Tuesday 12 April, 2011

NENAPAAGADAVALU

ನನ್ನವಳು ನೆನಪಾಗುವಳು 
ಕಾರ್ಮುಗಿಲು ಬಾನನಾವರಿಸಿ
ಮಳೆಯ ಸುರಿಸದೆಯೇ
ಗಾಳಿಯೊಂದಿಗೆ ಮರೆಯಾದಾಗ

ನನ್ನವಳು ನೆನಪಾಗುವಳು
ಅರಳದ ಹೂವೊಂದು
ಮೊಗ್ಗಿನಲೇ ಗಿಡದ 
ಸಂಗವನು ತೊರೆದಾಗ

ನನ್ನವಳು ನೆನಪಾಗುವಳು
ಪ್ರತಿ ಸಂಜೆಯ ಏಕಾಂತದಲಿ
ಪ್ರತಿ ರಾತ್ರಿಯ ಮೌನದಲಿ
ಕನಸುಗಳು ಮುಡುವಾಗ

ವಾಸ್ತವದಿ ನನ್ನವಳು ನೆನಪಾಗದವಳು
ನೆನಪಾಗುವುದಾದರೂ ಹೇಗೆ?
ಅವಳನೊಂದು ಕ್ಷಣವೂ 
ನಾ ಮರೆಯದಿರುವಾಗ.




NANNAVALA NAGU

ಸಮಯವೂ ನಿಂತೀತು , ನಿನ್ನ ನಗುವಿನ
ರೀತಿಯನು ಕಂಡು, ಮತಿಯ ಕಳೆದುಕೊಂಡು
ತರುಲತೆಗಳು ಆನಂದದಿಂದ ಪ್ರಾರಂಭಿಸಿದವು
ನಾಟ್ಯಗೈಯಲು ನಿನ್ನ ನಗುವಿನ ಧಾಟಿಯನು ಕಂಡು.

ನಿನ್ನ ನಗುವು ಸಂಗೀತದ ಸ್ವರದಂತೆ, ಅದು
ನಗೆಯ ನಾಯಕಿಗೆ ನಾಚಿಕೆಯ ತರುತಿದೆ
ಗಾಳಿಯು ಅಲೆ ಅಲೆಯಾಗಿ  ಬೀಸುತಲಿ
ಗೀತೆಯಾಗಿ ನಿನ್ನ ನಗೆಯ ಪರಿವರ್ತಿಸುತಿದೆ.

ಬದುಕು ವ್ಯರ್ಥವಾಯಿತೆಂದು ನೆನೆಯುತ
ದುಃಖಿಸುತ ಚಂದ್ರನೆನುವನು, ನನಗೇಕೆ ಈ ನಗುವಿನ ಕಲೆ ತಿಳಿದಿಲ್ಲ
ಕಿಲಕಿಲನೆ ನಗುತ, ಮುಗುಳುನಗೆಯನೆ ಬೀರುತ ಈ
ಹೆಣ್ಣು ನನ್ನ ಸೌಂದರ್ಯವನೆ ಕಡಿಮೆಗೊಳಿಸುತಿರುವಳಲ್ಲ.



Monday 4 April, 2011

SAMARA

ಮುಂಜಾನೆ  ಮುಡಣದ ಕಡಲ ಒಡಲಲಿ 
ನಿಂತು ಬಾನ ದಿಟ್ಟಿಸುವನು ದಿನಕರ
ಉಗ್ರ ರೂಪವ ತಾಳಿ ಕೆಂಪು ಕೆಂಪಾಗುತಲಿ
ಬಾನೆಡೆಗೆ ಬಿಡುವನು ರಜತ ಕಿರಣವೆಂಬ ಶರ 

ಮೆಲ್ಲ ಮೆಲ್ಲನೆ ಹೊತ್ತು ಕಳೆಯುತಿರಲು
ಕಡಲ ತೊರೆದು ದಿಬ್ಬವನೇರಿ ಬಿಡುವನು ಬಾಣ
ಆ ಬಾಣದ ಏಟು  ತಿಂದು ಇರುಳು ಘಾಸಿಗೊಳಲು
ಬೆಳಕೆಂಬ ರಕ್ತವ ಚೆಲ್ಲಿ ಓಡುವುದು ಉಳಿಸಲು ತನ್ನ ಪ್ರಾಣ

ಜಯ ತನ್ನದಾದ ಸಂತಸದಿ ಮುಗಿಲೆಡೆಗೆ ಹಾರಿ
ವ್ಯಕ್ತ ಪಡಿಸಿದ ತನ್ನ ಆನಂದವನು ಆ ಭಾಸ್ಕರ
ಚಿಲಿ ಪಿಳಿ ಯೆನ್ದುಲಿಯುತ ಹಕ್ಕಿಗಳು ಶುಭ ಕೋರಿ
ಹೊಗಳಿದವು ಆತನ " ನೀನೆ ಏಕೈಕ ವೀರ, ಶೂರ"

ವಿಜಯದ ಸಂತಸವು, ಹೊಗಳಿಕೆಯ ನುಡಿಗಳು ಕೂಡಿ
ಒಂದಾಗಲು ಬೀಗತೊಡಗಿದ ತನ್ನ ಬಗೆಗೆ ಆ ಆದಿತ್ಯ
ಪ್ರತಿಫಾಲದೊಪಾದಿಯಲಿ ಭುವಿಯೆಡೆಗೆ ತೀಕ್ಷ್ಣ ದೃಷ್ಟಿಯಲಿ ನೋಡಿ
ಅಧಿಕಗೊಳಿಸಿದ ಬಿಸಿಲ ಧಗೆಯ, ಹೇಳುತಲಿ ನೋಡಿದಿರಾ ನನ್ನ ಸಾಮರ್ಥ್ಯ

ಈ ರೀತಿ ಕುಣಿ ಕುಣಿದು ಪಡುವಣವ ಸೇರಲು
ತಿಳಿಯದಾಯಿತು ರವಿಗೆ ತನಗಿನ್ನು ಬರುವುದು ಸೋಲಿನ ಸಮಯ
ಮೆಲ್ಲನೆ ಬಂದ ಕಾರಿರುಳು ನುಡಿಯಿತು, " ನಿಲ್ಲು ನೀ ಯುದ್ಧವ ಮಾಡಲು"
ಊಹಿಸಲಾಗದ ಘಟನೆಯ ಕಂಡು ರವಿಗಾಯಿತು ಭಯ

ಭಯದಿ ಎದುರಿಸಲಾಗದೆ ಹೋದ ರವಿ, ಕತ್ತಲ ಬಾಣದ ಹೊಡೆತ
ಅದರಿಂದಾಗಿಯೇ ರಕ್ತವು ಸುರಿದು ಕೆಂಪು ಕೆಂಪಾಯಿತವನ ಶರೀರ
ನಿಲ್ಲಲಾಗದೆ ಅಲ್ಲಿ ಆದಿತ್ಯ ಕಡಲಬ್ಬೆಯ ಗರ್ಭವನ್ನು ಸೇರುತ
ನುಡಿದ, " ಎಲೆ ಇರುಳೆ ನಗದಿರು, ನಾಳೆ ಮುಂಜಾನೆ ಖಚಿತ ನಿನ್ನ ಸಂಹಾರ"