Wednesday, 24 October 2012

ಮತ್ಸರ...

ಏಕಾಂತದ
ಮಸ್ಸಂಜೆಯಲಿ,
ತನ್ನ ನೆನಪುಗಳಿಂದ
ಕಾಡತೊಡಗಿದ
ನನ್ನವಳ
ನಾ ಹುಡುಕಲು
ಹೊರಟಾಗ,
ಆ ಬಾನ ಭಾಸ್ಕರ
ಸಿಡುಕಿ ಕೆಂಪಾಗಿ
ಕಡಲ ಮರೆಗೋಡಿ
ಜಗಕೆ ಕತ್ತಲನಿತ್ತನಲ್ಲ;
ಬಹುಶಃ ಅವನಿಗೆ
ನನಗವಳು ಸಿಗುವುದ
ನೋಡಲು ಇಷ್ಟವಿಲ್ಲ

ದಾಹ


ದಿನವಿಡೀ ಜಗವ ನೋಡಿ
ದಣಿದ ನನ್ನ ಕಂಗಳ
ದಾಹ ತೀರುವುದು ,
ಇರುಳ ನದಿಯಿಂದ
ಬೊಗಸೆಯಲಿ ತಂದ
ನಿದಿರೆಯೆಂಬ ಸಿಹಿ ನೀರ
ಕುಡಿದಾಗಲೇ...

ಬಂಧ-ಮುಕ್ತಿ

ಕಾವ್ಯವಾಗಬೇಕಿದ್ದ
ಪದಪುಂಜಗಳು
ಮರೆವಿನ
ಬಂಧನದೊಳಗಿದ್ದರೂ
ಅವುಗಳಿಗೆ
ಒಂದಿನಿತೂ
ಬೇಸರವಿಲ್ಲ;
ಬಂಧಮುಕ್ತಿಗೊಳಿಸಿ
ಕಾಗದದರಮನೆಗೆ
ಅವುಗಳ
ಕರೆತರದೆ
ನನ್ನೊಳಗಿನ
ಚಡಪಡಿಕೆಗೆ
ಮುಕ್ತಿಯಿಲ್ಲ.

ಪರಿಚಯ

ತೆರೆದ ಕಣ್ಣಿಗೂ
ಕಾಣಿಸದ
ಅಪರಿಚಿತರ
ಮನದೊಳಗಿನ
ಗುಣವನರಿಯಲು
ಪರಿಚಯವೆನುವ
ಬಾಗಿಲನು
ತೆರೆಯಲೇಬೇಕು

ಆಯುಧ ಪೂಜೆ

ಮಗನೋರ್ವ
ತನ್ನವಳ ಕಣ್ಣಿಗೆ
ಪೂಜೆ ಮಾಡಹೊರಟ
ಕಣ್ಣೋಟವೇ
ನಿನ್ನ ಆಯುಧವೆಂದು,
ಅದ ನೋಡಿದ ತಂದೆ
ಆರತಿ ತಟ್ಟೆಯೊಡನೆ
ಅವರಾಕೆಯ ಪೀಡಿಸುತ್ತಿದ್ದಾರಂತೆ
ನೀನೊಮ್ಮೆ ನಾಲಗೆಯ
ಹೊರಹಾಕೆಂದು...

Sunday, 14 October 2012

ಈ ಸಂಜೆಯ ಮಳೆ

ಈ ದಿನದ ಮುಸ್ಸಂಜೆಯಲಿ,
ಹಠಾತ್ತನೆ ಸುರಿದ ವರ್ಷಧಾರೆಯ
ಕಂಡಾಗ ನನಗನಿಸಿದ್ದು;
ನವರಾತ್ರಿಯಲಿ,ನವರೂಪದಲಿ
ಜಗದಾದಿಮಾಯೆ ಭುವಿಗಿಳಿದು
ಬರುವಳೆನ್ನುವ ಮಾಹಿತಿಯ
ಪಡೆದೊಡನೆ,
ದೇವನದಿ ಗಂಗೆಯೇ
ಮೋಡಗಳ ಗರ್ಭದಿಂದ
ಮಳೆಹನಿಯಾಗಿ ಜನ್ಮ ತಳೆದು
ಭುವಿಯ ಶುಚಿಗೊಳಿಸಲು
ಓಡೋಡಿ ಬರುತಿಹಳೇ...?

ದಾರಿದೀಪ

ಎಲ್ಲೆಡೆಯೂ
ಕವಿದ
ಕತ್ತಲು
ಬೆಳಕಿನೆಡೆಗೆ
ಹೋಗುವ
ಹಾದಿಯನೇ
ಮರೆಮಾಚಿದಾಗ
ದಾರಿದೀಪವಾಗಿ
ಬಳಿ ಬಂದಿತ್ತು
ಸಿಹಿ ಕನಸು..