ್ನಾಕೆಯ ನೆನಪಾದಾಗ
ಗುಡುಗು,ಸಿಡಿಲು
ಬಂದದ್ದೋ...?
ಎನುವ ಸಣ್ಣದೊಂದು
ಗೊಂದಲವಿದೆ.
ನನ್ನ ಮನಸ್ಸಂತು
ಇನ್ನೂ ಈ ಉತ್ತರದ
ಹುಡುಕಾಟದಲ್ಲಿದೆ.

ದುಬಾರಿ ಟಾಯ್ಲೆಟ್ಟು

ಯೋಜನಾ ಆಯೋಗದ
ಟಾಯ್ಲೆಟ್ಟು ಕಟ್ಟಿಸಲು
ಆಯಿತಂತೆ ಖರ್ಚು 35 ಲಕ್ಷ;
ಹಸಿವು ಅತಿಯಾದವರು ಇವರೆಲ್ಲಾ 
ಕಕ್ಕಸಿನಲ್ಲೂ ಮನೆಯಲ್ಲೂ
ಉಂಡರಲ್ಲ ಜೇಬು ತುಂಬಾ ಭಕ್ಷ್ಯ.

Tuesday 5 June, 2012

ಕೊಡುಗೆ ಏನು...?



ಇರಲು ನೆಲೆಯ ಕೊಟ್ಟಳು..
ಉಸಿರಾಡಲು ಗಾಳಿಯ ಕೊಟ್ಟಳು..
ಹಸಿವಾದೊಡನೆ ಉಣುವುದಕಾಗಿ
ಬಗೆಬೆಗೆಯ ಫಲಗಳ ಕೈಗಿತ್ತಳು..
ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಸುಖದ ಸೊಪ್ಪತ್ತಿಗೆಯ ಲಾಲಸೆಗೆ
ಮೈಮರೆತು ಮಲಿನಗೊಳಿಸಿದೆಯಾ...
ಸಕಲ ಜೀವಿಗಳಿಗೂ ಸ್ವರ್ಗವಾಗಿದ್ದ
ಭುವಿಯ ನರಕವಾಗಿಸಿದೆಯಾ...
ಇದೇ ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಹಸುರು ತುಂಬಿದ ಅರಮನೆಯ ಕೆಡುಹಿ
ಸಿಮೆಂಟು ಕಟ್ಟಡದ ಕಾನನವ ಬೆಳೆಸಿದೆಯಾ
ಮುಗಿಲಿಗೆ ವಿಷಗಾಳಿಯ ಚಪ್ಪರವ ಹಾಕಿಸಿ
ಇಂಪಿನ ಸದ್ದನಡಗಿಸಿ ಕರ್ಕಶದ ರಾಗ ಹಾಡಿದೆಯಾ
ಇದೇ ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಕ್ಷಮಯಾ ಧರಿತ್ರಿಯು ಕ್ಷಮಿಸದಂತಾ ತಪ್ಪನೆಸಗಬೇಡ,
ಮುನಿಯುವ ಮುನ್ನವೇ ಎಚ್ಚೆತ್ತುಕೋ..
ನಿನ್ನ ಕೈಯಾರೆ ನಿನ್ನವನತಿಯ ಅಹ್ವಾನಿಸಬೇಡ
ತಪ್ಪ ತಿದ್ದುವ ಕಾರ್ಯವನು ಕೈಗೆತ್ತಿಕೋ..
ಇಳೆಯ ಕಳೆಯ ಕೆಡೆಸದಿರೋ ಕೊಡುಗೆಯ ಕೊಡಲಾದೀತೇ..
ನಿನ್ನ ಹೊತ್ತವಳಿಗೆ...?

ಬನ್ನಿ ನಮ್ಮ ಪರಿಸರವ ಉಳಿಸಿ ಬೆಳೆಸೋಣ...

Monday 4 June, 2012

ಮೊದಲ ಮಳೆ...


ಸುರಿಯುತಿದೆ ಮಳೆ ಎಡೆಬಿಡದೆ
ಮೋಡದಾ ಮನೆಯ ತೊರೆಯುತಿದೆ

ಬಿಸಿಲಿಗೊಣಗಿ ಬಳಲಿ ಹೋಗಿದ್ದ
ಧರೆಯ ಸಂತೈಸಲು ಬಂದಂತಿದೆ
ಕಾದ ಮಣ್ಣಿಂದ ಸುವಾಸನೆಯೊಂದ
ಹೊರಗೆಳೆದು ಎಲ್ಲೆಡೆ ಪಸರಿಸುತಿದೆ

ಅಳಿಸಿಹೋಗಿದ್ದ ಹಸಿರೆನುವ ಬಣ್ಣವ
ಭುವಿಯ ಗೋಡೆಯ ಮೇಲೆ ಬಳಿಯುತಿದೆ
ಒಣಗಿ ಸಾವನಪ್ಪಿದಂತಿದ್ದ ಬೀಜಗಳಿಗೆ
ಮೊಳಕೆಯೊಡೆದು ಬದುಕುವ ಕಲೆಯ ಕಲಿಸುತಿದೆ

ಉರಿವ ಸೂರ್ಯನನೆ ಮರೆಮಾಚಿ
ಭುವಿಗೆ ತಂಪಿನ ನೆರಳ ನೀಡುತಿದೆ
ಇಳೆಗೆ ಬಂದಿದ್ದ ಸುಡುವ ಜ್ವರಕೆ
ತಂಪಿನೌಷದಿಯ ನೀಡುತಿದೆ.

ಜಗದ ಜನರ ದಾಹವನು ತೀರಿಸಲು
ಅಮೃತದ ಬಿಂದುವಾಗಿ ಸುರಿಯುತಿದೆ
ಭುವಿಗೆ ಮೊದಲ ಮಳೆ ಬರುತಲಿದೆ
ಸಕಲ ಜೀವಿಗಳಿಗೂ ಮುದವ ನೀಡುತಿದೆ.

Sunday 3 June, 2012

ಬಾರೆಯಾ ಮಳೆಹನಿಯೇ...


ಸತಾಯಿಸುತಿರುವೆ ಏಕೆ ಕಾರ್ಮುಗಿಲೇ...
ಮಳೆಹನಿಯ ಒಂದೊಂದಾಗಿ ಸುರಿಸಬಾರದೇ...
ಸೂರ್ಯನ ಕಡುಕೋಪಕ್ಕೆ, ಉರಿ ಕಿರಣದ ತಾಪಕ್ಕೆ
ಒಳಗಾಗಿ ಬಿರುಕು ಬಿಟ್ಟಿದೆ ಎನ್ನೊಡಲು,
ಔಷಧದ ರೂಪದಲಿ ಹರಿಯಬಿಡಬಾರದೆ ನಿನ್ನೊಡಲ ಹನಿಯ,
ಬಿರುಕೆನುವ ಈ ಗಾಯದ ನೋವ ನಿವಾರಿಸಲು

ಈಗ ನಿನ್ನ ಗರ್ಭದೊಳಗಿದ್ದರೂ ಅವು ನಿನ್ನ ಸ್ವಂತ ಮಕ್ಕಳಲ್ಲ
ಆ ರವಿಯ ತೀಕ್ಷ್ಣ ಕಿರಣಗಳ ಸಹಾಯದಿಂದ
ನನ್ನ ಒಡಲಿಂದಲೇ ಸೆಳೆದೊಯ್ದ ಕೂಸು ತಾನೆ ಅವುಗಳು,
ಮತ್ತೆ ನನ್ನೆಡೆಗೆ ಕಳುಹಿಸಿ ಕೊಡುವೆಯೆಂಬ
ನಂಬಿಕೆಯಲಿ ಬಿಟ್ಟು ಕೊಟ್ಟಿದ್ದೆ ಆ ನೀರ ಹನಿಗಳ
ಈಗಲಾದರೂ ಮನಸು ಮಾಡು, ನನಗವುಗಳ ಹಿಂತಿರುಗಿಸಲು,

ನಾ ಹೆತ್ತ ಮನುಜನಾ ಹಾಹಾಕಾರದ ಕೂಗು ಕೇಳಿಸದಾಯಿತೇ..
ಪ್ರಾಣದ ಉಳಿವಿಗಾಗಿ ಚಡಪಡಿಸುತಿರುವುದು ಕಾಣದಾಯಿತೇ..
ಕಂಡರೂ ಕಾಣದಂತೆ ಗಾಳಿಯ ಜೊತೆ ಪರಾರಿಯಾಗಿ ಬಿಡಬೇಡ,
ಮೈಕೊಡವಿ ಮಳೆಹನಿಯ ನನ್ನೆಡೆಗೆ ಸುರಿಸಿಬಿಡು...
ಕಾರಣವೇ ನೀನಾಗಿಬಿಡು, ನನ್ನಲಿಹ ಜೀವ ಸಂಕುಲದ ಪ್ರಾಣವುಳಿಯಲು,
ಮತ್ತೆ ನಾ ಹಸಿರೆನುವ ನಗೆಯ ಬೀರಿ, ಜಗಕೆ ಚೆಲುವ ಪಸರಿಸಲು.

ಕನಸು-ನನಸು


ಕತ್ತಲಲಿ,
ಮುಚ್ಚಿದ
ಕಂಗಳಲಿ,
ಕಂಡಿದ್ದ
ಕನಸುಗಳನೆಲ್ಲಾ
ನೆರವೇರಿಸಲು;
ಬೆಳಕಿನ ತೇರನೇರಿ
ಬಂದ ರವಿ
ಬಾನಿನಲಿ,
ಕನಸಗಳ
ನನಸಾಗಿಸುವ
ಹಾದಿಯನು
ತೋರಿಸಲು.

Wednesday 30 May, 2012

ವಿಳಂಬ..


ಅವಳ ಕೊರಳಿಗೆ
ಪ್ರೇಮ ನಿವೇದನೆ
ಎನುವ ಹಾರವನು
ಹಾಕುವ ಸಲುವಾಗಿ
ಅತಿ ಸುಂದರ
ಶಬ್ದಗಳ ಸುಮಗಳಿಗಾಗಿ
ಹುಡುಕಾಡುತ್ತಿದ್ದೆ,
ಆ ಕಲ್ಪನೆಯ ಹಾರ
ಸಿದ್ಧವಾಗುವಷ್ಟರಲ್ಲಿ
ಯಾರೋ ಒಬ್ಬಾತ
ಬೆಲೆಬಾಳುವ ತಾಳಿಯ
ಅವಳ ಕುತ್ತಿಗೆಗೆ
ಕಟ್ಟಿಬಿಟ್ಟಿದ್ದ....

Saturday 26 May, 2012

ಕವಿತೆ....




ಕಲ್ಪನೆಯ
ತತ್ತಿಗೆ
ಏಕಾಂತದ
ಕಾವು
ಸಿಕ್ಕಾಗ
ಬಿರಿದು
ಹೊರಬಂದ
ಪುಟ್ಟ ಮರಿ
ಈ ಕವಿತೆ..

Tuesday 22 May, 2012

ಜಪ


ಈಗೆನ್ನ
ಮನಸು
ಮಾಡುತಿದೆ
ನಿದಿರೆಯಾ
ಜಪ,
ಸಾಧನೆಯ
ಕನಸ
ಕಾಣುವುದು
ಅದರ
ಒಂದು ನೆಪ.

ನಿರಾಸೆ..


ಆಗಸದ
ರಣಾಂಗಣದಲಿ
ಮಳೆಹನಿಯ
ಶರವ ಬಿಡಲು
ಸಜ್ಜಾಗಿದ್ದಂತೆ
ಕಂಡರೂ..
ಕಾರ್ಮುಗಿಲೆನುವ
ವೀರ ಯೋಧರ
ಪಡೆ ನಡೆಸಿದ್ದು
ಬರಿಯ
ಪಥಸಂಚಲನ...

ತಪ್ಪು


ಸಾವ ಕಾಣತೊಡಗಿತು ಕತ್ತಲು
ಬೆಂಬಿಡದೆ ಕಾಡಿದ ಮುಪ್ಪಿಂದ,
ಜಾರತೊಡಗಿತು ಇಬ್ಬನಿಯ ಮುತ್ತುಗಳು
ಗಿಡ ಮರಗಳೆಲೆಯ ಚಿಪ್ಪಿಂದ;
ರವಿಯೆನುವ ಹೊಳೆವ ಕೂಸಿನ ಜನನವಾಯ್ತು
ಭುವಿಯ ಕಡಲೆನುವ ಗರ್ಭದಿಂದ.
ಸಂಯಮವ ಕಳೆದುಕೊಂಡ ಭೂದೇವಿ,
ಮತ್ತು ಇರುಳ ರಾಜನ ಒಂದು ತಪ್ಪಿಂದ.

Sunday 20 May, 2012

ಲಕ್ಷಣ..


ನಗುವಿರದ ನನ್ನೀ
ಮೊಗದ ಭುವಿಗೆ
ಕಣ್ಣೀರಿನ
ಮಳೆ ಬರುವ
ಸಣ್ಣ ಲಕ್ಷಣ...
ಬಹುಶಃ
ಮನದಾಗಸದಲಿ
ಕವಿದ ಅವಳ
ನೆನಪೆನುವ
ಮೋಡವೇ
ಇದಕೆ ಕಾರಣ..


Monday 14 May, 2012

ನೆರಳು..



ಬೆಳಗುವಾ
ಜ್ಯೋತಿಯಂತಿದ್ದ
ಅವಳ ಬಳಿ
ಪ್ರೀತಿಸುವೆಯಾ
ಎಂದುಲಿಯಿತು
ನನ್ನ ಕೊರಳು..
ಅದಕವಳಂದಳು
ಸುಟ್ಟು ಬಿಡುವೆ
ಬಳಿ ಬಂದರೆ
ನೀನಿಲ್ಲಿಂದ ತೆರಳು..
ಅವಳೆನುವ ಬೆಳಕಿಗೆ
ಬೆನ್ನುಹಾಕಿ
ಹೊರಟಿರುವ
ನನ್ನ ಮುಂದೆ
ಇರುವುದೀಗ,
ನನ್ನೊಳಗಿರುವ
ಅವಳ ನೆನಪೆನುವ
ಬೃಹದಾಕಾರದ ನೆರಳು..



Thursday 10 May, 2012

ಮಾತೆ.. (ಚಿತ್ರಕ್ಕಾಗಿ ಬರೆದ ಸಾಲುಗಳು)



ಹೆಣ್ಣಿನ ರೂಪವ ಮರದಲ್ಲಿ ಕಂಡೊಡನೆ
ನನಗನ್ನಿಸಿತು ಅದೂ ತಾಯಿಯೆಂದು,
ತನಗಾಗುವ ನೋವ ಮರೆತು,
ಕಲ್ಲೆಸೆದವರಿಗೆ ಹಣ್ಣ ಕೊಡುವುದು,
ತನ್ನಾಶ್ರಯಕೆ ಬಳಲಿ ಬಂದವರಿಗೆ
ತಂಪಾದ ನೆರಳಕೊಡುವುದು,
ವಾತಾವರಣದಲಿಹ ವಿಷವನೆಲ್ಲಾ ನುಂಗಿ
ಜಗಕೆ ಪ್ರಾಣವಾಯುವ ಕೊಡುವುದು,
ಮರದಲಿರುವ ಪ್ರತಿಯೊಂದು ಗುಣಗಳೂ
ತಾಯಿಯನು ತಾನೆ ಹೋಲುವುದು...

ಕೈಸೆರೆ


ಪ್ರೀತಿಯ ದೊಡ್ಡ ಅಲೆಯಾಗಿ
ನನ್ನ ಬಳಿ ಹೊರಟಾಗ
ಅವಳೊಂದು ಕಡಲಿನ ತೆರೆ,
ಆದರೇಕೋ ನನ್ನ ಮುಟ್ಟುವ
ಕ್ಷಣದಲ್ಲಿ ಆಗುವಳಾಕೆ
ಬರಿಯ ಕನಸಿನ ನೊರೆ,
ಮತ್ತೆ ಮತ್ತೆ ನನ್ನ ಬಳಿ
ಬರುವಂತೆ ಕಂಡರೂ
ಪ್ರತಿ ಸಾರಿಯೂ ನಾನಾಗುವೆ
ನಿರಾಸೆ ಮತ್ತು ದುಃಖದ ಕೈಸೆರೆ

Saturday 5 May, 2012

ಭ್ರಮೆ


ಅಬ್ಬಾ ತಡೆಯಲಾಗುತ್ತಿಲ್ಲ
ಈ ಎದೆಯೊಳಗಿನ ಉರಿ
ಎನುವ ಮಾತ ಕೇಳಿಸಿಕೊಂಡ
ನನ್ನ ಮಾಜಿ ಪ್ರೇಯಸಿ
ಅದು ತನ್ನಿಂದಾಗಿ ಎಂದುಕೊಂಡು
ಮುಖದಲ್ಲಿ ತೋರಿಸಿಯೇ ಬಿಟ್ಟಳು
ಒಂದು ಅಹಂಕಾರದ ನಗು;
ಈ ಉರಿಯ ಹಿಂದಿರುವ ಕಾರಣ
ಅವಳಿಗೇನು ಗೊತ್ತು,
ಗೆಳೆಯನ ಮದುವೆಯಲ್ಲಿ
ಗಟ್ಟಿಯಾಗಿ ಉಂಡ ಕಾರಣ
ನನ್ನನ್ನು ಕಾಡುತ್ತಿತ್ತು
ಹಾಳಾದ ಹುಳಿತೇಗು..

ಸರಿಸಮ


ಘಜ್ನಿ ಎಂಬ ಯವನ ದೊರೆ
ಸೋಮನಾಥ ದೇಗುಲವ
ಹದಿನೇಳು ಬಾರಿ
ಮಾಡಿದನಂತೆ ಲೂಟಿ;
ಪ್ರತಿಕ್ಷಣವೂ ನನ್ನ ಹೃದಯ
ದೇಗುಲದಿಂದ ನೆಮ್ಮದಿಯ
ಲೂಟಿ ಮಾಡುತ್ತಿರುವ ಅವಳಿಗೆ,
ಇವ ಆದಾನೇ ಸರಿಸಾಟಿ..??

ಪ್ರಶ್ನೆ..



ಕಡಲ ತೀರದ
ಮರಳ ರಾಶಿಯಲಿ
ಕುಳಿತು ನಿನ್ನನೇ
ನೋಡುತಲಿದ್ದೆ...
ಬಾನಿನಲಿ ನಿನ್ನ
ರಂಗಿನೆರಚಾಟವ 
ನನ್ನೀ ಕಂಗಳಲಿ 
ಸೆರೆಹಿಡಿಯುತಲಿದ್ದೆ
ಇಷ್ಟೊಂದು ಬಗೆಯ
ಬಣ್ಣಗಳ ನೀ ಹೇಗೆ
ಸೃಷ್ಠಿಸುವೆ ಎಂದು
ಮನವ ಕಾಡುತ್ತಿದ್ದ
ಪ್ರಶ್ನೆಯ ಕೇಳುವವನಿದ್ದೆ,
ಅಷ್ಟರಲೇ ಮುನಿಸಿಕೊಂಡು
ಕೆಂಪು ಕೆಂಪಾಗಿ
ನೀನೇಕೆ ಮುಳುಗಿ 
ಮರೆಯಾಗಿ ಹೋದೆ..?

Tuesday 1 May, 2012

ಬೆಳಗಾಗುತಿದೆ




ಆಗಸದ ಚೆಲುವನೆಲ್ಲಾ
ನುಂಗಿಹಾಕಿದ್ದ ಕತ್ತಲಿನ
ಕಪ್ಪಗಿನ ಬಣ್ಣವ
ರವಿಯ ಬೆಳಕಿನ ಕಿರಣವು
ಮೆಲ್ಲನೆ ಅಳಿಸಿ ಹಾಕುತಿದೆ...
ಇರುಳಿನ ಭೀಕರತೆಗೆ ಹೆದರಿ
ಮೌನದ ನೀರವತೆಯಲ್ಲಿ
ಕಳೆದು ಹೋಗಿದ್ದ
ಶಬ್ದಗಳನೆಲ್ಲಾ ಕರೆತರುವ
ಸಲುವಾಗಿ ಹಕ್ಕಿಯು ಹಾಡುತಿದೆ...
ಕತ್ತಲಿನ ನೆಪವೊಡ್ಡಿ
ಆಲಸ್ಯಕ್ಕೆ ಮೊರೆ ಹೋಗಿ
ನಿದಿರೆಯಲಿ ಮುಳುಗಿಹೋಗಿದ್ದ
ಜೀವಿಗಳಿಗೆಲ್ಲ ಎಚ್ಚರವಾಗುತಿದೆ..
ಮುಂಜಾನೆಯಲಿ ಬೇಗನೆ ಎದ್ದು
ಜಗವ ಬೆಳಗೋ ಕಾಯಕವ
ಶುರುಮಾಡಿದ ನೇಸರನ ಕಂಡು
ಮನುಜನಿಗೆ ಮೆಲ್ಲನೆ
ತನ್ನ ಕಾಯಕದ ನೆನಪಾಗುತಿದೆ..
ಭುವಿಗೆ ಬೆಳಗಾಗುತಿದೆ...






ರವಿವಾರ


ತನ್ನದೇ ದಿನ ಎಂದು
ಹೆಚ್ಚಿನ ಸಡಗರವಿಲ್ಲ,
ಉಳಿದ ದಿನಗಳಂತೆಯೇ
ಬೆಳಕಿನೊಡೆಯ ಬಂದನಲ್ಲ,
ಆದರೆ ಭುವಿಯ ಮೇಲಿನ
ಜನರಿಗೆ ಹಾಗಲ್ಲ...
ರವಿವಾರವೆಂದರೇನೋ ಖುಷಿ,
ದುಡಿತಕ್ಕೆ ರಜೆ ಇರೋ ನೆಪದಲ್ಲಿ
ತಡವಾಗಿ ಏಳಬಹುದಲ್ಲ...

ಅಸಾಧ್ಯ


ಕಣ್ಣಿನ ರೆಪ್ಪೆಯೆನುವ
ಕದವ ಗಟ್ಟಿಯಾಗಿ
ಮುಚ್ಚಿಕೊಂಡಿದ್ದೆನಲ್ಲ...
ಮನದೊಳಗಿನ
ನೆನಪಿನ ಬಿರುಗಾಳಿಗೆ
ತೆರೆಯದಿರಲೆಂದು
ಕಣ್ಣಿನ ಸುತ್ತ ಕಪ್ಪಗಿನ
ಬಟ್ಟೆಯ ಸುತ್ತಿಕೊಂಡಿದ್ದೆನಲ್ಲ...
ಅಷ್ಟಾಗಿಯು
ಮನಸಿಗೆ ಸಮಾಧಾನವಿಲ್ಲದೆ
ತನುವನಾವರಿಸುವಂತೆ
ದಪ್ಪಗಿನ ಕಂಬಳಿಯ
ಹೊದ್ದುಕೊಂಡಿದ್ದೆನಲ್ಲ..
ಇಷ್ಟೆಲ್ಲಾ ಅಡೆತಡೆಗಳಿದ್ದರೂ
ಅವಳ ಕನಸುಗಳನ್ನು
ತಡೆಹಿಡಿಯೋಕೆ ಮಾತ್ರ
ನನ್ನಿಂದ ಸಾಧ್ಯವಾಗಲೇ ಇಲ್ಲ...

ಸವಾಲು


ಕಾರ್ಮುಗಿಲುಗಳೊಂದಾಗಿ
ಸೂರ್ಯನನೆ ಮರೆಮಾಚಿರಲು
ಜಗವನಾವರಿಸಿತು
ರವಿಯಿರದ ಸಮಯದಂತಾ ಕತ್ತಲು,
ಮತ್ತೆ ತಮ್ಮೊಳಗೆ ತಾವೆ
ಕಚ್ಚಾಡಿ, ಸಿಡಿಲ ಸಿಡಿಸಲು
ಭುವಿಯನಾವರಿಸಿತು
ರವಿಯಿರುವ ಸಮಯದಂತಾ ಹೊನಲು,
ಅಬ್ಬಾ..! ನೀರಹನಿಗಳಿಂದಾದ
ಈ ಕಪ್ಪಗಿನ ಮೋಡಗಳು
ಭುವಿಯ ಬೆಳಗೋ ಭಾಸ್ಕರನಿಗೆ
ಹಾಕುತಿದೆಯೇ ಸವಾಲು..??

Friday 27 April, 2012

ಏಕಾಂಗಿ


ಅವಳ ಪ್ರತಿಬಿಂಬವಿರದ
ಕಣ್ಣಲ್ಲಿ ನಾನೇಕಿರಲಿ..?
ಎಂದು ನನ್ನ ಕಣ್ಣೀರು
ಹೊರ ಹೊರಟಿದೆ
ಒಂದೊಂದಾಗಿ...
ಈಗ ನನ್ನ
ಕಂಗಳು ಕೂಡ
ಅವಳಿರದ ನನ್ನ
ಮನಸಿನಂತೆಯೇ
ಏಕಾಂಗಿ..

Tuesday 24 April, 2012

ಬೆಳಗು


ಶರಧಿಯು
ಮುಂಜಾನೆಯ
ನಿದಿರೆಯಾ
ಮಂಪರಿನಲ್ಲಿದ್ದಾಗ,
ಅವಳ ಬಾಹು
ಬಂಧನದಿಂದ
ತಪ್ಪಿಸಿಕೊಂಡು
ಹೊರಬಂದ
ನೇಸರನು,
ಕಳವಳದಿ
ಕೆಂಪಾಗಿದ್ದ
ತನ್ನ ಮೋರೆಯ
ಮೋಡದ
ಬಟ್ಟೆಯಲಿ ಮುಚ್ಚಿ,
ಒಂದಷ್ಟು ದೂರ
ನಡೆದು
ಭಯವ ತೊರೆದು
ಜಗವನೆಲ್ಲಾ
ಬೆಳಗತೊಡಗಿದನು.

ಕವಿಯಾಗಲಾರೆ...


ಹೆಚ್ಚೇನೂ ಬೇಕಾಗಿಲ್ಲ, ಸಣ್ಣ ಕವಿಯಾಗಬೇಕೆನುವ ಆಸೆ
ಚೆಲುವಾದ ನಾಲ್ಕು ಸಾಲುಗಳ ಹೊಸೆಯಬೇಕೆನುವ ಆಸೆ
ಸುಂದರ ಭಾವಗಳ ಪದಗಳಲಿ ಹಿಡಿದಿಡುವ ಆಸೆ
ಆದರೂ ನನ್ನ ಮನದಲ್ಲಿ ಕವಿತೆಯ ಬಗೆಗೆ ಸ್ಪಷ್ಟತೆ ಇದೆ
ಈ ಸುಂದರ ಭುವಿಯಲ್ಲಿ ನನಗಸ್ತಿತ್ವ ಕೊಟ್ಟ
ಆ ಭಗವಂತನ ಅಸ್ತಿತ್ವವನೇ ಪ್ರಶ್ನಿಸುವ ಕವಿಯಾಗಲಾರೆ..
ನನ್ನ ಮೆದುಳಿನಲಿ ಪದಗಳನ್ನಿಟ್ಟ ಆ ದೇವನ
ಅದೇ ಪದಗಳಲಿ ದೂಷಿಸುವ ಕವಿ ನಾನಾಗಲಾರೆ..
ಬಾಲ್ಯದಿಂದ ಪಡೆದ ಸಂಸ್ಕಾರಗಳ ತಿರುಳನರಿವೆನೇ ಹೊರತು
ನನ್ನೀ ಪದಗಳಲಿ ಹೀಯಾಳಿಸುವ ಕವಿಯು ನಾನಾಗಲಾರೆ..
ಮಾತೃಧರ್ಮದಲೇ ಗಟ್ಟಿಯಾಗಿ ನೆಲೆಯೂರುವೆನೇ ಹೊರತು
ಇತರ ಧರ್ಮಗಳಿಗೆ ವ್ಯಂಗ್ಯ ಮಾಡುವ ಕವಿ ನಾನಾಗಲಾರೆ..
ನನ್ನ ಹೊತ್ತೊಡಲು ತಾಯಿ ಭಾರತಿಯ, ಪದಗಳಲೇ ಅರ್ಚನೆಗೈಯುವೆ
ಬುದ್ದಿಜೀವಿಯಾಗುವ ಆಸೆಯಲಿ, ಅವಳಿಗಪಚಾರವನೆಸಗಲಾರೆ...
ಶ್ರೇಷ್ಟತೆ ಇದರಿಂದಲೇ ಬರುವುದೆಂದಾದರೆ... ಧಿಕ್ಕರಿಸುವೆ ಶ್ರೇಷ್ಟತೆಯ
ನನ್ನೊಳಗಿನ ಆದರ್ಶವ ಶ್ರೇಷ್ಟತೆಗಾಗಿ ಅಡವಿಡಲಾರೆ...
ಶ್ರೇಷ್ಟತೆಗೆ ಮಾರು ಹೋಗುವ ಈ ಹಾಳು ಲೋಕದಲ್ಲಿ
ನಾನೊಬ್ಬ ಮುಢಮನುಜನಾಗೇ ಉಳಿದುಬಿಡುವೆ..
ಕವಿಯಾಗುವ ನನ್ನ ಬಯಕೆಯನೇ ನಾ ಬಿಟ್ಟುಬಿಡುವೆ...
ಆದರೆ ಶ್ರೇಷ್ಠ ಕವಿಯಾಗಲಾರೆ... 
ನಾನೆಂದಿಗೂ ಶ್ರೇಷ್ಠ ಕವಿಯಾಗಲಾರೆ...

ಕವನ


ಏಕಾಂತದ
ಕೋಣೆಯಲಿ
ನನ್ನ ಮನಸಿಗೂ
ಕಲ್ಪನೆಗೂ
ಆಯಿತು ಮಿಲನ,
ಈ ಮಿಲನದಿಂದಾದ
ಪದಪುಂಜವೆನುವ
ಮುದ್ದು ಮಗುವಿಗೆ
ನಾನು ಇಟ್ಟಿರುವ
ಹೆಸರೇ "ಕವನ"

ದ್ವೇಷ...


ಜಗವ
ನಾಶಗೈಯಬಲ್ಲ
ತಾಕತ್ತಿರುವುದು
ದ್ವೇಷಕ್ಕೆ
ಮಾತ್ರ
ಎನುವುದು
ನನ್ನ ಭಾವನೆ;
ಯಾಕೆಂದರೆ
ತಂಪಾದ
ನೀರ ಹನಿಗಳನೇ
ಒಡಲಲ್ಲಿ
ಇಟ್ಟುಕೊಂಡಿರುವ
ಮೋಡಗಳು,
ಮನುಜನನೇ
ಸುಟ್ಟುಹಾಕಬಲ್ಲ
ಉರಿ ಸಿಡಿಲಿಗೆ
ಜನ್ಮ ನೀಡುವುದು
ದ್ವೇಷಕ್ಕೊಳಗಾಗಿ
ತಮ್ಮತಮ್ಮೊಳಗೆ
ಹೋರಾಟಕ್ಕೆ
ಇಳಿದಾಗ ತಾನೆ.

Saturday 21 April, 2012

ಹುಚ್ಚು ಹೋಲಿಕೆ


ಕವಿಯು ನಾನೆನುವ
ಹುಚ್ಚು ಭ್ರಮೆಯಲಿ
ಅವಳ ಚಂದಿರನಿಗೆ
ಹೋಲಿಸಿಬಿಟ್ಟೆ,
ಈಗ ನಿಜಕೂ ಅವಳು
ಚಂದಿರನಂತಾಗಿದ್ದಾಳೆ,
ಬಾನಿನಲಿ ದೂರದಲಿದ್ದು
ನನ್ನ ಕೈಗೆ ಸಿಗುವಂತಿಲ್ಲ,
ಆದರೂ, ನಾನೆಲ್ಲೇ ಹೋದರೂ
ನನ್ನನೇ ಹಿಂಬಾಲಿಸಿದಂತೆ
ನನಗನಿಸುತಿದೆಯಲ್ಲಾ...

ನಿಗೂಢ


ಮುಂಜಾನೆಯಲಿ
ಹಕ್ಕಿಗಳ ಚಿಲಿಪಿಲಿಯು
ಇರುಳರಾಜನ ಸಾವಿನ
ಕುರಿತಾದ ಅಳುವೋ...?
ಇಲ್ಲ ರವಿಯಾಗಮನಕೆ
ಸ್ವಾಗತವೋ..?
ಮುಡಣದಲಿ ಮುಡುವಾಗ
ರವಿಯ ಮೈಮೇಲಿನ
ಕೆಂಪು ಬಣ್ಣ
ಇಳೆಯ ಕಂಡಾಗಿನ
ನಾಚಿಕೆಯೋ...?
ಇಲ್ಲ ಕತ್ತಲೊಡೆಯನ
ಮೈಯಿಂದ ಚಿಮ್ಮಿದ ನೆತ್ತರೋ...?
ತರುಲತೆಗಳ ಮೈಯ
ಮೇಲಿನ ನೀರ ಹನಿಗಳು
ಇರುಳ ಭಯದಲಿ
ಮುಡಿದ ಬೆವರ ಹನಿಯೋ...?
ಇಲ್ಲ ಉದಯರವಿಗೆ
ತೊಡಿಸಲೆಂದು
ತಯಾರಿಸಿದ ಹೊಳೆವ ಮುತ್ತೋ...?
ಈ ಪ್ರಕೃತಿಯೇ ಹೀಗೆ..
ಕಂಡಂತೆ ಇರುವುದಿಲ್ಲ
ಇರುವುದೆಲ್ಲವೂ ಕಾಣುವುದಿಲ್ಲ
ಕಾಣಿಸುತಿರುವುದ ಬಗೆಗೂ
ಮನದಲ್ಲಿ ಸಂಶಯ
ನಾಕಂಡದ್ದು ನಿಜವೋ ಸುಳ್ಳೋ...?
ಉತ್ತರ ಮಾತ್ರ ನಿಗೂಢ...

Friday 20 April, 2012

ಕಣ್ಣೀರು


ಅವಳು ನನ್ನ
ಬಿಟ್ಟು ಹೋದಾಗ
ನಾ ಅಳಲಿಲ್ಲ ಎಂದು
ಜಗವೆ ನನ್ನ ಪ್ರೀತಿಯ
ಸಂಶಯಿಸುತಿದೆ,
ಜಗಕೇನು ಗೊತ್ತು
ನನ್ನ ಕಣ್ಣೊಳಗೆ
ಕಣ್ಣೀರ ಸಾಗರವಿದೆ,
ಇರುವಲ್ಲಿಯೇ
ಭೋರ್ಗರೆದರೂ
ತೆರೆಯಾಗಿ
ಕೆನ್ನೆಯ ದಡವ
ಸೇರುವ ಭಾಗ್ಯ
ಪ್ರತೀ ಕಣ್ಣೀರ
ಹನಿಗೂ ಸಿಗಲಾರದೇ...?

Wednesday 18 April, 2012

ಹುಡುಕಾಟ


ಅವಳೆನ್ನ
ತೊರೆದ
ನಂತರ
ನನ್ನ ಮನದ
ಚಡಪಡಿಕೆಯ
ನೋಡಲಾಗದೆ,
ನನ್ನ ಕಣ್ಣೊಳಗಿನ
ಕಣ್ಣೀರುಗಳು
ಸಾಲು ಸಾಲಾಗಿ
ಕೆನ್ನೆಯ ಹಾದಿಯಲಿ
ಅವಳ ಹುಡುಕಿ
ಕರೆತರಲು ಹೊರಟಿದೆ.

Sunday 15 April, 2012

ಬೇಟೆ


ಅವಳ
ಕನಸುಗಳ
ಬೇಟೆಗೆ,
ಮನಸೀಗ
ಹೊರಟಿಹುದು
ನಿದಿರೆಯಾ
ಕಾಡಿಗೆ.

ಅಮ್ಮ


ನನ್ನೊಡನೆ ಅವರಿವರಂದರು
ಬರಿಯ "ಅವಳ" ಕುರಿತೇ ಬರೆಯುವೆಯಲ್ಲ...
"ಅಮ್ಮ"ನ ಬಗೆಗೇಕೆ ಬರೆಯೋಲ್ಲ...?
ಮನದಲ್ಲಿ ನಸುನಕ್ಕು ನಾನಂದೆ
ಮಮತೆಯ ಗರ್ಭಗುಡಿಯಲಿ ರಾರಾಜಿಸೋ ದೇವಿಯವಳು
ನನ್ನೊಳಗಿರುವ ಅಲ್ಪ ಪದಗಳ ಗುಡಿಸಲಿನಲಿ
ಆ ದೇವತೆಯ ಹೇಗೆ ಕುಳ್ಳಿರಿಸಲಿ..?
ವಾತ್ಸಲ್ಯದ ಮಹಾ ಶರಧಿಯವಳು
ನನ್ನೀ ಪದಗಳ ಬೊಗಸೆಯಲಿ 
ಆ ಕಡಲ ನೀರನೆಲ್ಲಾ ಹೇಗೆ ತುಂಬಿಕೊಳಲಿ...?
ಸ್ವಾರ್ಥವಿರದ ನಿಷ್ಕಲ್ಮಶ ಪ್ರೇಮದ ದಿವ್ಯ ಪ್ರಭೆ ಅವಳು
ನನ್ನ ಪದಗಳ ಸಣ್ಣ ಹಣತೆಯಲಿ
ಆ ಮಹಾನ್ ಜ್ಯೋತಿಯ ಹೇಗೆ ಹಿಡಿದಿಟ್ಟುಕೊಳಲಿ..?
ಪಟ್ಟಿ ಮಾಡಿದರೆ ದೊಡ್ಡ ಗ್ರಂಥಗಳಲೂ ಹಿಡಿಸಲಾರದಂಥ
ಅವಳ ಸಾವಿರಾರು ಗುಣ ವಿಶೇಷತೆಗಳ 
ನನ್ನ ಕವಿತೆಯೆನುವ ಸಣ್ಣ ಹಾಳೆಯಲಿ
ನಾ ಯಾವ ರೀತಿಯಲಿ ಬರೆದು ಮುಗಿಸಲಿ...?
ಹೇಳಿ ನೀವಿಗ, "ಅಮ್ಮ"ನ ಕುರಿತು ನಾನೇನ ಬರೆಯಲಿ...?
ಮುಗಿಯಲಾರದ ಕವನವ ನಾ ಹೇಗೆ ಆರಂಭಿಸಲಿ..?

Friday 13 April, 2012


ಒದ್ದೆಯಾಗಿ ಹೋಗಿದ್ದ
ನನ್ನ ಅಂಗಿಯ ಕಂಡು
ಆಗ ತಾನೆ ಬಂದ
ನನ್ನ ಪ್ರೇಯಸಿ ಅಂದಳು
ನಾನಿಲ್ಲದಿರುವಾಗ
ನನಗಾಗಿ ಸುರಿಸಿದೆಯಾ
ಇಷ್ಟೊಂದು ಕಣ್ಣೀರು,
ನಾನಂದೆ ಪ್ರಿಯೆ
ಸ್ವಲ್ಪ ಸುಮ್ಮನಿರು,
ಮಂಗಳೂರಿನ
ಸೆಖೆಗೆ ಯಾರಿಗೆ
ತಾನೆ ಬರೋಲ್ಲ ಹೇಳು
ಇಷ್ಟೊಂದು ಬೆವರು..?

Wednesday 11 April, 2012

ಅಕ್ಕನ ಮದುವೆ...


ನನ್ನಕ್ಕನ ಮದುವೆಯ ದಿನ ನಿಶ್ಚಯವಾದಂದಿನಿಂದ ಅದೇನೋ ಸಡಗರವಿತ್ತು,
ಪ್ರತಿಯೊಂದು ತಯಾರಿಗಳ ಒದ್ದಾಟ, ಓಡಾಟದಲೂ ಅದೇನೋ ಸಂಭ್ರಮವಿತ್ತು,
ಮದುವೆಯ ದಿನದ ಪ್ರತಿಯೊಂದು ಸಂಪ್ರದಾಯವನು ಆಸ್ವಾದಿಸಿದರೂ...
ಕೊನೆಯಲ್ಲಿ ನನ್ನಕ್ಕನ ಕಳುಹಿಸಿ ಕೊಡುವ ಸಮಯವಾದಾಗ
ಅದುವರೆಗಿನ ನಮ್ಮವರೆಲ್ಲರ ಸಡಗರ ಮಾಯವಾಗಿದ್ದು ಯಾಕೆ..?

ಬಂದಿದ್ದ ನೆಂಟರಿಷ್ಟರೆಲ್ಲರೊಂದಿಗೆ ದಿಬ್ಬಣದ ಪ್ರಯಾಣವೂ ಖುಷಿ ತಂದಿತ್ತು,
ವರನ ಕಡೆಯವರೆಲ್ಲರನು ಉಪಚರಿಸುವಾಗಲು ಮನವು ಆನಂದಲಿತ್ತು,
ಸಂತಸದಲೇ ಭಾವನವರ ಕಾಲನು ನಾ ತೊಳೆದರೂ...
ಕೊನೆಯಲ್ಲಿ ನನ್ನಕ್ಕನ ಅವರ ಬಳಿಗೇ ಕಳುಹಿಸಲು ಮುಂದಾದಾಗ
ಅದುವರೆಗಿನ ನನ್ನಲ್ಲಿನ ಆನಂದ ಮರೆಯಾಗಿದ್ದು ಯಾಕೆ..?

ಮದುಮಗಳಾಗಿ ನನ್ನಕ್ಕ ಮಂಟಪಕೆ ಬರುತಿರಲು ಅವಳ ತುಟಿಯಲ್ಲಿ ನಗುವಿತ್ತು,
ಗಟ್ಟಿಮೇಳದ ನಾದದೊಂದಿಗೆ ಹಾರವ ಬದಲಾಯಿಸುವಾಗ ಸಣ್ಣದೊಂದು ನಡುಕವಿತ್ತು
ತಾಳಿಯನು ಕಟ್ಟಿದ  ಪತಿಯಿಂದ ಓಕುಳಿಯಾಟದಲಿ ಸೋತು ಹೋದರೂ..
ನಗುತಲೇ ಇದ್ದ ನನ್ನಕ್ಕ, ಕೊನೆಯಲ್ಲಿ ಅತ್ತ ಹೊರಡಲನುವಾದಾಗ,
ಅದುವರೆಗೆ ಸಂಭ್ರಮದ ಮಿಂಚಿದ್ದ ಅವಳ ಕಣ್ಣಲ್ಲಿ, ಕಣ್ಣೀರ ಧಾರೆ ಸುರಿದದ್ದು ಯಾಕೆ..?

ಅಚ್ಚುಕಟ್ಟಾಗಿ ಮದುವೆಯು ನಡೆದುದರ ತೃಪ್ತಿ ನನ್ನ  ಮನಸಲ್ಲಿತ್ತು
ಬಂದ ಬಂಧು ಮಿತ್ರರನೆಲ್ಲ ಸರಿಯಾಗಿ ಉಪಚರಿಸಿದ ಸಂತೋಷವಿತ್ತು,
ತಮ್ಮನಾದರೇನಂತೆ ಗಂಡು ನಾನಾದ್ದರಿಂದ ಕಣ್ ರೆಪ್ಪೆಯ ಕದವ ಮುಚ್ಚಿದ್ದರೂ..
ಕೊನೆಯಲ್ಲಿ ಅಳುಮೊಗದಿ ಅಪ್ಪ ಅಮ್ಮ .. ನನ್ನಕ್ಕನ ದಾನ ಮಾಡಿದಾಗ
ಮುಚ್ಚಿದ್ದ ಕಣ್ ರೆಪ್ಪೆಯ ಸಂದಿನಿಂದ ಒಂದೆರಡು ಕಣ್ಣೀರ ಹನಿಗಳು ಹೊರ ಬಂದಿದ್ದು ಯಾಕೆ..?

ಇದು ಸರಿಯೇ...?


ಹಳದಿ ಮತ್ತೆ ಕೆಂಪು,
ಹೀಗೆ ಬಣ್ಣ ಬಣ್ಣದ
ಬಟ್ಟೆಯ ನಿನ್ನೊಡನೆಯೆ
ಇಟ್ಟುಕೊಂಡೆಯಲ್ಲಾ,
ಚಂದಿರಗೆ ಕಲೆಯಿರುವ
ಬಿಳುಪಿನ ಬಟ್ಟೆಯೊಂದನೇ
ಕೊಟ್ಟು ಬಿಟ್ಟೆಯಲ್ಲಾ,
ರವಿಯೇ... ಇದು ಸರಿಯೇ..?

ಮುಸ್ಸಂಜೆಯಲಿ
ಅವುಗಳನೆಲ್ಲಾ
ಒಂದೊಂದಾಗಿ
ತೊಟ್ಟುಕೊಂಡು,
ಚಂದಿರನು ಬರುವ ಮನ್ನವೇ
ವಸುಧೆಯೆದುರು
ಮಿಂಚತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ಕಡಲ ನೀರಿಗಿಳಿದು
ತೆರೆಗಳ ರೂಪದಿ
ಇಳೆಯ ತನುವಿಗೆ
ನೀರನೆರಚಿ
ಜಲಕ್ರೀಡೆಯಾಡುತ
ಚಂದಿರನಿಗರಿಯದಂತೆ
ಇಳೆಯ ರಮಿಸತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ನಿನ್ನೀ ಮೋಸದಾಟವನು
ಕಂಡು, ಮನನೊಂದು
ಶಶಿಯು ಭುವಿಯ
ಬಳಿ ಬರುವುದನೆ ಬಿಟ್ಟಿಹನಲ್ಲ,
ಕಡಲ ನೀರಿಗಿಳಿಯುತಿಲ್ಲವಲ್ಲ,
ಮನವ ಕಲ್ಲಾಗಿಸಿ ಬೆಳೆದರೂ
ಪಕ್ಷವೊಂದರಲೆ ಸೊರಗಿಹೋಗುವನಲ್ಲ
ರವಿಯೇ ನಿಜವ ಹೇಳು ...
ನೀ ಮಾಡಿದುದು ಸರಿಯೇ...?


Tuesday 10 April, 2012

ಐ.ಪಿ.ಎಲ್


ಸಿನಿಮಾ ರಂಗವಿದೆ
ಶಾರೂಖ್ ಖಾನನಿಗೆ
ನಟಿಸಿ ಕೋಟಿ
ಹಣವ ಸಂಪಾದಿಸಲು
ಆರಾಮದಲಿ
ಬಂದ ಈ ಹಣವ
ಕಳೆದುಕೊಳ್ಳೋಕೆ
ಇದೆಯಲ್ಲಾ ಐ.ಪಿ.ಎಲ್ಲು

ಕನಸುಗಳು


ಸಾಲು ಸಾಲು
ವಿಭಿನ್ನ ಕನಸುಗಳು
ನನ್ನ ನಿದಿರೆಯಾ
ಮನೆಯೊಳಗೆ ಬರಲು
ಹಾತೊರೆಯುತ್ತಿದ್ದರೂ,
ನನ್ನೊಳಗಿನ ಪ್ರೇಮಿ
ಕದವ ತೆರೆದು
ಒಳಕರೆದು ತಂದದ್ದು
"ಅವಳ" ಬಗೆಗಿನ
ಕನಸುಗಳನ್ನು ಮಾತ್ರ...

ಕತ್ತಲು


ಪ್ರೀತಿಯ ಲೋಕವೂ
ಶುಭ್ರ ನೀಲಕಾಶದಂತೆ
ಎನುವ ನನ್ನ ಕಲ್ಪನೆಯು
ಸುಳ್ಳಾಗಿ ಹೋಯಿತು,
ಅವಳೆನುವ ಸೂರ್ಯ
ಕಡಲಾಚೆಗೆ ಹೋದೊಡನೆ
ನನ್ನ  ಪ್ರೀತಿಯ
ಬಾನಿನಲೂ ಕತ್ತಲಾಯಿತು.

Sunday 8 April, 2012

ಸಾಂತ್ವಾನ


ಹಸಿರು ಹಸಿರಾದ
ಇಳೆಯ ಮತ್ಸರದಲಿ
ಕಂಡು ರವಿಯು
ಮಾಡಿದನು ಶೋಷಣೆಯ,
ಬಿಡುತ ಭುವಿಯೆಡೆಗೆ
ಬಿಸಿಲ ಉರಿಕಿರಣ;
ಒಣಗುತಿಹ ಸಸ್ಯರಾಶಿಯ
ಕಂಡು  ಮರುಗಿ
ಮೇಘಗಳು ಕರಗಿ
ಮಾಡಿದವು ಪೋಷಣೆಯ,
ಕೊಡುತ ಮಳೆಹನಿಯ
ರೂಪದ ಸಾಂತ್ವಾನ.

Thursday 5 April, 2012

ತವಕ


ಹಗಲು ಪೂರ್ತಿ
ಕಣ್ಣೆತ್ತಿ ನೋಡದೆ
ಉಪಯೋಗಿಸುವರು
ರವಿಯೇ, ನಿನ್ನ ಬೆಳಕ
ಈ ಜನರೇ ಹಾಗೆ
ಮುಂಜಾನೆ, ಮುಸ್ಸಂಜೆಯಲಿ
ನಿನ್ನ ಹುಟ್ಟು, ಸಾವನಷ್ಟೇ
ನೋಡಲವರಿಗೆ ತವಕ





Tuesday 3 April, 2012

ಬೇಡಿಕೆ




ತಲೆಯ ಮೇಲೆ
ಕೈ ಇಟ್ಟು
ಕುಳಿತಿದ್ದಾರಂತೆ
ಕೇರಳದ ಮುಖ್ಯಮಂತ್ರಿ,
ಹಂಗಾಮಿ ರಾಜ್ಯಪಾಲರ
ಬೇಡಿಕೆಯೊಂದನ್ನು ನೋಡಿ,
ಇರುವ ಎಂಟು
ಕಾರು ಸಾಲದೆ,
ತಿರುಗಾಡೋಕೆ
ಬೇಕಂತೆ ಇವರಿಗೆ
ಎಂಭತ್ತು ಲಕ್ಷದ
ಐಷಾರಾಮಿ
ಕಾರು "ಆಡಿ".

---ಕೆ.ಗುರುಪ್ರಸಾದ್

ಸುದ್ದಿ : ಕೇರಳದ ಹಂಗಾಮಿ ರಾಜ್ಯಪಾಲರಿಂದ (ಪ್ರಸ್ತುತ ಇವರು ಕರ್ನಾಟಕದ ಪ್ರಸಿದ್ಧ ರಾಜ್ಯಪಾಲರು) ಅಲ್ಲಿನ ಸರ್ಕಾರಕ್ಕೆ ಹೊಸ ಬೇಡಿಕೆ ಅವರಿಗೆ "ಆಡಿ "ಕಾರು ಬೇಕಂತೆ.

ಹೀಗೇಕೆ...?


ಸುಖವಾದ
ನಿದ್ದೆಯಿಂದ
ಆದೊಡನೆ
ಎಚ್ಚರಿಕೆ;
ಹೆಚ್ಚಿನವರಿಗೆ
ಬರುವುದೇಕೆ
ಮೈಯಲ್ಲಿ
ಅಲ್ಲಲ್ಲಿ ತುರಿಕೆ...?

ನಿದಿರೆ


ಮಿಲನಕ್ಕೆ ಹಾತೊರೆಯುತ್ತಿರುವ 
ನನ್ನೆರಡು ಕಣ್ಣಿನ ರೆಪ್ಪೆಗಳು;
ತಲೆದಿಂಬಿನ ಮುತ್ತನ್ನು
ಪಡೆಯುವಾಸೆಯಲಿಹ ನನ್ನ ಕೆನ್ನೆಗಳು.


ಹೊದಿಕೆಯೊಂದರ ಆಲಿಂಗನದ
ಆಸೆಯಲಿಹುದೆನ್ನ ಕಾಯ;
ಪ್ರತಿದಿನವೂ ಹೀಗೆಯೇ
ನನ್ನ ನಿದಿರೆ ಸಂಪೂರ್ಣ ಶೃಂಗಾರಮಯ.

ನೋವು


ದಢೂತಿ ದೇಹದವನ
ಬಳಿ ಕುಳಿತು
ಪ್ರಯಾಣಿಸಿದ್ದರಿಂದಾಗಿ
ಇಂದು ನನ್ನ
ಮೈಯೆಲ್ಲಾ ನೋವು,
ಯಾಕೆಂದರೆ
ದಾರಿಯಲ್ಲಿ ಸಿಕ್ಕ
ಘಾಟಿಯಲ್ಲಿ ಇತ್ತಲ್ಲ
ಹತ್ತಿಪ್ಪತ್ತು
"ಹಿ" ತಿರುವು.

Monday 2 April, 2012

ಭಾಗ್ಯ


ಅದೆಷ್ಟೇ
ಪುಣ್ಯದ
ಕೆಲಸವ
ಮಾಡಿದರೂ,
ಅದೆಷ್ಟೇ
ಭಗೀರಥ
ಪ್ರಯತ್ನವ
ಮಾಡಿದರೂ,
ಮತ್ತೆ ಮತ್ತೆ
ಹೆತ್ತ ತಾಯಿಯ
ಗರ್ಭವನು
ಸೇರುವ
ಪರಮ ಭಾಗ್ಯ
ಬರಿಯ
ದಿನಕರನಿಗಷ್ಟೇ
ಸೀಮಿತ

Sunday 1 April, 2012

ರಾಮ


ಮೊದಲಿನವರಿಗೆ
ಬೇಕಾಗಿದ್ದುದು
ಸೀತಾ ರಾಮ;
ಈಗಿನವರಿಗೆ
ಬೇಕಾಗಿರುವುದು
ಬರಿಯ ಆರಾಮ.

ಕಾವಲು




ಮುಸ್ಸಂಜೆಯಲಿ
ಕಾಣದ
ಕಡಲ
ತಳದೂರಿಗೆ
ನೇಸರ
ಹೋಗಿರಲು,
ಆಗಸವೆನುವ
ಅವನ
ತವರೂರಿಗೆ
ಕೋಟಿ
ತಾರೆಯರದೇ
ಕಾವಲು

Wednesday 28 March, 2012

ವೇದನೆ

ಹೆಣ್ಣು ತನ್ನ ಜೀವಿತಾವಧಿಯಲಿ
ಪಡೆವ ಅತಿ ದೊಡ್ಡ ವೇದನೆ,
ಅದುವೇ ಪ್ರಸವ ವೇದನೆ,
ನನಗಾಗಿ ನನ್ನಮ್ಮ
ಈ ನೋವ ಸಹಿಸಿಕೊಂಡು
ಮರುಕ್ಷಣವೆ ಮರೆತಳಲ್ಲ
ನನ್ನ ಮೊಗವ ಕಂಡೊಡನೆ;
ನಾ ಹೇಗೆ ಮರೆಯಲಿ..?
ಮರೆತು ನಾ ಹೇಗೆ ನಗಲಿ..?
ಬಿಡದೆ ಸುಡುತಿದೆ ನನ್ನ,
ನನ್ನಮ್ಮನಿಗೆ ಈ ನೋವನ್ನು
ಕೊಟ್ಟವನು ನಾನೆನುವ ಭಾವನೆ.

Tuesday 27 March, 2012

ಹೋಲಿಕೆ




ಕಲ್ಪನೆಯಲ್ಲಿ 
ಕಂಡ
ಹೂವೊಂದು 
ಬಾಡದೆಯೆ
ಹಾಗೆಯೇ
ಅರಳಿ
ನಿಂತಿತ್ತು;
ನನ್ನ ಪ್ರೀತಿಯು
ಆ ಹೂವಿನಂತೆ
ಎಂದು
ತಿಳಿದುಕೊಂಡಿದ್ದೆ
ಆದರೆ ಅಲ್ಲೇ
ಬಾಡಿ ಬಿದ್ದು ಕಪ್ಪಾಗಿ
ಹೋದ ಹೂವೊಂದು
ನನ್ನ ಪ್ರೀತಿಗೆ
ತನ್ನ ತಾ ಹೋಲಿಸಿಕೊಳ್ಳುತ್ತಿತ್ತು. 

Monday 26 March, 2012

ನಗು



ಮೊದಲೆಲ್ಲ
ನನ್ನ ನಗುವೆನುವ
ಮರದ ಬೇರು
ನನ್ನ ಹೃದಯವನು
ತಲುಪಿರುತಿತ್ತು;
ಅವಳು ಕೊಟ್ಟ
ಕೊಡಲಿಯೇಟಿಗೆ
ನನ್ನ ನಗುವಿನ ಮರ
ಉರುಳಿಹೋಗಿತ್ತು;
ಈಗ ನನ್ನ ನಗು
ಬರಿಯ ಪಾಚಿಯಂತೆ
ನನ್ನ ಮುಖದ
ಗೋಡೆಯಲ್ಲಿ ಬೆಳೆದು
ನಿಂತಿರುವ ಅದನು
ಬೆಳೆಸಿಹೆನು
ನಾ ಅತ್ತು ಅತ್ತು.

Thursday 22 March, 2012

ಯುಗಾದಿ



ಸುತ್ತಮುತ್ತಲೂ ಹಸಿರೇ ಹಸಿರು..
ಈ ಪ್ರಕೃತಿಯೊಂದಿಗೆ ಚಿಗುರುತಿದೆ ಹೊಸತನ
ವರುಷವೊಂದರ ಪ್ರಾಯ ಮುಗಿದು
ಹೊಸ ಹುರುಪಿನೊಂದಿಗೆ ಮತ್ತೆ ಬಂದಿದೆ ಯೌವನ

ಹಳೆಯ ಕಹಿಯನೆಲ್ಲಾ ಮರೆತು ಮುಂದುವರಿದು
ಇಡುತಿಹಳು ಪ್ರಕೃತಿಯ ಮಾತೆ ಹೊಸ ಹೆಜ್ಜೆ
ಉಲ್ಲಾಸ ಉತ್ಸಾಹದಿ ಸ್ವಾಗತವ ಕೋರಿ
ಕಟ್ಟೋಣ ಅವಳ ಪಾದಕೆ ಮಾವಿನೆಲೆಯ ತೋರಣದ ಗೆಜ್ಜೆ

ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನವಿಂದು
ಜಗವೆ ಸಂಭ್ರಮದಿ ಆಚರಿಸುತಿಹುದು ಯುಗಾದಿ
ಹಳೆ ತಪ್ಪುಗಳನೆಲ್ಲಾ ಮರುಕಳಿಸದಂತೆ ಮರೆತು
ಕೆಡುಕು ಮಾಡದ ಹೊಸ ಜೀವನಕೆ ಹಾಡೋಣ ನಾಂದಿ

ಸಿಹಿಯೂ ಕಹಿಯೂ ಎರಡು ಬೇಕೆನುವ ಉದ್ದೇಶದಿ
ಬಂಧು ಮಿತ್ರರೆಲ್ಲರಿಗೂ ಹಂಚೋಣ ಬೇವು ಬೆಲ್ಲ
ದ್ವೇಷ ಅಸೂಯೆಗಳನೆಲ್ಲ ಬದಿಗೊತ್ತಿ
ಪ್ರೀತಿಯ ಹಂಚಿದರೆ, ಸಂತಸವೇ ನಮ್ಮ ಜೀವನದಲೆಲ್ಲ

ಕುಡಿತದ ಅಮಲಿನಲಿರದೆ, ಅಶ್ಲೀಲ ನೃತ್ಯವಿರದೆ
ಹೊಸ ವರುಷಕ್ಕೆ ಎಲ್ಲರಿಗೂ ಶುಭವ ಕೋರೋಣ
ಪ್ರಕೃತಿಯಲಿನ ಬದಲಾವಣೆಯಂದೆ ಹೊಸ ವರುಷವನಾಚರಿಸಿ
ನಮ್ಮ ಸತ್-ಸಂಪ್ರದಾಯದ ಬಗೆಗೆ ಹೆಮ್ಮೆ ಪಡೋಣ

ವೈರಸ್



ಮನಸಿನಲ್ಲಿರೋ
ನೆನಪುಗಳೆನುವ
ಫೈಲುಗಳನೆಲ್ಲಾ
ಸ್ಕ್ಯಾನ್ ಮಾಡೋ
ಆಂಟಿ ವೈರಸ್
ಸಾಫ್ಟ್ ವೇರ್ ಗಳೇಕಿಲ್ಲ...?
ಇದ್ದಿದ್ದರೆ
ನನ್ನ ಮನಸಿಂದ
ಅವಳ ನೆನಪೆನುವ
ವೈರಸ್ ಗಳನೆಲ್ಲ
ಡಿಲೀಟ್ ಮಾಡಬಹುದಿತ್ತಲ್ಲಾ.

ಸೋಲು



ಸಣಕಲು ದೇಹವಿದ್ದು,
ಈ ರೀತಿ ಆಗಿದ್ದರೆ
ನಾನೊಪ್ಪಿಕೊಳ್ಳುತ್ತಿದ್ದೆ,
ನನ್ನ ದೇಹವೋ
ಗುಂಡುಕಲ್ಲಿನಂತಿದೆ,
ಹಾಗಾಗಿ ನಾ
ಗೆಲ್ಲಲೇ ಬೇಕಿತ್ತು,
ಆದರೂ ಅವಳ
ಸಣ್ಣ ಮುಗುಳ್ ನಗುವಿಗೆ
ನಾನ್ಯಾಕೆ ಸೋತುಹೋದೆ...??

Tuesday 20 March, 2012

ಶುಭ ಶಕುನ



ಶುಭ ಶಕುನಗಳಾಗುತಿದೆ
ಒಂದೊಂದಾಗಿ ಶುಭಶಕುನಗಳಾಗುತಿದೆ,
ಕತ್ತಲ ಕಪ್ಪು ಬಣ್ಣವ ಸರಿಸುವ ಸಲುವಾಗಿ
ಮುಡಣದಿ ಬಣ್ಣಗಳು ಗೋಚರಿಸತೊಡಗಿದೆ,
ರವಿಯಾಗಮನವ ದೂರದಲಿ ಕಂಡು
ಹಕ್ಕಿಗಳು ಸಂತಸದಿ ಹಾಡತೊಡಗಿದೆ,
ಇರುಳಿನಲಿ ಭುವಿಗೆ ಕಾವಲಾಗಿದ್ದ
ಮಂಜು ಮೆಲ್ಲಗೆ ಕರಗತೊಡಗಿದೆ,
ನಡುರಾತ್ರಿಯಿಂದಲೇ ಗಿಡಮರದೆಲೆಗಳ ಮೇಲೆ
ಕಾಯುತ್ತ ಕುಳಿತಿದ್ದ ಇಬ್ಬನಿಯು ಮುತ್ತಾಗತೊಡಗಿದೆ,
ನಿಶ್ಚಲತೆಗೆ ದಾಸರಾಗಿದ್ದ ಜನರಿಗೆಲ್ಲಾ
ಬಿಡುಗಡೆಯ ಸಂಭ್ರಮವು ಸಿಗುತಿದೆ,
ಕತ್ತಲಿನ ದುರಾಡಳಿತವು ಕೊನೆಗೊಂಡಿದೆ,
ಮುಡಣದ ತುದಿಯಿಂದ, ಆಗಸದ ರಾಜಬೀದಿಯಲಿ
ಜಗದ ಶಕ್ತಿಯೊಡೆಯ ನೇಸರನ
ಮಂದ ನಡಿಗೆಯು ಪ್ರಾರಂಭವಾಗಿದೆ.
ಮತ್ತೆ ಜಗಕೆಲ್ಲಾ ಬೆಳಕಾಗಿದೆ.


Monday 19 March, 2012

ಸ್ವಾಮಿ ಭಕ್ತಿ.


ತಮ್ಮೊಡೆಯ ಸೂರ್ಯ
ಸಂಜೆಯಾಗುತ್ತಿದ್ದಂತೆ
ಏಕಾಂಗಿಯಾಗಿ
ಕಡಲಿನಲಿ
ಮುಳುಗಿದುದ ಕಂಡು
ಜಗದ ಬೆಳಕೆಲ್ಲವೂ
ಅವನ ಅನುಸರಿಸಿ
ಕಡಲೊಡಲ ಸೇರುತಿದೆಯಲ್ಲ
ಇವುಗಳದು ಅದೆಂಥಾ
ಸ್ವಾಮಿ ಭಕ್ತಿ...!!!