ಆಗಸದ ಚೆಲುವನೆಲ್ಲಾ
ನುಂಗಿಹಾಕಿದ್ದ ಕತ್ತಲಿನ
ಕಪ್ಪಗಿನ ಬಣ್ಣವ
ರವಿಯ ಬೆಳಕಿನ ಕಿರಣವು
ಮೆಲ್ಲನೆ ಅಳಿಸಿ ಹಾಕುತಿದೆ...
ಇರುಳಿನ ಭೀಕರತೆಗೆ ಹೆದರಿ
ಮೌನದ ನೀರವತೆಯಲ್ಲಿ
ಕಳೆದು ಹೋಗಿದ್ದ
ಶಬ್ದಗಳನೆಲ್ಲಾ ಕರೆತರುವ
ಸಲುವಾಗಿ ಹಕ್ಕಿಯು ಹಾಡುತಿದೆ...
ಕತ್ತಲಿನ ನೆಪವೊಡ್ಡಿ
ಆಲಸ್ಯಕ್ಕೆ ಮೊರೆ ಹೋಗಿ
ನಿದಿರೆಯಲಿ ಮುಳುಗಿಹೋಗಿದ್ದ
ಜೀವಿಗಳಿಗೆಲ್ಲ ಎಚ್ಚರವಾಗುತಿದೆ..
ಮುಂಜಾನೆಯಲಿ ಬೇಗನೆ ಎದ್ದು
ಜಗವ ಬೆಳಗೋ ಕಾಯಕವ
ಶುರುಮಾಡಿದ ನೇಸರನ ಕಂಡು
ಮನುಜನಿಗೆ ಮೆಲ್ಲನೆ
ತನ್ನ ಕಾಯಕದ ನೆನಪಾಗುತಿದೆ..
ಭುವಿಗೆ ಬೆಳಗಾಗುತಿದೆ...
No comments:
Post a Comment