Sunday 29 July, 2012

ಎಡವಿದವರ್ಯಾರು..?



ಬೆಳೆದು ದೊಡ್ಡವರಾಗಿ ದುಡಿದು
ತಮ್ಮ ಕಾಲ ಮೇಲೆ ತಾವು ನಿಲ್ಲುವ ಮುನ್ನವೇ
ತಂದೆತಾಯಿಯರು ದುಡಿದುದನು
ತಮ್ಮ ಅಸಹ್ಯ ಮೋಜಿಗಾಗಿ
ಪೋಲು ಮಾಡಿದರಲ್ಲ ಈ ಯುವ ಜನತೆ,
ಇವರು ಎಡವಿದವರೇ...?

ಈ ನೆಲದ ಸಂಸ್ಕೃತಿಯ ತಿಳಿಹೇಳದೆ
ಹಣಗಳಿಕೆಯ ಹುಚ್ಚು ಕುದುರೆಯನ್ನೇರಿ
ಗಮನವೀಯದೆ ಹಣದ ಹೊಳೆ ಹರಿಸಿ
ಮಕ್ಕಳ ಅಸಭ್ಯತೆಯ ಕಡೆ
ದೂಡಿ ಬಿಟ್ಟರಲ್ಲ ಈ ಪಾಲಕರು,
ಇವರು ಎಡವಿದವರೇ..?

ನಡೆಯುತ್ತಿದ್ದ ತಪ್ಪುಗಳ ತಿದ್ದಿ
ನಮ್ಮದಾಗಿಹ ಸಂಸ್ಕೃತಿಯ ಹಾದಿಯ
ತೋರಿಸುವ ಸಲುವಾಗಿ
ಕಾನೂನನ್ನು ಕೈಗೆತ್ತಿಕೊಂಡರಲ್ಲ
ಸಂಘಟನೆಯೊಂದರ ಬಿಸಿರಕ್ತದ ಯುವಕರು.
ಇವರು ಎಡವಿದವರೇ...?

ಸಾಮಾಜಿಕ ಕರ್ತವ್ಯವ ಮರೆತು, ತಾವು ಮಾಡಿದ್ದೇ ಸರಿ,
ಜನರ ಮುಂದೆ ಸತ್ಯವ ತೆರೆದಿಡುವುದೇ ನಮ್ಮ ಗುರಿ,
ಎಂದು ತಮ್ಮ ಆದಾಯ ಏರಿಸಿಕೊಳ್ಳುವ ಸಲುವಾಗಿ
ನಡೆದ ಘಟನೆಯನೇ ಮತ್ತೆ ಮತ್ತೆ ತೋರಿಸಿ
ಮನೆಮಂದಿಗೆಲ್ಲ ಮುಜುಗರವ ತಂದಿತ್ತರಲ್ಲ
ಈ ಮಾಧ್ಯಮದವರು...
ಇವರು ಎಡವಿದವರೇ...?

ಉತ್ತರ ಸಿಗದೇ ತತ್ತರಿಸುತಿದೇ ಈ ಮನ
ಇವರುಗಳಲ್ಲಿ ನಿಜಕೂ ಎಡವಿದವರ್ಯಾರು..??

---ಕೆ.ಗುರುಪ್ರಸಾದ್
 

No comments:

Post a Comment