Friday, 15 July 2016

ಕೃತಿಚೌರ್ಯ



ಬೆಳದಿಂಗಳ
ಹೊರಸೂಸುವ
ಚಂದಿರನೆನುವ
ಕಾವ್ಯವನು
ತನ್ನ ಮುಖಪುಟದಿ
ಕೆತ್ತಿದ
ಕೆರೆಯ
ಕಾರ್ಯವದು
ಕೃತಿಚೌರ್ಯವಲ್ಲದೆ
ಮತ್ತೇನು...?


ಚಡಪಡಿಕೆ



ಮುಗಿಲ ಮಕ್ಕಳು
ಬುವಿಯೆಡೆಗೆ
ಸಾಲುಸಾಲಾಗಿ
ಇಳಿದಿಳಿದು
ತಂಪಿನಲೆಯ
ಚೆಲ್ಲುತ್ತಿದ್ದರೂ
ಮನದ ರಾಜ್ಯದಲಿ
ವಿರಹದುರಿಯೆನುವ
'ಬರ'ದ ಚಡಪಡಿಕೆ


ಸ್ವಾತಂತ್ರ್ಯ



ಹಲವು ಸಮಯದಿಂದಲಿ
ಸ್ವಾರ್ಥದ ಸಾಹಿತಿಗಳ
ಶೆಲ್ಫಿನ ಬಂಧನದಿ
ಇರಲಾಗದೇ
ಒದ್ದಾಡುತಿದ್ದ
ಬೆಲೆಬಾಳುವ
ಪ್ರಶಸ್ತಿಗಳಿಗೆಲ್ಲಾ
ಈಗ ಸ್ವಾತಂತ್ರ್ಯದ
ಪರ್ವಕಾಲ

ಕಾಲದ ಪ್ರವಾಹ



ಪುರುಷ ಯತ್ನವ
ಮಾಡಲೊಲ್ಲದೆ
ಕೈಗೊಂಡ
ನಿರ್ಣಯವಿದಲ್ಲ ;
ನಿರಂತರ
ಪ್ರಯತ್ನದಿ
ಬಸವಳಿದ
ಭಾವಕೆ
ಬಲಿಯಾಗಿ
ಕಾಲದ
ಪ್ರವಾಹದಲಿ
ಕೊಚ್ಚಿಕೊಂಡು
ಹೋಗಲನುವಾಗಿದ್ದೇನೆ.
ನನ್ನೆಲ್ಲ
ಮನದಾಸೆಯ
ಭಾರವನು
ಕಳಕೊಂಡು
ಒಣಗಿದ
ಎಲೆಯಾಗಿದ್ದೇನೆ.
ನಾನಿಂದು
ನಿರಾಳನಾಗಿದ್ದೇನೆ.




ತವಕ


ಜಗದ
ಜಾಡ್ಯವ
ಝಾಡಿಸಿ
ಒದೆಯಲು
ನೇಸರಗೆ
ಇನ್ನಿಲ್ಲದ
ತವಕ

ವಿಪರ್ಯಾಸ


ಪತಿಯ ಕಳಕೊಂಡ
ಒಬ್ಬಾಕೆ ತನ್ನ
ಬೋಳು ಹಣೆಯ
ನೋಡಿ ಮನದಿ
ಮರುಗುತ್ತಿದ್ದರೆ.....
ಇನ್ನೊಬ್ಬಳಲ್ಲಿ
ಬೋಳು ಹಣೆಯೇ
ಈಗಿನ ಫ್ಯಾಶನ್
ಎಂದು ಪತಿಯ
ಜೊತೆ ವಾದಿಸುತ್ತಿದ್ದಾಳೆ

ತಾರಾ ಮಳೆ



ಮುಗಿಲನಾವರಿಸಿದ್ದ
ಹೊಳೆವ
ತಾರೆಗಳನೆಲ್ಲಾ
ಒಂದೊಂದಾಗಿ
ನುಂಗಿ ಹಾಕಿದ
ಮೋಡವೇ...
ಮಳೆ ಹನಿಯ
ಜೊತೆಯಲಿ
ಅವುಗಳನೆಂದು
ನೀ ಬುವಿಗೆ
ಸುರಿಯುವೆ