Wednesday, 20 March 2013

ಜನನ



ನಿನ್ನೆಯಾ ಸಂಜೆಯಲಿ
ಬೆಳೆದ ರವಿಯೊಬ್ಬ ಸತ್ತು
ನಭವನಾವರಿಸಿದ್ದ ಕತ್ತಲೆನುವ
ಸೂತಕದ ಛಾಯೆಯ
ಕಳೆಯುವ ಸಲುವಾಗಿ;
ಮತ್ತೆ ಹೆತ್ತಳು ಶರಧಿ
ದಿವ್ಯ ಪ್ರಭೆಯ ಶಿಶುವೊಂದನು
ಮುಸುಕು ಮಂಜಾವಿನಲಿ
ನಗುವಿನಾ ಬೆಳಕ ಮತ್ತೆ
ಎಲ್ಲೆಡೆಗೂ ಚೆಲ್ಲುವುದಕಾಗಿ

ನಮ್ಮೂರ ತೇರು...

.

ಆಳೆತ್ತರದ ನಾಲಕ್ಕು ಚಕ್ರಗಳು...
ಅದಕೆ ಹೊಂದಿಕೊಂಡಿರುವಂತಿರುವ ಪೀಠ..
ಆ ಪೀಠದ ಸುತ್ತ ಕೆತ್ತಲ್ಪಟ್ಟಿರುವ ಹಳೆಯ ಶಿಲ್ಪ ವೈಭವ..
ಮತ್ತಷ್ಟು ಮೆರುಗು ತರಲೆಂದು ಅದಕೆ
ಬಗೆ ಬಗೆಯ ಹೂಮಾಲೆಯಾಲಂಕಾರ
ಮತ್ತೆ ಮೇಲಕ್ಕೆ ನಿಲ್ಲಿಸಿರುವ ದೇವತೆಗಳ ಬಣ್ಣದ ಚಿತ್ರಪಟ..
ನಟ್ಟ ನಡುವೆ ಸಣ್ಣ ಪೀಠದ ಮೇಲೆ ಗಾಂಭೀರ್ಯದಲಿ
ಕುಳಿತು ರಾರಾಜಿಸುತಿರುವ ಬಲಿಮೂರ್ತಿ..
ಮತ್ತೆ ಮೇಲೆ ಮೇಲಕ್ಕೆ ಗೋಲಾಕಾರದಲಿ
ಜೋಡಿಸಲ್ಪಟ್ಟ ಸಣ್ಣ ಸಣ್ಣ ಕೆಂಪು ಬಿಳಿಯ ಬಾವುಟಗಳು
ಅದರ ತುದಿಯಲಿ ನಿಂತಿರುವ ಬಟ್ಟೆಯಿಂದಾದ ಕಲಶ..
ಆ ಕಲಶಕೆ ನೆರಳನೀಯುವಂತಿರುವ ತುತ್ತತುದಿಯ ಛತ್ರಿ...
ಇಡಿಯ ತೇರಿನಂದವ ಹೆಚ್ಚಿಸುವ ಬದಿಯ ಎರಡು ಬಾವುಟಗಳು..
ಅಹಾ ಅದೆಂತಾ ಸೊಬಗು, ನನ್ನೂರ ತೇರಿನದು.
ಜಯ ಘೋಶದಲಿ ಈ ರಥವ ಮೆಲ್ಲ ಮೆಲ್ಲನೆ ಎಳೆದರೆ ಸಾಕು
ಧನ್ಯತೆಯ ಭಾವವೊಂದು ತೇರನೆಳೆದವರ ಆವರಿಸುವುದು...

Thursday, 7 March 2013

ಹೂಮಾಲೆ


ಏಕಾಂತದಲಿ ಬೀಸಿ ಬಂದ
ಅವಳ ನೆನಪೆನುವ ತಂಗಾಳಿಗೆ
ನನ್ನೊಳಗಿನ ಪದಗಳ
ತೋಟದಲಿನ ಎಟುಕದ
ಚೆಲುವಿನ ಹೂವುಗಳೆಲ್ಲಾ
ಉದುರಿ ಬಿತ್ತು, ನನ್ನ ಕೈ ಮೇಲೆ;
ಭಾವನೆಯ ದಾರದಲಿ
ಹಾಗೆಯೇ ಕುಳಿತು
ಪೋಣಿಸಿ ಮುಗಿಸಿದಾಗ
ಆಯಿತೊಂದು ಕವಿತೆಯೆನುವ
ಸುಂದರ ಹೂ ಮಾಲೆ.

ಶಾಪ...


ಶಿಲ್ಪಿಯ ಉಳಿಯ ಪೆಟ್ಟಿನ
ನೋವ ಸಹಿಸಲಾರದೆ
ಅವನ ಶಪಿಸತೊಡಗಿದ ಶಿಲೆಗೆ
ಮೂರ್ತಿಯಾಗಿ ಬದಲಾಗಿ
ಅದ್ಭುತವೆಂದು ನೋಡುಗರ
ಬಾಯಲ್ಲಿ ಹೊಗಳಿಸಿಕೊಂಡಾಗ,
ಪಾಪ ಪ್ರಜ್ಞೆ ಕಾಡತೊಡಗಿತಂತೆ,
ಆದರೆ ಅದೇ ಹೊತ್ತಿಗೆ
ಅಲ್ಲೆಲ್ಲೋ ಇನ್ನೊಂದು ಶಿಲೆ
ಅದೇ ಶಿಲ್ಪಿಯ ಪ್ರತಿ ಏಟಿಗೆ
ಮನಸಿನೊಳಗೇ ಶಪಿಸುತ್ತಿತ್ತಂತೆ

ಕೋಪ...



ತಾನಿಟ್ಟ ಮೊದಲಡಿಯಲ್ಲೇ
ಕತ್ತಲ ಕರಗಿಸಿದ ನೇಸರ
ತಾನಿಷ್ಟ ಪಡೋ ಇಳೆಯನು
ಮಂಜಿನ ಬಿಗಿಯಪ್ಪುಗೆಯಿಂದ
ಬಿಡಿಸಿಕೊಳ್ಳಲೀಗ ಒದ್ದಾಡುತಿದ್ದಾನೆ;
ಕರಗಿ ನೀರಾಗಲೆಂದು ಬಿಟ್ಟ
ತನ್ನ ಬಿಸಿಯ ಬಿಸಿಲ ಬಾಣದ
ವೈಫಲ್ಯತೆಯನು ಕಂಡು
ಕೋಪದಲಿ ಕೆಂಪು ಕೆಂಪಾಗಿದ್ದಾನೆ.

ಹೊನ್ನ ಕಲಶ

ಮುಂಜಾನೆಯ ಮೂಡಣದ
ಸಾಗರದ ಮೇಲ್ಮೈಯಲಿ
ನಿಂತಿರಲು ಬೆಳಕಿನಾ
ಮೂಲ ಪುರುಷ;
ಕಂಡ ಹಾಗಾಯಿತೆನಗೆ
ಭುವಿಯ ತಟ್ಟೆಯಲಿಹ
ಅರಶಿನದೋಕುಳಿಯ ನಡುವೆ
ಇಟ್ಟಂತೆ ಹೊನ್ನ ಕಲಶ.

ರೇಟು...

ಕೊಳ್ಳುವಾಗಲೇ
ಕೈಯ ಸುಡುವ
ಹಾಗಿದೆಯಂತೆ ರೇಟು
ಸೇದ ಬಯಸುವಿರಾ
ಇನ್ನು ಮುಂದೆ
ನೀವು ಸಿಗರೇಟು