Monday 10 November, 2014

ಹೊಗಳಿಕೆ...



ಹೊಗಳಿಕೆಯ
ತುತ್ತತುದಿಯಲ್ಲಿಡಬೇಡ
ಗೆಳತೀ...
ಅಲ್ಲಿರುವುದು
ಅಹಂಕಾರವೆನುವ
ವಿಷದ ಗಾಳಿ
ಉಸಿರಾಡಿದಂತೆಲ್ಲಾ
ನನ್ನುಸಿರ ಚೀಲವನದು
ನೀಲಿಯಾಗಿಸೀತು.
ಅಲ್ಲಿ ಮತ್ತೊಂದಿಷ್ಟು
ಒಂಟಿತನ ಕಾಡೀತು
ಯಾಕೆಂದರಲ್ಲಿ ಯಾರಿಲ್ಲ.
ಹಾಗೆಯೇ ಸುಮ್ಮನೆ
ಯೋಚಿಸಿ ನೋಡು
ಕಾಡದಿದ್ದೀತೆ ನನ್ನನಲ್ಲಿ
ಆ ಸಣ್ಣ ಭಯ..?
ಕಹಿ ಸತ್ಯದ ಬಿರುಗಾಳಿ
ಬೀಸಿದರೆ...?
ವಾಸ್ತವದ
ಪ್ರಪಾತಕ್ಕುರುಳುವಾಗಿನ
ನೋವ ನನ್ನಿಂದ
ಸಹಿಸಲಾದೀತೇ...?
ನೀನೇ ಯೋಚಿಸಿ ನೋಡು.
ನಿಂತಿರುವ ನೆಲ
ಕೊಳಕಾಗಿದ್ದರೂ
ಪರವಾಗಿಲ್ಲ
ಇಲ್ಲೊಂದು
ಭದ್ರತೆಯ ಹಿತವಾದ
ಅನುಭೂತಿ ಇದೆ.
ನನ್ನನೀ ನೆಲದಲ್ಲೇ
ಇರಲು ಬಿಡು.
ಮುಗಿಲೆತ್ತರದಲಿ
ನನ್ನನಿರಿಸಿ ಚೆಲುವ
ನೋಡುವ ನಿನ್ನ
ಕನಸ ಮರೆತು ಬಿಡು...

1 comment:

  1. ’ವಾಸ್ತವದ
    ಪ್ರಪಾತಕ್ಕುರುಳುವಾಗಿನ
    ನೋವ ನನ್ನಿಂದ
    ಸಹಿಸಲಾದೀತೇ...?’

    ಮಾರ್ಮಿಕ...

    ReplyDelete