Monday, 4 July 2011

YETHAKE?

ಓ ಮನಸೇ ನೋವೇತಕೆ ನಿನ್ನ ತನುವಿಗೆ?
ಓ ಕನಸೇ ಸಾವೇತಕೆ ನಿನ್ನ ಬಾಳಿಗೆ?
ಸಿಗದೇ ಹೋದರೆ ನನಗೆ, ನನ್ನವಳ ಮುಗುಳು ನಗೆ.

ಅವಳ ನೋಟ ನನ್ನೆಡೆಗಿಲ್ಲದಿರೆ , ಬೆವರೇತಕೆ ? ನಯನವೇ ನಿನ್ನ ದೇಹಕೆ.
ಅವಳ ನುಡಿ ನನಗಾಗಿ ಬಾರದಿರೆ, ಆಹಾರವಿಲ್ಲವೇತಕೆ? ಕಿವಿಯೇ ನಿನ್ನುದರಕೆ;
ಅವಳ ತನುವಿನ ಗಂಧವಿಲ್ಲದ ಗಾಳಿ ಬಳಿ ಬಂದರೆ, ಹಸಿವಿಲ್ಲವೇತಕೆ? ಈ ನಾಸಿಕಕೆ;

ನಿಶ್ಚಲತೆ ಏತಕೆ? ನನ್ನ ಕಾಲಿಗೆ, ಅವಳೆನಗೆ ಕಾಣುವಂತಿದ್ದರೆ;
ಅವಳ ಕನಸು ಮೊಳೆಯುವುದೇತಕೆ  ಮನಸಿನೊಳಗೆ, ಅವಳೆನಗೆ ಕಾಣದಂತಿದ್ದರೆ;
ಪ್ರೀತಿಸುವಳೆಂಬ ಭ್ರಮೆಯೇತಕೆ? ಮನಸೇ ನಿನಗೆ, ನಗು ಮುಖದಿ ಅವಳೆನ್ನ ಕಂಡರೆ.

ಪ್ರೀತಿಯ ಹೊತ್ತೊಯ್ಯುತ್ತಿದ್ದರು ನನ್ನ ನೋಟ , ಕಾಣದೇತಕೆ   ಅದು ಅವಳ ಕಣ್ಣಿಗೆ,
ನನ್ನ ಈ ಪ್ರೀತಿಗೆ ಪ್ರತಿಫಲವಾಗಿ ಪ್ರೀತಿ ಸಿಗದೇನೋ ಅವಳಿಂದ ನನಗೆ
ಹಾಗಿದ್ದರೆ ಬೇಗದಲಿ ಬಾರದೇತಕೋ, ಸಾವೆನ್ನ ಬಳಿಗೆ, ಅವಳಿರದ ಬಾಳಿಗೆ.







Tuesday, 28 June 2011

BANOLAGINA KADALU


ಏಕಾಂತದಲಿ ನಾನಿರಲು ಬಾನನೊಮ್ಮೆ ನೋಡಿದೆ
ಕಡಲೊಂದ ಬಾನಿನಲಿ ಕಂಡು ನಾ ಬೆರಗಾದೆ.

ಬರಿದಾಗಿದೆ ಈ ಕಡಲಿನ ಒಡಲು ಉಪ್ಪು ನೀರಿಲ್ಲದೆ,
ನೀಲ ವರ್ಣವೋ ನೀರಿನಿರುವಿಕೆಯನು ತೋರುವಂತಿದೆ.

ಮೇರುಗಾತ್ರದ ತೆರೆಯನ್ನೇ ನಾ ಕಾಣದಾದೆ,
ಬಿಳಿ ಮೇಘದ ಗುಂಪುಗಳು ತೆರೆಯೆ ನಾವೆಂದು ಸಾರುತಿದೆ.

ಹಕ್ಕಿಯೆಂಬ ಜಲಚರಗಳು ಈಜಾಡುತಲಿದೆ
ದಡವಿಲ್ಲದ ಕಡಲ ನೀರಿನೊಳಗೆ ಮುಳುಗೇಳುತಿದೆ.

ಸೂರ್ಯನೋ ಹಗಲೆನ್ನದೆ ಚಂದಿರನೋ ಇರುಳೆನ್ನದೆ
ಈಜುವರು ಪಡುವಣದ ತುದಿಯ ಸೇರುವ ತವಕದೆ

ಯಾಕೆ ನೋಡದೆ ಇಷ್ಟು  ಕಾಲವ ನಾ ವ್ಯರ್ಥದಿ ಕಳೆದೆ
ಈ ಕಡಲಿನ ಸೌಂದರ್ಯದ ರುಚಿಯ ಕಣ್ಣಲ್ಲಿ ಹೀರದೆ.






Friday, 27 May 2011

VISHA GHALIGE

ಮರೆಯಲು ಉಂಟೆ ಆ ವಿಷ ಗಳಿಗೆ
ನನ್ನ ನಲ್ಲೆ , ನನ್ನೇ ಒಲ್ಲೆ ಎಂದ ಗಳಿಗೆ

ನುಡಿದ ತಕ್ಷಣ ಧುಮುಕಲಿಲ್ಲ , ನನ್ನ ದುಗುಡದಾಶ್ರುಗಳು
ಕಾದು ಕುಳಿತಿತ್ತು ಅದು ಏಕಾಂತದ ಗಾಢ ಕತ್ತಲಿಗೆ.

ಕಣ್ಣಿನಲ್ಲೆಲ್ಲೋ  ಅವಿತಿದ್ದ , ಹರಿದು ಹಂಚಿ ಹೋಗಿದ್ದ ಕಣ್ಣೀರ ಹನಿಗಳು
ಮನಸ  ಮಾತು ಕೇಳದೆ ಮಾಡತೊಡಗಿತು ಕೆನ್ನೆ ಮೇಲೆ ಮೆರವಣಿಗೆ

ಬದ್ಧ ವೈರಿ "ಮೌನ" ದ ಮನೆಯೊಳಗೇ ವಾಸ ಮಾಡತೊಡಗಿತು ನನ್ನ  ಮಾತುಗಳು
ಚಿರ ನಿದ್ರೆಯೇ ಬಂದಿತ್ತು , ಕ್ಷಣ ಕಾಲವೂ ವಿರಮಿಸದ ನನ್ನ ನಾಲಿಗೆಗೆ

ಉತ್ಸಾಹ , ಉಲ್ಲಾಸ ಗಳು ಪರಿಚಿತರಾಗಿದ್ದರು, ಈಗ ನನಗೆ ಅಪರಿಚಿತರು
ಮನದಾಳದ ಪೂರ್ಣ ಕುಂಭ ಸ್ವಾಗತವೀಗ ಬರಿಯ ದುಗುಡ, ಬೇಸರವೆನುವ ಆಗಂತುಕರಿಗೆ.

ನಲಿದಾಡಿದರು ದಣಿವರಿಯದ ಜೀವಕೆ, ದಣಿವ ತರುತಿಹುದು ಇಡುವ ಪ್ರತಿ ಹೆಜ್ಜೆಗಳು
ಸಂತಸದ ವೃಂದಾವನವದು ಸುಟ್ಟು  ಕರಕಲಾಗಿಹುದು, ವಿರಹದಾ ಸಣ್ಣ ಕಾಳ್ಗಿಚ್ಚಿಗೆ




Monday, 23 May 2011

KANNIRA KUDURE

ಕಣ್ಣೀರ ಕುದುರೆಗಳಿಗೆ
ಮುಗುದಾರವನು ಹಾಕಿ
ಹಿಡಿದು ಕೊಂಡಿರುವುದು 
 ನನ್ನ ಕಲ್ಲು ಹೃದಯ,
ದಾಟಲು ಬಿಡಲಾರದು 
ನನ್ನ  ಕಣ್ಣಿನ ಅಂಗಳವ;
ಮತ್ತೆ ಮತ್ತೆ ಬರುತಿದ್ದ 
ಅವಳ ನೆನಪುಗಳು
ತಿವಿಯುತಿತ್ತು ಈ ಕುದುರೆಗಳ;
ಕೊಡುತ ನಾಗಾಲೋಟಕೆ ಪ್ರೇರಣೆಯ,
ಹೊಡೆತ ತಿಂದು ಓಡುವ
ಕುದುರೆಯೋಟವ  ಕಂಡು
ಸುಖಿಸುವ ಹುಚ್ಚು 
ಜನರಿರುವ ಜಗವಿದು;
ಅದಕಾಗಿ ಕೊಟ್ಟಿರುವೆ ನನ್ನ 
ಕಲ್ಲು ಹೃದಯಕದರ ಲಗಾಮು;
ಸ್ಪಷ್ಟ ನಿರ್ದೇಶನದೊಂದಿಗೆ
ತಿರುಗು ಕಣ್ಣೊಳಗೆ
ಕೆನ್ನೆಯ ಮೈದಾನದಿ
ಸ್ಪರ್ಧೆಗಿಳಿಯಬೇಡ
ಮನದ ದುಗುಡವ
ಮರೆಮಾಚುವಂತೆ 
ತುಟಿಯ ತುಂಬಾ 
ನಗೆಯ ಕೆತ್ತಿಸಿರುವೆ;
ಮನದಾಳದ ನೋವ ಕಂಡು
ಕಣ್ಣೀರ ಕುದುರೆಗಳ ಲಗಾಮು 
ಬಿಟ್ಟು ಬಿಡಬೇಡ
ನಗುವಿನ ಮುಖವಾಡವನು 
ಕಳಚಿ ಬಿಡಬೇಡ.







Monday, 9 May 2011

GONDALA

ಬರಿಯ ಗೊಂದಲ ಈ ಜೀವನ
ಎನುವ ಭಾವನೆ ಮುಡಿದೆ.
ಪ್ರೀತಿ ಇತ್ತೋ, ಇಲ್ಲವೋ ಎನುವ 
ಸಂದೇಹವೊಂದು ಮನದೊಳಗೆ ನುಸುಳಿದೆ.

ಮೋಸ ಮಾಡಿತೇ ನನ್ನ ಕಣ್ ಗಳು
ಅವಳ ಪ್ರೀತಿಯ ನೋಟ ತೋರಿಸಿ
ಚೆಲುವು ತುಂಬಿದ ಮೊಗದ ನಗುವನು
ಪ್ರೀತಿ ಪ್ರೇಮಕೆ ಹೋಲಿಸಿ

ಭ್ರಮೆಯ ಹಿಡಿಸಿತೆ ನನ್ನ ಮನಸದು
ನನ್ನ ಪ್ರೀತಿಸುವಳವಳು ಎನುತಲಿ
ನಿಜವ ಹುಡುಕುವ ಕಾರ್ಯವೆಸಗಿತೆ
ಅವಳ ಮಾತಿನ ಹಾವ ಭಾವದಿ

ಗೊಂದಲವು ಬಯಲಾಯಿತು ತಿಳಿದಾಗ 
ಪ್ರೀತಿಯೆಂದು  ಇರಲಿಲ್ಲ ಅವಳ ಮನದಲ್ಲಿ
ಈಗ ಮತ್ತೊಂದು ಗೊಂದಲ
ಪೀತಿಯೆಂಬ ಭ್ರಮೆಯು ಹುಟ್ಟಿತೆಕೆ ನನ್ನಲ್ಲಿ




VASUDHEYA ALALU

ವಸುಧೆಯ ಅಳಲು 


ಅಡಗಿ ಕುಳಿತಿರುವೆ ಏಕೆ? ಮಳೆ ಹನಿಯೇ,
ನೀಲ ನಭದೊಳಗೆ ಹರಡಿರುವ ಮೋಡದೊಳಗೆ
ತವರು ಮನೆಯನು ತೊರೆದು ಬಾರೆ
ನೀ ಮನದಿ ರೋಧಿಸದೆ ನನ್ನೆಡೆಗೆ.

ಅಲ್ಲಲ್ಲಿ ನನ್ನ ತನುವು ಒಡೆದಿಹುದು ನೋಡು
ತಡೆಯದಾಗಿದೆ ಈ ಬಿರುಕು ಕೊಡುವ ನೋವು
ಈ ನೋವ ನೀಗಿಸಲು ನೀನಿಲ್ಲಿ ಬರಬೇಕು
ಬಾರೆ ಅದಕಾಗಿ ಬಾ, ಆ ಮೇಘಕೆ ನೀನಾಗಿ ಸಾವು.

ನಗ್ನೆ ನಾನಾಗದಿರಲು ಬಿಡದಿರು ಓ ಮಳೆ ಹನಿಯೇ
ಹಸಿರು ಸೀರೆಯ ಉಡುಗೊರೆಯ ನೀನೆನಗೆ ನೀಡದೆ
ಇಡಿಯ ಬ್ರಹ್ಮಾಂಡವನೇ ಬೆರಗುಗೊಳಿಸಲು ಸಾಕು
ನೀ ನನಗೆ ನೀಡುವ ಆ ಹಸಿರು ಸೀರೆಯೊಂದೆ.

ನನ್ನ ಸಂತಾನವದು ಕಂಗೆಟ್ಟಿಹುದು ನೀನಿಲ್ಲದೆ
ಉಸಿರ ಬಿಟ್ಟರೆ ನೀನೆ ತಾನೇ ಅವರ ಜೀವನದ ಆಸರೆ.
ಸಂತತಿಯ ನಾಶವನು ನಾ ನೋಡಲಾರೆ ಮಳೆ ಹನಿಯೇ,
ಮರಣ ಛಾಯೆಯಿಂದ ಅವರ ಹೊರತರಲು ಬಾರೆ, ಓ ಅಮೃತ ಧಾರೆ.


Monday, 2 May 2011

EDENTHA GELETHANA

ನಿನ್ನ ನಗುವ ಮುಖದ ಒಳಗಿನ ನೋವ
ಹುಡುಕಲಾರದೆ   ಹೋದೆನೇ, ಇದೆಂತಾ ಗೆಳೆತನ?
ಸಾವನಪ್ಪುವ ನಿರ್ಣಯವ ತಂದಿಟ್ಟ ನೋವ 
ಗುರುತಿಸಲಾರದೆ ಹೋದೆನೇ, ನನ್ನದಿದೆಂತಾ ಗೆಳೆತನ?

ಅದುಮಿಟ್ಟ; ನಿನ್ನ ಕಣ್ಣೊಳಗಿನ ಸಾಲು ಸಾಲು ಕಣ್ಣೀರ ಹನಿಗಳ
ಕಾಣಲಾರದೆ ಹೋದೆನೇ, ಇದೆಂತಾ ಗೆಳೆತನ?
ಬೆರೆತರೂ ; ನಿನ್ನ ಮನದೊಳಗಿದ್ದ ಒಂಟಿತನದ ಗಾಯಗಳ
ಗುಣಪಡಿಸಲಾರದೆ ಹೋದೆನೇ, ನನ್ನದಿದೆಂತಾ ಗೆಳೆತನ?

ನಗು ನಗುತಾ ಮಾತನಾಡುತಿದ್ದರೂ, ನಿನ್ನ ಮನದಾಳದ ಮಾತುಗಳ
ಕೇಳಲಾರದೆ ಹೋದೆನೇ, ಇದೆಂತಾ ಗೆಳೆತನ?
ನಮ್ಮ ಜೊತೆಯಲಿದ್ದರು; ಸಾವಿನೆಡೆಗಿನ ನಿನ್ನ ಪಯಣವ
ತಡೆ ಹಿಡಿಯಲಾರದೆ ಹೋದೆನೆ, ನನ್ನದಿದೆಂತ ಗೆಳೆತನ?

ಮನದ ತುಮುಲಕೆ ಸಾವೇ ಪರಿಹಾರವೆನುವ ನಿನ್ನ ನಿರ್ಧಾರವ
ಬದಲಿಸಲಾರದೆ ಹೋದೆನೆ, ಇದೆಂತಾ ಗೆಳೆತನ?
ನೀ ತಂದುಕೊಂಡಿರುವ ಅಂತ್ಯದಿಂದೆದ್ದಿರುವ ಪ್ರಶ್ನೆಗಳ  
ಉತ್ತರಿಸಲಾರದೆ ಹೋದೆನೆ, ನನ್ನದಿದೆಂತಾ ಗೆಳೆತನ?

ಸಾಕಾಯಿತು ಗೆಳೆಯ, ಜಗವು ಕೇಳುತಿಹ ಪ್ರಶ್ನೆಗಳನೆದುರಿಸಿ;
ತಿಳಿಯದಿರುವ ಉತ್ತರವ ಜಗಕೆ ನಾ ಹೇಗೆ ಹೇಳಲಿ?
ಮುಢ ಜನರ ಬಾಯ ಮುಚ್ಚಿಸಲು ಬರಬಾರದೇ ಎಲ್ಲ ನಿಗೂಢತೆಯ ಭೇಧಿಸಿ,
ಗಾಢವಾದ ಸ್ನೇಹ ನಮ್ಮದೆಂದು ಸಾರಲಾದರೂ ಬರಬಾರದೇ; ಮತ್ತೊಮ್ಮೆ ನನ್ನ ಬಾಳಲಿ.