Monday, 22 September 2014

ಅಂಟು...



ಯಾವುದರ
ಜೊತೆಗಿರಬೇಕು....?
ಅನ್ನುವ ನಿರ್ಧಾರ
ನಮ್ಮದೇ...
ಕೊಳೆತು
ನಾರುವುದರ
ಜೊತೆಗಿದ್ದರೆ
ದುರ್ಗಂಧ..,
ಸುವಾಸನೆಯ
ಹೂಗಳ
ಜೊತೆಗಿದ್ದರೆ
ಸುಗಂಧ,
ಅದನು
ತನುವಿಗಂಟಿಸುವ
ಜವಾಬ್ದಾರಿ ಮಾತ್ರ
ಪ್ರಕೃತಿಯದು,
ಅಂಟುವುದರ ಬಗ್ಗೆ
ಸಂದೇಹ ಬೇಡ.
ಯಾಕೆಂದರೆ,
ಪ್ರಕೃತಿ ನಮ್ಮಂತೆ
ಸೋಮಾರಿಯಲ್ಲ.

ಕುಸುಮ


ನಿದಿರೆಯಾ
ಚಿಟ್ಟೆಗಾಗಿ
ಕಾಯುತಿದೆ
ನನ್ನ
ನಯನ
ಕುಸುಮ

ಪ್ರವಾಹ


ಅವಳ
ಕನಸುಗಳ
ಪ್ರವಾಹದಲಿ
ಕೊಚ್ಚಿ
ಹೋಗುತ್ತಿದ್ದರೂ.....
ನನ್ನ
ರಕ್ಷಿಸುವವರು
ಯಾರೂ
ಇಲ್ಲ

ಪ್ರಶ್ನೆ...?



ಸಾವಿನ
ಸರಮಾಲೆಯ
ಕಂಡ ಕಂಗಳು
ಹೆತ್ತ ಕಣ್ಣೀರು,
ದೇವರಸ್ತಿತ್ವವನೇ
ಪ್ರಶ್ನಿಸುವಾಗ...
ಇರುವನವನೆಂದು
ಗೊತ್ತಿರುವ
ಉತ್ತರವ
ನುಡಿಯಲು
ನಾಲಗೆಯು
ತೊದಲುವುದೇಕೆ..?

Sunday, 21 September 2014

ಜೋಕಾಲಿ


ಸುಖಗಳದ್ದೊಂದು ತುದಿ
ದುಃಖಗಳದೊಂದು ತುದಿ
ಅತ್ತಲಿಂದಿತ್ತ ,ಇತ್ತಲಿಂದತ್ತ
ತೂಗುವವ ಪರಮಾತ್ಮ
ಆ ತುದಿಯಲಿದ್ದಾಗ ನಕ್ಕು
ಈ ತುದಿಗೆ ಬಂದಾಗ ಅತ್ತು
ತೂಗಾಡುವುದೇ ಜೀವನ
ತೂಗುವುದದು ನಿಂತು
ನಡುವೆ ಸುಮ್ಮನಾಗುವುದೇ ಮರಣ

ಕವಿತೆ


ಯೋಚನೆಯ
ಆಗಸವೆಲ್ಲಾ
ಮಬ್ಬು ಮಬ್ಬು,
ಪದಪುಂಜಗಳೆಲ್ಲಾ
ಅದೆಲ್ಲೋ ಮರೆವಿನ
ಉಪ್ಪು ನೀರಿನೊಳಗೆ
ಮುಳುಗಿ ಹೋದಂತೆ
ಅನಿಸುತಿದೆ.
ಅಸೆಯೊಂದೇ...
ಕಾಲವುರುಳಿ
ಅದೆಲ್ಲಿಂದಲೋ
ಕವಿತೆಯಾ ನೇಸರ
ಮತ್ತೆ ಹುಟ್ಟಿ
ಮೇಲೆ ಬಂದಾನು...

ಆರಾಧನೆ



ತನ್ನಾರಾಧನೆಗೆ
ಹೂ ತುಳಸಿಯದು
ಬೇಕೇ ಬೇಕು
ಅನ್ನುತ್ತಾ...
ಮುಂಜಾವಿನಲಿ
ಹೂತೋಟಕೆ
ಕಳುಹಿಸಿ,
ಇಬ್ಬನಿಗಳ
ತಣ್ಣನೆಯ ಸ್ಪರ್ಶ
ಕೊಡಿಸಿದ,
ಹೂ ಚಿಪ್ಪಿನೊಳಗಣ
ನೀರ ಮುತ್ತುಗಳ
ತೋರಿಸಿ
ಮನಕಾಹ್ಲಾದ ನೀಡಿದ,
ತುಳಸಿ ತುದಿಯ
ಕಿತ್ತು ತರಲು
ಪರಿಶುದ್ಧ ಗಾಳಿಯ
ಶ್ವಾಸಕೋಶದೊಳಗಿಳಿಸಿ
ಆರೋಗ್ಯ
ಭಾಗ್ಯವನು,
ಆರಾಧನೆಯ
ಮೊದಲೇ
ದಯಪಾಲಿಸಿದ
ಆ ಭಗವಂತನಿಗಿದೋ
ನನ್ನ ಮುಂಜಾವಿನ
ಅನಂತ ನಮನ