Friday, 12 October 2012

ಗಾಯ



ಎಲ್ಲರಿಗೂ ಕಾಣಿಸುವಂತೆ
ತನುವಿಗೆ ಗಾಯ ಮಾಡಿದ್ದಿದ್ದರೆ
ಸ್ವಲ್ಪ ಹೊತ್ತು ನೆತ್ತರು ಹರಿದು,
ಮತ್ತೊಂದಿಷ್ಟು ಹೊತ್ತಿನಲಿ ಹೆಪ್ಪುಗಟ್ಟಿ
ಗಾಯ ಒಣಗಿ ಹೋಗುತ್ತಿತ್ತು;
ಆದರೆ ಆಕೆ ಬಲು ಜಾಣೆ
ಮೆಲ್ಲನೆ ಮೆಲ್ಲಗೆ ಗೊತ್ತಾಗದಂತೆ
ಕಿತ್ತು ಹಾಕಿ ಬಿಟ್ಟಳು
ನನ್ನ ಕಣ್ಣ ಮೇಲಿದ್ದ
ಪ್ರೀತಿಯ ಪೊರೆ;
ನೋಡುವವರ್ಯಾರಿಗೂ
ಕಾಣಿಸದ ಈ ಗಾಯ
ವಾಸಿಯಾಗುವ ಲಕ್ಷಣವೇ ಇಲ್ಲ
ಉಕ್ಕಿ ಹರಿವ ನದಿಯಂತೆ
ಬರುತಿದೆಯಲ್ಲಾ....
ಈ ಗಾಯದೊಳಗಿಂದ
ಹೆಪ್ಪುಗಟ್ಟಲರಿಯದ
ಕಣ್ಣೀರ ಧಾರೆ.

Monday, 8 October 2012

ಇದೆಂಥಾ ನ್ಯಾಯ...?

ಸಂತಸದ ನಗುವಿನ
ಸರಮಾಲೆ ಇದ್ದಾಗ
ಬರುವುದಿಲ್ಲ ಪರಮಾತ್ಮ
ನಮ್ಮ ನೆನಪಿನ
ಪರಿಧಿಯೊಳಗೆ;
ದುಃಖದ ಮೋಡ
ಆವರಿಸಿ ಕಣ್ಣಿಂದ
ಒಂದು ಕಣ್ಣೀರ ಹನಿ
ಹೊರ ಬಿದ್ದೊಡನೆ
ಭಗವಂತ ದೂರುಗಳ
ಕಟಕಟೆಯೊಳಗೆ.

ಮುಕ್ತಿ...

ಮುಂಜಾನೆಯಲಿ...
ಬೊಗಸೆಯೊಳಗೆ
ತುಂಬಿಸಿಕೊಂಡು,
ಮುಖಕ್ಕೆ ಚಿಮ್ಮಿಸಿದ
ತಣ್ಣಗಿನ ನೀರಧಾರೆಗೆ,
ಮುಕ್ತಿ ಕೊಡುವ
ಶಕ್ತಿ ಇದೆಯೆಂದು
ಗೊತ್ತಾದದ್ದು ಈಗ,
ನನ್ನಾವರಿಸಿದ
ಜಡಾಸುರನ
ಬಾಹುಬಂಧನದಿಂದ
ನಾ ಹೊರಬಂದಾಗ.

ಮುಗಿದ ಅಧ್ಯಾಯ

ನನ್ನ ಬಾಳಲಿ ಅವಳೊಂದು
ಮುಗಿದ ಅಧ್ಯಾಯವಾಗಿದ್ದರೂ
ಈ ತಂಗಾಳಿಗೇನೋ
ತೀರದ ಕುತೂಹಲ...
ನನ್ನ ಮನದ ಪುಸ್ತಕದಲಿರುವ
ಅವಳ ಬಗೆಗಿನ ಭಾವನೆಯ
ನೋಡೋ ತವಕ...
ನಾ ಏಕಾಂತದಲಿರುವಾಗಲೆಲ್ಲಾ
ಬೀಸಿ ಬಂದು
ಮನದ ಪುಟಗಳನೆಲ್ಲಾ
ತಿರುವಿ ಹುಡುಕಾಡುವುದದು
ಆದರಲ್ಲಿ ತಂಗಾಳಿಗೆ ಕಾಣಸಿಕ್ಕಿದ್ದು
ಬರಿಯ ಖಾಲಿ ಹಾಳೆಗಳು..
ಬರೆದಿದ್ದ ಸಾಲುಗಳೆಲ್ಲಾ
ಕಾಣಿಸುವುದಾದರೂ ಹೇಗೆ..?
ಅಳಿಸಿ ಹಾಕಿತ್ತಲ್ಲಾ ಅದನೆಲ್ಲಾ
ಮುಚ್ಚಿದ ಕಂಗಳಿಂದ ಹೊರಬಂದಿದ್ದ
ನನ್ನ ಕಣ್ಣೀರ ಹನಿಗಳು..

ವಿಚಿತ್ರ ಹುಡುಗಿ

ನಾನವಳ ಬಳಿ
ಹೇಳಿದ್ದು ಇಷ್ಟೇ..
ಹೃದಯದಲಿಟ್ಟಿರುವೆ ನಿನ್ನ,
ಬಗೆದು ತೋರಿಸಲೇ...
ಜಗಕೆ ತಿಳಿಸಲೇ..
ಕಲಿಯುಗದ ಮಾರುತಿ ನಾನು.
ವಿಚಿತ್ರ ಹುಡುಗಿ...
ಕನ್ನಡಿಯ ನನ್ನ ಕೈಗಿತ್ತು
ಸಾಧಿಸಿ ತೋರಿಸಿದ
ನಗೆಯೊಂದ ಬೀರಿ
ಹೊರಟು ಹೋದಳಲ್ಲಾ..
ಅವಳು ಹೇಳಿದ್ದಾದರೂ ಏನು ?

ಕಾವ್ಯೋದಯ

ಸಮಯಕ್ಕೆ ಸರಿಯಾಗಿ
ರವಿಯೇನೋ
ಕಡಲ ತೊರೆದು
ಮೇಲೇರಿ ಬಂದು ಬಿಟ್ಟ,
ಆದರೆ, ಅವನಾಗಮನದ
ಸೊಬಗ ಬಣ್ಣಿಸುವ
ಕವನ ಮಾತ್ರ
ನನ್ನ ಮನದ ಕಡಲೊಳಗೇ
ಉಳಿದುಕೊಂಡಿದೆ,
ಕಾಗದದ ಬಾನ ಬೆಳಗೋ
ಲಕ್ಷಣವೇ ಕಾಣದಾಗಿದೆ.

ಮನದ ಮಾತು..

ಅದೆಷ್ಟೋ ಬಾರಿ
ಅವಳೆದುರು ಸಿಕ್ಕಾಗ
ನನಗನ್ನಿಸಿತ್ತು..;
ನನ್ನ ಮನದ ಮಾತುಗಳು
ಅವಳಿಗೆ ಕೇಳಿಸುವ
ಹಾಗಿದ್ದಿದ್ದರೆ ಎಷ್ಟು
ಚೆನ್ನಾಗಿರುತ್ತಿತ್ತು....
ಮೆಲ್ಲಗೆ ಚಿವುಟಿ
ಭ್ರಮೆಯ ಲೋಕದಿಂದ
ಹೊರ ತಂದ ನನ್ನಾತ್ಮ
ಮುಸಿ ಮುಸಿ ನಗುತ್ತಾ
ಪಿಸುಗುಟ್ಟಿತು...
" ಪ್ರೀತಿಸುವುದಿಲ್ಲ "
ಎನುವ ಅವಳ
ಮನದ ಮಾತುಗಳು
ನಿನಗೆ ಗೊತ್ತಾಗಿರುತ್ತಿತ್ತು...