Saturday 31 December, 2011

ಹೊಸ ವರುಷ...???

ಇಂದೇನು ಹೊಸತನವೋ? ನನಗೇನು ಕಾಣಲಿಲ್ಲ
ಅದೆಂತಾ ಬದಲಾವಣೆಯೋ, ನನಗಾರೂ ತಿಳಿಸಲಿಲ್ಲ.
ಪ್ರಕೃತಿಯು ನಿನ್ನೆ ಇದ್ದಂತೆಯೇ ಇರುವುದಲ್ಲ
ಭೂತಾಯಿ ಹಳೆಯ ಸೀರೆಯನು ತೊರೆಯಲಿಲ್ಲ
ಹೊಚ್ಚಹೊಸತಾದ ಹಸಿರು ಸೀರೆಯನುಡಲೇ ಇಲ್ಲ

ಸಾಕ್ಷಿಗಳಿರದ ಬದಲಾವಣೆಯ ಆಚರಣೆಯೇ ಜೋರು
ಈ ಆಚರಣೆಯ ನಿಜವಾದ ಅರ್ಥವನು ಕೇಳುವವರ್ಯಾರು ?
ಕೇಳುವ, ಟೀಕಿಸುವ "ಬುದ್ಧಿಜೀವಿ"ಗಳದಿಂದು ಇಲ್ಲ ತಕರಾರು
ತಾವೂ ಕುಡಿದು ಕುಣಿದು ಉನ್ಮತ್ತರಾಗಿ ಆಚರಿಸುತಿಹರು
ಅಪರಾತ್ರಿಯಲೇ ಹೊಸ ವರುಷವನು ಸ್ವಾಗತಿಸುತಿಹರು..

ನಮ್ಮದಾಗಿರುವ ಆಚರಣೆಗಳಿಗೆ ಮಾತ್ರ ಇವರದು ಅಡ್ಡಗಾಲು
ವೈಜ್ನಾನಿಕ ಅರ್ಥಗಳೇನೆಂದು ನೂರೆಂಟು ಸವಾಲು
ಹೊಸತೇನು ಇಲ್ಲದಿದ್ದರೂ, ದೈರ್ಯವಿಲ್ಲ ಇಂದು ಜಗವ ಪ್ರಶ್ನಿಸಲು
ನನಗೇಕೋ ಮನಸ್ಸಿಲ್ಲ, ಇಂದು ನಮ್ಮತನವಿಲ್ಲದ ಹೊಸವರಷವನಾಚರಿಸಲು
ಆಚರಿಸದಿದ್ದರೇನಂತೆ, ಅಡ್ಡಿಯೇನಿಲ್ಲ ಗೆಳೆಯರಿಗೆ ಶುಭವ ಹಾರೈಸಲು..

Friday 30 December, 2011

ಅಂದು ಲೋಕ ಕಲ್ಯಾಣಕಾಗಿ

ಸೀತಾ ಪರಿಣಯಕಾಗಿ 

ರಾಮ ಮುರಿದು ಬಿಸಾಕಿದ

ಜನಕರಾಜನ ಸಭೆಯಲ್ಲಿ

ಶಿವನ ಮಹಾಧನುಸ್ಸು;

ಇಂದು ಲೋಕ ಕಂಟಕಕಾಗಿ

"ಲಕ್ಷ್ಮೀ" ಪರಿಣಯಕಾಗಿ


ಭಾರತದ ಸಂಸತ್ತಿನಲ್ಲಿ


ಮುರಿದು ಬಿಸಾಕಿದರು


ಅಣ್ಣಾ ಹಜಾರೆ ನಿರ್ಮಿತ


"ಜನಲೋಕಪಾಲ ಬಿಲ್ಲು"


ಮುರಿದದ್ದು ಕಾಂಗ್ರೆಸ್ಸು..

Friday 23 December, 2011



ಮಾನವನ ಕೈಯಲ್ಲಿ ಇರುವ ತಾನಿರುವ ಮರದ ಬೇರ,


ಕಂಡು ತೊರೆದು ತನ್ನ ತವರ; ಹಾರುತಿದೆ ಹಕ್ಕಿ ದೂರ


,
ಮನುಜನ ಕೈಗಳ ಗುಣವನೇ ಪಡೆಯುವುದಿನ್ನು ಈ ಮರ,



ಒಂದೆರಡು ದಿನದಲೇ ಆಗುವುದು ಮಾನವನಷ್ಟೇ ಕ್ರೂರ


.
ಹಾಗೆಂದು ಹಕ್ಕಿಗಳು ತೊರೆಯುತಿದೆ ತಮ್ಮ ತಮ್ಮ ಬಿಡಾರ.

Wednesday 21 December, 2011

ಅಕೌಂಟು



ಪ್ರಿಯೆ ನಿನ್ನಾಸೆಯಂತೆ
ನಾ ತಾಳಿಯ ದಾರದಲಿ
ಹಾಕಬಲ್ಲೆ ಮುರುಗಂಟು.
ಅದಕೂ ಮುನ್ನ
ದಾಂಪತ್ಯ ಜೀವನದ
ಭದ್ರತೆಗಾಗಿ ನೋಡಬೇಕು
ನಿನ್ನಪ್ಪನ ಬ್ಯಾಂಕಿನ ಅಕೌಂಟು;
ನಿನ್ನ ಮೇಲಿನ ನಂಬಿಕೆಗಾಗಿ
ನೋಡಬೇಕು ಬಾಯ್ ಫ್ರೆಂಡ್ ಗಳ
ಲಿಸ್ಟ್ ಗಳುಳ್ಳ ನಿನ್ನ
ಫೇಸ್ ಬುಕ್ ಅಕೌಂಟು.

ಭದ್ರಕಾಳಿ


ಮನವು ತೋರುವ ವಾಸ್ತವವನು
ಹಾಗೆಯೇ ಚಿತ್ರಿಸುವ
ಅಪರೂಪದ ಚಿತ್ರಕಲಾವಿದನಾಗಿದ್ದನವ
ಮನಸೂರೆಗೊಳ್ಳುವ ಚಿತ್ರಗಳ
ತನ್ನ ಕುಂಚದಿಂದರಳಿಸಿ
ನೋಡುಗರ ನಿಬ್ಬೆರಗಾಗಿಸಿದ್ದನವ
ಇತ್ತೀಚೆಗೆ ಮದುವೆಯಾಗಿ
ಒಂದಿಷ್ಟು ಸಮಯ ಕಳೆದ
ಮೇಲೆ ಮಾಡಿದ ಹೊಸ ಚಿತ್ರ
ಶ್ರೀದೇವಿಯ ಉಗ್ರ ಅವತಾರ
ಭದ್ರಕಾಳಿಯದು.
ಅದರೊಳಗಿನ ವಾಸ್ತವದ
ಚಿತ್ರಣ ಹೀಗಿತ್ತು..
ಭದ್ರಕಾಳಿಯ ಮುಖ
ಅವನ ಹೆಂಡತಿಯ ಮುಖದಂತಿತ್ತು.
ಇವನ ಮೊಗವ ಹೋಲುವ
ತುಂಡಾದ ರುಂಡವೊಂದು
ಆ ಭದ್ರಕಾಳಿಯ ಕೈಯಲ್ಲಿತ್ತು.

Tuesday 20 December, 2011


ನನ್ನೊಳಗಿನ ಯಕ್ಷ ಪ್ರಶ್ನೆ 

ಸಾಧಕನಾಗಬೇಕಾದರೆ
ಮೊದಲು ಸಾಧನೆಯ
ಕನಸು ಕಾಣಿ
ಅನ್ನುತ್ತಿದ್ದ ಅಧ್ಯಾಪಕರು;
ಕನಸ ಕಾಣಲೆಂದೆ
ಅವರ ತರಗತಿಯಲ್ಲಿ
ಮಲಗಿದ್ದಾಗ ಬೈದು
ತರಗತಿಯಿಂದ
ಹೊರಹಾಕಿದ್ದಾದರೂ
ಯಾಕೆ?

Sunday 18 December, 2011

ಮಾರ್ಕೆಟಿಂಗ್ ಹುಡುಗಿ


ಅವಳು ಮಾಡುತಿರುವ
ಉದ್ಯೋಗ ಯಾವುದೆಂದು
ನನಗೆ ಗೊತ್ತಿಲ್ಲ...
ಆದರೂ ಅವಳು
ಮಾರ್ಕೆಟಿಂಗ್ ನವಳು
ಎಂಬುದಂತೂ ಖಚಿತ.
ಹೇಗೆಂದು ಕೇಳುವಿರಾ
ಸಿಗುತ್ತಿದೆಯಲ್ಲಾ
ಅವಳ ನೆನಪಿನ
ಜೊತೆ ನನಗೆ
ಕಣ್ಣೀರು ಉಚಿತ

Friday 16 December, 2011

ಉದಯಾಸ್ತ...


ಸೂರ್ಯ ಗಂಡಾದರೆ,ಶರಧಿ ಹೆಣ್ಣು
ಇಬ್ಬರೂ ಸನಿಹಕೆ ಬಂದರೆ
ಮುಖದಲಿ ರಂಗೇರುವುದು
ಇಬ್ಬರನು ಜೊತೆ ಜೊತೆಯಲಿ
ಕಂಡಾಗ ನನಗನಿಸಿದ್ದು ಹೀಗೆ.
ಮುಂಜಾನೆ ನಿಶ್ಚಿತಾರ್ಥದ ದಿನದಂತೆ
ಮುಸ್ಸಂಜೆ ಮದುವೆಯ ವಾರ್ಷಿಕೋತ್ಸವದಂತೆ
ಮೊದಲು ಮುಖ ಕೆಂಪಾಗುವುದು
ಸಹಜ ನಾಚಿಕೆಯಿಂದ..
ನಂತರ ಮುಖ ಕೆಂಪಾಗುವುದು
ಒಬ್ಬರ ಮೇಲೊಬ್ಬರ ಸಿಡುಕಿನಿಂದ..

Thursday 15 December, 2011




ರವಿಯಾಗಮನದ ಸ್ವಾಗತಕಾಗಿ
ಕಡಲಿನಂಗಳದಿ ಬಿಡಿಸಿದವರಾರು ?
ಬಣ್ಣ ಬಣ್ಣದ ರಂಗವಲ್ಲಿ.
ಶಬ್ದಗಳಿರದೆಯೇ ತನ್ಮಯಗೊಳಿಸುವ 
ಮಾಧುರ್ಯವ ಇಟ್ಟವರಾರು ?
ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ.
ಮನವ ಮಂತ್ರಮುಗ್ಧಗೊಳಿಸುವ
ಸೌಂದರ್ಯವನು ಇಟ್ಟವನಾರು ?
ಮುಂಜಾನೆಯ ರವಿಯ ವದನದಲ್ಲಿ.

Wednesday 14 December, 2011


ಈ ಕಡಲ
ಅಲೆಗಳು
ನನ್ನ ವೈರಿ
ಅವಳ ಮಿತ್ರ
ಎಂದು ನಾ
ಜಗಕೆ ಹೇಳಿದರೆ
ನಂಬಿ ನನ್ನ ಮಾತನ್ನ,
ಇದು  ಸುಳ್ಳಲ್ಲ;
ಅವಳ ಹೆಸರಿಗೆ
ಕಳಂಕ ಬಾರದಿರಲೆಂದು
ನನ್ನ ಜೊತೆಗಿದ್ದ
ಅವಳ ಹೆಜ್ಜೆಗಳ
ಗುರುತಗಳೆಲ್ಲವ
ಕುರುಹೇ ಇಲ್ಲದಂತೆ
ಅಳಿಸಿ ಹಾಕಿತಲ್ಲ.

ತಪೋಭಂಗ

ಮುಸ್ಸಂಜೆಯ ಹೊತ್ತಲ್ಲಿ
ಘೋರ ತಪಸ್ಸು 
ಮಾಡಲು ಕುಳಿತೆ;
ಉದ್ದೇಶ ಇಂದ್ರನ
ದೇವಲೋಕದ ಸಿಂಹಾಸನ,
ಮನದೊಳಗೊಳಗೆ
ಇನ್ನೊಂದು ಆಸೆಯಿತ್ತು.
ನನ್ನ ತಪವ ಭಂಗಗೊಳಿಸಲು
ರಂಬೆ,ಮೇನಕೆಯರ
ಇಂದ್ರ ಕಳುಹಿಸುವನಲ್ಲ;
ಅವರ ಸೌಂದರ್ಯವನು 
ನಾ ಆಸ್ವಾದಿಸಬಹುದಲ್ಲ.
ದೂರ್ವಾಸರ ಕೋಪವೀಗ
ಇಂದ್ರನ ಮೇಲೆ
ಬರಿಯ ಸೊಳ್ಳೆಗಳ ಕಳಿಸಿ
ನನ್ನ ತಪವ ಭಂಗಗೊಳಿಸಿದನಲ್ಲ...

Monday 12 December, 2011

ಹುಚ್ಚು

ಹುಚ್ಚು ಹೆಚ್ಚುತಿಹುದೀಗ ಭರತ ಖಂಡದಲಿ
ಸಾಂಕ್ರಾಮಿಕ ರೋಗದಂತೆ ಹರಡುತಿದೆ ಅತ್ಯಂತ ವೇಗದಲಿ
ನಾನಾ ತರಹದ ಹುಚ್ಚು, ಒಂದೇ ಬಗೆಯದ್ದಲ್ಲ
ಇಷ್ಟಪಟ್ಟು ಪಡಕೊಂಡಿರುವ ಹುಚ್ಚಿದು, ಚಿಕಿತ್ಸೆ ಇಲ್ಲವೆಂದೇನಿಲ್ಲ.

ಕೆಲವರಿಗೆ ಮಾತೃ ಭಾಷೆಯನೆ ಧಿಕ್ಕರಿಸೋ ಹುಚ್ಚು,
ಆಂಗ್ಲ ಭಾಷೆಯ ಮಾತನಾಡಿದರೆ ಪ್ರತಿಷ್ಠೆ ಹೆಚ್ಚುವುದೆನುವ ಹುಚ್ಚು
ಕೆಲವರಿಗೆ ವಿದೇಶಿ ಸಂಸ್ಕೃತಿಯನೇ ತಮ್ಮದಾಗಿಸಿಕೊಳ್ಳುವ ಹುಚ್ಚು
ಇಡಿಯ ಜಗವೇ ಮೇಲಿಟ್ಟ ಸಂಸ್ಕೃತಿಯ ತ್ಯಜಿಸೋ ಹುಚ್ಚು.

ಕೆಲವರಿಗೆ ಮಾತೃ ಧರ್ಮವನೆ ಹೀಯಾಳಿಸೋ ಹುಚ್ಚು
ಮುಲ ನಂಬಿಕೆಯನರಿಯದೆ, ಮುಢ ನಂಬಿಕೆಯೆಂದು ತಿರಸ್ಕರಿಸೋ ಹುಚ್ಚು
ಕೆಲವರಿಗೆ ತಾವು " ಜಾತ್ಯಾತೀತ "ರು ಎಂದೆನಿಸಿಕೊಳ್ಳೋ ಹುಚ್ಚು
ಸಮಾನತೆಯ ಬದಿಗಿರಿಸಿ ಸ್ವಧರ್ಮವನೆ ತುಳಿಯೋ ಹುಚ್ಚು.

ಕೆಲವರಿಗೆ ಖರ್ಚು ಮಾಡಲಾಗದ ಲಕ್ಷ ಕೋಟಿ ಹಣವ ಸಂಪಾದಿಸೋ ಹುಚ್ಚು
ಅದಕಾಗಿ ನೈತಿಕ ಮೌಲ್ಯಗಳನೆಲ್ಲಾ ಕೊಂದು ಭ್ರಷ್ಟರಾಗೋ ಹುಚ್ಚು
ಕೆಲವರಿಗೆ " ಬುದ್ಧಿಜೀವಿ " ಎನುವ ಪದವಿಯ ಪಡೆಯೋ ಹುಚ್ಚು
ಅದ ಪಡೆಯುವುದಕಾಗಿ ಅರ್ಥವಿರದ ವಾದಗಳ ಮಂಡಿಸೋ ಹುಚ್ಚು.

ಇವೆಲ್ಲದಕಿಂತಲೂ ಘೋರವಾದುದು; ಸಂಖ್ಯೆಯಲಿ ಹೆಚ್ಚಿರುವ ಸಜ್ಜನರಿಗಿರೋ ಹುಚ್ಚು
ನಡೆಯುತಿಹ ಅನ್ಯಾಯವನು ಪ್ರ್ತತಿಭಟಿಸದೇ, ಕಣ್ಣಿದ್ದೂ ಕುರುಡರಾಗೋ ಹುಚ್ಚು,
ಎಂದು ಬರುವುದೋ ಇವರಲ್ಲಿ ಈ ಹುಚ್ಚಿನಿಂದ ಮುಕ್ತಿ ಸಿಗೋ ಅರಿವಿನೆಡೆಗೆ ಸಾಗುವ ಹುಚ್ಚು
ನಮ್ಮೆಲ್ಲರೊಳಗಿನ ದೇಶಪ್ರೇಮದ, ಸ್ವಾಭಿಮಾನದ ಕಿಚ್ಚು, ಪಡೆದ ಅರಿವಿನಿಂದಾಗಲಿ ಹೆಚ್ಚು ಹೆಚ್ಚು.

Sunday 11 December, 2011


ದೂರದಲಿ ಕೇಳುತಿದ್ದ  ಭಾಸ್ಕರನ
ಏಳು ಕುದುರೆಗಳ ಹೆಜ್ಜೆಗಳ ಸದ್ದಿಗೆ
ಇರುಳು ಮಂಜಿನಂತೆ ಕರಗಿ ನೀರಾಗಿ
ಓಡಿ ಹೋದದ್ದಾದರೂ ಎಲ್ಲಿಗೆ ?

Thursday 8 December, 2011

ಬೇರಾರಿಗಾದರೂ 
ಕೊಡೋಣ 
ಎಂದು ನನ್ನ 
ಹೃದಯವ 
ವಾಪಾಸು ಕೊಡು 
ಎಂದು ಅವಳ 
ಮುಂದಿಟ್ಟೆ 
ನಾ ನನ್ನ ಬೇಡಿಕೆ.
ನಸು ಮುನಿಸಿನಲಿ
ಕೊಡಲಾಗದೆನಲು
ಅವಳು ಮುಂದಿಟ್ಟ ಕಾರಣ;
ಅಗಿದೆಯಂತೆ ಅದೀಗ 
ಅವಳ ಮುದ್ದಿನ ಮಗನ 
ಅಚ್ಚುಮೆಚ್ಚಿನ ಆಟಿಕೆ

Saturday 3 December, 2011



ಹೆದರಿ ಅಡಗಿ ಕುಳಿತಿರುವೆ ಏಕೆ ರವಿಯೆ
ಇರುಳು ಕಳೆಯುವ ಸಮಯವಾಯಿತು ಬೇಗ ಬಾ,
ಹಕ್ಕಿಗಳು ಹೇಳುತಿದೆ ನಿನ್ನಾಗಮನಕೆ ಪರಾಕು
ಕೇಳುವ ಆಸೆ ನಿನ್ನೊಳಗಿದ್ದರೆ ನೀ ಭುವಿಗೆ ಬಾ,
ಬಾನಿನಂಗಳದಿ ಚಂದಿರನ ಕೋಟಿ ತಾರೆಗಳ ಸೈನ್ಯವಿಲ್ಲ
ಆ ಅಂಜಿಕೆಯ ತೊರೆದು, ಶರಧಿಯ ಮುಸುಕ ತೆರೆದು,
ಬೆಟ್ಟ ದಿಬ್ಬಗಳನೇರಿ ಬಾ, ನೀ ಧರೆಗೋಡೋಡಿ ಬಾ
ನನ್ನ ಮೌನದ ತಾಕತ್ತು 


ನನಗೆ ಗೊತ್ತೇ ಇರಲಿಲ್ಲ;

ಅವಳು ತನ್ನೆಲ್ಲಾ ತಪ್ಪುಗಳ


ಮೆಲುಕು ಹಾಕುತಿಹಳಲ್ಲ ..!!

Friday 2 December, 2011




ಬಾನ ಬಿರಿವಂತ ಸಿಡಿಲಿಗೂ ನನ್ನ ಸುಡಲಾಗದು,
ನಾ ನಿನ್ನ ನೆರಳಿನಡಿಯಲಿದ್ದರೆ...
ಯುದ್ಧ ತರುವ ಸಾವಿಗೂ ಕೂಡ ನೋವ ಕೊಡಲಾಗದು , 
ನೀ ನನ್ನೆದೆಯ ಮೇಲಿದ್ದರೆ..

Wednesday 30 November, 2011




ಪ್ರತೀ ಇರುಳು
ಕಡಲಿನಾಳದಿಂದ 
ಅದ್ಯಾವ
ಮುತ್ತು ರತ್ನಗಳ 
ಕದ್ದು ತರುವೆ ?
ಕಣ್ಣು ಕೋರೈಸುವ 
ಆ ರತ್ನಗಳ
ಮೈ ತುಂಬಾ ಧರಿಸಿ
ಜಗಕೆ ನೀ 
ಬೆಳಕ ಕೊಡುವೆ.
ನಿಜಕೂ ಇದು
ನಿನಗೆ ತರವೇ?

Monday 28 November, 2011




ಕವಿ ಹೃದಯದ
ಗೆಳೆಯ-ಗೆಳತಿಯರ 
ಈ ಗುಂಪು
ಒಂದು ರೀತಿಯಲಿ
ಸರಿಸಮವು ದೇವಲೋಕದ
ಉದ್ಯಾನವನಕೆ;
ಕಣ್ಮನ ತಣಿಸುವ
ಪ್ರೇಮ ಕಾವ್ಯಗಳ ಸುಮವ
ಕೊಟ್ಟಿಹವು ಹಲವು
ಕವಿ ಗಿಡಗಳು,
ಇಲ್ಲಿನಾಕರ್ಷಣೆಯ
ಹೆಚ್ಚಿಸುವುದಕೆ;
ಜೀವನದ ಸಾರಾಮೃತವನೆ
ರುಚಿಯನಾಗಿಸಿಹ ಕಾವ್ಯಗಳ ಫಲವ
ಕೊಟ್ಟಿಹವು ಹಲವು
ಕವಿ ಮರಗಳು,
ಓದುಗನೆಂಬ ಪ್ರಕೃತಿ ಪ್ರೇಮಿಯ
ಹಸಿವನಿಲ್ಲದಂತಾಗಿಸುವುದಕೆ;
ಈ ಉದ್ಯಾನವನದೊಳಗೆ
ನನಗೊಂದು ನೆಲೆ
ಕೊಟ್ಟಿರುವರೆನುವುದೇ
ನನ್ನ ಪಾಲಿನ ಹೆಗ್ಗಳಿಕೆ;
ಫಲ ಪುಷ್ಪಗಳ ನೀಡದಿದ್ದರೇನಂತೆ?
ನಾನಾಗಿರುವೆ ಈ ತೋಟದ ನೆಲಕೆ,
ಹಸಿರನೀವ ಬರಿಯ ಹುಲ್ಲು ಗರಿಕೆ.

Saturday 26 November, 2011







ವರುಷ ಮೂರು ಕಳೆದು ಹೋಗಿದೆ,
ನೆನಪು ಮನದೊಳಗಿಂದೂ ಅಚ್ಚಳಿಯದುಳಿದಿದೆ,
ಬತ್ತದಾ ಕಣ್ಣೀರಿಂದೂ ಉಕ್ಕಿ ಹರಿದಿದೆ,
ಆದರೇಕೋ ಕುದಿಯಬೇಕಾಗಿದ್ದ ನೆತ್ತರು ಮಾತ್ರ ಹೆಪ್ಪುಗಟ್ಟಿದೆ.

ನಮ್ಮ ರಕ್ಷಣೆಗೆ ಸಲುವಾಗಿ ತಮ್ಮ ಪ್ರಾಣವನೆ ಮುಡಿಪಾಗಿಟ್ಟರವರು
ನಮ್ಮ ಹಿಂದೆ ಸರಿಸಿ ಬರುತ್ತಿದ್ದ ಗುಂಡಿಗೆ ತಮ್ಮ ಗುಂಡಿಗೆಯನೆ ಇತ್ತರವರು
ನಮ್ಮ ರಕ್ತ ತೊಟ್ಟಿಕ್ಕಬಾರದೆಂದು, ತಮ್ಮ ರಕ್ತವನೆ ಹರಿಸಿದರು ಅವರು
ಆದರೇಕೋ ಅವರ ಬಲಿದಾನವನೆ ಮರೆತಿಹರು, ನಮ್ಮನಾಳುವವರು.

ಪಾತಕಿಯ ಉಪಚರಿಸಲು ಇಲ್ಲಿಹುದು ಕೋಟಿ ಕೋಟಿ ಹಣವು
ಕಾಣದಿವರಿಗೆ ಪ್ರಾಣ ತೆತ್ತೆ ಸಂಸಾರ ಸಹಿಸುತಿಹ ನೋವು
ಬನ್ನಿ ಕೈ ಜೋಡಿಸೋಣ ಇವರುಗಳ ಕಣ್ಣೀರೊರೆಸಲು ನಾವು
ಕೊಡಿಸುವುದಕೆ ಹೋರಾಡೋಣ, ಕಸಬ್ ಎಂಬ ಉಗ್ರನಿಗೆ ಸಾವು.

ಅಪ್ರತಿಮ ವೀರರ ನಾಡಲಿ ಹುಟ್ಟಿಹ ನಾವೇಕೆ ಸತ್ತಂತೆ ಮಲಗಿಹೆವು?
ನಮ್ಮ ಹೊತ್ತಿರುವ ಮಾತೆಯ ಕರುಳ ಬಗೆದವಗೆ ಅತಿಥಿಯ ಸ್ಥಾನವನೇಕೆ ಕೊಟ್ಟಿಹೆವು?
ಜಗವೆ ನಗುತ್ತಿದ್ದರೂ ನಾವೇಕೆ ಕೈಯ ಕಟ್ಟಿ ಶಂಡರಂತೆ ಕುಳಿತಿಹೆವು?
ತೊಡೆ ತಟ್ಟಿ ನಿಲ್ಲೋಣ, ಜಗಕೆ ಸಾರಿ ಹೇಳೋಣ
ಇಂತಹಾ ದಿನವ ಮತ್ತೆಂದು ಬರಲು ಬಿಡೆವು, ಮತ್ತೆಂದು ಬರಲು ಬಿಡೆವು.

Thursday 24 November, 2011

ಭಾರತದ 
ಜನರಿಗೆಲ್ಲಾ
ಈಗ 
ಡೈಲಿ "worry"
ವಿಷಯ
ಯಾವಾಗಾಗುತ್ತೋ
ನಮ್ಮ ಐಶು
ಡೆಲಿವರಿ


ಬಾ ರವಿಯೆ




ನಿನ್ನೆ ರಾತ್ರಿ ಕಂಡ
ಸಾಧಕನಾಗುವ
ಕನಸೆನುವ ಕೂಸಿಗೆ
ಜೀವ ನೀಡಲು ಸಾಧ್ಯ,
ಬರಿಯ ನಿನ್ನ ಬೆಳ್ಳಿಯ ಕಿರಣಕೆ.
ನನ್ನ ಪರಿಶ್ರಮದ
ಪ್ರೇಮಧಾರೆಯೂ ಬೇಕು,
ಈ ಕಂದನ ಬೆಳವಣಿಗೆಗೆ;
ಬೆಳೆಸುವಾಸೆ ಓ ರವಿಯೆ,
ಅದಕಾಗಿ ಜೀವ ನೀಡಲು ಬಾ
ನನ್ನ ಮುದ್ದು ಕನಸಿಗೆ,
ವಿದಾಯವ ಹೇಳಿ ಆ ಶರಧಿಗೆ. 

Wednesday 23 November, 2011

ಚಿತ್ರ ಕವನ



ಮೋಡವೆನುವ
ಸಾಗರದೊಳಗಿಂದ,
ಹುಡುಕಿ ತಂದ,
ಅಪರೂಪದ ನೀರಹನಿಗಳ
ಮುತ್ತುಗಳಿಂದ
ಮನೆಯ ಸಿಂಗರಿಸಿರುವೆ;
ಈ ಚೆಲುವಿಗೆ 
ಮಾರು ಹೋಗಿ
ನನ್ನ ಮನೆಗೋಡಿ ಬರುವ
ಅತಿಥಿಗಳನೇ ಬೇಟೆಯಾಡಿ
ಹಸಿದ ಹೊಟ್ಟೆಯನು
ತಣಿಸಬೇಕೆಂದುಕೊಂಡಿರುವೆ.

Monday 21 November, 2011

ಏಕಲವ್ಯ


ಕವಿ ಎಂದೆನಿಸಿಕೊಂಡವನು
ಒಂದು ರೀತಿಯಲಿ
ಏಕಲವ್ಯನಂತೆ;
ಗುರುವಿರದೆ ಕಲಿತ
ವಿದ್ಯೆಯೇ ಕವನ ರಚನೆ;
ಸಾಹಿತ್ಯ ಕ್ಷೇತ್ರದಲಿ
ದ್ರೋಣರಂತಿರುವವರ
ರಚನೆಗಳ ಅಧ್ಯಯನವೇ
ಈ ಕವಿಗಳಿಗೆ ಕಲಿಕೆ;
ಈ ಕಲಿಕೆಯಿಂದಾಗಿ
ಸಿಗುವ ಅನುಭವವೇ
ಇವರುಗಳ ಸ್ವಂತ
ರಚನೆಗೆ ವೇದಿಕೆ.

Monday 14 November, 2011

ಕಹಿ ಸತ್ಯ


ಪಯಣಿಸುತಿರಲೊಮ್ಮೆ,
ಅರ್ಧ ತೆರೆದಿದ್ದ
ಬಸ್ಸಿನ ಕಿಟಕಿಗೆ
ತಲೆಯೊರಗಿಸಿ
ಕಣ್ ಮುಚ್ಚಿರಲು,
ಜೋರಾಗಿ ಬೀಸುತ್ತಿದ್ದ
ತಂಗಾಳಿಯು
ಮನವ ಮುದಗೊಳಿಸಿರಲು,
ತಂಪಾದ ಹನಿಯೊಂದು
ಬಂದು ನನ್ನ ಕೆನ್ನೆಯಲಿ
ಆಶ್ರಯವ ಪಡೆಯಿತು.
ಕ್ಷಣಾರ್ಧದಲಿ ಮನದ
ಭಾವನೆಯು ಕಲ್ಪಿಸತೊಡಗಿತು,
ನನ್ನವಳೇ ಹನಿಯಾಗಿ ಬಂದು
ಸಿಹಿ ಮುತ್ತೊಂದ ಕೊಟ್ಟಳೇ?
ಆ ಹನಿಯೊಳಗೆ
ಅವಳ ಕಾಣಬಯಸಿ,
ಬೆರಳ ತುದಿಯಲೊರಸಿ
ನೋಡಿದರೆ,
ಅದು ಹಸಿರು ಮಿಶ್ರಿತ
ಕೆಂಪು ಬಣ್ಣದ ಹನಿಯಾಗಿತ್ತು.
ಮನವು ಮತ್ತೆ ಯೋಚಿಸಿತು,
ಕೋಪಗೊಂಡಿರುವಳೇ ಅವಳು?
ಈ ಎಲ್ಲಾ ಭಾವನೆಗಳ
ನುಚ್ಚುನೂರಾಗುವಂತೆ ಮಾಡಿದ್ದು,
ನನ್ನೊಡಲನು ಕೋಪದಲಿ
ಕೆಂಪಾಗುವಂತೆ ಮಾಡಿದ್ದು,
ಕಹಿ ಸತ್ಯದರಿವು.
ನಿಜ ರೂಪವ ತೋರಿದಾಗ
ಈ ಕೆಂಪು ಹನಿಗಳು
ಮನದೊಳಗೆ ಮೂಡಿದ್ದು
ಸಾವಿರಾರು ಬೈಗಳು.
ನಾನೆನೆಸಿಕೊಂಡಿದ್ದ
ಅವಳೆನುವ ಹನಿಗಳು;
ವಾಸ್ತವದಲಿ ಆಗಿತ್ತು
ನನ್ನೆದುರಲ್ಲಿ ಕುಳಿತ್ತಿದ್ದವನ
ಪಾನಿನುಗುಳು.


ಅವಳಿಗಿಂತ ಅವಳ
ನೆನಪೇ ವಾಸಿ,
ಅವಳಷ್ಟು ಕಲ್ಲು
ಹೃದಯ ಅದರದಲ್ಲ;
ನಾನೊಂಟಿಯಾಗಿರಲು
ಬಂದಪ್ಪಿಕೊಳ್ಳುವುದು,
ನನ್ನೇಕಾಂತ
ಭಂಗವಾಗುವವರೆಗೆ
ಬಿಟ್ಟು ಹೋಗುವುದಿಲ್ಲ.

Sunday 13 November, 2011


ಅಣ್ಣಾ ಹಜಾರೆಯವರ
ಹೋರಾಟಕ್ಕೆ
ಬೆಂಬಲ ಕೊಡುವ ಬಗೆಗೆ
ವರದಿಗಾರನೋರ್ವ
ಸಂಗ್ರಹಿಸಿದ
ದೇಶದೊಳಗಿಹ
"ಪತಿ"ಯರೆಲ್ಲರ
ಅಭಿಮತ;
ಒಂದೇ ಒಂದು
ಷರತ್ತಿನಡಿಯಲ್ಲಿ
ಬೆಂಬಲಿಸುವರಂತೆ
ಅಣ್ಣಾರವರು ಮಾಡುವಂತೆಯೇ
ಇವರ ಪತ್ನಿಯರು
ಮಾಡಬೇಕಂತೆ
ತಿಂಗಳಿನಲಿ ಕನಿಷ್ಟ
ಒಂದಿಪ್ಪತ್ತು ದಿನ
ಮೌನವ್ರತ.
ಮಂಜಿನ ಹನಿಯ ತೆರೆಯನು ಸರಿಸಿ

                                                                                        
 ಕಡಲಿನ ನೀರಿನ ಜಳಕವ ಮುಗಿಸಿ

                                                                                        
  ಬಾ ರವಿಯೆ ಈ ಭುವಿಗವತರಿಸಿ

Thursday 10 November, 2011

ಅನಾಥ ಶಿಶು


ಅವಳ ಜೊತೆ
ಕಳೆದ ಸುಮಧುರ
ಕ್ಷಣಗಳ
ನೆನಪುಗಳೆನುವ
ಕ್ರೂರ ವೈರಿಯ
ಅತ್ಯಾಚಾರಕ್ಕೆ
ನನ್ನ ಕಂಗಳಿಂದು
ಬಲಿಪಶು;
ಇದರಿಂದಾಗಿ
ಬಸುರಾದ
ನನ್ನ ಕಂಗಳು,
ಹಡೆದಿರುವ
ಕಣ್ಣೀರೆನುವ ಕೂಸು,
ನನ್ನ ಕೆನ್ನೆಯೆನುವ
ಕಸದ ತೊಟ್ಟಿಯಲಿಂದು
ಒಂದು ಅನಾಥ ಶಿಶು.
ವೀರ "ಕುಮಾರ"

ಎಲ್ಲರೆದುರು ಮದುವೆಯಾಗಿ
ಪತ್ನಿಗೆ "ಸ್ವಾಮಿ" ಯಾದನೋರ್ವ
ಮಾಜಿ ಮುಖ್ಯಮಂತ್ರಿಯ  ಕುವರ

ಚಪಲದಿಂದ ಬಯಸಿ ನಟಿಯ
ಪಡೆಯಲವಳ ಬಳಿ ಹೇಳಿಕೊಂಡದ್ದು
ನೋಡು ನಾ ನಿನ್ನೂ "ಕುಮಾರ"

"ಕು"-ಮಾರ ಎನುವ ವಾಸ್ತವದ
ಅರಿವಿದ್ದರೂ ನಟಿಯೊಪ್ಪಲು ಕಾರಣ
ಅವನೀ ಕಾಲದ ಕುಬೇರ

ಮೊದಲಿನವಳಿಗೆ ಮಾತ್ರ ನೈತಿಕ ಹಕ್ಕು "ಸ್ವಾಮಿ" ಎಂದೆನಲು
ಮತ್ತೊಬ್ಬಳಿಗೆ ಆ ಹಕ್ಕಿಲ್ಲ; ಇವಳಿಗಿನ್ನೂ ಅವ ವೀರ "ಕುಮಾರ"
ಯಾಕೆಂದರೆ ಜಗಕಂಜದೆ ಕೊಟ್ಟನಲ್ಲ, ಮಗುವಿಗೆ ತನ್ನುತ್ತರಾರ್ಧದ ಹೆಸರ.

ಒಟ್ಟಿನಲಿ ಮೆಚ್ಚಲೇಬೇಕಾದ ತಾಕತ್ತು ಇವನದು
ಈ ರಾಜಕೀಯದ ಡೊಂಬರಾಟದ ನಡುವೆಯೂ
ಇಬ್ಬರನು ಸಂತೈಸಿ ಸಾಗಿಸಿತಿಹನಲ್ಲ ಎರಡೆರಡು ಸಂಸಾರ.

Wednesday 2 November, 2011

ಮೋಜು

ನಮಗೆ ನಡೆಯುತ್ತಿರುವುದು ಈಗ ಟೀನೇಜು
ಹಾಗಾಗಿ ಕಾಲೇಜು ಲೈಫಲ್ಲಿ ಮಾಡೋಣ ಮೋಜು
ಎಂದು ಸದಾ ಹೇಳುತಿದ್ದ ನನ್ನ ಗೆಳೆಯ ಮಂಜು
ಅದಕ್ಕವನಿಗೆ ಸಿಕ್ಕಿತು ಇನ್ನಿಬ್ಬರ ಭಾರೀ ಎನ್ಕರೇಜು
ಅಂದಿನಿಂದ ಅವರಿಗಾಯಿತು ಸಿನಿಮಾ ಟಾಕೀಸೇ ಕಾಲೇಜು
ರಿಸಲ್ಟಿನಂದು ಮಾತ್ರ ನುಡಿದರು, ಅತಿಯಾಯ್ತೇನೋ ನಮ್ಮ ಮೋಜು
ಬೇಸರದಲಿದ್ದ ಅವರೊಡನೆ ಕೇಳಿದೆ ಮುಂದೇನು ಮಾಡುವ ಅಂದಾಜು?
ಸಪ್ಪೆ ಮುಖದಲಿ ನುಡಿದರು "ವರ್ಕಿಂಗ್ ಇನ್ ದಿ ಗ್ಯಾರೇಜು"

Sunday 30 October, 2011

ಮತ್ಯ ಕನ್ಯೆ

ನಿದಿರೆಯಾ ಕೊಳದಲ್ಲಿ
ಅತ್ತಿತ್ತ ಈಜಾಡೋ
ಕನಸುಗಳೆಂಬ 
ಜಲಚರಗಳು
ಇರುವುದದೆಷ್ಟೋ.
ಆದರೂ ಪ್ರತಿ ಸಲವೂ
ನನ್ನ ಯೌವನದ ಗಾಳಕ್ಕೆ
ಸಿಕ್ಕಿ ಬಿದ್ದದ್ದು ಬರೀ 
ನನ್ನವಳೆನುವ ಮತ್ಯಕನ್ಯೆ.

Monday 24 October, 2011


ಪ್ರೇಮ ಪತ್ರವೇ

ಪ್ರೀತಿಯ ಸಾಲುಗಳಲಿನ ಮುತ್ತಿನಾಕ್ಷರವೇ
ನೀರಿನಾ ಹನಿಯಂತೆ ಸುರಿಯಬಾರದೇ?
ಅದ ಕೊಂಡೊಯ್ಯೋ ಪ್ರೇಮಪತ್ರವೆಂಬ ಮೇಘವೇ
ನನ್ನ ಸೌಖ್ಯವನು ತಿಳಿಸಿ ಅವಳ ಸಂತೈಸಲಾಗದೆ ?

ಕಾದಿಹಳು ದಿನ ನಿತ್ಯ ಈ ಮಳೆ ಬಂದರೂ
ಬರಗಾಲದಿ ಮಳೆಯನು ಆಶಿಸುವರಂತೆ
ನಿನ್ನ ಸುರಿಯುವಿಕೆಗೆ ಸ್ವಲ್ಪ ತಡವಾದರೂ
ಆಗುವುದಂತೆ ಆಕೆಗೆ ಚಿತೆಯನೇರಿ ಬಿಡುವಂತೆ ಚಿಂತೆ

ಅವಳೆನಗೆ ತಿಳಿಸಬಯಸುವ ವಿಷಯಗಳಿರಬಹುದು ಹಲವು
ಆವಿಯಂತೆ ಅವುಗಳನು ಹೀರಿ ನೀ ಬಾ ಬೆಳಕಿನ ವೇಗದಲಿ
ಇಂಗಿ ಹೋದ ನನ್ನ ಮನದ ಪ್ರೀತಿಯ ಕೊಳವು
ತುಂಬಿ ತುಳುಕಲಿ, ನೀ ತಂದ ಜಲಧಾರೆಯಿಂದಲಿ.

Sunday 23 October, 2011


ಮಳೆ

ನನ್ನ ದೇಹಕ್ಕಂಟಿಕೊಂಡಿದೆ
ನರರು ಮಾಡಿರುವ ಪಾಪದ ಕೊಳೆ
ಈ ಹೊಲಸು ಕೊಳೆಯನು
ನೀನಾದರೂ ಬಂದು ತೊಳೆ
ಎಂದು ಮೇಘರಾಜನೊಡನೆ
ಹೇಳಿರುವಳೇನೋ ಇಳೆ
ಅದಕಾಗಿಯೆ ಇರಬೇಕು
ಬರುತಿರುವುದು ಜೋರಾದ ಮಳೆ.

ನಿವೇದನೆ

ಚೆಲುವೆ ನೀ
ನನ್ನನು ಪ್ರೀತಿಸು
ಎಂದು ನಾ
ಮಾಡಿದ್ದೆ ನಿವೇದನೆ
ಮಾಡಲಾರೆ
ಎಂದು ಹೇಳಿ
ಕೊಡಬಹುದೇ ನನಗೆ
ನೀ-ವೇದನೆ?

Saturday 22 October, 2011



ಕತ್ತಲಿನ ಕೋಣೆಯಲಿ
ಏಕಾಂಗಿಯಾಗಿ ಅಳುತಿರಲು
ನಾ ನನ್ನವಳ ನೆನೆದು;
ಜಗಕಿದನು ತೋರಿಸಿ 
ಜನರ ನಗಿಸಲು
ಬಂದೆಯಾ ಬೆಳಕೆ
ಕಿಟಕಿಯನು ತೆರೆದು.

Thursday 20 October, 2011



ಯಾರಂದವರು ಉಸಿರಿರಲೇಬೇಕೆಂದು;

ಈ ಜಗದೊಳಗೆ ನಾ ಬದುಕಿರಲು

ಏನಿಲ್ಲದೆಯೂ ಬದುಕ ಬಲ್ಲೆ ನಾ

ಹೆತ್ತೊಡಲ ಬಿಗಿಯಪ್ಪುಗೆಯಲಿ ನಾನಿರಲು.

ಸಾಯುವುದಾದರು ಹೇಗೆ?

ಅವಳುಸಿರೇ ನನ್ನುಸಿರಾಗಿರಲು.




ನನ್ನಿನಿಯನಿಗಿರಲು 

ಅಷ್ಟೊಂದು ದೊಡ್ಡ

ಅರಮನೆ;

ನನಗಾಗಿ

ಅದನವನು 

ಬಿಟ್ಟು ನನ್ನ 

ಬಳಿ ಬರುವನೆ?







Wednesday 19 October, 2011


ಬುದ್ಧಿವಂತ ಪಾರಿವಾಳ

"ಬುದ್ಧಿವಂತ ಪಾರಿವಾಳಗಳು"
ಎಂದು ಮಾರಾಟ ಮಾಡುತ್ತಿದ್ದ
ಹಕ್ಕಿ ಮಾರಾಟಗಾರನಿಂದ ತಂದ
ಪಾರಿವಾಳದ ಬುದ್ಧಿಮತ್ತೆಯ ಬಗೆಗೆ
ನನಗಿರಲಿಲ್ಲ ಅಷ್ಟೊಂದು ವಿಶ್ವಾಸ
ನಾನದನು ಕೊಂಡು ಕೊಂಡಾಗ;
ತಲೆದೂಗಲೇ ಬೇಕಾದ
ಅದರ ಬುದ್ಧಿವಂತಿಕೆಯ
ಪರಿಚಯವಾಯಿತೀಗ;
ನಾ ಕೊಟ್ಟ ಪ್ರೇಮಪತ್ರವನು
ನನ್ನ ಪ್ರೇಯಸಿಗೆ ಬದಲಾಗಿ
ಅದು ಅದನವಳಪ್ಪನಲಿ
ಕೊಂಡೊಯ್ದು ಕೊಟ್ಟಾಗ.

ಅಂತರ

ನನ್ನ ಅವಳ
ನಡುವಿನ
ಪ್ರೀತಿಯನವಳು
ಮುರಿದ
ನಂತರ;
ನಮ್ಮಿಬ್ಬರ
ನಡುವಲಿ
ಉಂಟಾಗಿದೆ
ಸಾವಿರ
ಮೈಲುಗಳ
ಅಂತರ

Tuesday 18 October, 2011


ಬೋಳು ಮರದಂತೆ 

ನಗ್ನವಾಗದಿರು
ನನ್ನವಳ ಮೊಗವೆ
ನಗು ಎನುವ
ಉಡುಪನು ಧರಿಸದೆ;
ಅಂದವಾಗಿರದದು
ಎಲೆಗಳಿಲ್ಲದ
ಬೋಳು ಮರದಂತೆ
ಹಸಿರು ಜೊತೆಗಿಲ್ಲದೆ.

ಅತ್ತೆ

ಪೋಸ್ಟ್ ಮ್ಯಾನ್ ತಂದು
ಕೊಟ್ಟ ಕಾಗದವನು ಓದಿ
ನಾ ಒಳಗೊಳಗೆ
ಬೇಸರದಿ ಅತ್ತೆ.
ವಿಷಯವಿಷ್ಟೆ
ಈ ದೀಪಾವಳಿಗೆ
ಮನೆಗೆ ಬರುವರಂತೆ
ನನ್ನ ಅತ್ತೆ.

Monday 17 October, 2011


ಆಗ-ಈಗ

ನನ್ನವಳ ಮುಖದಲ್ಲಿ
ನಗೆಯ ಮೋಡ ಕವಿದು
ಮಾತಿನ ಮಳೆಯಾಗುತಿತ್ತು
ಅಂದು ನನ್ನ ಕಂಡಾಗ;
ಮೋಡ ಕವಿಯುವುದಿರಲಿ,
ಮಳೆ ಬರುವುದು ಹಾಗಿರಲಿ,
ಇಲ್ಲವೇ ಇಲ್ಲ ನೋಟವೆಂಬ
ತಂಗಾಳಿ ಕೂಡ, ನನ್ನೆಡೆಗೆ ಈಗ.
ಕೆ.ಪಿ.ಟಿ ಕ್ಯಾಂಟೀನು

ಎಲ್ಲಾ ಕಾಲೇಜುಗಳಲಿ ಇರುವಂತೆ ಇದೆ
ನಮ್ಮ ಕೆ.ಪಿ.ಟಿಗೂ ಒಂದು ಕ್ಯಾಂಟೀನು.
ದೊರೆಯುವುದು ಊಟ ಮತ್ತು ನಾಲ್ಕಾರು ಬಗೆಯ ತಿಂಡಿಗಳು
ಆದರೆ ಬಯಸಬಾರದು ಅದರೊಳಗೆ ನಾವು ರುಚಿಯನ್ನು.

ಒಳಹೊಕ್ಕು ತಿಂಡಿಗಾಗಿ ಹಣ ನೀಡಿದೊಡನೆ ನಮ್ಮ
ಕೈ ಸೇರುವುದು ಮರಣವಿರದ, ಬಲಹೀನ ಕೂಪನ್ನು;
ಸವೆದರೂ ಸಾಯದೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿ
ಉಳಿಸಿಕೊಡುವುದದು ಮಾಲೀಕರಿಗೆ ಪ್ರಿಂಟಿಂಗ್ ಚಾರ್ಜನ್ನು.

ಊಟ, ದೋಸೆಗಳ ತಿನ್ನಲಿಲ್ಲಿ ಅಡ್ಡಿಯಿಲ್ಲ
ಆದರೆ "ಬನ್ಸು" ತಿನ್ನಲು ಮಾತ್ರ ಸ್ವಲ್ಪ ಕಷ್ಟ
ಬುತ್ತಿ ತರುವ ವಿದ್ಯಾರ್ಥಿಗಳು ಸಾಂಬಾರನು ಕೊಳ್ಳುವರು
ಆಗದಿದ್ದರೂ ಅದು ಅವರ ನಾಲಿಗೆಗೆ ಇಷ್ಟ.

ತೆಂಗಿನ ತುರಿಗಳು ಉಪ್ಪುಖಾರದ ನೀರಿನಲಿ ತೇಲುತ್ತಿದ್ದರೆ
ಅದುವೇ ಇಲ್ಲಿನ "ಸಾಂಬಾರು"
ಬರಿಯ ತೆಂಗಿನ ತುರಿಯು ಒತ್ತೊತ್ತಾಗಿದ್ದರೆ
ಅದಕೆ "ಚಟ್ನಿ" ಎನ್ನುವ ಹೆಸರು.

ಗಶಿಯೊಳಗೆ ಇರುವುದು ೩ ಬಗೆಗಳು
ಮೊನ್ನೆಯ "ಸೌತೆ", ನಿನ್ನೆಯ "ಹೆಸರು", ಇಂದಿನ "ಬೀಟ್ ರೂಟು"
ಮೂರು ದಿನದ ಗಶಿಯನ್ನು ಒಂದು ಮಾಡುವ ಉದ್ದೇಶ
ವೇಸ್ಟು ಆಗದಿರಲೆಂದು, ಮೊನ್ನೆ ನಿನ್ನೆಯ ಟೇಸ್ಟು.

ಬೇರೆಡೆಗೆ ಹೋಲಿಸಿದರೆ ರೇಟು  ಕಡಿಮೆಯಾಗಿರುವುದರಿಂದ 
ಬಡ ವಿದ್ಯಾರ್ಥಿಗಳು ತೋರಲಾರರು ಪ್ರತಿಭಟಿಸುವ ಧೈರ್ಯ .
ಆದುದರಿಂದ ಇಲ್ಲಿಗೇ ಬರುತ್ತಿರುತ್ತಾರೆ;
ಮನಸಿದ್ದು ಅಲ್ಲ, ಇದು ಅವರಿಗೆ ಅನಿವಾರ್ಯ

Sunday 16 October, 2011

ಯುಗ ಯುಗಕೂ
ಸಾಕ್ಷಿಯಾಗಿರುವ
ಸಾವಿಲ್ಲದ ಸೂರ್ಯನಿಗೂ
ದಿನವೊಂದರಲೇ
ಹುಟ್ಟು ಸಾವುಗಳು
ಬರುವುದು
ಕವಿಯಿಂದ;
ಉರಿಕಿರಣಗಳ ಬಿಟ್ಟು
ಈ ಕವಿಗಳ
ಸುಟ್ಟು ಹಾಕಬೇಕೆಂದೆನಿಸಿದರೂ
ಸುಡಲಾಗಲಿಲ್ಲವಂತೆ
ಕಂಡಾಗ ಕಾವ್ಯದ 
ರಸದೌತಣವ
ಉಂಡವರ ಆನಂದ.
ದೊಡ್ಡ
ಸಾಧನೆಯ
ಕನಸುಗಳು
ಉದಯಿಸಲು
ಬಾನ
ರವಿಯ
ಅಂತ್ಯ
ಅನಿವಾರ್ಯ
ತಾನೆ

Saturday 15 October, 2011


ಸಾವಿದೆ

ಚಿಗುರಿಗೆ ಪುನರ್ ಜನ್ಮವಿಲ್ಲದೆ, ಹಸಿರಿಗಿಲ್ಲಿ ಸಾವಿದೆ.
ನನ್ನ ಪ್ರೀತಿ ಎಂಬ ಮರವು, ಇಂದು ಒಣಗಿ ಹೋಗಿದೆ.

ನೀರ ಹನಿಗೂ ಸ್ಥಾನವಿಲ್ಲದೆ, ತಂಪಿಗಿಲ್ಲಿ ಸಾವಿದೆ.
ನನ್ನ ಪ್ರೀತಿ ಎಂಬ ನದಿಯಲಿ, ನೀರೆಲ್ಲಾ ಆರಿ ಹೋಗಿದೆ.

ಆಗಸದಿ ಮೋಡವು ಇಲ್ಲದೆ, ಮಳೆಯ ಹನಿಗೆ ಸಾವಿದೆ.
ನನ್ನ ಪ್ರೀತಿ ಎಂಬ ಭುವಿಯಲಿ ಬರವು ಬಂದಂತಾಗಿದೆ.

ಅವಳ ಪ್ರೀತಿಯ ನೋಟವಿಲ್ಲದೆ, ನನ್ನ ಪ್ರೀತಿಗೆ ಸಾವಿದೆ
ನನ್ನ ಪ್ರೀತಿ ಎಂಬ ತನುವಲಿ ಆತ್ಮ ಇರದಂತಾಗಿದೆ.

ನನ್ನ ಬಾಳಲಿ ನಿನ್ನ ಪ್ರೀತಿ ಇಲ್ಲದೆ, ನನ್ನ ಸುಖಕೆ ಸಾವಿದೆ
ಇಂದೆನ್ನ ಬಾಳಲಿ, ನಗುವು ಮಾಯವಾಗಿದೆ; ನೋವು ಅಮರವಾಗಿದೆ.

ಮೃತ್ಯು

ಆಸೆಗಳನು ತೊರೆದವನಿಗೆ ಅದೇ ಏಕೈ ಆಸೆ
ಆಸೆಗಳ ಹೊತ್ತವನಿಗೆ ಅದು ಅತ್ಯಂತ ಕೆಟ್ಟ ಗಳಿಗೆ
ಯೋಗಿಯೋರ್ವನಿಗೆ ಅದು ಸಂತಸದ ಕ್ಷಣ
ಯೋಧನೋರ್ವನಿಗೆ ಅದು ವೀರತ್ವದ ಸಂಕೇತ
ಆತ್ಮಹಂತಕನಿಗೆ ಅದು ಪರಮೋಚ್ಛ ಗುರಿ
ಆಂಜನೇಯನಿಗೋ ಅದು ಎಟುಕಲಾರದ ಹಣ್ಣು
ಕವಿಗೆ ಅದು ಕವಿತೆಯ ಕೊನೆಯ ಸಾಲಿನ ಪೂರ್ಣ ವಿರಾಮ
ರವಿಗೆ ಅದು ದಿನ ನಿತ್ಯದ ಸಾಮಾನ್ಯ ನೋಟ
ಕೊಲೆಯ ಮಾಡುವವಗೆ ಅದು ಕಾಯಕ
ಅಪರಾಧಿಗೆ ಅದು ನ್ಯಾಯಾಲಯದ ಅತಿ ದೊಡ್ಡ ಉಡುಗೊರೆ
ಒಟ್ಟಿನಲಿ, ನೋಡಿ ಅಪರಿಚಿತ; ಕೇಳಿ ಪರಿಚಿತ.
ಯಾವ ಕ್ಷಣದಲಿ ಯಾವ ಸ್ಥಳದಲಿ ಯಾವ ಸ್ಥಿತಿಯಲಿ
ಬರುವುದೋ ತಿಳಿಯದು ನಮ್ಮ ಬಾಳ ಪಯಣದಲಿ
ಜಾತಿ, ಅಂತಸ್ತುಗಳ ಬೇಧವಿಲ್ಲದೆ ಬರುವುದು ಮಾತ್ರ ಖಂಡಿತ
ಬಂದೊಡನೆ ಸಿಗುವುದು ನಾವುಗಳೆಂಬ ಹಕ್ಕಿಗೆ
ಸಮಸ್ಯೆಗಳೆಂಬ ಪಂಜರದಿಂದ ಆಗಸದೆಡೆಗೆ ಹಾರುವ ಸ್ವಾತಂತ್ರ್ಯ.

ಪತಿ ಪತ್ನಿ

ಪತಿಯರೆಲ್ಲರೂ ಕಡಲೊಡಲಿನ
ಅಬ್ಬರದ ದೈತ್ಯ ಅಲೆಗಳಂತೆ
ನೋಡುಗರಿಗೆ ಕಂಡರೂ
ಎಲ್ಲರನು ನುಂಗುವಂತೆ;
ಪತ್ನಿಯರೆನುವ ದಡದ ಬಳಿ ಬರುತ್ತಿದ್ದಂತೆ
ತಗ್ಗಿ ಬಗ್ಗಿ ಕುಗ್ಗಿ ಬರುವಂತೆ
ಅಬ್ಬರವೂ ನೊರೆಯಾಗಿ ಮರೆಯಾಗುವುದಂತೆ.

ಒಂದು ಕಣ್ಣೀರ ಹನಿ

ಜಗದ ತೀಕ್ಷ್ಣ ಕಂಗಳಿಗೆ ಕಾಣದಂತೆ
ಕದ್ದು ಮುಚ್ಚಿಟ್ಟಿದ್ದ ನನ್ನ 
ಒಡಲಾಳದ ನೋವಿನ ಕತೆಯ
ಸಾರಿ ಹೇಳಿತೆ..?
ನನ್ನ ಕಣ್ಣಿನಾ ಹೊಸ್ತಿಲನು ದಾಟಿ 
ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಕುತೂಹಲದಿ ನೋಡುವ ಜನರ
ಮುಂದೆ ಅಂಕದ ಪರದೆಯನೆಳೆದು
ಒಳಗೊಳಗೆ ನಡೆದಿತ್ತು;
ಮನದ ವಿರಹದುರಿಯ ನಾಟಕವು
ಈ ನಗುವಿನಂಕದ ಪರದೆಯನೆ
ಸರಿಸಿಬಿಟ್ಟಿತೇ..?
ನನ್ನ ಕಣ್ಣಂಚಿನಿಂದ ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಸೂರ್ಯನಂತೆಯೇ ಅಗಾಧವಾದ
ನೋವಿನಾ ಬೆಂಕಿಯುಂಡೆಗಳನೊಳಗಿರಿಸಿ
ಭುವಿಗೆ ಚೂರೂ ಕಾಣದಂತೆ
ನಲಿವಿನಾ ಮೋಡಗಳ ಮುಂದಿರಿಸಿದ್ದೆ;
ಗಾಳಿಯಾಗಿ ಬಂದು ಈ ಮೋಡವನೇ
ದೂರ ಕೊಂಡೊಯ್ದು, ಧಗಧಗನೆ
ಉರಿವ ದೇಹವನು ತೋರಿಸಿಬಿಟ್ಟಿತೇ..?
ನನ್ನ ಕಣ್ಣೊಳಗೆ ಸೆರೆಯಾಳಾಗಿದ್ದ;
ಕಣ್ ರೆಪ್ಪೆಯ ಕೂದಲಿನ ಕಂಬಿಗಳನೇ
ಕಿತ್ತು ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

Friday 14 October, 2011


ಕಾರಣ

ಮನದ ಪುಟದಲೆನ್ನ
ಬರೆದಿರುವೆ ನಿನ್ನ ಹೆಸರನ್ನ
ಕಾರಣವೇನು ಗೊತ್ತೇ ಚಿನ್ನ
ಹಾಕಿರುವೆಯಲ್ಲಾ ನೀಯೆನ್ನ
ಹೃದಯದೇಗುಲಕೆ ಕನ್ನ

ಎನ್ನ ಸ್ಥಿತಿ

ನೀನೆಂದು ಕರೆದೆಯೋ ಎನ್ನ
ಓ ಚೆಲುವ ಸುಂದರಾಂಗ
ಆ ಕ್ಷಣದಲೇ ಆಯಿತೆನ್ನ
ಬ್ರಹ್ಮಚರ್ಯ ವೃತವು ಭಂಗ
ಬಯಸುತಿದೆ ಚೆಲುವೆ ಈಗೆನ್ನ
ಮನವು ನಿನ್ನಯಾ ಸಂಗ
ಈ ಪರಿಯ ನುಡಿಯನ್ನೇ
ನುಡಿಯುತಿದೆಯೇ ನಿನ್ನಂತರಂಗ

ಚಂದದರಸಿ

ಮದುವೆಗೆ ಮುನ್ನ
ನುಡಿವರೆಲ್ಲ ಗಂಡಸರು
ನನ್ನವಳು ಚಂದದರಸಿ
ಮದುವೆಯ ನಂತರ ಕೇಳಿದರೆ
ಕೋಪದಲಿ ಕೆಂಪಾಗಿ
ನುಡಿವರು "ಅವಳೋ ಬ್ರಹ್ಮರಾಕ್ಷಸಿ"

ಮುಳುಗಿಸದಿರು

ನಿನಗೆನ್ನಲ್ಲಿ ಪ್ರೀತಿಯಿದೆ
ಎಂಬ ಕಲ್ಪನೆಯ ಕಡಲಲ್ಲಿ
ತೇಲಾಡುತ್ತಿರುವೆ.
ಇದು ಬರಿಯ ಭ್ರಮೆಯೆಂದು ತಿಳಿಸಿ
ನನ್ನ ದುಃಖ ಸಾಗರದಲ್ಲಿ
ಮುಳುಗಿಸದಿರು ಚೆಲುವೆ.

ರೋದನ

ಕೇಳಿಸದು
ಯಾರಿಗೂ
ನನ್ನ ಮನಸೊಳಗಿನ
ರೋದನ
ಯಾಕೆಂದರೆ
ಅದಕಿಲ್ಲ
ಶಬ್ದದ ಆಲಿಂಗನ

Wednesday 12 October, 2011


ನಗು

ಎನ್ನ ಮನವು
ಕಂಡ ಕ್ಷಣದಿಂದ
ನಿನ್ನ ಮುಗುಳುನಗು;
ಹೇಳುತಿದೆ
ಸಾರಿ ಸಾರಿ
ಆಗು ನೀ ನನ್ನವಳಾಗು.

ರಿಡಕ್ಷನ್ ಸೇಲು

ಸೀರೆಯೊಂದನು
ನನ್ನಮ್ಮನಿಗೆಂದು ಕೊಂಡೆ
ಊರಿಗೆ ಬಂದಿದ್ದಾಗ
ಭಾರೀ ರಿಡಕ್ಷನ್ ಸೇಲು;
ಈಗ ಆ ಸೀರೆಯನು
ಉಪಯೋಗಿಸುವುದು ನಾನೇ,
ಯಾಕೆಂದರೆ ಆಗಿರುವುದದು
ಈಗ ಬರೀ ರುಮಾಲು.

ಕಾರಣ

ಹುಡುಗಿ ನಿನ್ನ
ಪ್ರೀತಿಸದಿರಲು ನಾ
ಹಲವಾರು ಕಾರಣಗಲಿವೆ;
ಅವುಗಳಲಿ ಒಂದು
ಇದೆಯಲ್ಲಾ ನಿನಗೆ
ಮುಖದ ತುಂಬಾ ಮೊಡವೆ.

Monday 10 October, 2011


ಕೊರತೆ

ಪ್ರಿಯೆ, ನನಗಿದ್ದರೂ
ನಿನ್ನ ಬಗೆಗೆ
ಮನದಲಿ ಪ್ರೀತಿಯೊರತೆ,
ಪ್ರೀತಿಸಗೊಡದು
ನನ್ನ ಮುಖದಲ್ಲಿನ
ಚೆಲುವಿನ ಕೊರತೆ.


ಬಿಳಿಮೋಡ

ನೀನಿರಲು ಸುಂದರ
ಎಂದೆನಿಸಬಹುದು
ಪ್ರತೀ ಮುಸ್ಸಂಜೆ ;
ಆದರೆ ನೀನೋ
ನೀರ ಹನಿಗಳನು
ಹೆರಲಾಗದೊಂದು ಬಂಜೆ.


ಭ್ರಾಂತು

ನೋಡಲು ನಾನವಳ ಕಣ್ಣನು
ಅದು ಹತ್ತಿರ ಬಾರೋ ಅಂತು.
ಅದನೇ ಅವಳ ಬಳಿ ಹೋಗಿ ಹೇಳಿದೆ
ಅದಕವಳಂದಳು ನಿನಗೆಲ್ಲೋ ಭ್ರಾಂತು

ನೋಯುತಿದೆ

ಚೆಲುವೆಯರು ನನ್ನ ನೋಡದಿದ್ದಾಗ
ನನ್ನ ಮನಸು ನೋಯುತ್ತಿರಲಿಲ್ಲ
ಯಾಕೆಂದರೆ ಅವರಲ್ಲಿದ್ದುದು
ನನಗೆ ಕೇವಲ ಆಕರ್ಷಣೆ.
ಆದರೆ ಮನಸು ನೋಯುವುದು;
ಪ್ರಿಯೆ, ನೀ ನೋಡದೆ ಕುಳಿತರೆ
ಯಾಕೆಂದರೆ ನಿನ್ನ ಮೇಲೆನಗಿರುವುದು
ನಿಜವಾದ ಪ್ರೀತಿ ಕಣೆ.

ಸಂಗಾತಿ

ಮಾಡಿಕೊಳ್ಳ ಬಯಸುವರು
ಇಂದಿನ ಯುವಕರು
ಯುವತಿಯರ ಸಂಗ-ಅತಿ;
ಆದರೆ ಬಯಸಲಾರರು
ಅವರನ್ನೇ ಮಾಡಿಕೊಳ್ಳಲು
ಜೀವನದ "ಬಾಳಸಂಗಾತಿ"

Wednesday 5 October, 2011


ಆಸೆ

ಪ್ರಿಯೆ, ನಿನ್ನ
ಚೆಲುವಿಗೆ
ಸಮನಾದ
ರೂಪ ಎನಗಿಲ್ಲ.
ಆದರೂ
ಮನದಲಿಹ ಆಸೆ
ಆಗಬೇಕು
ನಾ ನಿನ್ನ ನಲ್ಲ.

ಮನದನ್ನೆ

ನೋಡಿದ್ದೇ
ಆಕೆಯನು
ನಾನು ನಿನ್ನೆ;
ಅಷ್ಟರಲೇ
ಆದಳಾಕೆ
ನನ್ನ ಮನದನ್ನೆ.
ಯಾಕೆಂದರೆ

ಗೆಳೆಯನಾದರೂ
ಕೊಡಿಸಲಾರ
ಒಂದು ಗ್ಲಾಸ್ ಜೂಸು;
ಯಾಕೆಂದರೆ,
ಸ್ವಭಾವದಲಿ ಆತ 
ಭಾರಿ ಕಂಜೂಸು.


ಲೇಡಿ-ಕಿಲಾಡಿ

ದಾರಿಯಲಿ ಬರುತ್ತಿದ್ದಳೋರ್ವಳು ಲೇಡಿ
ಅವಳನು ಕಂಡನೋರ್ವ ಕಿಲಾಡಿ
ಆಕೆಯ ನಡಿಗೆಯ ಕಂಡು ಮಾಡಿದನು ಲೇವಡಿ
ಗಮ್ಮತ್ತು ಆದದ್ದು ಅಲ್ಲೇ ನೋಡಿ
ಕೋಪದಲಿ ಆಕೆ ಆದಳು ಚಾಮುಂಡಿ
ತೋರಿಸಿಯೇಬಿಟ್ಟಳು ಆಕೆಯ ಕರಾಟೆಯ ಮೋಡಿ
ಆಸ್ಪತ್ರೆಯಲಿರೋ ಆತನ ಎಲುಬೆಲ್ಲಾ ಆಗಿದೆಯಂತೆ ಈಗ ಪುಡಿ ಪುಡಿ


ಲಲ್ಲೂ

ಬಿಹಾರದ ಭೂಪ ಲಲ್ಲೂ
ದೇಹವೋ ಅವನದು ಗುಂಡು ಕಲ್ಲು
ಹಣವನು ಕಂಡರೆ ಸುರಿಸುವನು ಜೊಲ್ಲು
ಧ್ಯೇಯ ಅವನದು; ಹಣಕಾಗಿ ಯಾರಬೇಕಾದರೂ ಕೊಲ್ಲು
ಅನ್ಯಾಯವೇ ತುಂಬಿದೆ ಅವನ ರಕ್ತದ ಹನಿ ಹನಿಯಲ್ಲೂ
ಆದ್ದರಿಂದ ಆಗಲೇಬೇಕು ಅವನಿಗೆ ಗಲ್ಲು
ನನ್ನದಲ್ಲ; ಇದು ಅಲ್ಲಿನ ಜನತೆಯ ಸೊಲ್ಲು

ಪೋಲೀಸ್

ಆಗುವುದು
ಪೋಲೀಸರ
ಆಗಮನ
ಆದ
ಮೇಲೆ
ಕಳ್ಳಕಾಕರ
ಪಲಾಯನ

ರೈತ

ಹೊಲ ಗದ್ದೆಯಲಿ ದುಡಿಯುತಾ
ಬೆಳೆ ಬೆಳೆಯುವನು ಬೆವರ ಸುರಿಸುತಾ
ಪ್ರತಿ ನಿಮಿಷವೂ ಕೆಲಸದಲೆ ನಿರತ
ಬೆಳೆದ ಬೆಳೆಯನು ದೇಶದ ಜನತೆಗೆ ನೀಡುತಾ
ದೇಶೋದ್ಧಾರಕಾಗಿ ಶ್ರಮಿಸುವ ಈತ
ನಿಜವಾದ ದೇಶಭಕುತ

Tuesday 4 October, 2011


ಜಡದಿಂದ
ಮಲಗಿರುವ
ತನುವಿಗೆ
ಜಡ ಕಳೆಯಲೇನು
ಬೇಕು?
ರವಿಯ
ಹೊನ್ನ ಕಿರಣ
ಸಾಕು.
ದಿನ ನಿತ್ಯದ
ಕಾಯಕದ
ನೆನಪು
ಸಾಕು.

ಚಂದಿರ

ಆಕಾಶವೆನುವ
ಅಂಗಡಿಯಲಿ
ಕಪ್ಪು ಬಣ್ಣದ
ಹೊದಿಕೆಯ ಹಾಸಿ
ತಾರೆಗಳೆನುವ
ಹೊಳೆಯುವ
ಮುತ್ತು, ರತ್ನ
ವಜ್ರ, ವೈಢೂರ್ಯಗಳ
ಮಾರಲು ಕುಳಿತ
ವ್ಯಾಪಾರಿ
ಭೂ ರಮೆ

ಆ ಮೇಘರಾಜನ ಉಡುಗೊರೆ
ಭೂ ದೇವಿಗೀ ಹಸಿರು ಸೀರೆ
ಅದನುಟ್ಟು ನಿಂತ ಆಕೆಯ ಕಂಡರೆ
ಅಸೂಯೆ ಪಟ್ಟಾಳು ದೇವಲೋಕದಪ್ಸರೆ

ಕುಹೂ ಕುಹೂ ಎಂದು ಇಂಪಾಗಿ ಕುಗುತಾ
ಈಕೆಯಂದವ ಕೋಗಿಲೆ ಹೊಗಳುತಿದೆ ಹಾಡುತ
ಜುಳು ಜುಳು ನಾದವ ಮಾಡಿ ; ಹರಿಯುತಿದೆ ನದಿ ಬಳಕುತ
ಕೋಗಿಲೆಯ ಹಾಡಿಗೆ ತಾನೂ ಧ್ವನಿ ಸೇರಿಸುತ

ಇಣುಕಿಣುಕಿ ನೋಡುವನು ರವಿ ಈಕೆಯಂದ
ಗಗನ ಪೂರ್ತಿ ಇರುವ ಮೋಡದ ಮರೆಯಿಂದ
ಸ್ಪರ್ಶಿಸುವನು ಆಕೆಯ ತನ್ನ ಬೆಳ್ಳಿ ಕಿರಣದಿಂದ
ಆಲಿಂಗಿಸಲಾಗದ ನೋವ ಮರೆತು ಆನಂದದಿಂದ


Monday 26 September, 2011

ಪ್ರತೀಕಾರ


ಇಡಿಯ ವಿಶ್ವದಲ್ಲೆಲ್ಲ
ಸಾವು ನೋವುಗಳೇ
ತುಂಬಿ ತುಳುಕಾಡುತಿರುವುದ
ಪ್ರತಿ ನಿತ್ಯವೂ ನೋಡುತ್ತಿದ್ದರೂ
ನಿನ್ನ ನಡೆಯಲ್ಲಿ
ಎಂದೂ ಬದಲಾವಣೆ ಇಲ್ಲ;
ಅದಕಾಗಿಯೇ ಏನೋ
ಸಂಜೆಯಲಿ ನೆತ್ತರನು ಕಕ್ಕಿ
ಮುಳುಗು ಹಾಕುತ್ತಿದ್ದರೂ
ಆನಂದದಲೇ ನೋಡುವರು ಜನರೆಲ್ಲಾ;
ನಿನ್ನ ಸಾವಿನ ಬಗೆಗೆ
ಒಂದಿನಿತು ಬೇಸರವಿಲ್ಲ.



Thursday 25 August, 2011

ಅತ್ತ ಆಗಸದ ನೀಲ ವರ್ಣ, ಇತ್ತ ಭೂರಮೆಯ ಹಸಿರು ವರ್ಣ
ಈ ಬಣ್ಣಗಳ ನಡುವೆಯೇ ನಡೆಯ ತೊಡಗಿದೆಯೇ ಯುದ್ಧ.
ಆಗಸದ ಗೆಲುವಿಗಾಗಿ ಸಾಲು ಕಟ್ಟಿ ಮೋಡಗಳು ಆದವು ಸಿದ್ಧ
ಇಳೆಯ ಗೆಲುವಿಗಾಗಿ ತೊಡೆ ತಟ್ಟಿ ಬಾಳೆ ತೋಟವಾಗಿಹುದು ಸನ್ನದ್ಧ

Monday 22 August, 2011

DEEPASTAMBADA VYATHE

ನಿಮ್ಮೊಳಗಿನ ಆನಂದವನು
ನಾ ಪಡೆಯುವುದಾದರೂ ಹೇಗೆ?
ಬಾನ ಸೂರ್ಯನನು ಹಿಡಿಯುವುದಕಾಗಿ
ಮೇಲೆ ಮೇಲೇರುವ ಚಿಮ್ಮುವ 
ಉತ್ಸಾಹ ನಿಮ್ಮೊಳಗಾದರೆ;
ಮುಳುಗೋ ರವಿಯ ಮುಟ್ಟುವಾಸೆಯಿಂದ
ಕಡಲಿನ ಅಲೆಗಳನೆ ಸೀಳಿ
ಮುನ್ನುಗ್ಗುವ ಚೈತನ್ಯ  ಅವರಲಿ;
ಆ ಬದುಕ ಆಸ್ವಾದಿಸುವಾಸೆ ನನಗೂ ಇದೆ
ಸಿಕ್ಕಲ್ಲಿ ನನಗೂ ಬಾಳ ಸಂಗಾತಿಯ ಜೊತೆ.
ಆದರೀಗ ಯಾರ ಬಳಿ  ಹೇಳಲಿ?
ನಾ ನನ್ನ ಒಂಟಿತನದ ವ್ಯಥೆ.



Tuesday 9 August, 2011

VYATHYASA

ಭಾವವೊಂದನು ಬಿಟ್ಟರೆ
'ಅ'ಕಾರ ಮತ್ತು 'ಇ'ಕಾರದಷ್ಟೇ
ವ್ಯತ್ಯಾಸ ಅಂದಿಗೂ ಇಂದಿಗೂ;
ಅಂದು ಭಕ್ತಿಯಲಿ ತಲ್ಲೀನರಾಗಿ
ಕುಣಿಯುತ ಹಾಡುತಿದ್ದರು
ಭಕ್ತಿ ಗೀತೆ ರಂಗ ರಂಗ
ಇಂದು ನಶೆಯಲಿ "ಫುಲ್"ಲೀನರಾಗಿ 
ಕುಣಿಯುತ ಹಾಡುವರು
ಚಿತ್ರಗೀತೆ ರಿಂಗ ರಿಂಗ.

Wednesday 3 August, 2011

NERALINANTE

ನಿನ್ನ ಮರೆಯಬೇಕು
ಎಂದೆನಿಸಿದರು; ನೆನಪುಗಳು
ಮನದಲೇ ಮನೆಯ
ಮಾಡಿದೆ ವನಿತೆ.
ತೊರೆಯದ ರೀತಿಯಲಿ
ಅಂಟಿಕೊಂಡಿದೆ ಮನಕೆ
ಬಯಲಿನಲ್ಲಿ ನೆರಳುಗಳು
ಭೂಮಿಗೆ ಅಂಟಿಕೊಂಡಂತೆ.

Monday 25 July, 2011

NANNAVALA KANASU

ನೀ ಎಲ್ಲಿರುವೆ? ನೀ ಹೇಗಿರುವೆ?
ನನಗಾಗಿ ಹುಟ್ಟಿರುವ ಓ ಚೆಲುವೆ
ಹಗಲಿರುಳೆನ್ನದೆ ನಾ ಹುಡುಕುತಿರುವೆ
ನೀನಾಗಿಯೇ ಎಂದು ನನ್ನ ಬಳಿ ಬರುವೆ ?

ನೀನಿರದ ಈ ಬಾಳಿನಲಿ
ನೋವಿಹುದು ಮನದ ಮುಲೆಯಲಿ
ಸಂತಸದ ನಗುವಿಲ್ಲ ವದನದಲಿ
ಕಾಯುವಿಕೆಯ ನೋವ ಸಹಿಸುತಿರುವೆ ಮೌನದಲಿ

ನಗುವಿನ ಸೆಲೆಯಾಗಿ ಬರಬಾರದೇಕೆ?
ನನ್ನ ತನುವಿಗುತ್ಸಾಹದುಸಿರಾಗಬಾರದೇಕೆ?
ಕಣ್ಣೊಳಗೆ ಮಿಂಚೊಂದ ತರಬಾರದೇಕೆ?
ನನ್ನ ಮೌನದುಪವಾಸವ ಕೊನೆಗೊಳಿಸಬಾರದೇಕೆ?

ಇಂದು ಮನದೊಳಗೆ ಬರಿಯ ನಿನ್ನಯ ಕಲ್ಪನೆ
ಮುಗಿಯಲಾರದ ಹತ್ತು ಹಲವು ಯೋಜನೆ
ಕಾದು ಬಳಲಿರುವ ನನ್ನೀ ಮನದ ಆಲೋಚನೆ
ಆ ಬ್ರಹ್ಮ ನನ್ನ ಕನಸುಗಳನ್ನೇ ನನ್ನವಳನ್ನಾಗಿಸಿಹನೆ??





Saturday 23 July, 2011

NESARA

ಮಬ್ಬು ಮಬ್ಬಾದ
ಮಂಜಿನ ನಡುವಲಿ
ಮೈ ತುಂಬಾ ಚಿನ್ನದ
ಒಡವೆಯ  ಧರಿಸಿ
ಬರುವನು ನೇಸರ
ಅವನೇಳುವ
ಮೊದಲೇ ಎದ್ದು
ಅವನ ಸೊಬಗ
ನೋಡಲೆಲ್ಲರಿಗೂ ಕಾತರ



HOLIKE

ಮೊದಲು ಬರುವ ಸಿಡಿಲು
ಜಗದಲಿಹ ಪತ್ನಿಯರಂತೆ
ಚುರುಕಾಗಿ, ವೇಗದಲಿ ಬರುವುದರಿಂದ
ಮತ್ತೆ ಬರುವ ಗುಡುಗು
ಜಗದಲಿಹ ಪತಿಯರಂತೆ
ತಡವಾಗಿ ಬಂದರು ಆರ್ಭಟಿಸುವುದರಿಂದ
ಮುಖ್ಯವಾದ ಕಾರಣವು ಮತ್ತೊಂದಿದೆ
ಗುಡುಗು ಅದೆಷ್ಟು ಆರ್ಭಟಿಸಿದರು
ಜಗಕೆ ಪ್ರಾಣಾಪಾಯವಿರುವುದು ಸಿಡಿಲಿನಿಂದ



GAURAVA

ಗುರು ಹಿರಿಯರ ಮಾತಿಗೆ 
ಬೆಲೆ ಕೊಡುವ ಮನಸ್ಸು
ಡೋಂಗಿ ರಾಜಕಾರಣಿಗಳಿಗೆ
ಬರುವುದಾದರೂ ಯಾವಾಗ?
ತಡೆದುಕೊಳ್ಳಲಾರದ ಹಸಿವೆಯ
ನೀಗಿಸಲು ತಣ್ಣನೆಯ ಜ್ಯೂಸು ಕುಡಿದು
ಜನರ ಮುಂದೆ ಆರಂಭಿಸಿದ್ದ
ಉಪವಾಸವನು ಮುಗಿಸಬೇಕಾದಾಗ

Tuesday 5 July, 2011

YEKAANGI

ಅವಳು ಒಲಿಯದೆಯೇ
ಚೆಲುವ ಚೆನ್ನಿಗ
ಪೂರ್ಣ ಚಂದಿರನೇ
ಹುಣ್ಣಿಮೆಯಲಿ ಏಕಾಂಗಿ
ಯಾವ ಧೈರ್ಯದಲಿ
ನಾನವಳ ಬಯಸಲಿ
ಚೆಲುವು ಕಿಂಚಿತ್ತು
ಇಲ್ಲದವನಾಗಿ


Monday 4 July, 2011

YETHAKE?

ಓ ಮನಸೇ ನೋವೇತಕೆ ನಿನ್ನ ತನುವಿಗೆ?
ಓ ಕನಸೇ ಸಾವೇತಕೆ ನಿನ್ನ ಬಾಳಿಗೆ?
ಸಿಗದೇ ಹೋದರೆ ನನಗೆ, ನನ್ನವಳ ಮುಗುಳು ನಗೆ.

ಅವಳ ನೋಟ ನನ್ನೆಡೆಗಿಲ್ಲದಿರೆ , ಬೆವರೇತಕೆ ? ನಯನವೇ ನಿನ್ನ ದೇಹಕೆ.
ಅವಳ ನುಡಿ ನನಗಾಗಿ ಬಾರದಿರೆ, ಆಹಾರವಿಲ್ಲವೇತಕೆ? ಕಿವಿಯೇ ನಿನ್ನುದರಕೆ;
ಅವಳ ತನುವಿನ ಗಂಧವಿಲ್ಲದ ಗಾಳಿ ಬಳಿ ಬಂದರೆ, ಹಸಿವಿಲ್ಲವೇತಕೆ? ಈ ನಾಸಿಕಕೆ;

ನಿಶ್ಚಲತೆ ಏತಕೆ? ನನ್ನ ಕಾಲಿಗೆ, ಅವಳೆನಗೆ ಕಾಣುವಂತಿದ್ದರೆ;
ಅವಳ ಕನಸು ಮೊಳೆಯುವುದೇತಕೆ  ಮನಸಿನೊಳಗೆ, ಅವಳೆನಗೆ ಕಾಣದಂತಿದ್ದರೆ;
ಪ್ರೀತಿಸುವಳೆಂಬ ಭ್ರಮೆಯೇತಕೆ? ಮನಸೇ ನಿನಗೆ, ನಗು ಮುಖದಿ ಅವಳೆನ್ನ ಕಂಡರೆ.

ಪ್ರೀತಿಯ ಹೊತ್ತೊಯ್ಯುತ್ತಿದ್ದರು ನನ್ನ ನೋಟ , ಕಾಣದೇತಕೆ   ಅದು ಅವಳ ಕಣ್ಣಿಗೆ,
ನನ್ನ ಈ ಪ್ರೀತಿಗೆ ಪ್ರತಿಫಲವಾಗಿ ಪ್ರೀತಿ ಸಿಗದೇನೋ ಅವಳಿಂದ ನನಗೆ
ಹಾಗಿದ್ದರೆ ಬೇಗದಲಿ ಬಾರದೇತಕೋ, ಸಾವೆನ್ನ ಬಳಿಗೆ, ಅವಳಿರದ ಬಾಳಿಗೆ.







Tuesday 28 June, 2011

BANOLAGINA KADALU


ಏಕಾಂತದಲಿ ನಾನಿರಲು ಬಾನನೊಮ್ಮೆ ನೋಡಿದೆ
ಕಡಲೊಂದ ಬಾನಿನಲಿ ಕಂಡು ನಾ ಬೆರಗಾದೆ.

ಬರಿದಾಗಿದೆ ಈ ಕಡಲಿನ ಒಡಲು ಉಪ್ಪು ನೀರಿಲ್ಲದೆ,
ನೀಲ ವರ್ಣವೋ ನೀರಿನಿರುವಿಕೆಯನು ತೋರುವಂತಿದೆ.

ಮೇರುಗಾತ್ರದ ತೆರೆಯನ್ನೇ ನಾ ಕಾಣದಾದೆ,
ಬಿಳಿ ಮೇಘದ ಗುಂಪುಗಳು ತೆರೆಯೆ ನಾವೆಂದು ಸಾರುತಿದೆ.

ಹಕ್ಕಿಯೆಂಬ ಜಲಚರಗಳು ಈಜಾಡುತಲಿದೆ
ದಡವಿಲ್ಲದ ಕಡಲ ನೀರಿನೊಳಗೆ ಮುಳುಗೇಳುತಿದೆ.

ಸೂರ್ಯನೋ ಹಗಲೆನ್ನದೆ ಚಂದಿರನೋ ಇರುಳೆನ್ನದೆ
ಈಜುವರು ಪಡುವಣದ ತುದಿಯ ಸೇರುವ ತವಕದೆ

ಯಾಕೆ ನೋಡದೆ ಇಷ್ಟು  ಕಾಲವ ನಾ ವ್ಯರ್ಥದಿ ಕಳೆದೆ
ಈ ಕಡಲಿನ ಸೌಂದರ್ಯದ ರುಚಿಯ ಕಣ್ಣಲ್ಲಿ ಹೀರದೆ.






Friday 27 May, 2011

VISHA GHALIGE

ಮರೆಯಲು ಉಂಟೆ ಆ ವಿಷ ಗಳಿಗೆ
ನನ್ನ ನಲ್ಲೆ , ನನ್ನೇ ಒಲ್ಲೆ ಎಂದ ಗಳಿಗೆ

ನುಡಿದ ತಕ್ಷಣ ಧುಮುಕಲಿಲ್ಲ , ನನ್ನ ದುಗುಡದಾಶ್ರುಗಳು
ಕಾದು ಕುಳಿತಿತ್ತು ಅದು ಏಕಾಂತದ ಗಾಢ ಕತ್ತಲಿಗೆ.

ಕಣ್ಣಿನಲ್ಲೆಲ್ಲೋ  ಅವಿತಿದ್ದ , ಹರಿದು ಹಂಚಿ ಹೋಗಿದ್ದ ಕಣ್ಣೀರ ಹನಿಗಳು
ಮನಸ  ಮಾತು ಕೇಳದೆ ಮಾಡತೊಡಗಿತು ಕೆನ್ನೆ ಮೇಲೆ ಮೆರವಣಿಗೆ

ಬದ್ಧ ವೈರಿ "ಮೌನ" ದ ಮನೆಯೊಳಗೇ ವಾಸ ಮಾಡತೊಡಗಿತು ನನ್ನ  ಮಾತುಗಳು
ಚಿರ ನಿದ್ರೆಯೇ ಬಂದಿತ್ತು , ಕ್ಷಣ ಕಾಲವೂ ವಿರಮಿಸದ ನನ್ನ ನಾಲಿಗೆಗೆ

ಉತ್ಸಾಹ , ಉಲ್ಲಾಸ ಗಳು ಪರಿಚಿತರಾಗಿದ್ದರು, ಈಗ ನನಗೆ ಅಪರಿಚಿತರು
ಮನದಾಳದ ಪೂರ್ಣ ಕುಂಭ ಸ್ವಾಗತವೀಗ ಬರಿಯ ದುಗುಡ, ಬೇಸರವೆನುವ ಆಗಂತುಕರಿಗೆ.

ನಲಿದಾಡಿದರು ದಣಿವರಿಯದ ಜೀವಕೆ, ದಣಿವ ತರುತಿಹುದು ಇಡುವ ಪ್ರತಿ ಹೆಜ್ಜೆಗಳು
ಸಂತಸದ ವೃಂದಾವನವದು ಸುಟ್ಟು  ಕರಕಲಾಗಿಹುದು, ವಿರಹದಾ ಸಣ್ಣ ಕಾಳ್ಗಿಚ್ಚಿಗೆ




Monday 23 May, 2011

KANNIRA KUDURE

ಕಣ್ಣೀರ ಕುದುರೆಗಳಿಗೆ
ಮುಗುದಾರವನು ಹಾಕಿ
ಹಿಡಿದು ಕೊಂಡಿರುವುದು 
 ನನ್ನ ಕಲ್ಲು ಹೃದಯ,
ದಾಟಲು ಬಿಡಲಾರದು 
ನನ್ನ  ಕಣ್ಣಿನ ಅಂಗಳವ;
ಮತ್ತೆ ಮತ್ತೆ ಬರುತಿದ್ದ 
ಅವಳ ನೆನಪುಗಳು
ತಿವಿಯುತಿತ್ತು ಈ ಕುದುರೆಗಳ;
ಕೊಡುತ ನಾಗಾಲೋಟಕೆ ಪ್ರೇರಣೆಯ,
ಹೊಡೆತ ತಿಂದು ಓಡುವ
ಕುದುರೆಯೋಟವ  ಕಂಡು
ಸುಖಿಸುವ ಹುಚ್ಚು 
ಜನರಿರುವ ಜಗವಿದು;
ಅದಕಾಗಿ ಕೊಟ್ಟಿರುವೆ ನನ್ನ 
ಕಲ್ಲು ಹೃದಯಕದರ ಲಗಾಮು;
ಸ್ಪಷ್ಟ ನಿರ್ದೇಶನದೊಂದಿಗೆ
ತಿರುಗು ಕಣ್ಣೊಳಗೆ
ಕೆನ್ನೆಯ ಮೈದಾನದಿ
ಸ್ಪರ್ಧೆಗಿಳಿಯಬೇಡ
ಮನದ ದುಗುಡವ
ಮರೆಮಾಚುವಂತೆ 
ತುಟಿಯ ತುಂಬಾ 
ನಗೆಯ ಕೆತ್ತಿಸಿರುವೆ;
ಮನದಾಳದ ನೋವ ಕಂಡು
ಕಣ್ಣೀರ ಕುದುರೆಗಳ ಲಗಾಮು 
ಬಿಟ್ಟು ಬಿಡಬೇಡ
ನಗುವಿನ ಮುಖವಾಡವನು 
ಕಳಚಿ ಬಿಡಬೇಡ.







Monday 9 May, 2011

GONDALA

ಬರಿಯ ಗೊಂದಲ ಈ ಜೀವನ
ಎನುವ ಭಾವನೆ ಮುಡಿದೆ.
ಪ್ರೀತಿ ಇತ್ತೋ, ಇಲ್ಲವೋ ಎನುವ 
ಸಂದೇಹವೊಂದು ಮನದೊಳಗೆ ನುಸುಳಿದೆ.

ಮೋಸ ಮಾಡಿತೇ ನನ್ನ ಕಣ್ ಗಳು
ಅವಳ ಪ್ರೀತಿಯ ನೋಟ ತೋರಿಸಿ
ಚೆಲುವು ತುಂಬಿದ ಮೊಗದ ನಗುವನು
ಪ್ರೀತಿ ಪ್ರೇಮಕೆ ಹೋಲಿಸಿ

ಭ್ರಮೆಯ ಹಿಡಿಸಿತೆ ನನ್ನ ಮನಸದು
ನನ್ನ ಪ್ರೀತಿಸುವಳವಳು ಎನುತಲಿ
ನಿಜವ ಹುಡುಕುವ ಕಾರ್ಯವೆಸಗಿತೆ
ಅವಳ ಮಾತಿನ ಹಾವ ಭಾವದಿ

ಗೊಂದಲವು ಬಯಲಾಯಿತು ತಿಳಿದಾಗ 
ಪ್ರೀತಿಯೆಂದು  ಇರಲಿಲ್ಲ ಅವಳ ಮನದಲ್ಲಿ
ಈಗ ಮತ್ತೊಂದು ಗೊಂದಲ
ಪೀತಿಯೆಂಬ ಭ್ರಮೆಯು ಹುಟ್ಟಿತೆಕೆ ನನ್ನಲ್ಲಿ




VASUDHEYA ALALU

ವಸುಧೆಯ ಅಳಲು 


ಅಡಗಿ ಕುಳಿತಿರುವೆ ಏಕೆ? ಮಳೆ ಹನಿಯೇ,
ನೀಲ ನಭದೊಳಗೆ ಹರಡಿರುವ ಮೋಡದೊಳಗೆ
ತವರು ಮನೆಯನು ತೊರೆದು ಬಾರೆ
ನೀ ಮನದಿ ರೋಧಿಸದೆ ನನ್ನೆಡೆಗೆ.

ಅಲ್ಲಲ್ಲಿ ನನ್ನ ತನುವು ಒಡೆದಿಹುದು ನೋಡು
ತಡೆಯದಾಗಿದೆ ಈ ಬಿರುಕು ಕೊಡುವ ನೋವು
ಈ ನೋವ ನೀಗಿಸಲು ನೀನಿಲ್ಲಿ ಬರಬೇಕು
ಬಾರೆ ಅದಕಾಗಿ ಬಾ, ಆ ಮೇಘಕೆ ನೀನಾಗಿ ಸಾವು.

ನಗ್ನೆ ನಾನಾಗದಿರಲು ಬಿಡದಿರು ಓ ಮಳೆ ಹನಿಯೇ
ಹಸಿರು ಸೀರೆಯ ಉಡುಗೊರೆಯ ನೀನೆನಗೆ ನೀಡದೆ
ಇಡಿಯ ಬ್ರಹ್ಮಾಂಡವನೇ ಬೆರಗುಗೊಳಿಸಲು ಸಾಕು
ನೀ ನನಗೆ ನೀಡುವ ಆ ಹಸಿರು ಸೀರೆಯೊಂದೆ.

ನನ್ನ ಸಂತಾನವದು ಕಂಗೆಟ್ಟಿಹುದು ನೀನಿಲ್ಲದೆ
ಉಸಿರ ಬಿಟ್ಟರೆ ನೀನೆ ತಾನೇ ಅವರ ಜೀವನದ ಆಸರೆ.
ಸಂತತಿಯ ನಾಶವನು ನಾ ನೋಡಲಾರೆ ಮಳೆ ಹನಿಯೇ,
ಮರಣ ಛಾಯೆಯಿಂದ ಅವರ ಹೊರತರಲು ಬಾರೆ, ಓ ಅಮೃತ ಧಾರೆ.


Monday 2 May, 2011

EDENTHA GELETHANA

ನಿನ್ನ ನಗುವ ಮುಖದ ಒಳಗಿನ ನೋವ
ಹುಡುಕಲಾರದೆ   ಹೋದೆನೇ, ಇದೆಂತಾ ಗೆಳೆತನ?
ಸಾವನಪ್ಪುವ ನಿರ್ಣಯವ ತಂದಿಟ್ಟ ನೋವ 
ಗುರುತಿಸಲಾರದೆ ಹೋದೆನೇ, ನನ್ನದಿದೆಂತಾ ಗೆಳೆತನ?

ಅದುಮಿಟ್ಟ; ನಿನ್ನ ಕಣ್ಣೊಳಗಿನ ಸಾಲು ಸಾಲು ಕಣ್ಣೀರ ಹನಿಗಳ
ಕಾಣಲಾರದೆ ಹೋದೆನೇ, ಇದೆಂತಾ ಗೆಳೆತನ?
ಬೆರೆತರೂ ; ನಿನ್ನ ಮನದೊಳಗಿದ್ದ ಒಂಟಿತನದ ಗಾಯಗಳ
ಗುಣಪಡಿಸಲಾರದೆ ಹೋದೆನೇ, ನನ್ನದಿದೆಂತಾ ಗೆಳೆತನ?

ನಗು ನಗುತಾ ಮಾತನಾಡುತಿದ್ದರೂ, ನಿನ್ನ ಮನದಾಳದ ಮಾತುಗಳ
ಕೇಳಲಾರದೆ ಹೋದೆನೇ, ಇದೆಂತಾ ಗೆಳೆತನ?
ನಮ್ಮ ಜೊತೆಯಲಿದ್ದರು; ಸಾವಿನೆಡೆಗಿನ ನಿನ್ನ ಪಯಣವ
ತಡೆ ಹಿಡಿಯಲಾರದೆ ಹೋದೆನೆ, ನನ್ನದಿದೆಂತ ಗೆಳೆತನ?

ಮನದ ತುಮುಲಕೆ ಸಾವೇ ಪರಿಹಾರವೆನುವ ನಿನ್ನ ನಿರ್ಧಾರವ
ಬದಲಿಸಲಾರದೆ ಹೋದೆನೆ, ಇದೆಂತಾ ಗೆಳೆತನ?
ನೀ ತಂದುಕೊಂಡಿರುವ ಅಂತ್ಯದಿಂದೆದ್ದಿರುವ ಪ್ರಶ್ನೆಗಳ  
ಉತ್ತರಿಸಲಾರದೆ ಹೋದೆನೆ, ನನ್ನದಿದೆಂತಾ ಗೆಳೆತನ?

ಸಾಕಾಯಿತು ಗೆಳೆಯ, ಜಗವು ಕೇಳುತಿಹ ಪ್ರಶ್ನೆಗಳನೆದುರಿಸಿ;
ತಿಳಿಯದಿರುವ ಉತ್ತರವ ಜಗಕೆ ನಾ ಹೇಗೆ ಹೇಳಲಿ?
ಮುಢ ಜನರ ಬಾಯ ಮುಚ್ಚಿಸಲು ಬರಬಾರದೇ ಎಲ್ಲ ನಿಗೂಢತೆಯ ಭೇಧಿಸಿ,
ಗಾಢವಾದ ಸ್ನೇಹ ನಮ್ಮದೆಂದು ಸಾರಲಾದರೂ ಬರಬಾರದೇ; ಮತ್ತೊಮ್ಮೆ ನನ್ನ ಬಾಳಲಿ.





Tuesday 12 April, 2011

NENAPAAGADAVALU

ನನ್ನವಳು ನೆನಪಾಗುವಳು 
ಕಾರ್ಮುಗಿಲು ಬಾನನಾವರಿಸಿ
ಮಳೆಯ ಸುರಿಸದೆಯೇ
ಗಾಳಿಯೊಂದಿಗೆ ಮರೆಯಾದಾಗ

ನನ್ನವಳು ನೆನಪಾಗುವಳು
ಅರಳದ ಹೂವೊಂದು
ಮೊಗ್ಗಿನಲೇ ಗಿಡದ 
ಸಂಗವನು ತೊರೆದಾಗ

ನನ್ನವಳು ನೆನಪಾಗುವಳು
ಪ್ರತಿ ಸಂಜೆಯ ಏಕಾಂತದಲಿ
ಪ್ರತಿ ರಾತ್ರಿಯ ಮೌನದಲಿ
ಕನಸುಗಳು ಮುಡುವಾಗ

ವಾಸ್ತವದಿ ನನ್ನವಳು ನೆನಪಾಗದವಳು
ನೆನಪಾಗುವುದಾದರೂ ಹೇಗೆ?
ಅವಳನೊಂದು ಕ್ಷಣವೂ 
ನಾ ಮರೆಯದಿರುವಾಗ.




NANNAVALA NAGU

ಸಮಯವೂ ನಿಂತೀತು , ನಿನ್ನ ನಗುವಿನ
ರೀತಿಯನು ಕಂಡು, ಮತಿಯ ಕಳೆದುಕೊಂಡು
ತರುಲತೆಗಳು ಆನಂದದಿಂದ ಪ್ರಾರಂಭಿಸಿದವು
ನಾಟ್ಯಗೈಯಲು ನಿನ್ನ ನಗುವಿನ ಧಾಟಿಯನು ಕಂಡು.

ನಿನ್ನ ನಗುವು ಸಂಗೀತದ ಸ್ವರದಂತೆ, ಅದು
ನಗೆಯ ನಾಯಕಿಗೆ ನಾಚಿಕೆಯ ತರುತಿದೆ
ಗಾಳಿಯು ಅಲೆ ಅಲೆಯಾಗಿ  ಬೀಸುತಲಿ
ಗೀತೆಯಾಗಿ ನಿನ್ನ ನಗೆಯ ಪರಿವರ್ತಿಸುತಿದೆ.

ಬದುಕು ವ್ಯರ್ಥವಾಯಿತೆಂದು ನೆನೆಯುತ
ದುಃಖಿಸುತ ಚಂದ್ರನೆನುವನು, ನನಗೇಕೆ ಈ ನಗುವಿನ ಕಲೆ ತಿಳಿದಿಲ್ಲ
ಕಿಲಕಿಲನೆ ನಗುತ, ಮುಗುಳುನಗೆಯನೆ ಬೀರುತ ಈ
ಹೆಣ್ಣು ನನ್ನ ಸೌಂದರ್ಯವನೆ ಕಡಿಮೆಗೊಳಿಸುತಿರುವಳಲ್ಲ.



Monday 4 April, 2011

SAMARA

ಮುಂಜಾನೆ  ಮುಡಣದ ಕಡಲ ಒಡಲಲಿ 
ನಿಂತು ಬಾನ ದಿಟ್ಟಿಸುವನು ದಿನಕರ
ಉಗ್ರ ರೂಪವ ತಾಳಿ ಕೆಂಪು ಕೆಂಪಾಗುತಲಿ
ಬಾನೆಡೆಗೆ ಬಿಡುವನು ರಜತ ಕಿರಣವೆಂಬ ಶರ 

ಮೆಲ್ಲ ಮೆಲ್ಲನೆ ಹೊತ್ತು ಕಳೆಯುತಿರಲು
ಕಡಲ ತೊರೆದು ದಿಬ್ಬವನೇರಿ ಬಿಡುವನು ಬಾಣ
ಆ ಬಾಣದ ಏಟು  ತಿಂದು ಇರುಳು ಘಾಸಿಗೊಳಲು
ಬೆಳಕೆಂಬ ರಕ್ತವ ಚೆಲ್ಲಿ ಓಡುವುದು ಉಳಿಸಲು ತನ್ನ ಪ್ರಾಣ

ಜಯ ತನ್ನದಾದ ಸಂತಸದಿ ಮುಗಿಲೆಡೆಗೆ ಹಾರಿ
ವ್ಯಕ್ತ ಪಡಿಸಿದ ತನ್ನ ಆನಂದವನು ಆ ಭಾಸ್ಕರ
ಚಿಲಿ ಪಿಳಿ ಯೆನ್ದುಲಿಯುತ ಹಕ್ಕಿಗಳು ಶುಭ ಕೋರಿ
ಹೊಗಳಿದವು ಆತನ " ನೀನೆ ಏಕೈಕ ವೀರ, ಶೂರ"

ವಿಜಯದ ಸಂತಸವು, ಹೊಗಳಿಕೆಯ ನುಡಿಗಳು ಕೂಡಿ
ಒಂದಾಗಲು ಬೀಗತೊಡಗಿದ ತನ್ನ ಬಗೆಗೆ ಆ ಆದಿತ್ಯ
ಪ್ರತಿಫಾಲದೊಪಾದಿಯಲಿ ಭುವಿಯೆಡೆಗೆ ತೀಕ್ಷ್ಣ ದೃಷ್ಟಿಯಲಿ ನೋಡಿ
ಅಧಿಕಗೊಳಿಸಿದ ಬಿಸಿಲ ಧಗೆಯ, ಹೇಳುತಲಿ ನೋಡಿದಿರಾ ನನ್ನ ಸಾಮರ್ಥ್ಯ

ಈ ರೀತಿ ಕುಣಿ ಕುಣಿದು ಪಡುವಣವ ಸೇರಲು
ತಿಳಿಯದಾಯಿತು ರವಿಗೆ ತನಗಿನ್ನು ಬರುವುದು ಸೋಲಿನ ಸಮಯ
ಮೆಲ್ಲನೆ ಬಂದ ಕಾರಿರುಳು ನುಡಿಯಿತು, " ನಿಲ್ಲು ನೀ ಯುದ್ಧವ ಮಾಡಲು"
ಊಹಿಸಲಾಗದ ಘಟನೆಯ ಕಂಡು ರವಿಗಾಯಿತು ಭಯ

ಭಯದಿ ಎದುರಿಸಲಾಗದೆ ಹೋದ ರವಿ, ಕತ್ತಲ ಬಾಣದ ಹೊಡೆತ
ಅದರಿಂದಾಗಿಯೇ ರಕ್ತವು ಸುರಿದು ಕೆಂಪು ಕೆಂಪಾಯಿತವನ ಶರೀರ
ನಿಲ್ಲಲಾಗದೆ ಅಲ್ಲಿ ಆದಿತ್ಯ ಕಡಲಬ್ಬೆಯ ಗರ್ಭವನ್ನು ಸೇರುತ
ನುಡಿದ, " ಎಲೆ ಇರುಳೆ ನಗದಿರು, ನಾಳೆ ಮುಂಜಾನೆ ಖಚಿತ ನಿನ್ನ ಸಂಹಾರ" 



   


Tuesday 29 March, 2011

NANAADIDA MATCHU

ಅಂದು ಸಂತಸದಿ ದಿನವಿಡೀ ನಾ ನಲಿದಾಡಿದ್ದೆ.
ಯಾಕೆಂದರೆ ಭಾರತದ ಕ್ರಿಕೆಟ್ ತಂಡಕ್ಕೆ ನನಾಯ್ಕೆಯಾಗಿದ್ದೆ.

ಪಾಕಿಸ್ತಾನದೆದುರಿನ  ಮ್ಯಾಚಿಗೆ ನನ್ನನ್ನು ಹಾಕಿ ಮಾಡ  ಹೊರಟರೆನ್ನ ಅಗ್ನಿ ಪರೀಕ್ಷೆ.
ಆದರು ಧೃತಿಗೆಡದೆ ತವಕದಿಂದ ಮಾಡುತ್ತಿದ್ದೆ ಆ ಸಮಯದ ನಿರೀಕ್ಷೆ.

ಅಂತು ಇಂತು ಬಂದೇಬಿಟ್ಟಿತು ನಾನಾಡಬೇಕಿದ್ದ ಮ್ಯಾಚು.
ಜಯವು ನಮ್ಮದಾಗಲೇಬೇಕು ಎಂದರು ನಮ್ಮ ಕೋಚು.

ಟಾಸ್ ಗೆದ್ದ ಅವರು ಭರ್ಜರಿ ಬ್ಯಾಟಿಂಗ್ ಮಾಡತೊಡಗಿದರು.
ಬಸವಳಿದು ಸುಸ್ತಾಗಿ ಬೆವರು ಸುರಿಸತೊಡಗಿದರು ನಮ್ಮ ಬೌಲರು.

ಆ ದೇವನ ದಯದಿಂದ ಕಪ್ತಾನನ ದೃಷ್ಟಿ ನನ್ನ ಮೇಲೆ ಬಿತ್ತು.
ನನಗೆ ಕೊಟ್ಟ  ಮೊದಲ ಓವರಿನಲ್ಲಿ ಮಿಂಚಿದೆ ೩ ವಿಕೆಟ್ ಕಿತ್ತು.

ಚೊಚ್ಚಲ ಪಂದ್ಯದಲಿ ಸಿಕ್ಕಿತೆನಗೆ ಐದು ವಿಕೆಟ್ ಗಳ ಗೊಂಚಲು
ಆದರು ೨೯೫ ರನ್ ಗಳಿಸಬೇಕಾಗಿತ್ತು ನಾವು ಜಯಗಳಿಸಲು.

ಫಾಸ್ಟು ಬೌಲಿಂಗಿಗೆ ಆಗಿದ್ದರವರು ಭಾರೀ ಫೇಮಸ್ಸು 
ಹಾಗಾಗಿಯೇ ನಮ್ಮ ಬ್ಯಾಟ್ಸಮನ್ ಗಳು ಬೇಗನೆ ಬಂದರು ಪೆವಿಲಿಯನ್ನಿಗೆ ವಾಪಸ್ಸು.

ಐದನೇ ಬ್ಯಾಟ್ಸಮನ್ ಆಗಿ  ಹೊರಡಬೇಕಾದ ಸಮಯ ಬಂತು ನೋಡಿ
ಎದುರಾಳಿಗಳು ನಕ್ಕರು ನನ್ನ ನೋಡಿ, ನನಗೆ ತಮಾಷೆಯ ಮಾಡಿ.

ಅವಮಾನ ಮತ್ತು ಕೋಪದಿಂದ ಬೀಸು ಹೊಡೆತಗಳಿಗೆ ಕೈ ಹಾಕಿದೆ
ಇದರಿಂದಾಗಿಯೇ ಇಪ್ಪತ್ತು ಎಸೆತದಲೇ ಹಾಫ್ ಸೆಂಚುರಿ ಮುಗಿಸಿದೆ.

ಈ ರೀತಿ ಮುಂದುವರಿದು ಬಾರಿಸಿದೆ ಹಲವಾರು ಸಿಕ್ಸರು
ಆಗವರಿಗೆ ಬಂದೆ ಬಿಟ್ಟಿತು ಕಣ್ಣಲ್ಲಿ ಕಣ್ಣೀರು

ಆದರೆ ನನ್ನ ಮೊದಲ ಸೆಂಚುರಿಗೆ ಎರಡು ರನ್ನಿರುವ ವೇಳೆ
ನನ್ನ ದುರಾದೃಷ್ಟಕೆ ಬಂದು ಬಿಡಬೇಕೇ ಜೋರಾದ ಮಳೆ

ಪ್ರೇಕ್ಷಕರಂದರು ನನ್ನ ಬಗೆಗೆ ಇದು ಅವನ ದುರ್ದೆಷೆ
ನಿಲ್ಲಲಾರದ ಮಳೆಯ ಕಂಡು ನನಗಾಯಿತು ತೀವ್ರ ನಿರಾಶೆ

ಮಳೆಯ ನೀರಿಗೆ ನೆನೆದ ಮೈಯನ್ನು ನೋಡುತ್ತಲಿದ್ದಾಗ 
ಹಠಾತ್ತನೆ ಕೇಳಿಸಿತು ನನ್ನಮ್ಮನ ಸಿಡುಕಿನ ಸುಪ್ರಭಾತದ ರಾಗ 

ಅರ್ಥವಾಯಿತು ನನಗಾಗ ಬಂದೆ ಇರಲಿಲ್ಲ ಮಳೆಯು ಭಾರಿ ಜೋರು
ನಿದ್ದೆಯಿಂದೆಬ್ಬಿಸಲು ನನ್ನಮ್ಮ ಸುರಿದಿದ್ದರು ನನ್ನ ಮೇಲೆ ನೀರು.


Monday 28 March, 2011

PRIYE NANNA BAYAKE

ನದಿಯಾಗೋ ಬಯಕೆ, ನೀನೆಂಬ ಕಡಲ ಸೇರುವ ಸುಖಕೆ.
ಮಳೆ ಹನಿಯಾಗೋ ಬಯಕೆ, ನೀನೆಂಬ ಭುವಿಯ ಸ್ಪರ್ಶಿಸುವ ಸುಖಕೆ.
ತೆರೆಯಾಗೋ ಬಯಕೆ, ನೀನೆಂಬ ದಡವ ಆಲಿಂಗಿಸುವ ಸುಖಕೆ.
ಕನಸಾಗೋ ಬಯಕೆ, ಏಕಾಂತದಿ ನಿನ್ನ ಸಾಮೀಪ್ಯದ ಸುಖಕೆ.

ಇಬ್ಬನಿಯಾಗದಿರೋ ಬಯಕೆ, ನೀನೆಂಬ ಎಲೆಯಿಂದ ಜಾರುವ ಭಯಕೆ.
ಪಥವಾಗದಿರೋ ಬಯಕೆ, ನೀನೆಂಬ ಹುಲ್ಲು ಇರದಿರೋ ಭಯಕೆ.
ಭ್ರಮರವಾಗದಿರೋ ಬಯಕೆ, ನೀನೆಂಬ ಸುಮಕೆ ನೋವಾಗೋ ಭಯಕೆ.
ನೀನೆದುರಿರಲು ಕಣ್ ಮುಚ್ಚದಿರೋ ಬಯಕೆ, ನಿನ್ನಂದ ಕಣ್ಣಿಂದ ಮರೆಯಾಗೋ ಭಯಕೆ.

ಚಂದಿರನಾಗೋ ಬಯಕೆ, ನೀನೆಂಬ ಭುವಿಯ ಸುತ್ತ ಸುತ್ತುವುದಕೆ.
ಸುರ್ಯನಾಗೋ ಬಯಕೆ, ನೀನೆಂಬ ಸೂರ್ಯಕಾಂತಿ ನನ್ನನೇ ನೋಡುತಿರುವುದಕೆ.
ಹಕ್ಕಿಯಾಗೋ ಬಯಕೆ, ನೀನೆಂಬ ಮರದಲ್ಲಿ ಗುಡೊಂದನು ಕಟ್ಟುವುದಕೆ. 
ಮರವಾಗೋ ಕೊನೆಯ ಬಯಕೆ, ನೀನೆಂಬ ಲತೆಗೆ ಆಸರೆ ನಾನಾಗುವುದಕೆ. 


Tuesday 22 March, 2011

BALLIYANTHE

ಬಳ್ಳಿಯು 
ಅಪ್ಪಿಕೊಂಡಂತೆ
ಮರದ ತನುವ 
ನಿನ್ನ ನೆನಪುಗಳು 
ತಬ್ಬಿಕೊಂಡಿವೆ 
ನನ್ನ ಮನವ.


ಮಾತು


ಪ್ರಿಯೆ ನಾ ಹೊಳೆವ ಸೂರ್ಯನಂತೆ ಮಾತನಾಡುವುದರಲಿ
ನಿನ್ನೊಡನೆ ಮಾತನಾಡಲು ಬಂದರೆ, ಮೋಡಗಳು ಕವಿಯುವುದು ನನ್ನೆದುರಲಿ
ನಾ ದುಂಡಾದ, ಬೆಳ್ಳಗಿನ ಪೂರ್ಣ ಚಂದ್ರನಂತೆ ಮಾತನಾಡುವುದರಲಿ 
ನಿನ್ನೊಡನೆ ಮಾತನಾಡುತಿರಲು  ಕ್ಷಯ ರೋಗ ಪಡೆದ ಚಂದಿರನ ಸ್ಥಿತಿ ಉಂಟಾಗುವುದೆನ್ನಲಿ.

ತುಟಿಗಳೆರಡೆಕೋ ಚಲಿಸಲಾರದು, ನಾಲಗೆಯೋ ಅತ್ತಿತ್ತ ಹೊರಳಲಾರದು.
ನಿನ್ನ ಮುಖದಂದವನು ಕಂಗಳು ನೋಡುತಿರಲು ಮಾತುಗಳೇ ಹೊರಡಲಾರದು.
ಕನಸಿನಲಿ ನೀ ಬಂದಾಗ ಆಡುವ ಮಾತುಗಳಿಗೆ ಮಿತಿಯೇ ಇರದು
ಆದರೇಕೋ, ವಾಸ್ತವದಿ ಮಾತನಾಡಲು ನನ್ನಯಾ ಕಂಠ ಶಬ್ದಗಳಿಗೆ ಜನುಮ ನೀಡದು.

ಮೈಯೊಳಗೆ ನಡುಕ ಮನದೊಳಗೆ ಪುಳಕ ನಿನ್ನೊಡನೆ ಮಾತನಾಡಲು
ಆಗುವುದು ಮನಕಾನಂದದ ಜಳಕ ನೀ ಮಾತು ಮಾತಿಗೆ ನಗುತಿರಲು
ನಿಜವನರುಹಿದರೆ ಆ ನಗುವೇ ಕಾರಣವು ನಾ ಮಾತನಾಡದಿರಲು
ಮಾತೆಲ್ಲಿ ಹೊರಡುವುದು? ನಿನ್ನ ನಗೆಯಂದವ ಕಂಡು ನಾ ಸ್ತಬ್ಧನಾಗಿರಲು.