Thursday 26 December, 2013

ಹಸಿರು...



ಅವಳ
ನೆನಪಿನ
ನದಿಯು
ನನ್ನ
ಹೃದಯದ
ಬಯಲಲಿ
ಬತ್ತದೆಯೇ.
ನೋವಿನ
ಹಸಿರೆಂತು
ಒಣಗೀತು...?

ಅಟಲರಿಗೊಂದು ನಮನ...



ನಾಲಗೆಯಲಿ ವಾಗ್ಝರಿಯ ಗಂಗೋತ್ರಿ,
ಮನಸಿನಲೊಂದು ಕವಿಭಾವದ ಕಡಲು
ಕಂಗಳಲಿ ಬರಿಯ ಭವ್ಯ ಭಾರತದ ಕನಸು
ಹೃದಯದಲಿ ತಾಯಿ ಭಾರತಿಗೊಂದು ಗರ್ಭಗುಡಿ
ನಿಲುವಿನಲಿ ಸಭ್ಯತೆಯ ರಾಜ ಗಾಂಭೀರ್ಯ
ರಾಜಕೀಯದ ಕೆಸರಿನಲರಳಿದ " ಕಮಲ "
ಅವರೇ ಅಜಾತಶತ್ರು ನಮ್ಮ ನೆಚ್ಚಿನ " ಅಟಲ "

ನಿರಾಳ...



ಭಾವಾಭಿವ್ಯಕ್ತಿಗೆ
ಹಲವು
ಮಾರ್ಗಗಳಿದ್ದರೂ
ನನ್ನೀ ಕವಿಮನಕ್ಕೆ
ನಿರಾಳತೆಯ
ಅನುಭವವಾಗುವುದು
ಭಾವನೆಗಳು
ಹಾಳೆಯ ಮೇಲಿನ
ಪದಗಳಾದಾಗಲೇ..

ಮೌನ



ಅವಳು ತೊರೆದು
ಹೋದ ನನ್ನ
ಹೃದಯದ
ಮನೆಯಲ್ಲೀಗ
ಸ್ಮಶಾನ ಮೌನ

ಬೆರಗು



ಸುತ್ತಲೂ ಹರಡಿದ್ದ
ಕತ್ತಲಿಗೆ ಹೆದರಿ
ಅಡಗಿ ಕುಳಿತಿದ್ದ ರವಿ,
ಹಿಡಿದು ಕಡಲ ತಾಯಿಯ
ನೀಲಿ ಸೀರೆಯ ಸೆರಗು ;
ಕತ್ತಲು ಮೆಲ್ಲಗೆ ಮರೆಯಾಗೆ
ಆ ಸೆರಗ ಮುಸುಕನು ಸರಿಸಿ
ಹೊರಬರುವ ನೇಸರ
ತನ್ನೊಡಲ ಬೆಳ್ಳಿಕಿರಣದ
ರೋಮಗಳ ತೋರಿಸೆ
ಜಗಕ್ಕೆಲ್ಲಾ ಬೆರಗು...

ನಾಂದಿ...



ಕವಿದ
ಇರುಳ
ಸೋಲಿಗೆ
ನಾಂದಿ
ಹಾಡುತಿವೆ
ಹಕ್ಕಿಗಳು

ಏಕಾಂತ...



ಅವಳ/ನ
ನೆನಪುಗಳಿಗಿಂತಲೂ
ಅತಿಯಾಗಿ
ಹೆಚ್ಚಿನವರೆಲ್ಲರನು
ಏಕಾಂತದಲಿ
ಕಾಡುವುದು
.
.
.
.
.
.
.
.
ತುರಿಕೆ.

ಭಾಗ್ಯ



ಪ್ರತಿದಿನವೂ
ಸಾವು ಬೆನ್ನಟ್ಟಿ
ಬಂದರೂ...
ಮತ್ತದೇ ರೂಪದಲಿ,
ಮತ್ತದೇ ಕಾಯಕದಿ
ಹುಟ್ಟಿ ಬರುವ ಭಾಗ್ಯ
ಬರಿಯ ನೇಸರನಿಗಷ್ಟೇ...

ಅಸ್ಪಷ್ಟ....



ನೂರೆಂಟು
ಕವನಗಳ
ಅವಳ
ಹೆಸರಲೇ
ಬರೆದಿದ್ದರೂ..
ಕನಸಲ್ಲಿ
ಮಾತ್ರ
ಬರುವ
ನನ್ನವಳ
ಮುಖ
ಇಂದಿಗೂ
ಅಸ್ಪಷ್ಟ...

ನೆನಪಿನಲೆ...



ಉದ್ಯಾನವನದೊಳಗೆ
ಏಕಾಂಗಿಯಾಗಿ
ಕುಳಿತಿದ್ದಾಗ
ನನ್ನೊಳಗೆದ್ದ
ಅವಳ ನೆನಪಿನಲೆಗೆ
ಅಲ್ಲಿದ್ದ ಮೊಗ್ಗುಗಳೆಲ್ಲಾ
ಅರಳತೊಡಗಿದೆ.

ಅರಿವು



ಮುಳುಗುವ
ಸಂಭವನೀಯತೆಯ
ಅರಿವಿದ್ದರೂ
ಮತ್ತೆ ಮತ್ತೆ
ಪಡುವಣದಿ ರವಿ
ಕಡಲ ಸನಿಹಕೆ
ತೆರಳಿದಂತೆ...
ನನ್ನೊಳಗೇ ಅಳುವ
ಸಂಭವನೀಯತೆಯ
ಅರಿವಿದ್ದೂ...
ಮತ್ತೆ ಮತ್ತೆ
ನಾ ತೆರಳುವೆ
ಅವಳ ನೆನಪಿನ
ಕಡಲ ಕಡೆಗೆ

ಗುಲಾಮ



ಬಯಕೆಗಳೆಲ್ಲವೂ ಇತ್ತು
ಇರಲೇ ಇಲ್ಲ
ಎಂದು ಸುಳ್ಳು ಹೇಳುವುದಿಲ್ಲ;
ಹೆತ್ತವರು ಇತ್ತ
ಸಂಸ್ಕಾರದ ಫಲವಾಗಿ
ಅವುಗಳೇ ನನ್ನ
ಗುಲಾಮರಾದವೇ ಹೊರತು
ನಾನದರ ಗುಲಾಮನಾಗಲಿಲ್ಲ.

ಕೆಟ್ಟ ಗಳಿಗೆ



ಅದ್ಯಾವ ಕೆಟ್ಟ ಗಳಿಗೆಯಲಿ
ನಾನಂದಿದ್ದೆನೋ ಅವಳ ಬಳಿ
" ನಾ ನಿನ್ನ ಹೃದಯ ನಿವಾಸಿ "
ಈಗ ಪ್ರತಿ ತಿಂಗಳೂ ಬಾಡಿಗೆ
ಪಡೆದೇ ತೀರುತ್ತಾಳೆ
ನನ್ನ ಕಾಡಿಸಿ, ಪೀಡಿಸಿ.

ನಿರಾಳ ನಿದ್ರೆ



ಭರತ ಮಾತೆಯ
ಕತ್ತನು ಹಿಸುಕುತಿದ್ದ
ನಾಲ್ಕು "ಕೈ"ಗಳು
ತುಂಡಾಗಿ ಬಿದ್ದುದ
ಕಂಡು ಬರಬಹುದೆನಗೆ
ಇಂದು ನಿರಾಳ ನಿದ್ರೆ

ಪರಿಸ್ಥಿತಿ



ಅವಳ ನೆನಪುಗಳನು
ಹೊರಗೆಳೆಯುವಾಗಲೆಲ್ಲಾ
ನನ್ನ ಪರಿಸ್ಥಿತಿ ;
ದ್ರೌಪದಿಯ
ಸೀರೆಯನೆಳೆಯ
ತೊಡಗಿದ
ದುಶ್ಯಾಸನನಂತಾಗುತ್ತದೆ.

ಕನಸಿನ ಮುತ್ತು..

ಅವಳಿಗಾಗಿ
ನಾ " ಕಣ್ಮುಚ್ಚಿ "
ಕೊಟ್ಟಿದ್ದ
ಮುತ್ತುಗಳೆಲ್ಲಾ...
.
.
.
ವಾಸ್ತವದಲಿ
ನನ್ನ ತಲೆದಿಂಬಿನ
ಪಾಲಾಗಿತ್ತು.

Thursday 5 December, 2013

ಏಕಾದಶಿ



ಅವಳೆನ್ನ ನೋಟದ
ಬಲೆಗೆ ಸಿಗದಂದೆಲ್ಲಾ
ನನ್ನಕಂಗಳಿಗೆ
ಏಕಾದಶಿ;
ಹಗಲೆಲ್ಲಾ ಹಾಗೇ
ಕಳೆದು, ಇರುಳ
ನಿದಿರೆಯಾ ತಟ್ಟೆಯಲಿ
ಸ್ವೀಕರಿಸಬೇಕು
ಅವಳ ಕನಸಿನ
ಫಲಾಹಾರ

ಕಳ್ಳ ನೋಟ

ನಾನವಳ ಕದ್ದು
ನೋಡುತ್ತಿದ್ದಾಗಲೇ
ಗೊತ್ತಾಗಿದ್ದು;
ಅವಳೂ ನನ್ನ
ಕದ್ದು ನೋಡುತ್ತಾಳೆಂದು.

ತಪ್ಪು....???

ಆಕೆ, ನಮ್ಮ ನಡುವಿನ
ಪ್ರೇಮ ಸಂಬಂಧವನೇ
ಮುರಿಯುವಂಥಾ ತಪ್ಪು
ನಾನೇನು ಮಾಡಿದ್ದೆನೋ
ಗೊತ್ತಾಗುತ್ತಿಲ್ಲ....??!!
ಆ ದಿನ ಸಂಜೆಯಲಿ
ಅವಳ ಕೆನ್ನೆಯ ಮೇಲೆ
ಕುಳಿತು ನೆತ್ತರ
ಹೀರುತ್ತಿದ್ದ ಸೊಳ್ಳೆಯನು
ಹೊಡೆದು ಕೊಂದು,
ನಿನ್ನ ನೋಯಿಸುವವರಿಗಿದೇ
ಗತಿ... ಎಂದು
ನನ್ನ ಪ್ರೇಮದಾಳವನು
ತೋರಿಸಿದ್ದು ತಪ್ಪೇ.. ?

ವಾಸನೆ

ಪುಢಾರಿ
ಅಕ್ರಮವಾಗಿ
ಕೂಡಿಟ್ಟ
ನೋಟಿನ
ತುಂಬಾ
ದೇಶದ
ಪ್ರಜೆಗಳ
ಬೆವರಿನ
ವಾಸನೆ
ಖುದಿರಾಮ್ ಬೋಸ್...


ತನ್ನ ಹೊತ್ತವಳ
ದಾಸ್ಯವನು ಕಂಡು
ನೆತ್ತರದೆಷ್ಟು ಕುದಿಯುತಿತ್ತೋ...?
ಮನದಿ ನಿರ್ಧರಿಸಿ
ಸಿಡಿಸಿಯೇ ಬಿಟ್ಟ.
ಶತ್ರು ಪಾಳಯದಲಿ
ಬಾಂಬೊಂದನು,
ಎಳೆಯ ಪ್ರಾಯದಲಾತ;
ಹದಿನೆಂಟು ವರ್ಷ,
ಏಳು ತಿಂಗಳು,
ಹನ್ನೊಂದು ದಿನದಲೇ
ನೇಣು ಕುಣಿಕೆಗೆ
ಕೆಚ್ಚೆದೆಯಲಿ ಕೊರಳೊಡ್ಡಿದ,
ಭಾರತ ಮಾತೆಯು
ತೊಡಿಸಿದ ಹಾರವೆನುತ.

---ಕೆ.ಗುರುಪ್ರಸಾದ್

ಅತ್ಯಂತ ಎಳೆಯ ಪ್ರಾಯದಲ್ಲಿ ಗಲ್ಲು ಶಿಕ್ಷೆಗೊಳಗಾದ " ಹರೇನ್ ಸರ್ಕಾರ್ " ಎನ್ನುವ ಗುಪ್ತನಾಮದ ಬಂಗಾಲದ ಯುವಕ್ರಾಂತಿಕಾರಿ " ಖುದಿರಾಮ್ ಬೋಸ್ "ರ ಜನನ ದಿನದಂದು ಅವನಿಗೊಂದು ನನ್ನ ನುಡಿ ನಮನ.... ಅವರ ಜೀವನಗಾಥೆಯು ನಮ್ಮ ರಕ್ತವನ್ನೂ ಕುದಿಯುವಂತೆ ಮಾಡಲಿ ಎನ್ನುವುದೇ ನನ್ನ ಆಸೆ...

ಮಿಂಚು-ಗುಡುಗು

ಮಿರಮಿರನೆ
"ಮಿಂಚು"ವವಳನು
ಮದುವೆಯಾಗಲೇ
ಬಾರದಿತ್ತು...
ಈಗ ನನ್ನ
ಕಂಡೊಡನೆ
"ಗುಡುಗು"ತ್ತಿದ್ದಾಳೆ

ನೋವು...

ನಿದ್ರೆಯ ಮೂಡಿನಲ್ಲಿದ್ದಂತೆ
ಕಂಡ ಓರ್ವ ಚೆಲುವೆ
ಬಸ್ಸಿನಲಿ ಬಳಿ
ಬಂದು ಕುಳಿತುಕೊಳಲು
ಮನದಿ ಹರುಷಪಟ್ಟು
ಭುಜವ ವಾಲಿಸಿ ಕುಳಿತೆ;
ನನ್ನ ದೌರ್ಭಾಗ್ಯಕ್ಕೆ
ನಾನಿಳಿಯುವವರೆಗೂ ಆಕೆಗೆ
ನಿದ್ದೆ ಹತ್ತಲೇ ಇಲ್ಲ;
ಅಬ್ಬಾ ಕಾಡುತಿದೆಯೀಗ ಭುಜನೋವು
ಮನೆಗೆ ಹೋಗಿ ಹಚ್ಚಬೇಕು ಮೂವು

ಆತ್ಮಹತ್ಯೆ....

ತಾ ಬೆಳೆದ ಬೆಳೆಗೆ
ಬೇಡಿದ ಬೆಲೆಗಿಂತಲೂ
ಮೀರಿದ ಧನರಾಶಿ ಸಿಕ್ಕಿತ್ತು,
ಆದರದನು ಪಡೆಯಲು
ಅವನೇ ಇಲ್ಲ, ಕಾರಣ
ಅನಂತ ದೂರಕ್ಕೆ ಹೋಗಿ ಬಿಟ್ಟ
ತನ್ನುಸಿರ ಬೆಲೆಯನು ತೆತ್ತು.
ಅವನಿಗೆ ಬದಲಾಗಿ
ಪಡೆಯಲಿರುವವರೂ ಕಂಗಾಲು,
ಎದೆಬಿರಿವಂತೆ ಅತ್ತೂ ಅತ್ತೂ...
ತನಗಧಿಕಾರ ದೊರೆಯುವುದಕೆ
ಇವರೆಲ್ಲರ ಬೆಂಬಲವೂ ಇತ್ತು,
ಎನುವ ಕಡೆಗಣಿಸಲಾಗದ ಸತ್ಯ
ಹಣ ಕೊಟ್ಟು ಕೈ ತೊಳೆದ
ಪುಡಾರಿಗೆಲ್ಲಿ ಗೊತ್ತು...?

ಸುಳ್ಳು...

ಪ್ರಿಯೆ....
ನಿನ್ನ ಚೆಲುವಿನ
ಮೊಗವ ನೋಡದೆಯೇ
ನನಗೆಲ್ಲಿಯ ಹಸಿವು...?
ಹಿಡಿ ತುತ್ತೂ ಗಂಟಲಿನಿಂದ
ಕೆಳಗಿಳಿಯುತಿಲ್ಲ...
ಎಂದವಳ ಜೊತೆ
ದೂರವಾಣಿಯಲಿ
ಹೇಳುತಿರುವಾಗಲೇ
ಬರಬೇಕೆ.....?
.
.
.
ಹಾಳಾದ ತೇಗು...

ಪ್ರೀತಿ....

ನನ್ನ ಪ್ರತಿಯೊಂದು
ಪ್ರೀತಿಯೂ
ಶುರುವಾಗುವುದು
ರಾತ್ರಿಯ ಆಕಳಿಕೆಯಲ್ಲಿ
ಮತ್ತು ಮುರಿದು
ಬೀಳುವುದು....
ನಸುಕಿನ
ಅಲರಾಮಿನ ಸದ್ದಿನಲ್ಲಿ

ಹುಡುಕಾಟ...

ಪ್ರತಿದಿನದ
ಆರಂಭದಲ್ಲಿ
ನನ್ನ ಮೊದಲ
ಹುಡುಕಾಟ
.
.
.
ಸ್ನೂಜ್..
ಬಟನಿನದೇ

ಬಾಗಿಲಿಗೆ ಬೀಗ

ಬರಿಯ ನಿರಾಕರಣೆಗಷ್ಟೇ
ಸೀಮಿತಗೊಳಿಸಬಹುದಿತ್ತು...
ಅಂಥಾ ಭಾವನೆಯೇನೂ
ನನ್ನಲಿಲ್ಲ ಎನ್ನುವಲ್ಲಿಗಾದರೂ
ನಿಲ್ಲಿಸಿಬಿಡಬಹುದಿತ್ತು...
ಅವಳೋ.. ಮುಂದುವರಿದು
ನೀ ನನ್ನ ಸಹೋದರನಂತೆ
ಎಂದು ಮೆಲ್ಲನುಲಿದು,
ಮುಂದೆಂದಾದರೂ ಪರಿವರ್ತನೆಯಾಗಿ
ತೆರೆಯಬಹುದಾಗಿದ್ದ ನಿರೀಕ್ಷೆಯ
ಬಾಗಿಲಿಗೂ ದೊಡ್ದ ಬೀಗ
ಜಡಿದುಬಿಟ್ಟಳು ಹಾಳಾದವಳು...

ಕಿವುಡ....

ಧರ್ಮಶೃದ್ಧೆ ಇರದ
ವಿಚಾರವಾದಿ ಸಾಹಿತಿಯೊಬ್ಬ,
ತನ್ನ ಕಿವಿಯ ತುಂಬಾ
ಅಪನಂಬಿಕೆಯ ಕೊಳೆಯ
ತುಂಬಿಕೊಂಡು ಕಿವುಡನಾದ ;
ಕೇಳುವ ಆಸಕ್ತಿಯನು
ಮೊದಲೇ ತೊರೆದಾತ ಈಗ
" ಯಾವ ಧರ್ಮದ
ದೇವರೂ ಮಾತಾಡಿಲ್ಲ..."
ಎಂದು ಡಂಗುರ ಸಾರತೊಡಗಿದ.

ಯಾರು....?

ಒಂದಷ್ಟು ಜನ ಅಪರಿಚಿತರು
ನೆರೆಯ ನಾಡಿಂದ ಬಂದು,
ಅಂದು ನಮ್ಮ ಜೀವದ
ಜೊತೆ ಚೆಲ್ಲಾಟವಾಡಿದ್ದರು ;
ವೀರ ಯೋಧರುಗಳು,
ಮತ್ತೊಂದಷ್ಟು ಆರಕ್ಷಕರು
ನಮ್ಮುಸಿರ ಕಾಪಾಡುವುದಕಾಗಿ
ತಮ್ಮ ಪ್ರಾಣಜ್ಯೋತಿಯನೇ
ತಮ್ಮ ಕೈಯಾರೆ ಆರಿಸಿದರು ;
ಇಲ್ಲೊಂದಿಷ್ಟು ಜನ ನೇತಾರರು
ನಮ್ಮದೇ ನಾಡಿನಲಿ ಹುಟ್ಟಿದವರು
ಇಂದು ನಮ್ಮ ಭಾವನೆಯ
ಜೊತೆ ಚೆಲ್ಲಾಟವಾಡುತ್ತಿದ್ದಾರೆ,
ಕಣ್ಣಿದ್ದೂ ಕುರುಡರಾದರೆ ನಾವು
ಇಂಥವರಿಗೆಲ್ಲಾ ಪಾಠ ಕಲಿಸುವವರ್ಯಾರು...?


26/11 ರ ಹುತಾತ್ಮರಿಗೆಲ್ಲರಿಗೂ ನನ್ನ ಕೋಟಿ ನಮನಗಳು

ಟೀಚರ್...

ಬಹುಶಃ ಅವಳು
ಆಗಿದ್ದಿರಬಹುದು...!??
ಪ್ರಾಣಾಯಾಮದ ಟೀಚರು;
ಕಾರಣ...
ನನಗರಿವಿಲ್ಲದಂತೆಯೇ
ದೀರ್ಘವಾದ ಶ್ವಾಸವನು
ತೆಗೆದುಕೊಳ್ಳುತ್ತೇನೆ.
ಬಂದರೆ ಅವಳು ನನ್ನೆದುರು ;
ಮತ್ತಾಕೆ ಮರೆಯಾದಾಗ...
ನಿರಾಸೆಯ
ದೀರ್ಘ ನಿಟ್ಟುಸಿರು.

ಚಳಿ

ಬಚ್ಚಲು ಮನೆಯ
ಮೂಲೆಯಲ್ಲಿ ನಿನ್ನೆ
ಸಂಜೆ ಅಮ್ಮ ತಂದಿಟ್ಟ
ರಾಶಿ ರಾಶಿ ತರಗೆಲೆ...
ಅದನು ಸುಟ್ಟು ಸಿಕ್ಕ
ಶಾಖದಿಂದ ಆಯಿತು
ನನ್ನ ಕಾಡುತಿದ್ದ
ಚಳಿರಾಯನ ಕೊಲೆ,

ಆತುರ...

ಇರುಳ ಏಕಾಂತದಲಿ
ಅವಳ ಕನಸಿನ
ಪಲ್ಲಕಿಯ ಹೊರಲು,
ಆತುರಾತುರದಿ
ಸಿದ್ಧವಾಗತೊಡಗಿದೆ
ನನ್ನ ಕಂಗಳ ಹೆಗಲು.

ಸನಿಹ



ಪ್ರೀತಿ ಸೂಸುವ
ನಗುವನಿನ
ಕಂಪನು
ಅವಳೆದುರು
ಚೆಲ್ಲುತ್ತಿದ್ದರೂ
ಯಾಕೋ ...?
ಆಕೆ ನನ್ನ
ಕೈಗೆಟಕುವಷ್ಟು
ಸನಿಹಕ್ಕೆ
ಬಾರಲೇ ಇಲ್ಲ

ವಿದಾಯ



ಬಾಲ್ಯದಲಿನ
ಪ್ರತಿಯೊಂದು
ಕ್ಷಣಗಳನು
ಮೆಲುಕು
ಹಾಕುತ್ತಾ,
ತನ್ನ ಕೈ
ಹಿಡಿದು
ಬೆಳೆಸಿದವರ
ನೆನೆದುಕೊಳ್ಳುತ್ತಾ,
ಕೃತಜ್ಞತೆಯ
ಸಲ್ಲಿಸುವಲ್ಲಿ
ಎಡವಿಬಿಟ್ಟೇನೋ
ಎಂದು
ಗಾಬರಿಯಾಗುತ್ತಾ,
ಭಾವುಕ
ಮಾತುಗಳ
ಮುಗಿಸಿದ,
ಆದರೆ....
ಲೆಕ್ಕವಿಲ್ಲದಷ್ಟು
ಜನರ
ಅಭಿಮಾನ
ತಂದಿತ್ತ ತನ್ನಾಟಕೆ
ಪದಗಳ
ಪುರಸ್ಕಾರವನೀಯಲಿಲ್ಲ,
ಬದಲಾಗಿ ತನ್ನ
ಕಣ್ಣೀರ ಹನಿಗಳ
ಅಭಿಷೇಕವಗೈದ
ಮೆಲ್ಲನೆ ತನ್ನ
ತಲೆಯ ಬಾಗುತ್ತಾ..

ದಾಂಧಲೆ...

ಸುಮ್ಮನೆ ಬಿಟ್ಟಿರಲಿಲ್ಲ
ನನಗೀಗಲೂ ನೆನಪಿದೆ
ಕೈಕೊಟ್ಟು ಇನ್ನೊಬ್ಬನನು
ವರಿಸಿದ ಅವಳ
ಮದುವೆಯಲಿ ನಾ
ಧಾಂದಲೆ ಮಾಡಿದ್ದು....
ಬೇಕಿದ್ದರೆ ಕೇಳಿ ನೋಡಿ
ಅಂದು ಅಡುಗೆ ಮಾಡುತ್ತಿದ್ದವರನು,
ಸಣ್ಣಗೆ ತೇಗು ತೆಗೆಯುತ್ತಾ
ನಾನೆದ್ದು ಕೈತೊಳೆದಾಗಲೇ
ಅವರು ನಿಟ್ಟುಸಿರು ಬಿಟ್ಟಿದ್ದು

ವಿಪರ್ಯಾಸ

ಹಿಂದುತ್ವದ ಮಾತೆತ್ತಿದರೆ
ಕೋಮುವಾದಿ ಎಂದು ಜರೆದವರು;
ಪ್ರಗತಿಯ ಮಾತೆತ್ತಿದರೆ
ಗೋರಿಯ ಮೇಲಿನ ಪ್ರಗತಿಯದು
ಎಂದಪಹಾಸ್ಯವಗೈದವರು,
ಬೆಂಬಲದ ಅಭಯ"ಹಸ್ತ"ವ ತೋರಿದ್ದು
ಪ್ರಗತಿಯನು ಬದಿಗೊತ್ತಿ
ಹತೈವತ್ತು ವರ್ಷಗಳಿಂದ
ಬರಿಯ ಬಡ ಭಾರತೀಯರ
ಗೋರಿಯನೇ ಕಟ್ಟುತಿರುವ
ಹುಸಿ ಜಾತ್ಯಾತೀತರಿಗೆನುವುದು
ವಿಪರ್ಯಾಸವೇ ತಾನೇ..

Thursday 21 November, 2013

ಮನೆ...





ಅನಿಸುವುದು ಕೆಲವೊಮ್ಮೆ
ದೊಡ್ಡ ಮನೆಯ
ಬದಲಿಗೆ ಇರಬೇಕಿತ್ತು
ಸಣ್ಣ ಗುಡಿಸಲು.
ಕಾರಣವಿಷ್ಟೇ...
ಸುಲಭವಾಗುವುದಲ್ಲ
ನನಗೆ ಬೆಳಗಾತ
ಮನೆಯ ಗುಡಿಸಲು.

ಕಾರಣ





ಬಲುಬೇಗನೆ ಬರುವುದೆನಗೆ
ನಿದ್ರೆ, ಹೇಗೆಂದರೆ..
ಆಕಳಿಸಲು ತೆರೆದ ಬಾಯಿ
ಪೂರ್ತಿಯಾಗಿ ಮುಚ್ಚುವುದರೊಳಗೆ;
ಮತ್ತಿನ್ನೇನೂ ಅಲ್ಲ
ಇದೊಂದೆ ಕಾರಣ
ನನ್ನ ತೆರೆದ
ಬಾಯಿಯ ಗಾಢ ನಿದ್ರೆಗೆ.

ಆಧುನೀಕತೆ...



ಯುವಕ ಯುವತಿಯರ
ಮನದ ಮೇಲಪ್ಪಳಿಸಿದೆ
ಆಧುನೀಕತೆಯ ಭಾರೀ ಹೊಡೆತ;
ಹಾಗಾಗಿಯೆ ಕಾಣಸಿಗುವುದು
ಹುಡುಗಿಯರು ತೊಡುವ
ಉದ್ದ ಲಂಗದಲಿ ಭಾರೀ ಕಡಿತ;
ಮತ್ತು ಹುಡುಗರು ಹಾಕುವ
ಪ್ಯಾಂಟಿನ ಸೊಂಟ ಇರಬೇಕಾದ
ಸ್ಥಾನದಲಿ ಭಾರೀ ಇಳಿತ.

ಗರ್ವ ಭಂಗ...





ನೇಸರನಾಭಿಮಾನಿ
ನನ್ನೊಳಗಿನ ಕವಿ,
ರವಿಯ ನೂರು
ಬಗೆಯಲಿ ಬಣ್ಣಿಸಿದ;
"ನೂರು" ಸಂಖ್ಯೆಯ
ಗರ್ವ-ಭಂಗ ಮಾಡಲು
ಬೆಳಕಿನೊಡೆಯ
ನನ್ನೀ ಕಂಗಳಿಗೆ ಹೊಸ
ದೃಶ್ಯಕಾವ್ಯವನಿಂದು ಉಣ್ಣಿಸಿದ

ಮುಸುಕು...





ಗಟ್ಟಿಯಾದ ಕಲ್ಲು ಮತ್ತು
ಸಿಮೆಂಟಿನಿಂದಾದ ಕೊಠಡಿ
ಅದಕೆ ಭದ್ರವಾದ ದಪ್ಪ
ಹಲಗೆಯ ಮರದ ಬಾಗಿಲು,
ಅದೂ ತೆರೆಯದಿರದಂತೆ
ಹಿತ್ತಾಳೆಯ ದೊಡ್ಡ ಚಿಲಕ..
ಇವುಗಳೆಲ್ಲವೂ ಇದ್ದರೂ
ಕತ್ತಲಿನಲಾಗುವ ವಿಚಿತ್ರ
ಭಯವ ನಿವಾರಿಸಿದ್ದು..
ಮುರುಟಿದ ದೇಹವನಾವರಿಸಿದ
ತೆಳು ಹೊದಿಕೆಯ ಮುಸುಕು..

ಉರುಳು..





ಗಡಿಯಲಿಹ ಯೋಧರ
ತಲೆಗಳುರುಳುತಿರುವುದ
ಬಾರಿ ಬಾರಿ ಕಂಡರೂ...
ಕರುಳಲುರಿ ಬರದ,
ಕೋಪವದು ಕೆರಳದಿರದ
ರಾಜಕೀಯದ ದುರುಳರಿಗೆ
ಮತ ನಕಾರದ ಉರುಳನಿತ್ತು
ವೀರ ಯೋಧರ ಪಡೆಯ
ಬೆಂಬಲಕೆ ಕಟಿ ಬದ್ಧರಾಗೋಣ...