ಬೆಳಕಿರದ ಹೊತ್ತಿನಲಿ,
ಸದ್ದಿರದ ಸಮಯದಲಿ ನಡೆಯುತ್ತಿದ್ದ
ಇರುಳ ರಾಜನ ಅಟ್ಟಹಾಸವ
ನಿಲ್ಲಿಸಲು ಬಂದೆಯಾ ರವಿಯೇ..
ಹೆದರಿರುವ ತರುಲತೆಗಳ ಮೈಯಲ್ಲಿ
ಇಬ್ಬನಿಯ ಬೆವರು ಕಂಡು ಬಂದೆಯಾ ರವಿಯೇ..
ಕಾರಿರುಳ ಅಕ್ರಮವನೆಲ್ಲಾ ಕಾಣಲಾಗದೇ
ಮಂಜಿನ ಮುಸುಕಿನಲಿ ಅಡಗಿ ಕುಳಿತ
ಭುವಿಯ ಹೊರಗೆ ಕರೆ ತರಲು ಬಂದೆಯಾ ರವಿಯೇ..
ಬೆಚ್ಚಿ ಬಿದ್ದು ಆಗಸದಿ ಹಾರಲಾಗದೇ
ಮರದಲ್ಲೇ ಚಿಲಿಪಿಲಿ ಎಂದು ಅಳುತ್ತಿದ್ದ
ಹಕ್ಕಿಗಳ ಸಂತೈಸಲೆಂದು ಬಂದೆಯಾ ರವಿಯೇ
ಕನಸಿನಾ ಲೋಕದಲೇ ತೇಲಾಡುತ್ತಿರುವ
ಮನುಜರನೆಲ್ಲಾ ಬಡಿದೆಬ್ಬಿಸಿ ದುಡಿದು
ಸಾಧಕರಾಗುವ ಚೈತನ್ಯವನು ಕೊಡಲು ಬಂದೆಯಾ ರವಿಯೇ
ಇನ್ನಾದರೂ ಹೇಳು ರವಿಯೇ.. ನೀ ಕಡಲಿನಾಳದಿಂದ
ಆಗಸಕೆ ಪ್ರತಿದಿನವೂ ಬರುವುದಾದರೂ ಏಕೆ..???
TU0BAA CHENNAAGI BAREDIDDEERI SIR...
ReplyDelete